ಸ್ನೇಹ, ಸಹಾಯದ ಹಿಂದಿನ ಪಡಪಾಟಲಿನ ಕಥೆ

ಚಿತ್ರ ; ಶಂಭೋ ಶಿವ ಶಂಕರ
ನಿರ್ದೇಶನ :ಶಂಕರ್ ಕೋನಮಾನಹಳ್ಳಿ
ತಾರಾಗಣ; ಅಭಯ್ ಪುನೀತ್, ಸೋನಲ್ ಮಾಂಟೇರಿಯಾ, ಶಶಿ ಕುಮಾರ್, ರೋಹಿತ್, ರಕ್ಷಕ್, ,ಜೋಗಿ ನಾಗರಾಜ್ ಮತ್ತಿತರರು
ರೇಟಿಂಗ್ : * 4/5
ಮಗುವಿನ ಜೀವ ಉಳಿಸಲು ಸಹಾಯ ಮಾಡಲು ಹೋಗಿ ಅದರಿಂದಾಗುವ ಅನಾಹುತ, ಒಂದು ತಪ್ಪು ಸರಿ ಪಡಿಸಿಕೊಳ್ಳಲು ಮತ್ತೊಂದು, ಮಗದೊಂದು ತಪ್ಪುಗಳು ರೋಚಕ ತಿರುವು ಚಿತ್ರವನ್ನು ಹಿಡಿದಿಡುವಲ್ಲಿ ಶಂಭೋ ಶಿವಶಂಕರ ಚಿತ್ರ ಸಫಲವಾಗಿದೆ. ಶಂಭು, ಶಿವ ಮತ್ತು ಶಂಕರ ಮೂರು ಮಂದಿ ಅನಾಥರು ,ತಮ್ಮದಲ್ಲದ ತಪ್ಪಿಗೆ ಚಿಕ್ಕವಯಸ್ಸಿನಲ್ಲಿ ಜೈಲು ಪಾಲಾದವರು. ಜೈಲಿನಿಂದ ಹೊರ ಬಂದ ನಂತರವೂ ಸ್ನೇಹಕ್ಕೆ ಪ್ರಾಣ ಕೊಡುವ ಸ್ನೇಹಿತರು. ಈ ನಡುವೆ ಶಂಭು ( ಅಭಯ್ ಪುನೀತ್ ) ಗೆ ಆಕಸ್ಮಿಕವಾಗಿ ಕಂಡ ದಿವ್ಯ( ಸೋನಲ್ ಮಾಂಟೋರಿಯಾ) ಮೇಲೆ ಪ್ರೀತಿ, ಇನ್ನುಳಿದ ಇಬ್ಬರು ಹುಡುಗರಿಗೂ ಒಳ ಒಳಗೆ ಪ್ರೀತಿಯ ಸೆಳೆತ.
ಹುಡುಗಿಯ ಮನ ಗೆಲ್ಲಲು ಕಸರತ್ತು ಮಾಡುವ ಶಂಭು ಆಕೆಗೆ ಪ್ರೀತಿಯ ವಿಷಯ ಹೇಳಿಬಿಡಬೇಕು ಎಂದು ನಿರ್ಧರಿಸುತ್ತಾನೆ. ಅಷ್ಟರೊಳಗೆ ಆಕೆ ಮದುವೆಯ ಆಹ್ವಾನ ಪತ್ರಿಕೆ ನೀಡ್ತಾಳೆ. ಮದುವೆಯಾಗುವ ಹುಡುಗನ ಕೊಲೆ,ಅದರಿಂದ ಒಂದಷ್ಡು ಸಮಸ್ಯೆ, ಅದರಿಂದ ಪಾರು ಮಾಡಲು ಹೋಗಿ ಅನಾಹುತಗಳ ಸರಣಿ ಮುಂದಿನದು ರೋಚಕ ತಿರುಗಳು ಊಹಿಸಲೂ ಆಗದ ಟ್ವಿಸ್ಟುಗಳು.
