ಸದ್ಯದಲ್ಲೇ ತೆರೆಯ ಮೇಲೆ “ಗರುಡ ಪುರಾಣ” ಮಂಜುನಾಥ್ ಬಿ ನಾಗಬಾ ಹೊಸ ಸಾಹಸ

ಕಾಂತಾರ ಚಿತ್ರದ ಆನ್ ಲೈನ್ ಎಡಿಟರ್ ಮಂಜುನಾಥ್ ಬಿ ನಾಗಬಾ ಹೊಸ ಸಾಹಸಕ್ಕೆ ಕೈಹಾಕಿದ್ದಾರೆ. “ಗುರುಡ ಪುರಾಣ’ ಚಿತ್ರಕ್ಕೆ ನಿರ್ದೇಶನ ಮಾಡುವ ಜೊತೆ ನಾಯಕನಾಗಿ ಕಾಣಿಸಿಕೊಂಡಿದ್ದಾರೆ

27 ಫ್ರೇಮ್ ಕ್ರಿಯೇಷನ್ಸ್ ಲಾಂಛನದಲ್ಲಿ ಸಿಂಧು ಕೆ.ಎಂ ಮತ್ತು ಬಿ.ಎಲ್ ಯೋಗೇಶ್ ಕುಮಾರ್ ನಿರ್ಮಿಸುತ್ತಿರುವ, ಮಂಜುನಾಥ್ ಬಿ ನಾಗಬಾ ಕಥೆ, ಚಿತ್ರಕಥೆ ಬರೆದು ಸಂಕಲನ ಮಾಡಿ ನಿರ್ದೇಶಿಸುತ್ತಿರುವ ” ಗರುಡ ಪುರಾಣ” ಚಿತ್ರದ ಚಿತ್ರೀಕರಣ ಮುಕ್ತಾಯವಾಗಿ, ತೆರೆಗೆ ಬರಲು ಸಿದ್ದಾವಾಗಿದೆ. ಸದ್ಯದಲ್ಲೇ ಚಿತ್ರ ಬಿಡುಗಡೆಯಾಗಲಿದೆ.
ನಿರ್ದೇಶಕ ಮಂಜುನಾಥ್ ಬಿ ನಾಗಬಾ, ಜನಪ್ರಿಯ “ಕಾಂತಾರ” ಚಿತ್ರ ಸೇರಿದಂತೆ ಹದಿನೆಂಟು ಚಿತ್ರಗಳಿಗೆ ಆನ್ ಲೈನ್ ಎಡಿಟರ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಈ ಚಿತ್ರದ ಮೂಲಕ ನಿರ್ದೇಶಕರಾಗಿದ್ದಾರೆ.

ಮನುಷ್ಯನಿಗೆ ಪಾಪ – ಪುಣ್ಯಕ್ಕೆ ಅನುಗುಣವಾಗಿ ಮೇಲೆ ಯಾವಯಾವ ಶಿಕ್ಷೆಯಿದೆ ಎಂದು ತಿಳಿಸುವ ಪುರಾಣವೇ “ಗರುಡ ಪುರಾಣ”. ಚಿತ್ರದ ಒಂದು ಭಾಗಕ್ಕೆ ಗರುಡ ಪುರಾಣದ ಕೆಲವು ಅಂಶಗಳು ಹೊಂದಿಕೆಯಾಗುತ್ತದೆ. ಹಾಗಾಗಿ ” ಗರುಡ ಪುರಾಣ ” ಶೀರ್ಷಿಕೆ ಇಟ್ಟಿದ್ದೇವೆ.
ಇದು ಮಧ್ಯಮ ಕುಟುಂಬವೊಂದರಲ್ಲಿ ನಡೆಯುವ ಕಥೆ. ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಎನ್ನಬಹುದು ಸದ್ಯ ಚಿತ್ರೀಕರಣ ಹಾಗೂ ಪೋಸ್ಟ್ ಪ್ರೊಡಕ್ಷನ್ ವರ್ಕ್ ಮುಕ್ತಾಯವಾಗಿದ್ದು, “ಗರುಡ ಪುರಾಣ” ತೆರೆಗೆ ಬರಲು ಸಿದ್ದವಾಗಿದೆ ಎಂದು ನಿರ್ದೇಶಕ ಮಂಜುನಾಥ್ ಬಿ ನಾಗಬಾ ಚಿತ್ರದ ಕುರಿತು ಮಾಹಿತಿ ನೀಡಿದರು.

ಮಂಜುನಾಥ್ ಬಿ ನಾಗಬಾ ಚಿತ್ರದ ನಾಯಕನಾಗಿಯೂ ನಟಿಸಿದ್ದು, ದಿಶಾ ಶೆಟ್ಟಿ ನಾಯಕಿಯಾಗಿ ಅಭಿನಯಿಸಿದ್ದಾರೆ. “ಭಜರಂಗಿ” ಖ್ಯಾತಿಯ ಚೆಲುವರಾಜು, ಸಂತೋಷ್ ಕರ್ಕಿ, ಕೆಂಚಣ್ಣ, ರಾಜಕುಮಾರ್, ಮಹೇಂದ್ರ ಗೌಡ ಮುಂತಾದವರು ತಾರಾಬಳಗದಲ್ಲಿದ್ದಾರೆ.
ಪುನೀತ್ ಆರ್ಯ ಈ ಚಿತ್ರದ ಹಾಡುಗಳನ್ನು ಬರೆದಿದ್ದು, ರಾಕೇಶ್ ಆಚಾರ್ಯ ಸಂಗೀತ ನೀಡಿದ್ದಾರೆ. ಸುನೀಲ್ ನರಸಿಂಹಮೂರ್ತಿ “ಗರುಡ ಪುರಾಣ” ಚಿತ್ರದ ಛಾಯಾಗ್ರಾಹಕರು.