ಉತ್ತಮ ಚಿತ್ರ ನಿರ್ಮಾಣವೇ ಗುರಿ : ರಾಷ್ಟ್ರಪ್ರಶಸ್ತಿ ಚಿತ್ರಗಳ ನಿರ್ಮಾಪಕ ರಮೇಶ್ ರೆಡ್ಡಿ
“ಉಪ್ಪು ಹುಳಿ ಖಾರ’ ಎಲ್ಲವೂ ಬೇಕು ಎನ್ನುತ್ತಲೇ “ನಾಚಿರಾಮಿ” ಚಿತ್ರಕ್ಕೆ ಬರೋಬ್ಬರಿ ಐದು ರಾಷ್ಟ್ರಿಯ ಚಲನಚಿತ್ರ ಪ್ರಶಸ್ತಿ ಮುಡಿಗೇರಿಸಿಕೊಂಡು ಕನ್ನಡ ಚಿತ್ರರಂಗದಲ್ಲಿ ಇತಿಹಾಸ ನಿರ್ಮಿಸಿ ,”ಪಡ್ಡೆಹುಲಿ” ಗೂ ಸೈ, ಅನುಭವಿ ಹಾಗು ತಾರಾ ನಟರನ್ನು ಹಾಕಿಕೊಂಡು “100’ , ಗಾಳಿಪಟ-2 ಚಿತ್ರ ಮಾಡಲು ಜೈ ಎನ್ನುವುದನ್ನು ನಿರೂಪಿಸಿದವರು.

ಇದೀಗ ಬಹು ನಿರೀಕ್ಷಿತ ಚಿತ್ರ “ 45 “ ಚಿತ್ರದ ಮೂಲಕ ಶಿವರಾಜ್ ಕುಮಾರ್, ಉಪೇಂದ್ರ ಅವರನ್ನು ಮತ್ತೊಮ್ಮೆ ಜೊತೆ ಮಾಡಿದ್ದಾರೆ. ಇವರೊಂದಿಗೆ ರಾಜ್ ಬಿ ಶೆಟ್ಟಿ ಸೇರಿದಂತೆ ತೆಲುಗು,ತಮಿಳು ಚಿತ್ರರಂಗದ ಖ್ಯಾತ ನಟರನ್ನು ಹಾಕಿಕೊಂಡು ಅದ್ದೂರಿ ವೆಚ್ಚದ ಚಿತ್ರ ನಿರ್ಮಾಣಕ್ಕೆ ಮುನ್ನುಡಿ ಬರೆದಿದ್ದಾರೆ. ಅವರು ಯಾರು ಅನ್ನುತ್ತೀರಾ .. ಅವರೇ ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ಮಾಪಕ ಎಂ. ರಮೇಶ್ ರೆಡ್ಡಿ.
ಕನ್ನಡ ಚಿತ್ರಗಳ ಜೊತೆ ಜೊತೆಗೆ ಮಲೆಯಾಳಂನಲ್ಲಿ ಚಿತ್ರ ನಿರ್ಮಾಣ ಮಾಡಿ ಎಲ್ಲರ ಪ್ರೀತಿ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಇತ್ತೀಚೆಗೆ ಮಲೆಯಾಳಂನಲ್ಲಿ “ ನೀರಜಾ” ಚಿತ್ರ ಬಿಡುಗಡೆಯಾಗಿ ಅಪಾರ ಪ್ರಶಂಸೆ ಪಡೆದಿದೆ. ಈ ಮೂಲಕ ಬಾಲಿವುಡ್ನಲ್ಲಿಯೂ ಕಮಾಲ್ ಮಾಡಲು ಮುಂದಾಗಿದ್ದಾರೆ . ಊರ್ವಶಿ ರೌಟೇಲಾ ಸೇರಿದಂತೆ ಹಲವರು ನಟಿಸಿರುವ ‘ದಿಲ್ ಹೈ ಗ್ರೇ” ಚಿತ್ರದ ಚಿತ್ರೀಕರಣ ಪೂರ್ಣಗೊಳಿಸಿದ್ದು ಬಿಡುಗಡೆ ಹಂತಕ್ಕೆ ತಂದಿದ್ದಾರೆ. ದೇವರು ಅವಕಾಶ ಮಾಡಿಕೊಟ್ಟರೆ ತೆಲುಗು, ತಮಿಳಿನಲ್ಲಿಯೂ ಚಿತ್ರ ನಿರ್ಮಾಣ ಮಾಡುವ ಭವರಸೆ ಮತ್ತು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಮ್ಮ ಸಂಸ್ಥೆಯಿಂದ ತಯಾರಾಗುವ ಎಲ್ಲಾ ಚಿತ್ರಗಳು ಸದಭಿರುಚಿಯ ಚಿತ್ರಗಳಾಗಿರಬೇಕು. ಜೊತೆಗೆ ಮನೆ ಮಂದಿಯಲ್ಲ ಕುಳಿತು ನೋಡಬಹುದಾದ ಚಿತ್ರ ನೀಡುವ ಮಹದಾಸೆ ಇದೆ ಎಂದಿದ್ದಾರೆ. ಮಾಡುವ ಕೆಲಸದಲ್ಲಿ ಶ್ರದ್ಧೆ ಪ್ರಾಮಾಣಿಕತೆ ಇದ್ದರೆ ಎತ್ತರಕ್ಕೆ ಹೋಗಬಹುದು ಎನ್ನುವುದು ಅವರ ಅನುಭವದ ಮಾತು.

• ಸಿನಿಮಾ ಆಸಕ್ತಿ ಮೂಡಿದ್ದು ಹೇಗೆ
ಚಿಕ್ಕಂದಿನಿಂದ ಸಿನಿಮಾ ಗೀಳು ಹೆಚ್ಚು. ಅದರಲ್ಲಿಯೂ ಶಿವರಾಜ್ ಕುಮಾರ್ ಅವರ ಚಿತ್ರಗಳೆಂದರೆ ಅಚ್ಚುಮೆಚ್ಚು. ಅವರ ಅನಂದ್ ಚಿತ್ರದಿಂದ ಇಡಿದು ಬಹುತೇಕ ಚಿತ್ರಗಳನ್ನು ನೋಡಿದ್ದೇವೆ. ಜೊತೆಗೆ ರಾಜ್ ಕುಮಾರ್ ಎಂದರೆ ಹೆಚ್ಚು ಪ್ರೀತಿ ಮತ್ತು ಅಭಿಮಾನ. ಸಿನಿಮಾ ನೋಡಲು ಚಿತ್ರಮಂದಿರಕ್ಕೆ ಹೋದಾಗ ಎಷ್ಟೋ ಬಾರಿ ಟಿಕೆಟ್ ಸಿಗದೆ ಹಿಂದುರುಗಿದ್ದೂ ಉಂಟು. ಜೊತೆಗೆ ಶಿವಣ್ಣ ಅವರ ಮೇಲೆ ಅಭಿಮಾನ ಜಾಸ್ತಿ. ಹೀಗಾಗಿ ನಾನು ಯಾಕೆ ಸಿನಿಮಾ ನಿರ್ಮಾಣ ಮಾಡಬಾರದು ಎನ್ನುವ ಆಲೋಚನೆಯಿಂದ ಮೊದಲ ಬಾರಿಗೆ “ ಉಪ್ಪು ಹುಳಿ ಖಾರ” ಚಿತ್ರ ನಿರ್ಮಾಣ ಮಾಡಿದೆ. ಅಲ್ಲಿಂದ ಚಿತ್ರರಂಗದಲ್ಲಿ ಹಲವು ಚಿತ್ರಗಳನ್ನು ನಿರ್ಮಾಣ ಮಾಡುವಂತಾಗಿದೆ.
