ಭಾರತೀಯ ಚಿತ್ರರಂಗ ಕಂಡ ಅಪರೂಪದ ತಾರೆ ಬಿ. ಸರೋಜಾ ದೇವಿ ಇನ್ನೂ ಬರೀ ನೆನಪು ಮಾತ್ರ
ಕನ್ನಡ ಸೇರಿದಂತೆ ಭಾರತೀಯ ಚಿತ್ರರಂಗದಲ್ಲಿ ಕಳೆದ ಆರೂವರೆ ದಶಕಗಳ ಕಾಲ ಬಣ್ಣದ ಬದುಕಿನಲ್ಲಿ ವಿವಿಧ ಪಾತ್ರಗಳ ಮೂಲಕ ಜನ ಮನದಲ್ಲಿ ಹಾಸುಹೊಕ್ಕಾಗಿದ್ದ ಅಭಿಜಾತ ಕಲಾವಿದೆ, ಅಭಿನಯ ಸರಸ್ವತಿ ಬಿ,ಸರೋಜಾ ದೇವಿ ಇನ್ನು ನೆನಪು ಮಾತ್ರ.

ಸಿಕ್ಕ ಪಾತ್ರ ಯಾವುದೇ ಆಗಿರಲಿ ಅದಕ್ಕೆ ಜೀವ ತುಂಬುತ್ತಿದ್ದ ಅಪ್ರತಿಮೆ ಕಲಾವಿದೆ. ಕಪ್ಪು ಬಿಳಿಪು ಚಿತ್ರದಿಂದ ಕೊನೆಯ ಚಿತ್ರ ನಟ ಸಾರ್ವಭೌಮ ಚಿತ್ರದವರೆಗೆ ತರೇವಾರಿ ಪಾತ್ರಗಳನ್ನು ಲೀಲಾಜಾಲವಾಗಿ ನಟಿಸಿದ್ದ ನಟಿ ಇನ್ನು ಬಿ ಸರೋಜಾ ದೇವಿ ಅಗಲಿಕೆ ಮೂಲಕ ಕನ್ನಡ ಚಿತ್ರರಂಗದ ಹಿರಿಯ ಕೊಂಡಿ ಕಳಚಿಬಿದ್ದಿದೆ.
ಕನ್ನಡ, ತಮಿಳು, ತೆಲುಗು,ಮಲೆಯಾಳಂ ಮತ್ತು ಹಿಂದಿ ಭಾಷೆಯಲ್ಲಿ ಕಳೆದ ಆರೂವರೆ ದಶಕಗಳ ಕಾಲ 200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ಬಿ,ಸರೋಜಾದೇವಿ ಅವರು ಜುಲೈ 14 ರಂದು ತಮ್ಮ 87ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಅವರಿಗೆ ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಸರೋಜಾ ದೇವಿ ಅವರು ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದರು. 2019ರಲ್ಲಿ ಬಿಡುಗಡೆಯಾದ ಆದ ಪುನೀತ್ ರಾಜ್ಕುಮಾರ್ ನಟನೆಯ ‘ನಟಸಾರ್ವಭೌಮ’ ಅವರು ನಟಿಸಿದ ಕೊನೆಯ ಚಿತ್ರ.
ಸರೋಜಾ ದೇವಿ ಅವರು 1967ರಲ್ಲಿ ಹರ್ಷ ಅವರನ್ನು ವಿವಾಹವಾಗಿದ್ದರು. 1986ರಲ್ಲಿ ಪತಿ ನಿಧನ ಹೊಂದಿದರು. ಈಗ ಪತಿ ಹರ್ಷ ಸಮಾಧಿ ಪಕ್ಕದಲ್ಲೇ ಸರೋಜಾ ಅವರ ಅಂತ್ಯಕ್ರಿಯೆ ನಡೆಯಲಿದೆ. ಕೊಡಿಗೆಹಳ್ಳಿಯ ತೋಟದಲ್ಲಿ ಒಕ್ಕಲಿಗೆ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಯಲಿದೆ.

