ಸಿಂಗಪುರದಲ್ಲಿ ಯಶಸ್ವಿಯಾಗಿ ಎರಡನೇ ವಿಶ್ವ ಕನ್ನಡ ಹಬ್ಬ ಯಶಸ್ವಿ : ಸಂಘಟಕರಲ್ಲಿ ಹರ್ಷದ ಹೊನಲು

ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಸಂಸ್ಥೆ ಕನ್ನಡ ಭಾಷೆಯ ಸೊಗಡು, ಸಂಸ್ಕೃತಿಯ ಘಮಲನ್ನು ವಿದೇಶದಲ್ಲೂ ಪಸರಿಸಬೇಕೆಂಬ ನಿಟ್ಟಿನಲ್ಲಿ ಕಳೆದ ವರ್ಷ ದುಬೈನಲ್ಲಿ ವಿಶ್ವ ಕನ್ನಡ ಹಬ್ಬವನ್ನು ಯಶಸ್ವಿಯಾಗಿ ನಡೆಸಿತ್ತು. ಅದೇರೀತಿ ಈ ವರ್ಷ ಎರಡನೇ ವಿಶ್ವ ಕನ್ನಡ ಹಬ್ಬವನ್ನು ಸಿಂಗಪುರದಲ್ಲಿ ಯಶಸ್ವಿಯಾಗಿ ಮುಗಿಸಿಕೊಂಡು ಬಂದಿದೆ.

ಕೌನ್ಸಿಲ್ ಅಧ್ಯಕ್ಷ ಡಾ. ಶಿವಕುಮಾರ್ ನಾಗರ ನವಿಲೆ, 2ನೇ ವಿಶ್ವ ಕನ್ನಡ ಹಬ್ಬದ ಸರ್ವಾಧ್ಯಕ್ಷ ಡಾ.ಸಿ. ಸೋಮಶೇಖರ್, ಸಾಂಸ್ಕೃತಿಕ ಅಧ್ಯಕ್ಷೆ ನಟಿ ರೂಪಿಕಾ,ಪ್ರತಿಭಾ ಪಟುವರ್ಧನ್, ಸೈ ರಮೇಶ್, ಕಾರ್ಯದರ್ಶಿ ರಂಜಿತಾ, ಸಿಂಚನ ದೀಕ್ಷಿತ್ ಮುಂತಾದವರು ಈ ಹಾಜರಿದ್ದರು.
ಡಾ.ಶಿವಕುಮಾರ್ ಮಾತನಾಡಿ ಇದೊಂದು ದೊಡ್ಡ ಯಜ್ಞ ಎನ್ನಬಹುದು. ಎಷ್ಟೇ ಅಡೆತಡೆಗಳು ಎದುರಾದರೂ ಎದೆಗುಂದದೆ ಯಶಸ್ವಿಯಾಗಿ ಮಾಡಿದ್ದೇವೆ. ಅಂದು ಬೆಳಗಿನಿಂದಲೇ ಸಾಂಸ್ಕೃತಿಕ ಕಾರ್ಯಕ್ರಮಗಳು,ವಕವಿಗೋಷ್ಠಿ, ಜನಪದ ಗಾಯನ, ನಾಟಕ, ಪ್ರಶಸ್ತಿ ವಿತರಣೆ ಹಾಗೂ ಗೌರವ ಸಮರ್ಪಣೆ ಕಾರ್ಯಕ್ರಮಗಳು ನಡೆದವು. ಇಸ್ರೋ ವಿಜ್ಞಾನಿ ಎಸ್. ಕಿರಣ್ ಕುಮಾರ್ ಅವರಿಗೆ2024ನೇ ಸಾಲಿನ ವಿಶ್ವಮಾನವ ಪ್ರಶಸ್ತಿ ಹಾಗೂ ಮೀನಾರಾಜ್ ಅವರಿಗೆ ವಿಶ್ವಕನ್ನಡತಿ ಕಿರೀಟವನ್ನು ನೀಡಿ ಗೌರವಿಸಲಾಯಿತು. ವಿಶೇಷವಾಗಿ ಸಿದ್ದಿ ಜನಾಂಗದ 10 ಪ್ರತಿಭೆಗಳನ್ನು ಕರೆದೊಯ್ದು ಅವರಿಗೂ ವೇದಿಕೆ ಕಲ್ಪಿಸಿದ್ದೆವು. ಇಲ್ಲಿಂದ ಒಟ್ಟು 120 ಕ್ಕೂ ಹೆಚ್ಚು ಜನ ಸಿಂಗಪುರಕ್ಕೆ ಪ್ರಯಾಣ ಬೆಳೆಸಿದ್ದೆವು ಎಂದು ಹೇಳಿದರು.

