ಮಹಾರಾಷ್ಟ್ರ ಕರ್ಮಭೂಮಿ, ಕರ್ನಾಟಕ ಜನ್ಮ ಭೂಮಿಗೆ “ಜೈ” ಎಂದ ಬಾಲಿವುಡ್ ನಟ ಸುನೀಲ್ ಶೆಟ್ಟಿ
ಕಿಚ್ಚ ಸುದೀಪ್ ನಟನೆಯ “ಪೈಲ್ವಾನ್” ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಬಾಲಿವುಡ್ ನಟ ಸುನೀಲ್ ಶೆಟ್ಟಿ, ಒಂದಷ್ಟು ವರ್ಷಗಳ ನಂತರ ಇದೀಗ ತುಳು ಮತ್ತು ಕನ್ನಡದಲ್ಲಿ ತಯಾರಾಗಿರುವ ನಟ ರೂಪೇಶ್ ಶೆಟ್ಟಿ ಆಕ್ಷನ್ ಕಟ್ ಹೇಳಿರುವ “ಜೈ” ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ, ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಟ್ರೈಲರ್ ಬಿಡುಗಡೆಗೆ ಆಗಮಿಸುವ ಮೂಲಕ ಚಿತ್ರತಂಡಕ್ಕೆ ಬೆಂಬಲವಾಗಿ ನಿಂತಿದ್ಧಾರೆ.

ಈ ವೇಳೆ ಮಾತಿಗಿಳಿದ ಬಾಲಿವುಡ್ ನಟ ಸುನೀಲ್ ಶೆಟ್ಟಿ, ವರನಟ ಡಾ, ರಾಜ್ಕುಮಾರ್, ಪುನೀತ್ ರಾಜ್ಕುಮಾರ್ ಅವರು ತುಂಬಾನೇ ಹತ್ತಿರವಾಗಿದ್ದರು, ಕಿಚ್ಚ ಸುದೀಪ ಆತ್ಮೀಯರು. ಜೊತೆಗೆ ಸಹೋದರಿ ಸೇರಿದಂತೆ ನನ್ನ ಸಂಬಂಧಿಕರು ಬೆಂಗಳೂರಿನಲ್ಲಿಯೇ ಇದ್ದಾರೆ. ಈ ಕಾರಣಕ್ಕೆ ಬೆಂಗಳೂರಿಗೆ ಸಾಕಷ್ಟು ಸಲ ಬಂದಿದ್ದೇನೆ ಎಂದು ಕನ್ನಡ ಚಿತ್ರರಂಗ ಮತ್ತು ಬೆಂಗಳೂರಿನ ಬಗೆಗಿನ ನಂಟಿನ ಬಗ್ಗೆ ಮಾಹಿತಿ ನೀಡಿದರು.
ಮಹಾರಾಷ್ಟ್ರದದ ಮುಂಬೈನಲ್ಲಿ ಕೆಲಸ ಮಾಡುತ್ತಿದ್ದೇನೆ. ಅದು ನನ್ನ ಕರ್ಮ ಭೂಮಿ. ಆದರೆ ನನ್ನ ಜನ್ಮ ಭೂಮಿ ಕರ್ನಾಟಕದ ಮುಲ್ಕಿ. ನಟ ರೂಪೇಶ್ ಶೆಟ್ಟಿ ಪ್ರತಿಭಾನ್ವಿತ ನಟ, ಈ ಕಾರಣಕ್ಕಾಗಿಯೇ “ಜೈ” ಸಿನಿಮಾದಲ್ಲಿ ನಟಿಸಿದ್ದೇನೆ. ಇಡೀ ತಂಡಕ್ಕೆ ಒಳ್ಳೆಯದಾಗಲಿ ಎಂದು ಮನದುಂಬಿ ಹರಸಿದರು.

