`ಕೆಂಪಾಂಬುಧಿ’ ಚಿತ್ರದ ಟೀಸರ್ ಬಿಡುಗಡೆ: ವಿಭಿನ್ನ ಅವತಾರದಲ್ಲಿ ನಟ ಪ್ರೇಮ್
ಬೆಂಗಳೂರು ನಗರದ ನಿರ್ಮಾತೃ ನಾಡಪ್ರಭು ಕೆಂಪೇಗೌಡರ ಆದರ್ಶಮಯ ಬದುಕು, ದೂರದೃಷ್ಟಿ ಮತ್ತು ಪರಂಪರೆಯನ್ನು ತೆರೆ ಮೇಲೆ ಅನಾವರಣಗೊಳಿಸುವ `ಕೆಂಪಾಂಬುಧಿ’ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಪ್ರಶಾಂತ್ ಪ್ರಕಾಶ್ ಫ್ಯಾಮಿಲಿ ಫೌಂಡೇಶನ್ ಪ್ರಸ್ತುತಪಡಿಸಿರುವ ಈ ಚಿತ್ರಕ್ಕೆ ಹೋಂಬಾಳೆ ಮ್ಯೂಸಿಕ್ ಸಹಯೋಗ ನೀಡಿದೆ.

ದೂರದೃಷ್ಟಿಯ ಆಡಳಿತಗಾರ, ಜನಪರ ನಾಯಕ ಹಾಗೂ ಪರಿಸರದ ಮಹತ್ವವನ್ನು ಬಹಳ ಹಿಂದೆಯೇ ಅರಿತು ಅನುಷ್ಠಾನಗೊಳಿಸಿದ್ದ ನಾಡಪ್ರಭು ಕೆಂಪೇಗೌಡರ ಚಿಂತನೆಗಳು ಇಂದಿಗೂ ಬೆಂಗಳೂರಿನ ಅಸ್ತಿತ್ವದ ಅವಿಭಾಜ್ಯ ಭಾಗವಾಗಿದೆ. ಲೇಖಕ ಜಾಣಗೆರೆ ವೆಂಕಟರಾಮಯ್ಯ ಕಾದಂಬರಿ ಆಧರಿಸಿ ಮೂಡಿಬಂದಿರುವ `ಕೆಂಪಾಂಬುಧಿ’, ಇತಿಹಾಸ, ಜನಪದ, ದಂತಕಥೆಗಳು ಹಾಗೂ ಸಾಂಸ್ಕೃತಿಕ ನೆನಪುಗಳನ್ನು ಒಗ್ಗೂಡಿಸಿ ರೂಪುಗೊಂಡ ವಿಶಿಷ್ಟ ಚಿತ್ರವಾಗಿದೆ.
ಕೇವಲ ಐತಿಹಾಸಿಕ ಕಥನವಾಗಿಯೇ ಉಳಿಯದೆ, ಅಂದಿನ ಮತ್ತು ಇಂದಿನ ಬೆಂಗಳೂರನ್ನು ಜೋಡಿಸುವ ಪ್ರಯತ್ನವಾಗಿದೆ. ವೇಗವಾಗಿ ಬೆಳೆಯುತ್ತಿರುವ ನಗರದಲ್ಲಿ ನಿಧಾನವಾಗಿ ಮರೆಯಾಗುತ್ತಿರುವ `ಗಾರ್ಡನ್ ಸಿಟಿ’ಯ ಹಸಿರು ವೈಭವವನ್ನು ಮತ್ತೆ ನೆನಪಿಸುವುದರ ಜೊತೆಗೆ, ಪರಿಸರ ಸಂರಕ್ಷಣೆ ಮತ್ತು ನಗರವನ್ನು ಕಟ್ಟಿದ ಮೂಲ ಮೌಲ್ಯಗಳ ಕಡೆಗೆ ಸಮಾಜದ ಗಮನ ಸೆಳೆಯುವ ಕೆಲಸವನ್ನು ಈ ಚಿತ್ರ ಮಾಡುತ್ತದೆ

ಚಿತ್ರದಲ್ಲಿ ನೆನಪಿರಲಿ ಪ್ರೇಮ್, ಮೇಘನಾ ಗಾಂವ್ಕರ್, ರಾಜೇಶ್ ನಟರಂಗ, ಸುಧಾ ಬೆಳವಾಡಿ, ಸಂಯುಕ್ತಾ ಹೊರನಾಡು, ನಾಗಶ್ರೀ ಬೇಗಾರ್, ರಾಜೇಂದ್ರ ಕಾರಂತ್, ರಮೇಶ್ ಹಂಡಿತ್, ಬಿ.ಎಲ್. ರವಿಕುಮಾರ್, ನಟರಾಜ್ ರಾವ್ ಸೇರಿದಂತೆ ಹಲವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಕರ್ನಾಟಕದ ಇತಿಹಾಸ, ಸಂಸ್ಕೃತಿ ಮತ್ತು ಪರಂಪರೆಯನ್ನು ಹೊಸ ತಲೆಮಾರಿಗೆ ತಲುಪಿಸುವ ಇಂತಹ ಪ್ರಯತ್ನಗಳಿಗೆ ಪ್ರಶಾಂತ್ ಪ್ರಕಾಶ್ ಫ್ಯಾಮಿಲಿ ಫೌಂಡೇಶನ್ ನೀಡುತ್ತಿರುವ ಬೆಂಬಲವು ಮಹತ್ವದ ಹೆಜ್ಜೆಯಾಗಿದೆ. ನಾಡಪ್ರಭು ಕೆಂಪೇಗೌಡರ ಜೀವನದೃಷ್ಟಿ ಮತ್ತು ಅವರ ದೂರದರ್ಶಿ ಚಿಂತನೆಗಳನ್ನು ತೆರೆ ಮೇಲೆ ಮೂಡಿಸುವ ಈ ಚಿತ್ರದ ಮೂಲಕ ಬೆಂಗಳೂರಿನ ಹಸಿರು ಪರಂಪರೆಯನ್ನು ಕಾಪಾಡುವ ಜವಾಬ್ದಾರಿಯ ಬಗ್ಗೆ ಜನರಲ್ಲಿ ಮತ್ತಷ್ಟು ಅರಿವು ಮೂಡಿಸುವ ಆಶಯವೂ ಇದೆ.


