Exclusive: ನರಸಿಂಹರಾಜು ಮಗಳು ಪಾತ್ರ ಚೆನ್ನಾಗಿ ಮಾಡ್ತಾರೆ ಎನ್ನುವುದೇ ಪ್ರಶಸ್ತಿ : ಸುಧಾ ನರಸಿಂಹರಾಜು

ರಕ್ತದಲ್ಲಿಯೇ ಕಲೆ ಕರಗತ ಮಾಡಿಕೊಂಡ ಅಪ್ಪಟ ಮಣ್ಣಿನ ಸೊಗಡಿನ ಕಲಾವಿದೆ. ಮೇಲಾಗಿ ಹಾಸ್ಯ ಚಕ್ರವರ್ತಿ ನರಸಿಂಹ ರಾಜು ಅವರ ಮಗಳು ಸುಧಾ ನರಸಿಂಹರಾಜು.ಇತ್ತೀಚಿನ ದಿನಗಳಲ್ಲಿ ಸಿನಿಮಾ ಮತ್ತು ಕಿರುತೆರೆಯಲ್ಲಿ ಅಮ್ಮನ ಪಾತ್ರದಲ್ಲಿ ಮಿಂಚುತ್ತಿದ್ದಾರೆ. ಬಣ್ಣದ ಮದುಕಿನ ಒಂದಷ್ಟು ನೆನಪುಗಳನ್ನು ಹಂಚಿಕೊಂಡಿದ್ದಾರೆ. Exclusive Interview : Sudha Narasimha Raju

- ಬಣ್ಣದ ಬದುಕಿನ ಪ್ರವೇಶ ಹೇಗಾಯಿತು?
ತಂದೆ ನರಸಿಂಹರಾಜು ಅವರು ತೀರಿ ಹೋದ ನಂತರ ಅನಿವಾರ್ಯವಾಗಿ ಚಿತ್ರರಂಗಕ್ಕೆ ಪ್ರವೇಶ ಮಾಡುವಂತಾಯಿತು. ಅವರ ಹೆಸರನ್ನು ಉಳಿಸಬೇಕಾದದ್ದು ನನ್ನ ಮೇಲಿದ್ದ ಜವಾಬ್ದಾರಿಯಾಗಿತ್ತು. ಸಿನಿಮಾಕ್ಕೆ ಬರುವ ಮುನ್ನ ಹದಿನಾರು ವರ್ಷದ ಒಳಗಿನ ವಾಲಿಬಾಲ್ ತಂಡದಲ್ಲಿ ರಾಜ್ಯ ಪ್ರತಿನಿಧಿಸಿದ್ದೆ, ವೈಸ್ ಕ್ಯಾಪ್ಟನ್ ಆಗಿದ್ದೆ. ಚಿತ್ರರಂಗಕ್ಕೆ ಬರದಿದ್ದರೆ ಬಹುಶಃ ಇಂದು ಕ್ರೀಡೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದೆ.
- ಮೊದಲ ಬಣ್ಣ ಹಚ್ಚಿದ ಚಿತ್ರ ಯಾವುದು?
“ಅರುಣರಾಗ” ಚಿತ್ರದ ಮೂಲಕ ಅಧಿಕೃತವಾಗಿ ಚಿತ್ರರಂಗ ಪ್ರವೇಶಿಸಿದೆ. ಅಲ್ಲಿಂದ ಇಲ್ಲಿಯ ತನಕ 57ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದೇನೆ. ನಾಯಕಿ ಸ್ನೇಹಿತೆಯ ಪಾತ್ರ ಹೆಚ್ಚಾಗಿ ಬಂದವು. ಅದರಲ್ಲಿ ಪೆÇಲೀಸನ ಹೆಂಡ್ತಿ, ರೆಡಿಮೇಡ್ ಗಂಡ, ಅನುಕೂಲಕ್ಕೊಬ್ಬ ಗಂಡ ,ಮಾಲಾಶ್ರೀ ಮಾಮಾಶ್ರೀ, ರಥ ಸಪ್ತಮಿ ಸೇರಿದಂತೆ ಅನೇಕ ಚಿತ್ರಗಳು ಹೆಸರು ತಂದುಕೊಟ್ಟವು.