ನಿರ್ದೇಶಕ, ನಟ ರೂಪೇಶ್ ಶೆಟ್ಟಿ ಮಾತನಾಡಿ, ತುಳು ಭಾಷೆಯಲ್ಲಿ ಸಣ್ಣದಾಗಿ ಮಾಡಬೇಕೆಂದು ಶುರು ಮಾಡಿದ ಸಿನಿಮಾ. ಕನ್ನಡದಲ್ಲಿಯೂ ತಯಾರಾಗಿದೆ. ವಿದೇಶದಲ್ಲೂ ಬಿಡುಗಡೆಗೆ ಪ್ರತಿಕ್ರಿಯೆಗಳು ಬರುತ್ತಿವೆ ಅದಕ್ಕೆ ಕಾರಣ ಸುನೀಲ್ ಶೆಟ್ಟಿ ಅಣ್ಣ. ಸುನೀಲ್ ಶೆಟ್ಟಿ ಅಣ್ಣನಿಗೆ ನಾವ್ಯಾರು ಅಂತಾನೆ ಗೊತ್ತಿರಲಿಲ್ಲ. ನಿರ್ಮಾಪಜರ ಕಡೆಯಿಂದ ಭೇಟಿಯಾಗಿ ಮನವಿ ಮಾಡಿಕೊಂಡೆವು. ಸಿನಿಮಾ ಮುಗಿಸಿ ಹೋಗಿ ಬಿಡಬಹುದಿತ್ತು. ಆದರೆ ಪ್ರಚಾರಕ್ಕೂ ಜೊತೆಗೆ ನಿಂತಿದ್ದಾರೆ. ಸಿನಿಮಾ ಬಿಡುಗಡೆ ಜೊತೆಗೆ ಬರ್ತಿನಿ ಎಂದಿದ್ದಾರೆ ಎಂದು ಹೇಳಿದರು
ಕನ್ನಡದ ಪ್ರತಿಭಾನ್ವಿತ ನಟಿ ಅಧ್ವಿತಿ ಶೆಟ್ಟಿ “ಜೈ” ಸಿನಿಮಾದಲ್ಲಿ ನಟಿಸಿದ್ದು ಮೂಲ ತುಳು ನಾಡಿನವರೇ ಆಗಿದ್ದರೂ ಇದು ಅವರಿಗೆ ಅಲ್ಲಿನ ಮೊದಲ ಸಿನಿಮಾ, ಚಿತ್ರದ ಬಗ್ಗೆ ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ರಾಜ್ ದೀಪಕ್ ಶೆಟ್ಟಿ ಮಾತನಾಡಿ, ರೂಪೇಶ್ ಶೆಟ್ಟಿ ವಯಸ್ಸಲ್ಲಿ ನನಗಿಂತ ಚಿಕ್ಕವರಿದ್ದರೂ ಅವರ ಅದ್ಭುತ ಆಲೋಚನೆ ತುಂಬಾ ದೊಡ್ಡದು. ರೀಲ್ ಅಷ್ಟೇ ಅಲ್ಲ ರಿಯಲ್ ಲೈಫ್ಗೂ ಬೇಕಾಗಿರುವಂತ ಒಂದಷ್ಟು ವಿಚಾರಗಳನ್ನು ಅವರಿಂದ ತಿಳಿದುಕೊಂಡಿದ್ದೇನೆ. ಸಿನಿಮಾ ಮುಗಿದ ಮೇಲೆ ವಿಲನ್ನ ಬಿಟ್ಟು ಬಿಡ್ತಾರೆ. ಆದರೆ ರೂಪೇಶ್ ಶೆಟ್ಟಿ ಜೊತೆಗೆ ಇಟ್ಟುಕೊಂಡಿದ್ದಾರೆ. ಸುನೀಲಣ್ಣ ಕೂಡ ಸಿನಿಮಾದಲ್ಲಿದ್ದಾರೆ ಎಂದಾಗ ಒಪ್ಪಿಕೊಳ್ಳದೆ ಇರೋಕೆ ಆಗುತ್ತಾ ಎಂದು ಹೇಳಿದರು

ಚಿತ್ರರಂಗದಲ್ಲಿರಲು ಸುನೀಲ್ ಶೆಟ್ಟಿ ಕಾರಣ: ಗುರುಕಿರಣ್
ಸಂಗೀತ ನಿರ್ದೇಶಕ ಗರುಕಿರಣ್ ಮಾತನಾಡಿ ಕಾರ್ಯಕ್ರಮಕ್ಕೆ ಸುನೀಲಣ್ಣ ಬಂದಿರೋದು ಬಹಳ ಖುಷಿಯ ವಿಚಾರ. ಸಿನಿಮಾ ರಂಗಕ್ಕೆ ಬರುವುದಕ್ಕೂ ಮುನ್ನ ಸಂಗೀತಕ್ಕೆ ಪ್ರೋತ್ಸಾಹ ಮಾಡಿದ್ದೇ ಸುನೀಲಣ್ಣ. ಒಂದು ಲೆಕ್ಕದಲ್ಲಿ ಚಿತ್ರರಂಗದಲ್ಲಿ ಇರುವುದಕ್ಕೆ ಕಾರಣವೇ ಸುನೀಲಣ್ಣ. ಅದನ್ನ ಯಾವತ್ತು ಮರೆಯೋದಕ್ಕೆ ಸಾಧ್ಯವಿಲ್ಲ. ಶೆಟ್ರುgಐe ಸಿಕ್ಸರ್ ಹೊಡೀತಾ ಇದ್ದಾರೆ. ರೂಪೇಶ್ ಶೆಟ್ರು ಹೇಗೆ ಹೊಡೆಯುತ್ತಾರೆ ಎಂಬುದನ್ನ ನೋಡಬೇಕು. ಈ ಸಿನಿಮಾದಲ್ಲಿ ಒಂದು ಹಾಡು ಹಾಡಿದ್ದೇನೆ. ಸಿನಿಮಾ ತಂಡಕ್ಕೆ ಒಳ್ಳೆಯದಾಗಲಿ ಎಂದಿದ್ದಾರೆ.
ಕಾರ್ಯಕ್ರಮದಲ್ಲಿ ಶಾಸಕ ಡಾ.ಸಿ.ಎನ್ ಅಶ್ಚಥ್ ನಾರಾಯಣ್, ಉಪೇಂದ್ರ ಶೆಟ್ಟಿ, ಮಧು ರಾವ್, ರಾಜ್ ದೀಪಕ್ ಶೆಟ್ಟಿ, ಉದ್ಯಮಿ ಪ್ರಕಾಶ್ ಕುಮ್ಕಳ ಸೇರಿದಂತೆ ಅನೇಕರು ಹಲವರು ಆಗಮಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು

