‘ನಾಗಬಂಧಂ’ ಚಿತ್ರದ ‘ನಮೋ ರೇ’ ಹಾಡು ಬಿಡುಗಡೆ
ಭಾರತೀಯ ಚಿತ್ರರಂಗದಲ್ಲಿ ಭಕ್ತಿ ಮತ್ತು ಕಲೆಯ ಅಪರೂಪದ ಸಂಗಮಕ್ಕೆ ಸಾಕ್ಷಿಯಾಗಲಿರುವ ಪ್ಯಾನ್-ಇಂಡಿಯಾ ಸಿನಿಮಾ ‘ನಾಗಬಂಧಂ’. ಚಿತ್ರದ ಬಹುನಿರೀಕ್ಷಿತ ಮೊದಲ ಸಿಂಗಲ್ ‘ನಮೋ ರೇ’ ಬಿಡುಗಡೆಯಾಗಿದ್ದು, ಇಡೀ ದೇಶದಾದ್ಯಂತ ಆಧ್ಯಾತ್ಮಿಕ ಅಲೆಯನ್ನೇ ಸೃಷ್ಟಿಸಿದೆ.

ಭಗವಾನ್ ನಾರಾಯಣನ ಮಹಿಮೆ ಕೊಂಡಾಡುವ ಗೀತೆ, ಪ್ರೇಕ್ಷಕರ ಮನಸ್ಸಿನಲ್ಲಿ ಭಕ್ತಿ ಮತ್ತು ಧನಾತ್ಮಕ ಚಿಂತನೆ ಬಿತ್ತುತ್ತಿದೆ.ಭಕ್ತಿ ಲೋಕದಲ್ಲಿ ಪಯಣ’ನಮೋ ರೇ’ ಹಾಡು ಕೇವಲ ಒಂದು ಚಿತ್ರದ ಭಾಗವಾಗಿ ಉಳಿಯದೆ, ಪ್ರತಿಯೊಬ್ಬ ಭಾರತೀಯನ ಮನಸ್ಸನ್ನು ತಟ್ಟುವ ಆಧ್ಯಾತ್ಮಿಕ ಮಂತ್ರವಾಗಿ ಹೊರಹೊಮ್ಮಿದೆ. ಭಗವಾನ್ ನಾರಾಯಣನ ಅನಂತ ಶಕ್ತಿಯನ್ನು ಸ್ತುತಿಸುವ ಈ ಗೀತೆ, ಮನುಷ್ಯನ ದೃಢತೆ, ನಂಬಿಕೆ ಮತ್ತು ಸಂಕಷ್ಟದ ಸಮಯದಲ್ಲಿ ಭಗವಂತನ ಮೇಲಿರುವ ಅಚಲ ವಿಶ್ವಾಸವನ್ನು ಎತ್ತಿ ತೋರಿಸುತ್ತದೆ.
ನಿರ್ದೇಶಕ ಅಭಿಷೇಕ್ ನಾಮಾ ಸಾರಥ್ಯದಲ್ಲಿ, ಕಿಶೋರ್ ಅನ್ನಪರೆಡ್ಡಿ ಮತ್ತು ನಿಶಿತಾ ನಾಗಿರೆಡ್ಡಿ ಚಿತ್ರ ನಿರ್ಮಿಸಿದ್ದಾರೆ. ಭಾರತದ ಸಾಂಸ್ಕೃತಿಕ ಪರಂಪರೆಯನ್ನು ಜಾಗತಿಕವಾಗಿ ಬಿಂಬಿಸುವಲ್ಲಿ ಸಿನಿಮಾ ಪ್ರಮುಖ ಪಾತ್ರ ವಹಿಸಲಿದೆ. ಜುನೈದ್ ಕುಮಾರ್ ಮತ್ತು ಅಭೆ ಸಂಗೀತ ಸಂಯೋಜನೆಯಲ್ಲಿ ಸಾಂಪ್ರದಾಯಿಕ ಮತ್ತು ಸಮಕಾಲೀನ ಶೈಲಿಗಳು ಮಿಳಿತಗೊಂಡಿವೆ. ಮಾಧುರಿ ಶೇಷಾದ್ರಿ ಅವರ ಸಾಹಿತ್ಯ ದೈವಿಕ ಲೋಕಕ್ಕೆ ಕೊಂಡೊಯ್ದರೆ, ಸಿಂಧೂಜಾ ಶ್ರೀನಿವಾಸನ್ ಭಾವಪೂರ್ಣ ಗಾಯನ ಕೇಳುಗರ ಕಣ್ಣಾಲಿಗಳನ್ನು ತೇವಗೊಳಿಸುತ್ತದೆ.

ಈ ಹಾಡಿನ ಅತಿದೊಡ್ಡ ಆಕರ್ಷಣೆಯೆಂದರೆ ಅದರ ದೃಶ್ಯ ವೈಭವ. ಖ್ಯಾತ ನೃತ್ಯ ಸಂಯೋಜಕ ಗಣೇಶ್ ಆಚಾರ್ಯ ಮತ್ತು ಸೃಷ್ಟಿ ವರ್ಮಾ ನೇತೃತ್ವದಲ್ಲಿ ಸುಮಾರು 1000 ನೃತ್ಯಗಾರರು ವಿವಿಧ ಭಾರತೀಯ ನೃತ್ಯ ಪ್ರಕಾರಗಳನ್ನು ಪ್ರದರ್ಶಿಸಿದ್ದಾರೆ. ಅಶೋಕ್ ಕುಮಾರ್ ಅದ್ಭುತ ಸೆಟ್ ವಿನ್ಯಾಸ ಮತ್ತು ಸೌಂದರ್ ರಾಜನ್ ಛಾಯಾಗ್ರಹಣ ಪ್ರತಿಯೊಂದು ಚೌಕಟ್ಟನ್ನು ಒಂದು ವರ್ಣಚಿತ್ರದಂತೆ ರೂಪಿಸಿದೆ.
ಪ್ರಸ್ತುತ ಒತ್ತಡದ ಜಗತ್ತಿನಲ್ಲಿ, ‘ನಮೋ ರೇ’ ಗೀತೆಯು ಕೇವಲ ಮನರಂಜನೆ ಮಾತ್ರವಲ್ಲದೆ, ಮಾನಸಿಕ ನೆಮ್ಮದಿ ಮತ್ತು ಆಧ್ಯಾತ್ಮಿಕ ಜಾಗೃತಿ ನೀಡುವ ಉದ್ದೇಶ ಹೊಂದಿದೆ. ಪ್ರೀತಿ, ಭಕ್ತಿ ಮತ್ತು ದೇಶದ ಸಾಂಸ್ಕೃತಿಕ ಏಕತೆ ಸಾರುವ ಹಾಡು, ಮುಂಬರುವ ‘ನಾಗಬಂಧಂ’ ಚಿತ್ರಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಒಂದು ಮಹತ್ವದ ಮೈಲಿಗಲ್ಲಾಗಲಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.

