ಅಮೇರಿಕಾದ ದಲ್ಲಾಸ್ನಲ್ಲಿ “ತಿಮ್ಮನ ಮೊಟ್ಟೆಗಳು ” ಚಿತ್ರ ಪ್ರೀಮಿಯರ್ ಶೋ
ಶ್ರೀ ಕೃಷ್ಣ ಪ್ರೊಡಕ್ಷನ್ಸ್ ಬ್ಯಾನರಿನ ಅಡಿಯಲ್ಲಿ ಆದರ್ಶ್ ಅಯ್ಯಂಗಾರ್ ನಿರ್ಮಾಣದಲ್ಲಿ ರಕ್ಷಿತ್ ತೀರ್ಥಹಳ್ಳಿಯವರ ಬರವಣಿಗೆ ಮತ್ತು ನಿರ್ದೇಶನದಲ್ಲಿ ಮೂಡಿಬಂದ “ತಿಮ್ಮನ ಮೊಟ್ಟೆಗಳು” ಚಿತ್ರ ಅಮೇರಿಕಾದ ದಲ್ಲಾಸ್ ನಲ್ಲಿ ಅದ್ದೂರಿ ಪ್ರೀಮಿಯರ್ ಶೋನೊಂದಿಗೆ ಬಿಡುಗಡೆಯಾಗಿದೆ.

ಮನುಷ್ಯ ಮತ್ತು ಪ್ರಕೃತಿ ನಡುವಿನ ಸಂಬಂಧಗಳ ಬಗ್ಗೆ ಬೆಳಕು ಚೆಲ್ಲುವ ಸುಂದರ ಕೌಟುಂಬಿಕ ಕಥಾನಕವನ್ನ ಹೊಂದಿರುವ ಚಿತ್ರ ಕೊಲ್ಕತ್ತಾ ಅಂತರಾಷ್ಟ್ರಿಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡಿತ್ತು. ಹಾಗೂ ದೆಹಲಿಯಲ್ಲಿ ನಡೆದ ದಾದಾ ಸಾಹೇಬ್ ಫಾಲ್ಕೆ ಚಲನಚಿತ್ರೋತ್ಸವದಲ್ಲಿ ಸ್ಪೆಷಲ್ ಜೂರಿ ಮೆನ್ಸನ್ ಅವಾರ್ಡ್ ಕೂಡ ಪಡೆದುಕೊಂಡಿತ್ತು.

ರಕ್ಷಿತ್ ತೀರ್ಥಹಳ್ಳಿಯವರೇ ಬರೆದ “ಕಾಡಿನ ನೆಂಟರು” ಕಥಾ ಸಂಕಲನದ ಆಯ್ದ ಒಂದು ಕಥೆ ತಿಮ್ಮನ ಮೊಟ್ಟೆಗಳು ಸಿನಿಮಾವಾಗಿದೆ. ಪ್ರವೀಣ್ ಎಸ್ ಅವರ ಛಾಯಾಗ್ರಹಣ, ಬಿ ಎಸ್ ಕೆಂಪರಾಜು ಅವರ ಸಂಕಲನ ಹಾಗೂ ಹೇಮಂತ್ ಜೋಯಿಸ್ ಸುಮಧುರ ಸಂಗೀತ ಚಿತ್ರಕ್ಕಿದೆ. ವಾಸುಕಿ ವೈಭವ್, ಐಶ್ವರ್ಯ ರಂಗರಾಜನ್, ಆದರ್ಶ್ ಅಯ್ಯಂಗಾರ್ ಮತ್ತು ಚಿನ್ಮಯಿ ಚಂದ್ರಶೇಖರ್ ಹಾಡಿರುವ ಹಾಡುಗಳು ಇಂಪಾಗಿದ್ದು ಕಥೆಗೆ ಪೂರಕವಾಗಿವೆ.

ಸುಚೇಂದ್ರ ಪ್ರಸಾದ್, ಕೇಶವ್ ಗುತ್ತಳಿಕೆ, ಆಶಿಕಾ ಸೋಮಶೇಖರ್, ಪ್ರಗತಿ ಪ್ರಭು, ಶೃಂಗೇರಿ ರಾಮಣ್ಣ, ರಘು ರಾಮನಕೊಪ್ಪ, ಮಾಸ್ಟರ್ ಹರ್ಷ, ವಿನಯ್ ಕಣಿವೆ ಮುಂತಾದವರ ಅಭಿನಯ ಚಿತ್ರಕ್ಕಿದೆ.
ದಲ್ಲಾಸ್ನಲ್ಲಿರುವ ಕನ್ನಡಿಗರು ಲುಂಗಿ ತೊಟ್ಟು, ಹೆಗಲ ಮೇಲೊಂದು ಟವಲ್ ಇಟ್ಟು, ತಲೆಯ ಮೇಲೊಂದು ಮಂಡಾಳೆಯನ್ನ ಹಾಕಿಕೊಂಡು ಮಲೆನಾಡಿನ ಸಾಮಾನ್ಯ ವ್ಯಕ್ತಿಯಂತೆ ಚಿತ್ರ ವೀಕ್ಷಿಸಲು ಬಂದದ್ದು ಎಲ್ಲರ ಗಮನ ಸೆಳೆಯಿತು.
ಚಿತ್ರ ನೋಡಿದವರೆಲ್ಲಾ ಮಾನವೀಯ ಮೌಲ್ಯಗಳು, ಪ್ರಕೃತಿ ಮತ್ತು ಮನುಷ್ಯ ನಡುವಿನ ಸಂಬಂಧಗಳು, ದೈವಾರಾಧನೆ ಮತ್ತು ಮನುಷ್ಯನ ನಂಬಿಕೆಗಳ ಬಗ್ಗೆ ಚಿತ್ರದಲ್ಲಿ ಮೂಡಿಬಂದಿರುವ ಬಗೆಯ ಬಗ್ಗೆ ಭಾವನಾತ್ಮಕವಾಗಿ ತಮ್ಮ ಅನಿಸಿಕೆ ಹಂಚಿಕೊಂಡರು.

ಚಿತ್ರದ ಕಥೆಯಲ್ಲಿ ಕಾಳಿಂಗ ಹಾವಿನ ಪಾತ್ರ ಬಹುಮುಖ್ಯವಾಗಿದ್ದು ಚಿತ್ರದ ಓಟಕ್ಕೆ ಸಹಕಾರಿಯಾಗಿದೆ. ಸದ್ಯದಲ್ಲೇ ಕರ್ನಾಟಕದಲ್ಲಿ ಚಿತ್ರ ಬಿಡುಗಡೆಯಾಗುವುದೆಂದು ಚಿತ್ರತಂಡ ಹೇಳಿಕೊಂಡಿದೆ.