• ನೀವು ಮಾಡಿದ ಎರಡನೇ ಚಿತ್ರಕ್ಕೆ 5 ರಾಷ್ಟ್ರ ಪ್ರಶಸ್ತಿ ಬಂತು, ಈ ಬಗ್ಗೆ ಹೇಳುವುದಾದರೆ
ನಿರ್ದೇಶಕ ಮಂಸೋರೆ ಅವರ ನಿರ್ದೇಶನದಲ್ಲಿ ಮೂಡಿಬಂದ “ನಾಚಿಚರಾಮಿ” ಚಿತ್ರಕ್ಕೆ ಐದು ರಾಷ್ಟ್ರೀಯ ಚಲನ ಚಿತ್ರ ಪ್ರಶಸ್ತಿ ಬಂತು. ನಿರ್ಮಾಣ ಮಾಡಿದ ಎರಡನೇ ಚಿತ್ರಕ್ಕೆ ರಾಷ್ಟ್ರಮಟ್ಟದಲ್ಲಿ ಮನ್ನಣೆ ದೊರೆತದ್ದು ಸೂರಜ್ ಪ್ರೊಡಕ್ಷನ್ಸ್ ಹಾಗು ನಿರ್ಮಾಪಕನಾಗಿ ಹೆಮ್ಮೆ ಮತ್ತು ಖುಷಿ ಎರಡೂ ಇದೆ. “ಪಡ್ಡೆ ಹುಲಿ” ಚಿತ್ರದ ಮೂಲಕ ನಿರ್ಮಾಪಕ ಕೆ. ಮಂಜು ಅವರ ಪುತ್ರ ಶ್ರೇಯಸ್ ಮಂಜು ಅವರಿಗೆ ಚಿತ್ರ ನಿರ್ಮಾಣ ಮಾಡಿದೆ. ನಾವು ಒಬ್ಬರಿಗೆ ಸಹಾಯ ಮಾಡಿದರೆ ಮತ್ತೊಬ್ಬರು ನಮಗೆ ಸಹಾಯ ಮಾಡುತ್ತಾರೆ ಎನ್ನುವ ವಿಶ್ವಾಸ ನನ್ನದು.

• ರಾಷ್ಟ್ರಪ್ರಶಸ್ತಿ ಪಡೆದ ಚಿತ್ರ ಮಾಡಿದ್ದೀರಿ. ಈ ರೀತಿಯ ಇನ್ನಷ್ಟು ಚಿತ್ರ ಮಾಡುವ ಆಸೆ ಇದೆಯಾ
ಖಂಡಿತಾ ಇದೆ. ಮುಂದೆ ಅವಕಾಶ ಸಿಕ್ಕಾಗ ಒಳ್ಳೆಯ ಕಥೆ ಬಂದಾಗ ಮಾಡೋಣ. ಎಲ್ಲದಕ್ಕೂ ಕಾಲ ಕೂಡಿ ಬರಬೇಕು ಮತ್ತು ದೇವರ ಆಶೀರ್ವಾದ ಇರಬೇಕು. ಕನ್ನಡ, ಮಲೆಯಾಳಂ ಮತ್ತು ಹಿಂದಿ ಚಿತ್ರ ನಿರ್ಮಾಣ ಮಾಡಿದ್ದೇನೆ. ಅವಕಾಶ ಒದಗಿ ಬಂದರೆ ತೆಲುಗು, ತಮಿಳು ಚಿತ್ರಗಳನ್ನು ನಿರ್ಮಾಣ ಮಾಡುವ ಆಸೆ ಇದೆ.
