ಭೀಮ”ನ ಭರ್ಜರಿ ಗೆಲುವಿನ ಬಳಿಕ ನಟ ವಿಜಯ್ ಕುಮಾರ್ ಈಗ ಲ್ಯಾಂಡ್ ಲಾರ್ಡ್”

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕರಾಗಿ ನಟಿಸಿದ್ದ “ಸಾರಥಿ” ಚಿತ್ರ ನಿರ್ಮಿಸಿದ್ದ ಕೆ.ವಿ.ಸತ್ಯಪ್ರಕಾಶ್ ಹನ್ನೆರಡು ವರ್ಷಗಳ ನಂತರ “ಸಾರಥಿ ಫಿಲಂಸ್” ಮೂಲಕ ” ಲಾಂಡ್ ಲಾರ್ಡ್” ಚಿತ್ರ ಕೈಗೆತ್ತಿಕೊಂಡಿದ್ದಾರೆ.

ಸಾಂಡಲ್ ವುಡ್ ಸಲಗ ವಿಜಯ್ ಕುಮಾರ್ “ಭೀಮ” ಭರ್ಜರಿ ಗೆಲುವುನ ಬಳಿಕ “ಲಾಂಡ್ ಲಾರ್ಡ್ “ಚಿತ್ರದಲ್ಲಿ ನಟಿಸುತ್ತಿದ್ದು ವಿಜಯ್ ಕುಮಾರ್ ಅವರ ಪುತ್ರಿ ರಿತನ್ಯ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. “ಗುರು ಶಿಷ್ಯರು ” ಚಿತ್ರದ ಯಶಸ್ಸಿನ ನಂತರ ಜಡೇಶ್ ಹಂಪಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.
ಸತ್ಯ ಪ್ರಕಾಶ್ ಜೊತೆಗೆ ಅವರ ಪುತ್ರ ಸೂರಜ್ ಗೌಡ ಅವರು ಸಾಥ್ ನೀಡಿದ್ದಾರೆ. ನೆಲಮಂಗಲದ ಬಳಿ ನಿರ್ಮಿಸಲಾಗಿರುವ ಅದ್ದೂರಿ ಸೆಟ್ ನಲ್ಲಿ “ಲ್ಯಾಂಡ್ ಲಾರ್ಡ್”. ಪ್ರಸ್ತುತ ಈ ಚಿತ್ರದ ಚಿತ್ರೀಕರಣ ಸಾಗಿದೆ. ಜನವರಿ 20 ನಟ ವಿಜಯ್ ಕುಮಾರ್ ಹುಟ್ಟುಹಬ್ಬ. ಈ ಹಿನ್ನೆಲೆಯಲ್ಲಿ ಮಾದ್ಯಮದ ಮಂದಿಯನ್ನು ಚಿತ್ರೀಕರಣ ಸ್ಥಳಕ್ಕೆ ಚಿತ್ರತಂಡ ಅಹ್ವಾನಿಸಿತ್ತು.
ನಾಯಕ ವಿಜಯ್ ಕುಮಾರ್ ಅವರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ ಚಿತ್ರತಂಡದ ಸದಸ್ಯರು, ” ಲ್ಯಾಂಡ್ ಲಾರ್ಡ್” ಚಿತ್ರದ ಕುರಿತು ಮಾಹಿತಿ ಹಂಚಿಕೊಂಡರು.

