“ಬೆಸ್ಟಿ” ಚಿತ್ರದ ಶೀರ್ಷಿಕೆ ಬಿಡುಗಡೆ ಮಾಡಿ ಶುಭಕೋರಿದ ನಟ ಶಿವರಾಜಕುಮಾರ್
ಹೊಸತಂಡದ ಹೊಸಪ್ರಯತ್ನಕ್ಕೆ ಸದಾ ಬೆನ್ನು ತಟ್ಟಿ ಪ್ರೋತ್ಸಾಹ ನೀಡುತ್ತಿರುವ ಕರುನಾಡ ಚಕ್ರವರ್ತಿ ಶಿವರಾಜಕುಮಾರ್, ಬೇಳೂರು ಗೋಪಾಲಕೃಷ್ಣ ಸಹಕಾರದೊಂದಿಗೆ ಶ್ರೀನಿವಾಸ್, ಮಮತ ಶ್ರೀನಿವಾಸ್, ಸೋಮಶೇಖರ್ ಹಾಗೂ ಕೆ.ಎಂ.ನಟರಾಜ್ ನಿರ್ಮಿಸುತ್ತಿರುವ ನೂತನ ಚಿತ್ರದ ಶೀರ್ಷಿಕೆಯನ್ನು ಸ್ವತಃ ಬರೆಯುವ ಮೂಲಕ ಅನಾವರಣ ಮಾಡಿದ್ದಾರೆ.

ನೂತನ ಚಿತ್ರಕ್ಕೆ “ಬೆಸ್ಟಿ” ಎಂದು ಹೆಸರಿಡಲಾಗಿದೆ. ಶೀರ್ಷಿಕೆ ಅನಾವರಣ ಮಾಡಿದ ಶಿವರಾಜಕುಮಾರ್ ಚಿತ್ರ ಯಶಸ್ವಿಯಾಗಲಿ ಎಂದು ಹಾರೈಸಿದ್ದಾರೆ.
“45” ಚಿತ್ರದಲ್ಲಿ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕಾರ್ಯ ನಿರ್ವಹಿಸಿರುವ ಆರ್ಯ ಯೋಗೀಶ್ “ಬೆಸ್ಟಿ” ಚಿತ್ರದ ಮೂಲಕ ನಿರ್ದೇಶಕರಾಗಿ ಪದಾರ್ಪಣೆ ಮಾಡುತ್ತಿದ್ದಾರೆ. ಕಥೆ, ಚಿತ್ರಕಥೆಯನ್ನು ನಿರ್ದೇಶಕರೆ ಬರೆದಿದ್ದಾರೆ. ಶೋಯಬ್ (ಹೈದರಾಬಾದ್) ಛಾಯಾಗ್ರಹಣ, ಸನ್ನಿ ಸಂಗೀತ ನಿರ್ದೇಶನ, ಶಿವಕಾಂತ್ ಕಲಾ ನಿರ್ದೇಶನ, ಹಾಗೂ ಸೂರಿ ಮಾಸ್ಟರ್ ಅವರ ನೃತ್ಯ ನಿರ್ದೇಶನವಿರುವ ಚಿತ್ರದ ನಾಯಕರಾಗಿ ಚೇತನ್ ಗೌಡ ನರೆಹಳ್ಳಿ ಹಾಗೂ ಸಾತ್ವಿಕ್ ವೆಂಕಟೇಶ್ ಅಭಿನಯಿಸುತ್ತಿದ್ದಾರೆ. ಕರಿ ಸುಬ್ಬು, ಟೆನ್ನಿಸ್ ಕೃಷ್ಣ ಮುಂತಾದವರು ತಾರಾಬಳಗದಲ್ಲಿದ್ದಾರೆ. ನಾಯಕಿಯ ಆಯ್ಕೆ ನಡೆಯುತ್ತಿದೆ.

ನಿರ್ಮಾಪಕ ಶ್ರೀನಿವಾಸ್ (ಶೀನು ಸಾಗರ) ಮಾತನಾಡಿ ಕಳೆದವರ್ಷ ತೆರೆಕಂಡ “ಕೇದರನಾಥ ಕುರಿಫಾರಂ” ಚಿತ್ರವನ್ನು ನಿರ್ದೇಶನ ಮಾಡಿದ್ದೆ. ಸ್ನೇಹಿತ ಆರ್ಯ ಯೋಗೇಶ್ ಹೇಳಿದ “ಬೆಸ್ಟಿ” ಚಿತ್ರದ ಕಥೆ ಬಹಳ ಇಷ್ಟವಾಯಿತು. ಹಾಗಾಗಿ ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದೇನೆ. “ಬೆಸ್ಟಿ” ಒಂದು ಬೆಸ್ಟ್ ಪ್ರೇಮಕಥಾನಕವಾಗಿದೆ. ಜೊತೆಗೆ ಈಗಿನ ಯುವಜನತೆ ಅಧುನಿಕ ತಂತ್ರಜ್ಞಾನಗಳಿಂದ ಹೇಗೆಲ್ಲಾ ಮೋಸ ಹೋಗುತ್ತಾರೆ ಎಂಬ ವಿಷಯವನ್ನು ಚಿತ್ರದಲ್ಲಿ ನಿರ್ದೇಶಕರು ತೋರಿಸುತ್ತಿದ್ದಾರೆ. ಗಣೇಶನ ಹಬ್ಬದ ನಂತರ ಚಿತ್ರೀಕರಣ ಪ್ರಾರಂಭ ಮಾಡುತ್ತೇವೆ. ಶೀರ್ಷಿಕೆ ಅನಾವರಣ ಮಾಡಿಕೊಟ್ಟು ನಮಗೆ ಪ್ರೋತ್ಸಾಹ ನೀಡಿದ ಶಿವರಾಜಕುಮಾರ್ ಅವರಿಗೆ ಧನ್ಯವಾದ ಎಂದರು

