“ನಿದ್ರಾದೇವಿ ನೆಕ್ಟ್ ಡೋರ್” ಚಿತ್ರದ ಶೀರ್ಷಿಕೆ ಹಾಡು ಬಿಡುಗಡೆ: ಚಿತ್ರ ಸೆಪ್ಟಂಬರ್ 12ರಂದು ತೆರೆಗೆ
ಜಯರಾಮ ದೇವಸಮುದ್ರ ನಿರ್ಮಿಸಿರುವ, ಸುರಾಗ್ ನಿರ್ದೇಶನದ ಹಾಗೂ ಪ್ರವೀರ್ – ರಿಷಿಕಾ ನಾಯಕ – ನಾಯಕಿಯಾಗಿ ನಟಿಸಿರುವ “ನಿದ್ರಾದೇವಿ ನೆಕ್ಟ್ ಡೋರ್” ಚಿತ್ರಕ್ಕಾಗಿ ಪವನ್ ಭಟ್ ಅವರು ಬರೆದಿರುವ “ನಿದ್ರಾದೇವಿ ಬಾ” ಎಂಬ ಶೀರ್ಷಿಕೆ ಗೀತೆ ಬಿಡುಗಡೆಯಾಗಿದ್ದು ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.

ನಕುಲ ಅಭಯಂಕರ್ ಸಂಗೀತ ನೀಡಿರುವ ಹಾಡನ್ನು ಶ್ರೀಲಕ್ಷ್ಮೀ ಬೆಳ್ಮಣ್ಣು ಹಾಡಿದ್ದು ತಾಯಿ – ಮಗನ ಬಾಂಧವ್ಯದ ಈ ಹಾಡಿನಲ್ಲಿ ಹಿರಿಯ ನಟಿ ಸುಧಾರಾಣಿ ಹಾಗೂ ಮಾಸ್ಟರ್ ಸುಜಯ್ ಅಭಿನಯಿಸಿದ್ದಾರೆ. ಹಾಡು ಬಿಡುಗಡೆಯಾದ ಕ್ಷಣದಿಂದಲೇ ಮೆಚ್ಚುಗೆ ಮಹಾಪೂರವೇ ಹರಿದು ಬರುತ್ತಿದೆ.
ನಿರ್ಮಾಪಕ ಜಯರಾಮ್ ದೇವಸಮುದ್ರ ಮಾತನಾಡಿ ಚಿತ್ರದ ಕಥೆ ಹೇಳಿದಾಗ ತಾಯಿ ಪಾತ್ರದಲ್ಲಿ ಸುಧಾರಾಣಿ ಅಭಿನಯಿಸುತ್ತಾರೆ ಎಂದು ಹೇಳಿದಾಗ ಬಹಳ ಖುಷಿಯಾಯಿತು. ವಿಶೇಷವೆಂದರೆ ಸುಧಾರಾಣಿ ಜೊತೆಗೆ ನನ್ನ ಮಗ ಮಾಸ್ಟರ್ ಸುಜಯ್ ಕೂಡ ಅಭಿನಯಿಸಿದ್ದಾನೆ. ಸೆಪ್ಟೆಂಬರ್ 12ರಂದು ಚಿತ್ರ ಬಿಡುಗಡೆಯಾಗುತ್ತಿದೆ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದು ತಿಳಿಸಿದರು.

ನಿರ್ದೇಶಕ ಸುರಾಗ್ ಮಾತನಾಡಿ ಸಾಮಾನ್ಯವಾಗಿ ತಂದೆಗೆ ಮಗಳ ಮೇಲೆ, ತಾಯಿಗೆ ಮಗನ ಮೇಲೆ ಪ್ರೀತಿ ಜಾಸ್ತಿ ಎಂಬುವುದು ವಾಡಿಕೆ. ನಮ್ಮ ಚಿತ್ರದ ತಾಯಿ – ಮಗನ ಬಾಂಧವ್ಯ ಸಾರುವ “ನಿದ್ರಾದೇವಿ ಬಾ” ಎಂಬ ಟೈಟಲ್ ಸಾಂಗ್ ಬಿಡುಗಡೆಯಾಗಿದೆ. ಶ್ರೀದೇವಿ ಬೆಳ್ಮಣ್ಣು ಸುಶ್ರಾವ್ಯವಾಗಿ ಹಾಡಿದ್ದಾರೆ. ಸುಧಾರಾಣಿ ಹಾಗೂ ಮಾಸ್ಟರ್ ಸುಜಯ್ ಅಭಿನಯಿಸಿದ್ದಾರೆ. ಡಾ.ವಿಷ್ಣುವರ್ಧನ್ ಅಭಿನಯದ ಜನಪ್ರಿಯ “ಜೋ ಜೋ ಲಾಲಿ” ಎಂಬ ಹಾಡಿನಲ್ಲಿ “ನಿದ್ರಾದೇವಿ ಬಾ” ಎಂಬ ಪದವಿದೆ. ಆ ಪದವೇ ಈ ಹಾಡಿಗೆ ಸ್ಪೂರ್ತಿ ಎಂದರು
ಹಿರಿಯ ನಟಿ ಸುಧಾರಣಿ ಮಾತನಾಡಿ ನಿರ್ದೇಶಕ ಸುರಾಗ್ ಚಿತ್ರದ ಕಥೆ ಹೇಳಿದಾಗ ಪಾತ್ರ ಇಷ್ಟವಾಯಿತು. ಕೆಲವರು ಕಥೆ ಹೇಳಬೇಕಾದರೆ ಪಾತ್ರ ಒಂದು ರೀತಿ, ಆಮೇಲೆ ಬೇರೆ ರೀತಿಯೇ ಇರುತ್ತದೆ. ಆದರೆ ಸುರಾಗ್ ಕಥೆ ಹೇಳಿದ ಹಾಗೆಯೇ ಪಾತ್ರ ತೆರೆಯ ಮೇಲೆ ತಂದಿದ್ದಾರೆ. ತಾಯಿ – ಮಗನ ಬಾಂಧವ್ಯದ ಹಾಡು ತುಂಬಾ ಚೆನ್ನಾಗಿದೆ. ಒಂದೊಳ್ಳೆ ಕಂಟೆಂಟ್ವುಳ್ಳ ಚಿತ್ರವನ್ನು ಜನ ನೋಡೇ ನೋಡುತ್ತಾರೆ ಎಂಬುದಕ್ಕೆ “ಸು ಫ್ರಮ್ ಸೋ” ಚಿತ್ರವೇ ಸಾಕ್ಷಿ. ಅದೇ ರೀತಿ ಉತ್ತಮ ಕಂಟೆಂಟ್ ವುಳ್ಳ “ನಿದ್ರಾದೇವಿ ನೆಕ್ಟ್ ಡೋರ್” ಚಿತ್ರ ಸಹ ಭರ್ಜರಿ ಯಶಸ್ಸು ಕಾಣಲಿ ಎಂದು ಹಾರೈಸಿದರು.
ನಾಯಕ ಪ್ರವೀರ್ ಶೆಟ್ಟಿ ಮಾತನಾಡಿ ಇಡೀ ಕುಟುಂಬದವರು ಸುಧಾರಾಣಿ ಅಭಿಮಾನಿಗಳು. ಅವರ ಜೊತೆಗೆ ಈ ಚಿತ್ರದಲ್ಲಿ ನಟಿಸುತ್ತಿರುವುದು ಬಹಳ ಖುಷಿಯಾಗಿದೆ. “ನಿದ್ರಾದೇವಿ ಬಾ” ಹಾಡು ನಕುಲ್ ಅಭಯಂಕರ್ ಸಂಗೀತ ಸಂಯೋಜನೆಯಲ್ಲಿ ಚೆನ್ನಾಗಿ ಮೂಡಿಬಂದಿದೆ ಎಂದರು.

ನಾಯಕಿ ರಿಶಿಕಾ ಮಾತನಾಡಿ ಈ ಹಿಂದೆ “ಜ್ಯೂಲಿ” ಚಿತ್ರದಲ್ಲಿ ಸುಧಾರಾಣಿ ಅವರೊಂದಿಗೆ ಅಭಿನಯಿಸಿದ್ದೆ. ಇದು ಅವರ ಜೊತೆಗೆ ಅಭಿನಯಿಸುತ್ತಿರುವ ಎರಡನೇ ಚಿತ್ರ. ಅವರ ಜೊತೆಗೆ ನಟಿಸಿದ್ದು ಖುಷಿಯಾಗಿದೆ ಎಂದು ಹೇಳಿದರು
ರಕ್ಷಣಾ ವೇದಿಕೆ ಅಧ್ಯಕ್ಷ ಪ್ರವೀಣ್ ಶೆಟ್ಟಿ ಮಾತನಾಡಿ “ಮಣ್ಣಿನ ದೋಣಿ” ಚಿತ್ರದ ಸಮಾರಂಭವೊಂದರಲ್ಲಿ ಅಂಬರೀಶ್ ಹಾಗೂ ಸುಧಾರಾಣಿ ಅವರನ್ನು ನೋಡಿದ್ದನ್ನು ನೆನಪಿಸಿಕೊಂಡು ತಮ್ಮ ಮಗ ಚಿತ್ರದ ನಾಯಕ ಪ್ರವೀರ್ ಶೆಟ್ಟಿ, ಈ ಚಿತ್ರಕ್ಕಾಗಿ ಪಟ್ಟಿರುವ ಶ್ರಮದ ಬಗ್ಗೆ ಹೇಳಿದರು. ಚಿತ್ರ ಯಶಸ್ವಿಯಾಗಲಿ ಎಂದು ಹಾರೈಸಿದರು.