ನಿರ್ದೇಶಕ ಜಡೇಶ್ ಹಂಪಿ ಮಾತನಾಡಿ ಇದೊಂದು ಗ್ರಾಮೀಣ ಸೊಗಡಿನ ಕಥೆ. 1980 ರ ಕಾಲಘಟ್ಟದಲ್ಲಿ ನಡೆಯುವ ಕಥೆಯೂ ಹೌದು. ಚಿತ್ರಕ್ಕೆ “ಲ್ಯಾಂಡ್ ಲಾರ್ಡ್” ಅಂತ ಹೆಸರಿಡಲಾಗಿದ್ದು, ”ಆಳಿದವರ ಕಥೆಯಲ್ಲ. ಅಳಿದು ಉಳಿದವರ ಕಥೆ” ಎಂಬ ಅಡಿಬರಹವಿದೆ. “ಸಾರಥಿ” ಅಂತಹ ಸೂಪರ್ ಹಿಟ್ ಚಿತ್ರದ ನಿರ್ಮಾಪಕರಾದ ಕೆ.ವಿ.ಸತ್ಯಪ್ರಕಾಶ್ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದು, ಅವರ ಪುತ್ರ ಸೂರಜ್ ಗೌಡ ಅವರು ತಂದೆಗೆ ನಿರ್ಮಾಣಕ್ಕೆ ಸಾಥ್ ನೀಡಿದ್ದಾರೆ ಎಂದರು
ಕಥೆಗೆ ವಿಜಯ್ ಕುಮಾರ್ ಅವರೆ ಸೂಕ್ತ ನಾಯಕ. ರಚಿತಾರಾಮ್ ಚಿತ್ರದ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ವಿಜಯ್ ಕುಮಾರ್ ಅವರ ಪುತ್ರಿ ರಿತನ್ಯ ಕೂಡ ಚಿತ್ರದ ಪ್ರಮುಖಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸ್ಚಾಮಿ ಗೌಡ ಛಾಯಾಗ್ರಹಣ, ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ, ಕೆ.ಎಂ.ಪ್ರಕಾಶ್ ಸಂಕಲನವಿದೆ. ಮಾಸ್ತಿ ಹಾಗೂ ಶ್ರೀಕಾಂತ್ ಸಂಭಾಷಣೆ ಬರೆದಿದ್ದಾರೆ ಎಂದರು

ನಾಯಕ ವಿಜಯ್ ಕುಮಾರ್ ಮಾತನಾಡಿ ಈ ಬಾರಿ ನನ್ನ ಹುಟ್ಟುಹಬ್ಬವನ್ನು ಅಭಿಮಾನಿಗಳ ಜೊತೆಗೆ ಆಚರಿಸಿಕೊಳ್ಳಲು ಆಗಲಿಲ್ಲ. ಅದಕ್ಕಾಗಿ ಅವರಲ್ಲಿ ಕ್ಷಮೆ ಕೇಳುತ್ತೇನೆ ಎಂದು ಆರಂಭದಲ್ಲಿ ಅಭಿಮಾನಿಗಳಿಗೆ ಮನವಿ ಮಾಡಿಕೊಂಡರು
ನಿರ್ದೇಶಕ ಜಡೇಶ್ ಒಂದೊಳ್ಳೆ ಗ್ರಾಮೀಣ ಸೊಗಡಿನ ಕಥೆ ಮಾಡಿಕೊಂಡಿದ್ದಾರೆ. ಬಾಲ್ಯದಲ್ಲಿ ನಮ್ಮ ಹಳ್ಳಿಯಲ್ಲಿ ವಿದ್ಯುತ್ ದೀಪಗಳು ಹೆಚ್ಚು ಇರಲಿಲ್ಲ. ಬುಡ್ಡಿ ದೀಪಗಳೆ ಹೆಚ್ಚು. ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಗೆಟಪ್ ನಲ್ಲಿ ನಮ್ಮ ಹಳ್ಳಿಯ ಹಿರಿಯರು ಇರುತ್ತಿದ್ದರು. ಅಲ್ಲಿ ಜಾತಿ, ಮತ ಎಂಬ ಭೇದಭಾವ ಇರಲಿಲ್ಲ. ಇದ್ದದ್ದು ಎರಡೇ. ಒಂದು ಬಡವ. ಮತ್ತೊಂದು ಶ್ರೀಮಂತ. ಚಿತ್ರದಲ್ಲಿ ಬಡವರ ಪ್ರತಿನಿಧಿಯಾಗಿ ಅಭಿನಯಿಸುತ್ತಿದ್ದೇನೆ. ಸತ್ಯಪ್ರಕಾಶ್ ಹಾಗೂ ಸೂರಜ್ ಗೌಡ ಯಾವುದೇ ಕೊರತೆ ಬಾರದ ಹಾಗೆ ನಿರ್ಮಾಣ ಮಾಡುತ್ತಿದ್ದಾರೆ. ಉತ್ತಮ ಚಿತ್ರತಂಡದ ಜೊತೆಗೆ ಕೆಲಸ ಮಾಡುತ್ತಿರುವ ಖುಷಿ ಇದೆ ಎಂದರು.
ನಿರ್ಮಾಪಕ ಸತ್ಯಪ್ರಕಾಶ್ ಮಾತನಾಡಿ “ಸಾರಥಿ” ಚಿತ್ರ ನನಗೆ ತುಂಬಾ ಕೀರ್ತಿ ತಂದುಕೊಟ್ಟ ಚಿತ್ರ. ಆನಂತರ ಕೆಲವು ಚಿತ್ರಗಳ ಕಥೆ ಕೇಳಿದ್ದೆ. ಕಾರಣಾಂತರದಿಂದ ನಿರ್ಮಿಸಲು ಆಗಿರಲಿಲ್ಲ. ಜಡೇಶ್ ಕಥೆ ಇಷ್ಟವಾಯಿತು. ಕೆಲವೇ ದಿನಗಳಲ್ಲಿ ಈ ಚಿತ್ರ ಆರಂಭವಾಯಿತು. ನಿರ್ಮಾಣದಲ್ಲಿ ನನ್ನ ಜೊತೆಗೆ ಸೂರಜ್ ಗೌಡ ಇದ್ದಾರೆ. ನಾಯಕ ದುನಿಯಾ ವಿಜಯ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ನಮ್ಮ ಚಿತ್ರಕ್ಕೆ ನಿಮ್ಮೆಲ್ಲರ ಬೆಂಬಲವಿರಲಿ ಎಂದು ತಿಳಿಸಿದರು.