• ಬಹು ನಿರೀಕ್ಷಿತ “45” ಚಿತ್ರದ ಬಗ್ಗೆ ಹೇಳುವುದಾದರೆ
ಶಿವಣ್ಣ ಅವರ ಚಿತ್ರಗಳನ್ನು ಹೆಚ್ಚಿಗೆ ನೋಡುತ್ತಿದ್ದರಿಂದ ಅವರಿಗಾಗಿ ಸಿನಿಮಾ ಮಾಡುವ ಆಸೆ ಇತ್ತು. ಒಳ್ಳೆಯ ಕಥೆ ಸಿಕ್ಕಿತ್ತು. ಹೀಗಾಗಿ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಈ ಚಿತ್ರದ ಮೂಲಕ ನಿರ್ದೇಶಕರಾಗಿ ಕನ್ನಡ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ. ಶಿವರಾಜ್ ಕುಮಾರ್, ಉಪೇಂದ್ರ, ರಾಜ್ ಬಿ ಶೆಟ್ಟಿ ಸೇರಿದಂತೆ ತೆಲುಗು, ತಮಿಳಿನ ಅನೇಕ ಕಲಾವಿದರು ಚಿತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರೀಕರಣ ನಡೆಯುತ್ತಿದೆ. ಕನ್ನಡದಲ್ಲಿ ಒಳ್ಳೆಯ ಚಿತ್ರವಾಗಲಿದೆ ಎನ್ನುವ ನಂಬಿಕೆ ಮತ್ತು ವಿಶ್ವಾಸವಿದೆ.

• ಬಾಲಿವುಡ್ನಲ್ಲಿ ನಿರ್ಮಾಣವಾಗಿರುವ ಚಿತ್ರ ಯಾವಾಗ ಬಿಡುಗಡೆ ಮಾಡುತ್ತೀರಾ
ನಟಿ ಊರ್ವಶಿ ರೌಟೇಲಾ ಸೇರಿದಂತೆ ಹಿಂದಿ ಚಿತ್ರರಂಗದ ಪ್ರಮುಖರು ನಟಿಸಿರುವ “ ದಿಲ್ ಹೈ ಗ್ರೇ” ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದೆ. ಈ ಮೂಲಕ ಬಾಲಿವುಡ್ ಚಿತ್ರ ನಿರ್ಮಾಣ ಮಾಡಿದ ಖುಷಿ ಇದೆ. ಸದ್ಯದಲ್ಲಿಯೇ ಬಿಡುಗಡೆ ಮಾಡುವ ಉದ್ದೇಶವಿದೆ.

• ನಿಮ್ಮ ಹಿನ್ನೆಲೆ, ನಡೆದು ಬಂದ ಹಾದಿಯ ಬಗ್ಗೆ ಹೇಳುವುದಾದರೆ
ನನ್ನೂರು, ಮುಳಬಾಗಿಲು ತಾಲ್ಲೂಕಿನ ನಂಗ್ಲಿ,. 1982ರಲ್ಲಿ ಕೂಲಿ ಕೆಲಸಕ್ಕಾಗಿ ಬೆಂಗಳೂರಿಗೆ ಬಂದವನು ನಾನು. ಕೂಲಿ ಕೆಲಸ ಮಾಡುತ್ತಲೇ ಗಾರೆ ಕೆಲಸ, ಮೇಸ್ತ್ರಿ ಕೆಲಸ ಮಾಡಿಕೊಂಡೇ 1995 ರಲ್ಲಿ ಗುತ್ತಿಗೆದಾರನಾದೆ. 2002ರಲ್ಲಿ ಚಾಮರಾಜಪೇಟೆಯಲ್ಲಿ ನಾಗೇಂದ್ರ ಮೂರ್ತಿ ಅವರ ಮನೆ ಕಟ್ಟುವ ಕೆಲಸ ನನಗೆ ಸಿಕ್ಕಿತ್ತು. ಅವರು ಇನ್ಫೋಸಿಸ್ನಲ್ಲಿ ಕೆಲಸ ಮಾಡುತ್ತಿದ್ದರು. ನನ್ನ ಕೆಲಸ ನೋಡಿ ಇನ್ಫೋಸಿಸ್ನಲ್ಲಿ ಕೆಲಸ ಮಾಡುತ್ತಿದ್ದ ಕರ್ನಲ್ ಕೃಷ್ಣ ಅವರನ್ನು ಪರಿಚಯಸಿದರು. ಅವರು ಅಲ್ಲಿ ಮೂಲ ಸೌಕರ್ಯ ಕೆಲಸಗಳ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು. ಇನ್ಫೋಸಿಸ್ನಲ್ಲಿ ಕಾಂಪೌಂಡ್ ಕಟ್ಟುವ ಕೆಲಸ ಮೊದಲ ಬಾರಿಗೆ ಸಿಕ್ಕಿತು. ಆ ಕೆಲಸ ನೋಡಿ ಇನ್ನಷ್ಟು ಖುಷಿ ಪಟ್ಟು ಇನ್ಫೋಸಿಸ್ ಪ್ರತಿಷ್ಠಾನದ ಅದ್ಯಕ್ಷರಾಗಿರುವ ಡಾ. ಸುಧಾ ನಾರಾಯಣ ಮೂರ್ತಿ ಅವರ ಮನೆಯಲ್ಲಿ ಸಣ್ಣ ಪುಟ್ಟ ರಿಪೇರಿ ಕೆಲಸ ಸಿಕ್ಕಿತ್ತು. ಅಲ್ಲಿಂದ ಅವರ ಪರಿಚಯವಾಯಿತು.
