ನಟ ವಿಜಯ ರಾಘವೇಂದ್ರ ಆಕ್ಷನ್ ಕಟ್ ಹೇಳಲು ಮುಂದಾದ ನಿರ್ದೇಶಕ ಪಿ.ಸಿ ಶೇಖರ್

ಕನ್ನಡ ಚಿತ್ರರಂಗದಲ್ಲಿ ಸದಭಿರುಚಿಯ ಚಿತ್ರ ನಿರ್ದೇಶಕ ಎಂದೇ ಖ್ಯಾತಿ ಪಡೆದಿರುವ ಪಿಸಿ ಶೇಖರ್, ಕನ್ನಡದ ಮತ್ತೊಬ್ಬ ಪ್ರತಿಭಾನ್ವಿತ ನಟ ವಿಜಯ್ ರಾಘವೇಂದ್ರ ಅವರಿಗೆ ಸಿನಿಮಾ ನಿರ್ದೇಶನ ಮಾಡಲು ಮುಂದಾಗಿದ್ದಾರೆ. ಹೊಸ ಚಿತ್ರವನ್ನು ಪ್ರಕಾಶ್ ಸಿದ್ದಪ್ಪ ನಿರ್ಮಿಸುತ್ತಿದ್ದಾರೆ.
ರೋಮಿಯೋ, ರಾಗ ಸೇರಿದಂತೆ ಹಲವು ಸೂಪರ್ ಹಿಟ್ ಚಿತ್ರಗಳ ನಿರ್ದೇಶಕ ಪಿ.ಸಿ.ಶೇಖರ್ ಹಾಗು ನಟನೆಯಿಂದಲೇ ಜನಪ್ರಿಯರಾಗಿರುವ ವಿಜಯ ರಾಘವೇಂದ್ರ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ನಿರ್ಮಾಪಕ ಪ್ರಕಾಶ್, “ರೈತರ ಕುರಿತ ವಿಷಯ ನನ್ನ ಹೃದಯಕ್ಕೆ ತುಂಬಾ ಹತ್ತಿರವಾಗಿದೆ” ಮತ್ತು ಪಿ.ಸಿ. ಶೇಖರ್ ಅಲಯನ್ಸ್ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಯಾಗಿದ್ದರು. ಅಲಯನ್ಸ್ ಯೂನಿವರ್ಸಿಟಿಯ ಫಿಲ್ಮ್ ಮೇಕಿಂಗ್ ಕೋರ್ಸ್ನ ಸಹಯೋಗದಲ್ಲಿ ಆಕಾಶ ಪಿಕ್ಚರ್ಸ್ ಬ್ಯಾನರ್ನಡಿಯಲ್ಲಿ ಮೊದಲ ಚಿತ್ರ ನಿರ್ದೇಶಿಸುತ್ತಿರುವುದು ಸಂತೋಷದ ಸಂಗತಿ. ಅಲಯನ್ಸ್ನಲ್ಲಿ ಕಲಿತು ಈಗ ಬೇರೆ ಬೇರೆ ಉದ್ಯೋಗದಲ್ಲಿರುವ ಹಳೆ ವಿದ್ಯಾರ್ಥಿಗಳು ಚಿತ್ರ ನಿರ್ಮಾಣದಲ್ಲಿ ನಮ್ಮೊಂದಿಗಿದ್ದಾರೆ. ಸದ್ಯದಲ್ಲೇ ಚಿತ್ರೀಕರಣ ಆರಂಭಿಸುವ ಪ್ರಯತ್ನ ನಡೆಯುತ್ತಿದೆ. ಚಿತ್ರದಲ್ಲಿ ವಿಜಯ ರಾಘವೇಂದ್ರ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದು, ಉಳಿದ ಕಲಾವಿದರು ಮತ್ತು ತಂತ್ರಜ್ಞರ ಕುರಿತು ಮುಂದಿನ ದಿನಗಳಲ್ಲಿ ಹೆಚ್ಚಿನ ಮಾಹಿತಿ ನೀಡಲಾಗುವುದು ಎಂದಿದ್ದಾರೆ

ನಿರ್ದೇಶಕ ಪಿಸಿ ಶೇಖರ್ ಮಾತನಾಡಿ ರೈತನ ಕುರಿತ ಸಿನಿಮಾ. ಬಹುತೇಕ ಚಿತ್ರೀಕರಣ ಹಳ್ಳಿಯಲ್ಲಿಯೇ ನಡೆಯಲಿದೆ. ರೈತ ಮತ್ತು ಸಾರ್ವಜನಿಕರ ನಡುವಿನ ಸಂಬಂಧದ ಜೊತೆಗೆ ದೇಶಕ್ಕೆ ರೈತನ ಮಹತ್ವವನ್ನು ತೋರಿಸುವ ಪ್ರಯತ್ನವನ್ನು ಈ ಚಿತ್ರದಲ್ಲಿ ಮಾಡಲಾಗುವುದು. ಈ ಚಿತ್ರಕ್ಕೆ ನಾನೇ ಕಥೆ, ಚಿತ್ರಕಥೆ ಬರೆದಿದ್ದೇನೆ. ಕಥೆ ಬರೆಯುವಾಗ ವಿಜಯ ರಾಘವೇಂದ್ರರನ್ನು ಗಮನದಲ್ಲಿಟ್ಟುಕೊಂಡು ಕಥೆ ಬರೆದಿದ್ದೆ. ಅವರಿಗೆ ಕಥೆ ಹೇಳಿದಾಗ ಅವರು ಇಷ್ಟಪಟ್ಟು ನಟಿಸಲು ಒಪ್ಪಿದ್ದು ತುಂಬಾ ಖುಷಿ ತಂದಿದೆ. ಚಿತ್ರವು ಅದ್ದೂರಿ ತಾರಾಗಣ ಮತ್ತು ತಾಂತ್ರಿಕ ಸಿಬ್ಬಂದಿಯನ್ನು ಹೊಂದಿದೆ. ಇಷ್ಟು ವರ್ಷಗಳ ನನ್ನ ಸಿನಿ ಪಯಣದಲ್ಲಿ ಇದೊಂದು ವಿಭಿನ್ನ ಶೈಲಿಯ ಸಿನಿಮಾ. ಇದು ನನ್ನ ಹೃದಯಕ್ಕೆ ಹತ್ತಿರವಾದ ಚಿತ್ರವಾಗಿದ್ದು, ತುಂಬಾ ಪ್ರೀತಿಯಿಂದ ಮಾಡಲಾಗುತ್ತಿದೆ ಎಂದಿದ್ದಾರೆ
ನಟ ವಿಜಯ ರಾಘವೇಂದ್ರ ಮಾತನಾಡಿ ನಿರ್ದೇಶಕ ಪಿ.ಸಿ.ಶೇಖರ್ ಬಂದು ಈ ಚಿತ್ರದ ಕಥೆ ಹೇಳಿದಾಗ ಕಥೆ ಕೇಳಿ ತುಂಬಾ ಖುಷಿಯಾಯಿತು. ಅನ್ನದಾತ ರೈತನ ಕುರಿತಾದ ಈ ಚಿತ್ರದ ನಾಯಕನನ್ನಾಗಿ ಆಯ್ಕೆ ಮಾಡಿದ ನಿರ್ದೇಶಕ ಪಿ.ಸಿ.ಶೇಖರ್ ಹಾಗೂ ನಿರ್ಮಾಪಕ ಪ್ರಕಾಶ್ ಸಿದ್ದಪ್ಪ ಅವರಿಗೆ ಧನ್ಯವಾದಗಳು ಎಂದಿದ್ದಾರೆ