ಸಹ ನಿರ್ಮಾಪಕ ಸೂರಜ್ ಗೌಡ, ಈಗಾಗಲೇ ಚಿತ್ರಕ್ಕೆ ಎರಡು ಹಂತಗಳ ಚಿತ್ರೀಕರಣ ಮುಕ್ತಾಯವಾಗಿ, ಈಗ ಮೂರನೇ ಹಂತದ ಚಿತ್ರೀಕರಣ ನಡೆಯುತ್ತಿದೆ. ಮಾರ್ಚ್ ವೇಳೆಗೆ ಚಿತ್ರೀಕರಣ ಪೂರ್ಣಗೊಳಿಸಿ, ಆದಷ್ಟು ಬೇಗ ಚಿತ್ರವನ್ನು ತೆರೆಗೆ ತರುತ್ತೇವೆ ಎಂದರು.

ಸಂಭಾಷಣೆಕಾರ ಮಾಸ್ತಿ ಮಾತನಾಡಿ,ಕೋಲಾರ ಭಾಗದಲ್ಲಿ ನಡೆಯುವ ಕಥೆ. ಜಡೇಶ್ ನೆಲದ ಕಥೆಗಾರ. ಕಥೆ ತುಂಬಾ ಚೆನ್ನಾಗಿದೆ. ಶ್ರೀಕಾಂತ್ ನನ್ನ ಜೊತೆಗೆ ಈ ಚಿತ್ರಕ್ಕೆ ಸಂಭಾಷಣೆ ಬರೆಯುತ್ತಿದ್ದಾರೆ ಎಂದು ತಿಳಿಸಿದರು.
ರಿತನ್ಯ ಮಾತನಾಡಿ, ನಾನು ಹಾಗೂ ಅಪ್ಪ, ಈ ಚಿತ್ರದಲ್ಲೂ ಅಪ್ಪ, ಮಗಳಾಗಿಯೇ ಅಭಿನಯಿಸುತ್ತಿದ್ದೇವೆ. ಮೊದಲ ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು.
ಸಂಭಾಷಣೆಕಾರ ಶ್ರೀಕಾಂತ್, ನಿರ್ಮಾಣ ನಿರ್ವಾಹಕ ನರಸಿಂಹ ಜಾಲಹಳ್ಳಿ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