• ಕಲಾ ಕುಟುಂಬದಿಂದ ಬಂದಿದ್ದರಿಂದ ಅವಕಾಶಗಳು ಸಿಗುವುದು ಸುಲಭವಾಗಿತ್ತಾ ಅಥವಾ ಹೇಗೆ?
ಕಂಡಿತಾ ಇಲ್ಲ. ಆದರೆ ನನಗೆ ಬಂದ ಪಾತ್ರ ಆಯ್ಕೆ ಮಾಡಿಕೊಂಡು ನಟಿಸಿದ್ದೇನೆ. ಸಿಕ್ಕ ಪಾತ್ರಕ್ಕೆ ಶೇ.100 ರಷ್ಟು ನ್ಯಾಯ ಒದಗಿಸಿದ್ದೇನೆ. ನನ್ನ ಗುಣ ಏನಂದ್ರೆ ಅವಕಾಶ ಕೊಡಿ ಎಂದು ಕೇಳಿಕೊಂಡು ಹೋಗುವ ಜಾಯಮಾನ ನನಗೆ ಬಂದಿಲ್ಲ. ಎಂದೂ ಯಾರೂ ಚೆನ್ನಾಗಿ ನಟಿಸಿಲ್ಲ ಎಂದು ಹೇಳಿದ ಉದಾಹರಣೆ ಇಲ್ಲ. ಯಾವುದೇ ಪಾತ್ರ ಕೊಟ್ಟರೂ ಚೆನ್ನಾಗಿ ಮಾಡಬಲ್ಲೆ. ಹಾಗಾಗಿ ನರಸಿಂಹ ರಾಜು ಅವರ ಕಲಾಸೇವೆಗೆ ನನ್ನದು ಒಂದು ಅಳಿಲು ಸೇವೆ, ಅವರಲ್ಲಿ ಶೇಕಡಾ ಹತ್ತರಷ್ಟು ಮಾಡಿದರೂ ಅದನ್ನು ತಂದೆಯ ಪಾದಕ್ಕೆ ಅರ್ಪಿಸುತ್ತೇನೆ.
• ನರಸಿಂಹ ರಾಜು ಅವರನ್ನು ಗುರುತಿಸುವ ಕೆಲಸ ಆಗಿದೆಯಾ
ನರಸಿಂಹ ರಾಜು ಅವರ ನಟನೆಯನ್ನು ಯಾರು ಮೆರಯುವುದಿಲ್ಲ. ಅದರೆ ಅವರನ್ನು ನೆನಪಿಸುವಂತಹ ಯಾವುದೇ ಕೆಲಸ ಆಗ್ತಾ ಇಲ್ಲ. ಇದು ಒಂದು ರೀತಿ ಬೇಸರದ ಸಂಗತಿ. ಸಾಕಷ್ಟು ಬಾರಿ ಸರ್ಕಾರಕ್ಕೆ ಮನವಿ ಮಾಡಿದೆವು. ರಸ್ತೆಗೆ ಹೆಸರಿಡುವುದು, ವೃತ್ತ, ಅಥವಾ ಭವನಕ್ಕೆ ಹೆಸರಿಡುವಂತೆ ಒತ್ತಡ ಹಾಕಿದ್ದೆವು. ಅದು ಆಗಲಿಲ್ಲ. ಇತ್ತೀಚೆಗೆ ತಿಪಟೂರಿನಲ್ಲಿ ನರಸಿಂಹ ರಾಜು ಅವರ ಕಲಾಮಂದಿರ ಆಗಿದೆ. ಚುನಾವಣಾ ನೀತಿ ಸಂಹಿತೆ ಇದ್ದುದರಿಂದ ತರಾತುರಿಯಲ್ಲಿ ಉದ್ಘಾಟನೆಯಾಯಿತು ಅದರ ಉದ್ಘಾಟನೆಯೂ ಯಾರಿಗೂ ಗೊತ್ತಾಗಲಿಲ್ಲ. ಎಲ್ಲಾ ಸರ್ಕಾರಗಳು ಗೌರವ ನೀಡಿ ಭವನ ನಿರ್ಮಾಣವಾಗಿದೆ ಇದಕ್ಕಾಗಿ ಎಲ್ಲಾ ಸರ್ಕಾರಕ್ಕೆ ಈ ವಿಷಯದಲ್ಲಿ ಅಭಿನಂಧನೆ ಸಲ್ಲಿಸುತ್ತೇನೆ.