ಹಿನ್ನೆಲೆ:
ಚನ್ನಪಟ್ಟಣ ತಾಲ್ಲೂಕಿನ ದಶವಾರದಲ್ಲಿ ಬೈರಪ್ಪ ಮತ್ತು ರುದ್ರಮ್ಮ ದಂಪತಿಯ ಕಿರಿಯ ಪುತ್ರಿಯಾಗಿ 1938ರ ಜನವರಿ 7 ರಂದು ಜನಿಸಿದ್ದ ಬಿ ಸರೋಜಾ ದೇವಿ ಅವರಿಗೆ ಕಮಲಮ್ಮ ಮತ್ತು ಸಿದ್ದಲಿಂಗಮ್ಮ ಎನ್ನುವ ಇಬ್ಬರು ಹಿರಿಯ ಸಹೋದರಿಯರಿದ್ದರು. ತಂದೆ ಬೈರಪ್ಪ ಅವರಿ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು,
17ನೇ ವಯಸ್ಸಿನಲ್ಲಿ “ಮಹಾಕವಿ ಕಾಳಿದಾಸ” ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ್ದ ಬಿ, ಸರೋಜಾ ದೇವಿ ಅವರು ಕನ್ನಡ, ತಮಿಳು, ತೆಲುಗು ಮತ್ತು ಹಿಂದಿ ಭಾಷೆಯಲ್ಲಿ 6 ದಶಕಕ್ಕೂ ಹೆಚ್ಚು ಕಾಲದ ನಟನಾ ಜೀವನದಲ್ಲಿ 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸುವ ಮೂಲಕ ಬಹುಭಾಷಾ ನಟಿ ಎನ್ನುವ ಹಿರಿಮೆ ತನ್ನದಾಗಿಸಿಕೊಂಡಿದ್ದರು.
ವೀರ ರಾಣಿ ಕಿತ್ತೂರು ರಾಣಿ ಚೆನ್ನಮ್ಮನ ಪಾತ್ರ ಸೇರಿದಂತೆ ಯಾವುದೇ ಪಾತ್ರವಿರಲಿ ಅದಕ್ಕೆ ನ್ಯಾಯ ಒದಗಿಸುತ್ತಿದ್ದ ಕಲಾವಿದೆ. ಕನ್ನಡದ ನೆಲದಲ್ಲಿ ಅರಳಿದ ಅಪ್ಪಟ ಕಲಾವಿದೆ. ಬಿ ಸರೋಜಾ ದೇವಿ ಅಂದಾಕ್ಷಣ ಥಟ್ಟನೆ ನೆನಪಾಗುತ್ತಿದ್ದ ಚಿತ್ರಗಳೆಂದರೆ ಕಿತ್ತೂರು ಚೆನ್ನಮ್ಮ, ಬಬ್ರುವಾಹನ, ಭೂಕೈಲಾಸ, ಅಣ್ಣತಂಗಿ, ಗೃಹಣಿ, ರತ್ನಗಿರಿ ರಹಸ್ಯ, ಭಾಗ್ಯವಂತರು, ಪಾಪ ಪುಣ್ಯ, ಲಕ್ಷ್ಮಿ ಸರಸ್ವತಿ, ಮಲ್ಲಮ್ಮನ ಪವಾಡ, ಕಥಾ ಸಾಗರ, ದೇವಸುಂದರಿ ಸೇರಿದಂತೆ ಅನೇಕ ಪಾತ್ರಗಳ ಮೂಲಕ ಜನಮನ ಸೂರೆಗೊಂಡಿದ್ಧಾರೆ
ಬಿ,ಸರೋಜಾದೇವಿ ಅವರಿಗೆ ಸಂದ ಪ್ರಶಸ್ತಿಗಳು
• 1965ರಲ್ಲಿ ಅಭಿನಯ ಸರಸ್ವತಿ ಗೌರವ
• 1969ರಲ್ಲಿ ಕುಲ ವಿಲಕ್ಕೂ ಚಿತ್ರಕ್ಕಾಗಿ ತಮಿಳುನಾಡು ಸರ್ಕಾರಿಂದ ಪ್ರಶಸ್ತಿ
