ಹೊಂಬಾಳೆ ಸಂಸ್ಥೆಯಿಂದ ಮತ್ತೊಂದು ಸಿನಿಮಾ ಘೋಷಣೆ : ನಾಳೆ ಶೀರ್ಷಿಕೆ ಅನಾವರಣ
ಭಾರತೀಯ ಚಿತ್ರರಂಗದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ‘ಹೊಂಬಾಳೆ ಯಿಂದ ಮತ್ತೊಂದು ಮಹತ್ವಾಕಾಂಕ್ಷೆಯ ಚಿತ್ರದ ಘೋಷಣೆ ಮಾಡಿದ್ದು ಈ ನೂತನ ಚಿತ್ರದ ಶೀರ್ಷಿಕೆ ನಾಳೆ ಅನಾವರಣವಾಗಲಿದೆ

ರಾಜಕುಮಾರ’, ‘ಕೆಜಿಎಫ್’, ‘ಕಾಂತಾರ’ ಹಾಗೂ ‘ಸಲಾರ್’ ನಂತಹ ದೃಶ್ಯಕಾವ್ಯಗಳ ಮೂಲಕ ಭಾರತೀಯ ಚಿತ್ರರಂಗದ ಗತಿಯನ್ನೇ ಬದಲಿಸಿ, ಕಥೆ ಮತ್ತು ಮೇಕಿಂಗ್ಗೆ ಹೊಸ ವ್ಯಾಖ್ಯಾನ ಬರೆದ ಹೊಂಬಾಳೆ ಫಿಲ್ಮ್ಸ್, ಈಗ ತನ್ನ ಮುಂದಿನ ಬಹುನಿರೀಕ್ಷಿತ ಸಿನಿಮಾವನ್ನು ಅಧಿಕೃತವಾಗಿ ಘೋಷಿಸಿದೆ.
‘ಮಹಾವತಾರ ನರಸಿಂಹ’ ಚಿತ್ರದ ಮೂಲಕ ಸಂಚಲನ ಮೂಡಿಸಿದ್ದ ಅದೇ ಸೃಜನಶೀಲ ತಂಡ ಈಗ ಮತ್ತೆ ಒಂದಾಗುತ್ತಿದ್ದು,ಮತ್ತೊಂದು ಅದ್ಭುತ ಕಥಾಹಂದರವನ್ನು ತೆರೆಯ ಮೇಲೆ ತರಲು ಸಜ್ಜಾಗಿದೆ. ವಿಶೇಷವೆಂದರೆ, ವಿಭಿನ್ನ ದೃಷ್ಟಿಕೋನ ಹಾಗೂ ಹೊಸತನದ ಕಥೆಯನ್ನು ಒಳಗೊಂಡಿರುವ ಈ ಚಿತ್ರವನ್ನು ಅಶ್ವಿನ್ ನಿರ್ದೇಶಿಸಲಿದ್ದಾರೆ.
ಸಿನಿಮಾ ಪ್ರೇಕ್ಷಕರಲ್ಲಿ ಈಗಾಗಲೇ ಈ ಪ್ರಾಜೆಕ್ಟ್ ಬಗ್ಗೆ ಭಾರೀ ಕುತೂಹಲ ಗರಿಗೆದರಿದ್ದು, ಭಾರತೀಯ ಚಿತ್ರರಂಗದ ಕಣ್ಣುಗಳು ಹೊಂಬಾಳೆ ಫಿಲ್ಮ್ಸ್ನ ಈ ನೂತನ ಘೋಷಣೆಯ ಮೇಲಿದೆ. ವಿಭಿನ್ನ ದೃಶ್ಯ ವೈಭವದೊಂದಿಗೆ ಮೂಡಿಬರಲಿರುವ ಈ ಚಿತ್ರದ ಶೀರ್ಷಿಕೆ ನಾಳೆ ಅಧಿಕೃತವಾಗಿ ಪ್ರಕಟವಾಗಲಿದೆ.