ನರಸಿಂಹ ರಾಜು ಅವರ ಬಗ್ಗೆ ಕೆಲಸ ಮಾಡಿ ಎಂದು ಕೇಳಲು ಬೇಡಿಕೊಳ್ಳಬೇಕಾ. ಕಲೆಯನ್ನು ಆರಾಧಿಸುವ ಮಂದಿಗೆ ಬಹುಶಃ ನರಸಿಂಹ ರಾಜು ಗೊತ್ತಿದೆ. ಭಾಷೆ ಬರದವರೂ ಕೂಡ ನರಸಿಂಹ ರಾಜು ಅವರ ನಟನೆಯನ್ನೂ ಇಷ್ಟ ಪಡದೆ ಇರಲಾರದು. ಭಾತಿಕವಾಗಿ ಇರದಿದ್ದರೂ ಸದಾ ಮನಸ್ಸಿನಲ್ಲಿ ಜೀವಂತವಾಗಿದ್ದಾರೆ. ಅವರಿಗೆ ಸಿಗಬೇಕಾದ ನ್ಯಾಯ ಸಿಗಲಿಲ್ಲ ಎನ್ನುತ್ತಾರೆ.


- ನೀವೂ ಯಾಕೆ ಬರೀ ನಾಯಕಿ ಸ್ನೇಹಿತೆ, ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿರಿ?
ನಾಯಕಿಯಾಗಿ ನಟಿಸುವ ಅವಕಾಶ ನಾಲ್ಕೈದು ಚಿತ್ರಗಳಲ್ಲಿ ಕೈ ತಪ್ಪಿ ಹೋದವು. ನಾಳೆ ಚಿತ್ರೀಕರಣಕ್ಕೆ ಹೋಗಬೇಕು ಎನ್ನುವಾಗ ನಾಯಕಿ ಬದಲಾದದ್ದೂ ಉಂಟು. ಕಾರಣ ಏನು ಎನ್ನುವುದು ಇಂದಿಗೂ ಗೊತ್ತಿಲ್ಲ. ಸುಮಾರು ಚಿತ್ರಗಳು ಕೈತಪ್ಪಿವೆ. ಆ ಸಿನಿಮಾ ಕೈ ತಪ್ಪಿದೆ ಎಂದರೆ ಆ ನಟಿ ಹೆಚ್ಚು ಪಾಪುಲರ್ ಆಗಿರುವುದರಿಂದ ಹೇಳುವುದು ಸರಿಯಲ್ಲ, ಆದರೆ ರಾಜ್ಯದಲ್ಲಿ ನನ್ನದೇ ಆದ ಸ್ಥಾನ ಪಡೆದಿದ್ದೇನೆ. ಎಲ್ಲೇ ಹೋದರೂ ನನ್ನನ್ನು ಗುರುತಿಸುತ್ತಾರೆ. ನರಸಿಂಹ ರಾಜು ಮಗಳು ಚೆನ್ನಾಗಿ ನಟಿಸುತ್ತಾರೆ ಎನ್ನುತ್ತಾರೆ. ಇದು ಖುಷಿಯ ವಿಚಾರ ಮೇಲಾಗಿ ಪ್ರಶಸ್ತಿಗಿಂತ ಹೆಚ್ಚು.