ಕೊಲೆ ಮಾಡಿದ್ದು ಯಾರು, ಒಬ್ಬಳ ಮೇಲೆ ಕಣ್ಣು ಹಾಕುವ ಪ್ರಾಣ ಸ್ನೇಹಿರತು ಕೊನೆಗೂ ಒಂದಾಗಿರುತ್ತಾರಾ , ಹೊಡೆದಾಡಿಕೊಂಡು ದೂರ ಆಗ್ತಾರಾ ಇಲ್ಲ ಮುಂದೇನು ಎನ್ನುವುದು ಚಿತ್ರದ ಜೀವಾಳ. ನಿರ್ದೇಶಕ ಶಂಕರ್ ಕೋನಮಾನಹಳ್ಳಿ ಮೊದಲ ಪ್ರಯತ್ನದಲ್ಲಿ ಭರವಸೆ ಮೂಡಿಸಿದ್ದಾರೆ.ಮೊದಲರ್ಧ ಲವ ಲವಿಕೆಯಿಂದ ಸಾಗಿದರೆ ದ್ವಿತೀಯಾರ್ಧದಲ್ಲಿ ಚಿತ್ರಕಥೆಯಲ್ಲಿ ಹಿಡಿತ ತಪ್ಪಿದ್ದಾರೆ. ಅನಗತ್ಯವಾದ ಸನ್ನಿವೇಶ ನುಸುಳುವಂತಾಗಿದೆ. ಆದರೂ ಉತ್ತಮ ಚಿತ್ರ ನೀಡಲು ಹಿಂದೆ ಬಿದ್ದಿಲ್ಲ ನಾಯಕ ಅಭಯ್ ಪುನೀತ್, ಆಕ್ಷನ್ ,ಸೆಂಟಿಮೆಂಟ್, ಸೇರಿದಂತೆ ಎಲ್ಲಾ ವಿಭಾಗಳಲ್ಲಿ ಸೈ ಎನಿಸಿಕೊಂಡಿದ್ದಾರೆ. ಇನ್ನೊಂದಿಷ್ಡು ತಯಾರಿ ಮಾಡಿಕೊಂಡರೆ ಕನ್ನಡಕ್ಕೆ ಮತ್ತೊಬ್ಬ ಆಕ್ಷನ್ ಸ್ಠಾರ್ ಸಿಗುವದರಲ್ಲಿ ಸಂದೇಹವಿಲ್ಲ. ನಾಯಕಿ ಸೋನಲ್ ಮಾಂಟೇರಿಯಾ ಸಿಕ್ಕ ಅವಕಾಶಕ್ಕೆ ನ್ಯಾಯ ಒದಗಿಸಿದ್ದಾರೆ ಇನ್ನಿಬ್ಬರು ಹುಡುಗರಾದ ರಕ್ಷಕ್ ಮತ್ತು ರೋಹಿತ್ ಪಾತ್ರಕ್ಕೆ ಜೀವ ತುಂಬಿದ್ದಾರೆ.
ಹಿರಿಯ ನಟ ಶಶಿಕುಮಾರ್ ಪಾತ್ರಕ್ಕೆ ಗತ್ತು ತಂದುಕೊಟ್ಟಿದ್ದಾರೆ. ನಿರ್ದೇಶಕ ಶಂಕರ್ ಕೋನಮಾನಹಳ್ಳಿ, ಜೋಗಿ ನಾಗರಾಜ್ ಪಾತ್ರಗಳಿಗೆ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ನಾಟಿಕೋಳಿ ಸಾರು ನಲ್ಲಿ ಮೂಳೆಯಿಂದ ಹಿಡಿದು ಮಸಾಲೆ ಅಂಶಗಳು ಚಿತ್ರದಲ್ಲಿವೆ.ಮೊಲರ್ಧದಲ್ಲಿ ಸಂಭಾಷಣೆ ಗಮನಸೆಳೆಯಲಿದೆ. ಹಿತನ್ ಹಾಸನ್ ಸಂಗೀತ , ಧರ್ಮ ವಿಶ್ ಹಿನ್ನೆಲೆ ಸಂಗೀತ ಹಾಗು ನಟರಾಜ್ ಮುದ್ದಾಲ ಛಾಯಾಗ್ರಹಣ ಚಿತ್ರಕ್ಕೆ ಪೂರಕವಾಗಿದೆ.