• 1988ರಲ್ಲಿ ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ
• 1993ರಲ್ಲಿ ತಮಿಳುನಾಡು ಸರ್ಕಾರದಿಂದ ಎಂಜಿಆರ್ ಪ್ರಶಸ್ತಿ
• 1969ರಲ್ಲಿ ಪದ್ಮಶ್ರಿ, 1992ರಲ್ಲಿ ಪದ್ಮ ಭೂಷಣ ಗೌರವ
• ತಮಿಳುನಾಡು ಸರ್ಕಾರದಿಂದ “ಕಲೈಮಾವಣಿ’ ಜೀವಮಾನ ಸಾಧನೆ ಪ್ರಶಸ್ತಿ
• ಕರ್ನಾಟಕ ಸರ್ಕಾರಿಂದ ರಾಜ್ ಕುಮಾರ್ ಜೀವಮಾನ ಸಾಧನೆ ಪ್ರಶಸ್ತಿ
• ಆಂದ್ರ ಪ್ರದೇಶ ಸರ್ಕಾರಿಂದ 2ನೇ ಬಾರಿಗೆ ಎನ್ ಟಿಆರ್ ರಾಷ್ಟ್ರೀಯ ಪುರಸ್ಕಾರ
• ಸೇರಿದಂತೆ ಹತ್ತು ಹಲವು ಪ್ರತಶಸ್ತಿಗಳು ಬಿ, ಸರೋಜಾದೇವಿ ಅವರನ್ನು ಹುಡುಕಿಕೊಂಡು ಬಂದಿವೆ
ನಾಳೆ ಅಂತ್ಯಕ್ರಿಯೆ
ಬೆಂಗಳೂರಿನ ಮಲ್ಲೇಶ್ವರಂ ನಿವಾಸಲ್ಲಿ ನಾಳೆ ತನಕಪಾರ್ಥೀವ ಶರೀರದ ಅಚಿತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ, ನಾಳೆ ಮಧ್ಯಾಹ್ನದ ನಂತರ ಕೊಡಿಗಿಹಳ್ಳಿನ ಜಮೀನು ಇಲ್ಲವೇ ದಶಾವರದಲ್ಲಿ ಅಂತ್ಯಸಂಸ್ಕಾರ ಮಾಡಬೇಕು ಎನ್ನುವುದನ್ನು ಮಗಳು ಮತ್ತು ಅಳಿಯ ಬಂದ ನಂತರ ಕುಟುಂಬದ ಜೊತೆ ಚರ್ಚೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ ಎನ್ನಲಾಗಿದೆ.

ಚಿತ್ರರಂಗ, ರಾಜಕೀಯ ನೇತಾರರಿಂದ ಕಂಬನಿ
ಅಗಲಿದ ಹಿರಿಯ ನಟಿ ಬಿ. ಸರೋಜಾದೇವಿ ಅವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಬಿಜೆಪಿ ರಾಜ್ಯಾದ್ಯಕ್ಷ ಬಿ,ವೈ ವಿಜಯೇಂದ್ರ, ಜೆಡಿಎಸ್ ಅಧ್ಯಕ್ಷ ಹಾಗು ಕೇಂದ್ರ ಸಚಿವ ಹೆಚ್,ಡಿ ಕುಮಾರ ಸ್ವಾಮಿ ಸೇರಿದಂತೆ ಹಲವು ಸಚಿವರು, ವಿವಿಧ ಪಕ್ಷಗಳ ರಾಜಕಾರಣಗಳು ಕಂಬಿನಿ ಮಿಡಿದಿದ್ದಾರೆ
ಜೊತೆಗೆ ಚಂದನವನದ ತಾರೆಯರು ಬಿ, ಸರೋಜಾ ದೇವಿ ಅವರ ಪಾರ್ಥೀ ಶರೀರದ ಅಂತಿಮ ದರ್ಶನ ಪಡೆದು ಅಗಲಿದ ಹಿರಿಯ ಕಲಾವಿದೆಯನ್ನು ಗುಣಗಾನ ಮಾಡಿದರು.


