“ಸರ್ವೇ ನಂಬರ್ 45” ಚಿತ್ರಕ್ಕೆ ಮುಹೂರ್ತ: ಗಣ್ಯರು ಉಪಸ್ಥಿತಿ

ಹೊಸಬರೇ ಸೇರಿಕೊಂಡು ಸಿದ್ದಪಡಿಸುತ್ತಿರುವ ‘ಸರ್ವೇ ನಂಬರ್ 45’ ಚಿತ್ರಕ್ಕೆ ಶ್ರೀ ಬಂಡಿ ಮಹಾಂಕಾಳಿ ಅಮ್ಮನ ಸನ್ನಿದಿಯಲ್ಲಿ ಅದ್ದೂರಿಯಾಗಿ ನಡೆಯಿತು. ಪ್ರಥಮ ದೃಶ್ಯಕ್ಕೆ ಹಿರಿಯ ನಿರ್ದೇಶಕ ಹೆಚ್.ವಾಸು ಕ್ಲಾಪ್ ಮಾಡಿದರೆ, ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ಬಣಕಾರ್ ಕ್ಯಾಮಾರ ಆನ್ ಮಾಡಿ ತಂಡಕ್ಕೆ ಶುಭ ಹಾರೈಸಿದರು.ವಿಧಾನ ಪರಿಷತ್ ಸದಸ್ಯ ಟಿ,ಎ ಶರವಣ ಮತ್ತಿತರರು ಸಾಥ್ ನೀಡಿದರು.

ಹಿರಿಯ ನಿರ್ದೇಶಕರುಗಳಾದ ಹೆಚ್.ವಾಸು ಮತ್ತು ಕೆ.ರಾಘವ ಅವರಲ್ಲಿ ಕೆಲಸ ಕಲಿತಿರುವ ಪಿರಿಯಾಪಟ್ಟಣದ ಶಿವಕುಮಾರ್.ಎಂ.ಶೆಟ್ಟಿಹಳ್ಳಿ ಹಿಂದೆ ಮಹದೇಶ್ವರ ಭಕ್ತಿ ಗೀತೆಗಳಿಗೆ ಸಾಹಿತ್ಯ ಬರೆದಿದ್ದಾರೆ. ಆ ಅನುಭವದಿಂದಲೇ ಸಿನಿಮಾಕ್ಕೆ ರಚನೆ,ಚಿತ್ರಕಥೆ, ಮೂರು ಹಾಡುಗಳನ್ನು ಬರೆದು ನಿರ್ದೇಶನ ಮಾಡುತ್ತಿದ್ದಾರೆ.

ಈ ಕುರಿತು ಮಾಹಿತಿ ಹಂಚಿಕೊಂಡ ನಿರ್ದೇಶಕ ಶಿವಕುಮಾರ್ ಶೆಟ್ಟಿಹಳ್ಳಿ,ಗ್ರಾಮೀಣ ಭಾಗದಲ್ಲಿ ಅದರಲ್ಲೂ ರೈತ ತನ್ನ ಜಮೀನಿನಲ್ಲಿ ಕೃಷಿ ಮಾಡುವ ಜಾಗಕ್ಕೆ ಸರ್ವೇ ನಂಬರ್ ಎಂದು ಸರ್ಕಾರ ನೀಡಿರುತ್ತದೆ. ಇದರ ಮಧ್ಯೆ ಆತನಿಗೆ ಒಂದಲ್ಲ ಒಂದು ಕಷ್ಟ ಬರುತ್ತಲೇ ಇರುತ್ತದೆ. ಅದನ್ನು ಚಾಣಾಕ್ಷತನದಿಂದ ಒಳ್ಳೆತನದಲ್ಲಿ ಹೇಗೆ ಬಗೆ ಹರಿಸಿಕೊಳ್ಳುತ್ತಾನೆ. ಕೆಟ್ಟದ್ದನ್ನು ಮಾಡಲು ಮುಂದಾದರೆ ಅನಾಹುತಗಳು ಕಟ್ಟಿಟ್ಟ ಬುತ್ತಿ. ನಿರ್ದೇಶಕರು ತಾವು ನೋಡಿದಂತ ಒಂದಷ್ಟು ಘಟನೆಗಳು ಜತೆಗೆ ಕಾಲ್ಪನಿಕ ಟಚ್ ಕೊಟ್ಟು ಸನ್ನಿವೇಶಗಳನ್ನು ಸೃಷ್ಟಿಸಿದ್ದಾರೆ. ‘ನಾವುಗಳು ಒಳಿತನ್ನು ಬಯಸಿದರೆ ಒಳ್ಳೆಯದೇ ನಡೆಯುತ್ರದೆ. ಕೆಟ್ಟತನವನ್ನು ಆಯ್ಕೆ ಮಾಡಿಕೊಂಡರೆ ಅದೇ ಆಗುತ್ತದೆ’ ಎಂಬ ತೂಕದ ಸಂದೇಶ ಹೇಳಲಾಗುತ್ತಿದೆ ಎನ್ನುವ ವಿವರ ನೀಡಿದರು
‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ಗಿಲ್ಲಿನಟ, ಸಂತೋಷ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಬಾಲನಟಿಯಾಗಿದ್ದ ರೀಯಾಭಾಸ್ಕರ್ ಗೌಡರ ಮಗಳ ಪಾತ್ರದಲ್ಲಿ ನಾಲ್ಕನೇ ಚಿತ್ರಕ್ಕೆ ನಾಯಕಿ. ಇವರೊಂದಿಗೆ ಮುನಿ, ಜಗದೀಶ್ ಕೊಪ್ಪ, ಸಂಜಯ್ ಪಾಟೀಲ್, ಮೈತ್ರಿ, ಟೋನಿತಾ, ರಾಜವ್ ಬಾಲೆ, ಪ್ರಕಾಶ್ ಬಾನಾಳು, ತೇಜು ಮೈಸೂರು, ಸುರೇಶ್ ಕೋಲಾರ, ರಂಗರಾಜು ಹುಲಿದುರ್ಗ ಮುಂತಾದವರು ನಟಿಸುತ್ತಿದ್ದಾರೆ.

ಸಂಭಾಷಣೆ ಚಕ್ರಿ ಕಿರಿಸಾವೆ, ಸಂಗೀತ ವಿಶಾಲ್ ಅಲಾಪ್, ಛಾಯಾಗ್ರಹಣ ದೀಪಕ್ ಕುಮಾರ್.ಜಿ.ಕೆ ಅವರದಾಗಿದೆ. ಮೈಸೂರು, ಹಾಸನ, ಮಂಡ್ಯ ಸುಂದರ ತಾಣಗಳಲ್ಲಿ ಎರಡು ಹಂತಗಳಂತೆ ಸೆಪ್ಟಂಬರ್ ಮೊದಲ ವಾರದಿಂದ ಚಿತ್ರೀಕರಣ ನಡೆಸಲು ತಂಡವು ಯೋಜನೆ ರೂಪಿಸಿಕೊಂಡಿದೆ.