“ಸೈರನ್” ಚಿತ್ರದ ಬಳಿಕ “ನಿದ್ರಾದೇವಿ” ಮೊರೆ ಹೋದ ಯುವ ನಟ ಪ್ರವೀರ್ ಶೆಟ್ಟಿ

ಸೈರನ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಯುವ ನಟ ಪ್ರವೀರ್ ಶೆಟ್ಟಿ ಇದೀಗ ಹೊಸ ಅವತಾರದಲ್ಲಿ “ನಿದ್ರಾದೇವಿ ನೆಕ್ಸ್ಟ್ ಡೋರ್” ಚಿತ್ರದ ಮೂಲಕ ಮತ್ತೊಮ್ಮೆ ಮೋಡಿ ಮಾಡಲು ಸಜ್ಜಾಗಿದ್ದಾರೆ.

ಚಿತ್ರದ ಮುಹೂರ್ತ ಸಮಾರಂಭ ಇಂದು ನಡೆದಿದ್ದು ಕನ್ನಡ ಪರ ಹೋರಾಟಗಾರ ಪ್ರವೀಣ್ ಶೆಟ್ಟಿ ಅವರ ಪುತ್ರ ಪ್ರವೀರ್ ಶೆಟ್ಟಿ ಚಿತ್ರಕ್ಕೆ ಕ್ರೇಜಿಸ್ಟಾರ್ ರವಿಚಂದ್ರನ್ ಸಾಥ್ ನೀಡಿದ್ದಾರೆ.

ಬೆಂಗಳೂರಿನ ಬಸವನಗುಡಿಯ ದೊಡ್ಡ ಗಣಪತಿ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತ ಸಮಾರಂಭ ನಡೆದಿದೆ. ಕ್ರೇಜಿಸ್ಟಾರ್ ರವಿಚಂದ್ರನ್ ಪ್ರವೀರ್ ಶೆಟ್ಟಿಯ ಹೊಸ ಪ್ರಯತ್ನದ ‘ನಿದ್ರಾದೇವಿ ನೆಕ್ಸ್ಟ್ ಡೋರ್ ಸಾಥ್ ಕೊಟ್ಟರು. ಚಿತ್ರಕ್ಕೆ ಕ್ಲಾಪ್ ಮಾಡಿದ ಕನಸುಗಾರ ಇಡೀ ತಂಡಕ್ಕೆ ಶುಭ ಹಾರೈಸಿರುವುದು ಇಡೀ ತಂಡಕ್ಕೆ ಆನೆ ಬಲ ಬಂದಿದೆ
ಯುವ ಪ್ರತಿಭೆ ಸುರಾಗ್ ಸಾಗರ್ ‘ನಿದ್ರಾದೇವಿ ನೆಕ್ಸ್ಟ್ ಡೋರ್ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಪ್ರವೀರ್ ಶೆಟ್ಟಿ ಜೊತೆಗೆ ಶೈನ್ ಶೆಟ್ಟಿ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದು, ರಿಷಿಕಾ ನಾಯಕ್ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ.

ನಿರ್ದೇಶಕ ಸುರಾಗ್ ಸಾಗರ್ ಮಾತನಾಡಿ ರವಿಚಂದ್ರನ್ ಸರ್ ನಮ್ಮ ಸಿನಿಮಾಗೆ ಕ್ಲಾಪ್ ಮಾಡಿದ್ದು ಖುಷಿ ಕೊಟ್ಟಿದೆ. ಅವರು ವಿಭಿನ್ನ ಟೈಟಲ್ ಮೂಲಕ ಬರ್ತಾರೆ. ನಮ್ಮ ಟೈಟಲ್ ಕೂಡ ವಿಭಿನ್ನವಾಗಿದೆ. ಇದು ಕಾಕತಾಳೀಯ. ಇಬ್ಬರು ನಿದ್ದೆ ಇಲ್ಲದರ ಜರ್ನಿ. ಅವ್ರಿಗೆ ಯಾಕೆ ನಿದ್ದೆ ಬರಲ್ಲ. ಇದಕ್ಕೆ ಪರಿಹಾರ ಏನು. ಅದರೊಳಗೆ ಅವರು ಕಂಡುಕೊಳ್ಳುವ ಲವ್ ಸ್ಟೋರಿ. ಇದಕ್ಕೆಲ್ಲಾ ಸಿನಿಮಾ ನೋಡಬೇಕು ಎಂದರು.

