ಕುತೂಹಲ ಮೂಡಿಸಿದ “ತಾಯ್ತ” ಚಿತ್ರದ ಟೀಸರ್
ಎಂ.ಎಸ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಶಾಹಿದ್ ಅವರು ನಿರ್ಮಿಸಿರುವ, ಲಯ ಕೋಕಿಲ ನಿರ್ದೇಶನದ “ತಾಯ್ತ” ಚಿತ್ರದ ಟೀಸರ್ ಇತ್ತೀಚೆಗೆ ಜಂಕಾರ್ ಮ್ಯೂಸಿಕ್ ಮೂಲಕ ಬಿಡುಗಡೆಯಾಗಿದೆ. ರಿಯಾನ್ ಈ ಚಿತ್ರದ ನಾಯಕ. ಹರ್ಷಿಕಾ ಪೂಣಚ್ಛ ನಾಯಕಿ.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ.ಹರೀಶ್, ಹಿರಿಯ ನಿರ್ದೇಶಕ ಸಾಯಿಪ್ರಕಾಶ್, ನಟ ಧರ್ಮ ಮುಖ್ಯ ಅತಿಥಿಗಳಾಗಿ ಆಗಮಿಸಿ ಟೀಸರ್ ಬಿಡುಗಡೆ ಮಾಡಿ ಶುಭ ಕೋರಿದರು.
ಯಾರಾದರೂ ತುಂಬಾ ಹೆದರಿಕೊಂಡಾಗ “ತಾಯ್ತ” ಕಟ್ಟಿಸಿಕೊ ಎಂದು ಹೇಳುತ್ತಾರೆ. ನನ್ನ ಮೊದಲ ನಿರ್ದೇಶನದ ಚಿತ್ರಕ್ಕೆ “ತಾಯ್ತ” ಎಂದು ಹೆಸರಿಟ್ಟಿದ್ದೀನಿ. ಇದು ಪ್ರೇಮಕಥೆಯಾದರೂ, ಇದರಲ್ಲಿ ಹಾರಾರ್, ಥ್ರಿಲ್ಲರ್, ಕಾಮಿಡಿ ಎಲ್ಲವೂ ಇದೆ. ಶಾಹಿದ್ ಈ ಚಿತ್ರದ ನಿರ್ಮಾಪಕರು. ರಿಯಾನ್ ಈ ಚಿತ್ರದ ನಾಯಕ. ಹರ್ಷಿಕಾ ಪೂಣಚ್ಛ ನಾಯಕಿ. ಸಾಧುಕೋಕಿಲ, ಪುಷ್ಪಸ್ವಾಮಿ, ಶಾಹಿದ್, ಶೋಭ್ ರಾಜ್ ಅವರ ಜೊತೆಗೆ ನಾನು ಸಹ ಈ ಚಿತ್ರದಲ್ಲಿ ಅಭಿನಯಿಸಿದ್ದೇನೆ. ಸಂಗೀತ ಕೂಡ ನೀಡಿದ್ದೇನೆ. ಇಂದು ಟೀಸರ್ ಬಿಡುಗಡೆಯಾಗಿದೆ. ಬಿಡುಗಡೆ ಮಾಡಿಕೊಟ್ಟ ಗಣ್ಯರಿಗೆ ಹಾಗೂ ನನ್ನ ಇಡೀ ಚಿತ್ರತಂಡಕ್ಕೆ ಧನ್ಯವಾದ ಎಂದರು ಲಯಕೋಕಿಲ.
ಈ ಚಿತ್ರದ ಕಥೆ ಇಷ್ಟವಾಯಿತು. ಇದು ನನ್ನ ಮೊದಲ ಚಿತ್ರ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ನಾಯಕ ರಿಯಾನ್.ಈ ಚಿತ್ರದಲ್ಲಿ ನಾನು ಖುಷಿ ಎಂಬ ಹೆಸರಿನ ಕಾಲೇಜು ವಿದ್ಯಾರ್ಥಿ ಪಾತ್ರದಲ್ಲಿ ನಟಿಸಿದ್ದೇನೆ. ಇದು ನಾನು ಅಭಿನಯಿಸಿರುವ ಮೊದಲ ಹಾರಾರ್ ಚಿತ್ರ. ಕಾಲೇಜ್ ವಿದ್ಯಾರ್ಥಿಗಳು ಪ್ರವಾಸಕ್ಕೆಂದು ಒಂದು ಸ್ಥಳಕ್ಕೆ ಹೋದಾಗ ಅಲ್ಲಿ ಏನೇನು ಆಗುತ್ತದೆ ಎಂಬುದನ್ನು ಚಿತ್ರದಲ್ಲೇ ನೋಡಬೇಕು ಎಂದು ನಾಯಕಿ ಹರ್ಷಿಕಾ ಪೂಣಚ್ಛ ತಿಳಿಸಿದರು.
ಕಥೆ ಇಷ್ಟವಾಗಿ, ನಿರ್ಮಾಣಕ್ಕೆ ಮುಂದಾದೆ. ಚಿಕ್ಕಮಗಳೂರು, ಬೇಲೂರು ಮುಂತಾದ ಕಡೆ ಚಿತ್ರೀಕರಣ ಮಾಡಿದ್ದೇವೆ. ನಾನು ಕೂಡ ನಟಿಸಿದ್ದೇನೆ. ಚಿತ್ರ ತರೆಗೆ ಬರಲು ಸಿದ್ದವಾಗಿದೆ ಎಂದರು ನಿರ್ಮಾಪಕ ಶಾಹಿದ್.ಹಿರಿಯ ನಟಿ ಪುಷ್ಪಸ್ವಾಮಿ ಸಹ ತಮ್ಮ ಪಾತ್ರದ ಕುರಿತು ಮಾತನಾಡಿದರು