- ಸದ್ಯಕ್ಕೆ ಕೈಯಲ್ಲಿರುವ ಚಿತ್ರಗಳ ಮಾಹಿತಿ ನೀಡುವುದಾದರೆ?
ನಟ ಧರ್ಮ ಕೀರ್ತಿ ರಾಜ್ ನಟನೆಯ “ತಲ್ವಾರ್ ” ಚಿತ್ರ ಮತ್ತೊಂದು ನಮ್ಮ ಅಣ್ಣನ ಮಗ ಸಮರ್ಥ ನರಸಿಂಹರಾಜು ನಟನೆಯ “ಯಾರು ಯಾರು ನೀ ಯಾರು”. ಚಿತ್ರದಲ್ಲಿ ನಟಿ ಐಶ್ವರ್ಯ ಶಿಂಧೋಗಿ ತಾಯಿ ಪಾತ್ರ ಮಾಡಿದ್ದೇನೆ.ಇತ್ತೀಚೆಗೆ ಗಂಡು ಹುಲಿ ಮತ್ತು ಹೊಂದಿಸಿ ಬರೆಯಿರಿ ಚಿತ್ರದಲ್ಲಿ ನಟಿಸಿದ್ದೇನೆ. ಪಾತ್ರ ಚಿಕ್ಕದಾದರೂ ಗಮನ ಸೆಳೆಯುವಂತಹುದು.

• ಧಾರಾವಾಹಿಯಲ್ಲಿ ನಟಿಸಿದ ಮೊದಲ ಅವಕಾಶ
“ವೈದ್ಯೋ ನಾರಾಯಣ ಹರಿ” ಎನ್ನುವ ಧಾರಾವಾಹಿಯ ಮೂಲಕ ಮೊದಲ ಬಾರಿಗೆ ಬಣ್ಣ ಹಚ್ಚಿದೆ. ವಿಶ್ವ ಪ್ರಸಾದ್ ಅವರ ಒಳ್ಳೆಯ ಪ್ರಯತ್ನ. ಹಳ್ಳಿಯಲ್ಲಿ ಸಿ.ಆರ್ ಸಿಂಹ ವೈದ್ಯರಾಗಿರುತ್ತಾರೆ. ಅವರಿಗೆ ಬರುವ ಕಥೆಗಳು ಒಂದೊಂದು ಎಪಿಸೋಡ್ ಆಗಿ ಬರುತ್ತವೆ. ಪ್ರಕಾಶ್ ರೈ ಮತ್ತು ನಾನು ಮೂಕ ಜೀವಿ'' ಎನ್ನುವ ಕಂತಿನಲ್ಲಿ ನಾನು ಮೂಗಿಯಾಗಿ ನಟಿಸಿದ್ದೆ. ಕೊನೆಗೆ ಮಾತು ಬರುವ ಪಾತ್ರ. ಒಂದೇ ಎಪಿಸೋಡು ಆದರೂ ಚೆನ್ನಾಗಿ ಬಂದಿತ್ತು. ಆದಾದ ನಂತರ ಕಟ್ಟೆ ರಾಮಚಂದ್ರ ಅವರ
ಅಲೆಗಳು”, ನಾಗಾಭರಣ ಅವರ ಶ್ರೀಮಾನ್ ಶ್ರೀಸಾಮಾನ್ಯ, ಬಿ. ಸುರೇಶ್ ಅವರ ಸಾಧನೆ,ಗುರುದತ್ ಅವರ ಮನೆತನ, ಕಲಾಗಂಗೋತ್ರಿ ಮಂಜು ಅವರ ಅಮೃತವಾಹಿನಿ, ಬಾಲಾಜಿ ಟೆಲಿ ಫಿಲ್ಸ್ಂ ನ ಕಾದಂಬರಿ ಸೇರಿ ಹಲವಾರು ಧಾರಾವಾಹಿಯಲ್ಲಿ ನಟಿಸಿದ್ದೇನೆ. ದೂರದರ್ಶನಕ್ಕೆ ನಾನೇ ನಿರ್ಮಾಣ ಮಾಡಿದ ಹಾಸ್ಯ ಚಕ್ರವರ್ತಿ 52 ಎಪಿಸೋಡು ಪ್ರಸಾರವಾಯಿತು.

- ಗಟ್ಟಿ ಮೇಳ ಧಾರಾವಾಹಿ ಎಷ್ಟು ಎಪಿಸೋಡು ಪ್ರಸಾರ ಕಂಡಿದೆ. ನಿಮ್ಮ ಪಾತ್ರ ಏನು?
ಕಿರಿತೆರೆಯಲ್ಲಿ ಮೂಡಿ ಬರತ್ತಿರುವ ಜನಪ್ರಿಯ ಧಾರಾವಾಹಿಗಳಲ್ಲಿ “ಗಟ್ಟಿಮೇಳ” ಕೂಡ ಒಂದು. ಕಳೆದ ನಾಲ್ಕೂವರೆ ವರ್ಷದಿಂದ ಬರುತ್ತಿದೆ.ಈ ಧಾರವಾಹಿಯಲ್ಲಿ ಪರಿಮಳ ಎನ್ನುವ ತಾಯಿ ಪಾತ್ರ.ಪರಿ ಮಕ್ಕಳನ್ನು ಪ್ರೀತಿಸುವ ಬಗೆಗೆ ಯುವಕ- ಯುವತಿಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದರ ಜೊತೆಗೆ ಧಾರಾವಾಹಿ ಒಂದು ಸಾವಿರದ ನೂರಕ್ಕೂ ಹೆಚ್ಚು ಸಂಚಿಕೆ ಪ್ರಸಾರವಾಗಿದೆ. ಅದರಲ್ಲಿ ನಾನು ಪಾಲ್ಗೊಂಡ ಸುಮಾರು 900 ಸಂಚಿಕೆ ಪ್ರಸಾರ ಕಂಡಿದೆ. ಸದ್ಯ ಧಾರಾವಾಹಿ ಮುನ್ನೆಡೆಯುತ್ತಿದೆ. ಹತ್ತು ವರ್ಷದ ಬಳಿಕ ನಟಿಸುತ್ತಿದ್ದೇನೆ.ಸುಧಮ್ಮಾ ಪಾತ್ರ ಚೆನ್ನಾಗಿ ಬಂದಿದೆ ಎಂದು ಯುವ ಜನರು ಹೇಳುತ್ತಿದ್ದಾರೆ ಇದು ಖುಷಿಯ ವಿಚಾರ.

- ಪರಿ ಪಾತ್ರದ ಬಗ್ಗೆ ಹೇಳುವುದಾದರೆ,
ಪರಿಮಳ, ಮುಗ್ದೆ, ತನ್ನ ಹೆಣ್ಣು ಮಕ್ಕಳನ್ನು ಅಕ್ಕರೆಯಿಂದ ಬೆಳೆಸಿದವಳು. ಅದಕ್ಕೆ ಸಾಥ್ ನೀಡುವ ಪತಿ. ಶ್ರೀಮಂತ ಮನೆ ತನಕ್ಕೆ ಮಕ್ಕಳನ್ನೂ ಕೊಟ್ಟು ಮದುವೆ ಮಾಡಿದ್ದರೂ ಆಕೆ ಸ್ವಾಭಿಮಾನ ಬಿಡದ ಮಹಿಳೆಯ ಪಾತ್ರ. ಚಿತ್ರೀಕರಣ ವೇಳೆ ಎಷ್ಟೇ ಎಮೋಷನ್ ಸನ್ನಿವೇಶಗಳಿದ್ದೂ ನಿರ್ದೇಶಕರ ಚರ್ಚೆ ಮಾಡುವೆ. ಕೆಲ ಸಮಯದಲ್ಲಿ ಪಾತ್ರಕ್ಕೆ ಇಷ್ಟು ಎಮೋಷನ್ ಇದ್ದರೆ ಸಾಕು ಎಂದು ಹೇಳಿದ್ದೇನೆ. ನಿರ್ದೇಶಕರೂ ಕೇಳಿದ್ದಾರೆ. ಪಾತ್ರ ಚೆನ್ನಾಗಿ ಬರುತ್ತಿದೆ. ಇದು ಖುಷಿಯ ವಿಚಾರ. ನಗುವಿನಲ್ಲಿಯೇ ಎಮೋಷನ್ ತೋರಿಸಿ ಅಂತಾರೆ. ಈ ರೀತಿಯ ಪಾತ್ರ ಬೆಳ್ಳಿತೆರೆಯಲ್ಲಿ ಸಿಕ್ಕಿದ್ದರೆ ನಾನು ಇನ್ನಷ್ಟು ಎತ್ತರಕ್ಕೆ ಬೆಳೆಯುತ್ತಿದ್ದೆ. ನಾನೂ ಆಶಾವಾದಿ ಮುಂದಿನ ದಿನಗಳಲ್ಲಿ ಒಳ್ಳೆಯ ಅವಕಾಶ ಸಿಗಬಹುದು.


- ಇದುವರೆಗೂ ಎಷ್ಟು ಧಾರಾವಾಹಿಯಲ್ಲಿ ನಟಿಸಿದ್ದೀರಾ,
ನಿಮ್ಮನ್ನು ಗುರುತಿಸಿದ ಪಾತ್ಇದುವರೆಗೂ 25ಕ್ಕೂ ಅಧಿಕ ಧಾರಾವಾಹಿಯಲ್ಲಿ 5 ಸಾವಿರಕ್ಕೂ ಅಧಿಕ ಎಪಿಸೋಡ್ನಲ್ಲಿ ನಟಿಸಿದೇನೆ.ಅದರಲ್ಲಿ ಗಟ್ಟಿಮೇಳ 1,100 ಎಪಿಸೋಡು ದಾಟಿದೆ. ಮನತನ ಧಾರಾವಾಹಿ ಒಂದು ಸಾವಿರ ಕಂತು ಪ್ರಸಾರವಾಗಿತ್ತು. ಸಾಧನೆ 400ಕ್ಕೂ ಹೆಚ್ಚು ಕಂತು ಪ್ರಸಾರ ಕಂಡಿತ್ತು. ಸಾಧನೆಯ ವಸಂತ, ಅಲೆಗಳು ಧಾರಾವಾಹಿಯ ಕಾವ್ಯ ಪಾತ್ರ ಜನರ ಮನಸ್ಸಿನಲ್ಲಿ ಅಚ್ಚೊತ್ತಿದೆ.

- ಧಾರಾವಾಹಿಯಲ್ಲಿ ಕಲಾವಿದರ ನಿಜವಾದ ಹೆಸರಿಗಿಂತ ಪಾತ್ರದ ಹೆಸರಿನಿಂದ ಕರೆಯುತ್ತಾರೆ. ನಿಮಗೆ ಆ ರೀತಿಯ ಅನುಭವ ಆಗಿದೆಯಾ?
ನನ್ನನ್ನು ಹೆಚ್ಚಾಗಿ ನರಸಿಂಹ ರಾಜು ಅವರ ಮಗಳು ಅನ್ನುತ್ತಾರೆ. ಸುಧಾ ಆ ನಂತರ. ಅಪ್ಪನ ಮಗಳು ಎಂದು ಕರೆಸಿಕೊಳ್ಳುವುದೇ ಹೆಮ್ಮೆ. ಇನ್ನೊಂದು ಕಾಮಿಡಿ ಎಂದರೆ ಸುಧಾ ನರಸಿಂಹಮೂರ್ತಿ ಅಂದು ಬಿಡುತ್ತಾರೆ.ಆಗ ನಾನು ಸುಧಾ ನರಸಿಂಹರಾಜು ಎಂದು ಹೇಳಿಕೊಳ್ಳಬೇಕು ಎಂದು ನಕ್ಕರು. ಜನ ಸುಧಾ ಅಂದಾಕ್ಷಣ ನರಸಿಂಹಮೂರ್ತಿ ಸೇರಿಸಿ ಬಿಡ್ತಾರೆ.ತಿಳಿ ಹಾಸ್ಯದಲ್ಲಿಯೇ ಸರಿ ಮಾಡಿದ್ದೂ ಉಂಟು.

- ನಿಮ್ಮ ಕಲಾಬದುಕಿನ ಬಗ್ಗೆ ನಿಮ್ಮ ಅಭಿಪ್ರಾಯ
ಇದುವರೆಗಿನ ಕಲಾಬದುಕು ತೃಪ್ತಿ ಇದೆ. ಯಾವುದೇ ದೂರುಗಳಿಲ್ಲ. ಕೆಲವು ವಿಷಯದಲ್ಲಿ ನನ್ನ ಪಾತ್ರಕ್ಕೆ ನಾನೇ ಗೆರೆ ಎಳೆದುಕೊಂಡಿದ್ದೆ. ಎಕ್ಸ್ ಪೆÇೀಸ್ ಮಾಡಲ್ಲ, ಕೆಲವು ಬಟ್ಟೆ ಧರಿಸಲ್ಲ ಎನ್ನುವ ನಿರ್ಬಂದ ಹಾಕಿಕೊಂಡಿದ್ದೆ. ಹೀಗಾಗಿ ನನಗೆ ಸಿಕ್ಕ ಪಾತ್ರಕ್ಕೆ ನ್ಯಾಯ ದೊರಕಿಸಿದ್ದೇನೆ. ನರಸಿಂಹ ರಾಜು ಮಗಳು ನಟಿಸುತ್ತಿದ್ದಾರೆ. ಚೆನ್ನಾಗಿ ಮಾಡುತ್ತಿದ್ದಾರೆ ಎಂದಾಗ ಅದೇ ನನಗೆ ಪ್ರಶಸ್ತಿ.
- ನಿಮ್ಮ ತಂದೆಯಿಂದ ನೀವು ಕಲಿತಿದ್ದು ಏನು?
ನಟಿಸುವಾಗ ಅದು ಚಿಕ್ಕ ಪಾತ್ರವಿರಲಿ ಅಥವಾ ದೊಡ್ಡ ಪಾತ್ರವಿರಲಿ. ಅದಕ್ಕೆ ನೂರಕ್ಕೆ ನೂರರಷ್ಟು ನ್ಯಾಯ ಒದಗಿಸಬೇಕು ಎನ್ನುವುದನ್ನು ತಂದೆಯಿಂದ ಕಲಿತ ಪಾಠ.

- ಹಿರಿತೆರೆ ಮತ್ತು ಕಿರುತೆರೆಯ ನಿಮ್ಮ ಅಭಿಪ್ರಾಯ
ಸಿನಿಮಾ ಆಗಲಿ ಅಥವಾ ಧಾರಾವಾಹಿ ಆಗಲಿ ನಾವು ನಟಿಸುವುದು ಒಂದೇ ಪಾತ್ರ ಯಾವ ರೀತಿ ಇರುತ್ತದೆಯೋ ಅದಕ್ಕೆ ನ್ಯಾಯ ಒದಗಿಸುತ್ತೇವೆ. 5 ಸಾವಿರ ಕೊಟ್ಟಿದ್ದಾರೆ ಅಂತ ಕಡಿಮೆ ಮಾಡಲ್ಲ.50 ಸಾವಿರ ಕೊಟ್ಟಿದ್ದಾರೆ ಅಂತ ಹೆಚ್ಚಿಗೆಯೂ ನಟಿಸಲ್ಲ. ಪಾತ್ರ ಏನು ಬಯಸುತ್ತದೆಯೋ ಹಾಗೆ ನಟಿಸುತ್ತೇನೆ, ನನಗೆ ಯಾವುದೇ ವ್ಯತ್ಯಾಸ ಇಲ್ಲ.