ಸಿ.ಸೋಮಶೇಖರ್ ಮಾತನಾಡಿ ಹೊರದೇಶದಲ್ಲಿ ಇಂಥ ಕಾರ್ಯಕ್ರಮ ಮಾಡುವುದು ಸುಲಭದ ಮಾತಲ್ಲ, ತುಂಬಾ ಜವಾಬ್ದಾರಿ ಇರುತ್ತದೆ. ಸಾಹಸಕ್ಕೆ ಕೈ ಹಾಕಿರುವ ಶಿವಕುಮಾರ್ ಅವರ ಕನಸನ್ನು ನನಸು ಮಾಡಲಿಕ್ಕೆ ನಾವೆಲ್ಲ ಶ್ರಮಿಸಿದ್ದೇವೆ. ಕೆಳಸ್ತರದ ಪ್ರತಿಭೆಗಳನ್ನು ಗುರ್ತಿಸುವುದು ಈ ಕಾರ್ಯಕ್ರಮದ ಮತ್ತೊಂದು ಆಶಯ. ಆನಂದ ಗುರೂಜಿಯವರು, ಜಾನಪದ ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ ಅಲ್ಲದೆ ಸಿಂಗಪುರ ಕನ್ನಡ ಸಂಘದ ಅಧ್ಯಕ್ಷರಾದ ವೆಂಕಟ ರತ್ನಯ್ಯ ಸೇರಿದಂತೆ ಹಲವಾರು ಗಣ್ಯಮಾನ್ಯರುಗಳು ಈ ವಿಶ್ವ ಕನ್ನಡ ಹಬ್ಬದ ಸಮಾರಂಭದಲ್ಲಿ ಭಾಗವಹಿಸಿದ್ದರು. ಅದೊಂದು ಸುಂದರ ಹಾಗೂ ಸಾರ್ಥಕ ಸಮಾರಂಭವಾಗಿತ್ತು ಎಂದು ವಿವರಿಸಿದರು.
ಪಸಂದಾಗವ್ನೆ ಖ್ಯಾತಿಯ ಗಾಯಕಿ ಮಂಗ್ಲಿ ಗಾಯನ, ಕಾರ್ಯಕ್ರಮದ ರಾಯಭಾರಿ ನಟ ವಸಿಷ್ಠ ಸಿಂಹ, ನಟಿ ಹರಿಪ್ರಿಯ ಅವರ ಅದ್ಭುತ ಡ್ಯಾನ್ಸ್ ಪರ್ಫಾರ್ಮನ್ಸ್ ವೇದಿಕೆಯ ಮುಖ್ಯ ಆಕರ್ಷಣೆಯಾಗಿತ್ತು.

ವಿದೇಶಗಳಲ್ಲಿ ಕನ್ನಡ ಭಾಷೆ, ಕನ್ನಡ ಸಂಸ್ಕೃತಿಯನ್ನು ಉಳಿಸಿ, ಬೆಳೆಸುವ ಜತೆಗೆ ಸಾಧನೆಗೈದ ಕನ್ನಡಿಗರಿಗೆ ಗೌರವ ಸಲ್ಲಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ.
ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಅಲ್ಲಿನ ಕನ್ನಡ ಸಂಘಗಳ ಸಹಯೋಗದಲ್ಲಿ ಆಯೋಜಿಸಿದ್ದ ಎರಡನೇ ವಿಶ್ವಕನ್ನಡ ಹಬ್ಬ ಸಮಾರಂಭ ಅದ್ದೂರಿಯಾಗಿ ನೆರವೇರಿದೆ. ಈ ಸಮಾರಂಭಕ್ಕೆ ಹ್ಯಾಟ್ರಿಕ್ ಹೀರೋ ಡಾ.ಶಿವರಾಜ್ ಕುಮಾರ್ ಆಗಮಿಸಬೇಕಿತ್ತು. ಅನಾರೋಗ್ಯದ ನಿಮಿತ್ತ ಬರಲಾಗದಿದ್ದಕ್ಕೆ ವಿಡಿಯೋ ಮೂಲಕ ಸಿಂಗಪುರ ಕನ್ನಡಿಗರಿಗೆ ಶುಭ ಹಾರೈಸಿದ್ದಾರೆ.