ನಿರ್ಮಾಪಕ ಜಯರಾಮ್ ದೇವಸಮುದ್ರ ಮಾತನಾಡಿ, ಪ್ರವೀಣ್ ಶೆಟ್ಟಿ ಅವರಿಗೋಸ್ಕರ್ ಈ ಪ್ರಾಜೆಕ್ಟ್ ಗೆ ಹಣ ಹಾಕುತ್ತಿದ್ದೇನೆ. ಕಥೆ ಬಹಳ ಚೆನ್ನಾಗಿದೆ. ನನಗೆ ಸುರಾಗ್ ಕಥೆ ಹೇಳಿದಾಗ ಫಸ್ಟ್ ಇಂಪ್ರೆಷನ್ ನಲ್ಲಿಯೇ ಇಷ್ಟವಾಯ್ತು. ಪ್ರತಿಯೊಬ್ಬರು ಲೈಫ್ ನಲ್ಲಿ ನಡೆಯುವ ಕೆಲ ಘಟನೆಗಳು ಜೀವನದಲ್ಲಿವೆ. ಕಾಮಿಡಿ ಜೊತೆಗೆ ಒಂದು ಸಂದೇಶ ಚಿತ್ರದಲ್ಲಿದೆ ಎಂದು ತಿಳಿಸಿದರು.
ನಾಯಕ ಪ್ರವೀರ್ ಶೆಟ್ಟಿ ಮಾತನಾಡಿ, ನಿದ್ರೆ ಬರದಿರುವ ಹುಡುಗ ಏನೇನೂ ಕಷ್ಟಪಡುತ್ತಾನೆ. ಅದರ ಸುತ್ತ ನನ್ನ ಪಾತ್ರ ಸಾಗುತ್ತದೆ. ನನ್ನದು ಇಂಟ್ರೆಸ್ಟಿಂಗ್ ಪಾತ್ರ. ಈ ಹಿಂದಿನ ಚಿತ್ರಗಳಿಗೆ ಹೋಲಿಕೆ ಮಾಡಿದರೆ ಇದು ವಿಭಿನ್ನ ಪಾತ್ರ. ಕಳೆದೊಂದು ತಿಂಗಳಿನಿಂದ ರಿಹರ್ಸಲ್ ಮಾಡುತ್ತಿದ್ದೇವೆ ಎಂದರು.
ನಾಯಕಿ ರಿಷಿಕಾ ನಾಯಕ್ ಮಾತನಾಡಿ, ಎರಡು ವರ್ಷದ ಹಿಂದೆಯೇ ನನಗೆ ನಿರ್ದೇಶಕರು ಸಿನಿಮಾದ ಕಥೆ ಹೇಳಿದ್ದರು. ಆಗ ಕ್ಯಾರಕ್ಟರ್ ಬೇರೆ ಇತ್ತು. ಈಗ ಕ್ಯಾರೆಕ್ಟರ್ ಬೇರೆ ಇದೆ. ಒಂದೊಳ್ಳೆ ತಂಡದ ಜೊತೆ ಕೆಲಸ ಮಾಡುತ್ತಿರುವುದು ಖುಷಿ ಕೊಟ್ಟಿದೆ ಎಂದು ತಿಳಿಸಿದರು.

ಯುರೋಪ್ ನ ಪ್ರೇಗ್ ಫಿಲ್ಮ್ ಸ್ಕೂಲ್ನಲ್ಲಿ ನಿರ್ದೇಶಕ ಪಟು ಕಲಿತಿರುವ ಸುರಾಗ್ ಸಾಗರ್ ಎಂಟ್ರೋಪಿ ಕಿರುಚಿತ್ರದ ಮೂಲಕ ಹಲವು ಪ್ರಶಸ್ತಿಗಳನ್ನು ಬಾಚಿಕೊಂಡಿದ್ದಾರೆ. ಇದೀಗ ಸುರಾಗ್ ‘ನಿದ್ರಾದೇವಿ ನೆಕ್ಸ್ಟ್ ಡೋರ್ ಚಿತ್ರದ ಮೂಲಕ ಡೈರೆಕ್ಟರ್ ಕುರ್ಚಿ ಅಲಂಕರಿಸಿದ್ದು, ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಸುಧಾರಾಣಿ, ಶ್ರೀವತ್ಸ, ಕಾರ್ತಿಕ್ ಪತ್ತಾರ್ ಮತ್ತು ಅನುರಾಗ್ ಪಾಟೀಲ್ ಸೇರಿದಂತೆ ಇತರರು ತಾರಾಬಗಳದಲ್ಲಿ ಇದ್ದಾರೆ.

ರಾಜು ಬೋನಗಾನಿ ಅವರ ರೋಡಿಯಂ ಎಂಟರ್ಟೈನ್ಮೆಂಟ್ ಸಹಯೋಗದೊಂದಿಗೆ ಸೂರಂ ಮೂವೀಸ್ ಬ್ಯಾನರ್ನಡಿಯಲ್ಲಿ ಜಯರಾಮ್ ದೇವಸಮುದ್ರ ನಿರ್ಮಿಸಿರುವ ಈ ಚಿತ್ರಕ್ಕೆ ಅಜಯ್ ಕುಲಕರ್ಣಿ ಅವರ ಛಾಯಾಗ್ರಹಣ ಮತ್ತು ನಕುಲ್ ಅಭ್ಯಂಕರ್ ಅವರ ಸಂಗೀತವಿದೆ. ಈ ತಿಂಗಳಾತ್ಯಂತಕ್ಕೆ ‘ನಿದ್ರಾದೇವಿ ನೆಕ್ಸ್ಟ್ ಡೋರ್ ತಂಡ ಶೂಟಿಂಗ್ ಅಖಾಡಕ್ಕೆ ಧುಮುಕಲಿದೆ.