• ಸುಧಾಮೂರ್ತಿ ಅವರ ಬಗ್ಗೆ ಹೇಳುವುದಾದರೆ

ಸುಧಾಮೂರ್ತಿ ಅಮ್ಮ ಅವರ ಸಂಪರ್ಕ ಸಿಕ್ಕ ನಂತರ ಸರಿ ಇನ್ಫೋಸಿಸ್ನ ಬಹುತೇಕ ನಿರ್ಮಾಣ ಕೆಲಸ ನನಗೆ ವಹಿಸಿದರು. 18 ವರ್ಷ ಅವರ ಜೊತೆ ಕೆಲಸ ಮಾಡಿದೆ. ನನ್ನ ಈ ಸಾಧನೆಗೆ ಅವರೇ ಸ್ಪೂರ್ತಿ ಮತ್ತು ಪ್ರೇರಣೆ. ಜೊತೆಗೆ ಇನ್ಫೋಸಿಸ್ ನಲ್ಲಿ ಕೆಲಸ ಮಾಡುತ್ತಿದ್ದ ರಾಮದಾಸ್ ಕಾಮತ್, ಸಂಜಯ್ ಭಟ್ ಕನ್ನಡಿಗರಾಗಿದ್ದ ಹಿನ್ನೆಲೆಯಲ್ಲಿ ಅವರ ಬೆಂಬಲೂ ಸಿಕ್ಕಿತು. ಹೀಗಾಗಿ ಈ ಮಟ್ಟಕ್ಕೆ ಬರಲು ಸಹಕಾರಿಯಾಯಿತು.
• ಉದ್ಯಮಿಯಾಗಿ ಕೊರೋನಾ ಸಮಯದಲ್ಲಿ ಎದುರಿಸಿದ ಸವಾಲುಗಳೇನು
ಕೊರೊನಾ ಸೋಂಕು ಎಲ್ಲರಿಗೂ ಸಮಸ್ಯೆ ಆದಂತೆ ನಮ್ಮ ಕ್ಷೇತ್ರದ ಮೇಲೂ ಆಯಿತು. ಆದರೆ ನನ್ನೊಂದಿಗೆ ಕೆಲಸ ಮಾಡುವರೂ ಸೇರಿದಂತೆ ಕಷ್ಟಕಾಲದಲ್ಲಿ ಎಲ್ಲರಿಗೂ ಸಹಾಯ ಮಾಡುವ ಮೂಲಕ ಅವರ ಬೆಂಬಲಕ್ಕೆ ನಿಂತೆ. ಇದು ನನ್ನ ಮನಸ್ಸಿಗೆ ಹೆಚ್ಚು ಖುಷಿ ಮತ್ತು ನೆಮ್ಮದಿ ಕೊಟ್ಟಿದೆ.

