ಕಲಾವಿದರ ಸಂಘದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ
ಕರ್ನಾಟಕ ಚಲನಚಿತ್ರ ಕಲಾವಿದರ ಸಂಘದಲ್ಲಿ ಕಲಾವಿದರಿಗೆ, ಸಹ ಕಲಾವಿದರಿಗೆ ಹಾಗೂ ಕಾರ್ಮಿಕ ಸಂಘದವರಿಗೆ ಹೀಗೆ ಚಿತ್ರರಂಗದಲ್ಲಿ ಕಾರ್ಯ ನಿರ್ವಹಿಸುವ ಪ್ರತಿಯೊಬ್ಬರಿಗೂ ಅನುಕೂಲವಾಗಲೆಂದು ಉಚಿತ ಆರೋಗ್ಯ ತಪಾಸಣೆ ಶಿಬಿರಆಯೋಜಿಸಲಾಗಿತ್ತು

ವಾಣಿಜ್ಯ ಮಂಡಳಿ ಅಧ್ಯಕ್ಷೆ ಡಾ.ಜಯಮಾಲ ಹಾಗೂ ಮಾಜಿ ಸಂಸದೆ, ನಟಿ ಸುಮಲತಾ ಅಂಬರೀಶ್ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿದರು. ಕಲಾವಿದರ ಸಂಘದ ಪ್ರಧಾನ ಕಾರ್ಯದರ್ಶಿ ರಾಕ್ ಲೈನ್ ವೆಂಕಟೇಶ್, ಖಜಾಂಚಿ ದೊಡ್ಡಣ್ಣ ಮುಂತಾದವರು ಉಪಸ್ಥಿತರಿದ್ದರು.
ಡಾ. ಜಯಮಾಲ ಮಾತನಾಡಿ ಕಲಾವಿದರ ಸಂಘದಲ್ಲಿ ಆರೋಗ್ಯ ತಪಾಸಣೆ ಶಿಬಿರ ನಡೆಸುತ್ತಿರುವುದು ಬಹಳ ಒಳ್ಳೆಯ ಕೆಲಸ. ಎಷ್ಟೋ ಖಾಯಿಲೆಗಳು ಬಹಳ ತಡವಾಗಿ ತಿಳಿದು ಸಾಕಷ್ಟು ಜನ ಕಲಾವಿದರನ್ನು ನಾವು ಕಳೆದುಕೊಂಡಿದ್ದೇವೆ. ಇಂತಹ ಆರೋಗ್ಯ ತಪಾಸಣೆ ಶಿಬಿರದಲ್ಲಿ ಎಲ್ಲಾ ರೀತಿಯ ಉಚಿತ ತಪಾಸಣೆಗಳಿದ್ದು, ಇದರ ಉಪಯೋಗ ಪಡದುಕೊಂಡು ಮುತುವರ್ಜಿ ವಹಿಸಬಹುದು ಎಂದರು
ಸುಮಲತಾ ಅಂಬರೀಶ್ ಮಾತನಾಡಿ ಕಲಾವಿದರ ಸಂಘ ಅಂಬರೀಶ್ ಕನಸು. ತಮ್ಮ ಮನೆ ಆಗುವುದಕ್ಕಿಂತ ಹೆಚ್ಚಾಗಿ ಕಲಾವಿದರ ಸಂಘ ಆಗುವುದಕ್ಕೆ ಶ್ರಮಿಸಿದ್ದಾರೆ. ಈ ಸಂಘದಲ್ಲಿ ಕಲಾವಿದರಿಗೆ ಉಪಯೋಗವಾಗುವ ಕಾರ್ಯಗಳು ಆಗುತ್ತಿರಬೇಕೆಂಬುದು ಅಂಬರೀಶ್ ಆಸೆಯಾಗಿತ್ತು. ಆರೋಗ್ಯವೇ ಮಹಾಭಾಗ್ಯ. ಆರೋಗ್ಯದ ನಂತರ ಮಿಕ್ಕೆಲ್ಲಾ. ಹೀಗಾಗಿ ಕಲಾವಿದರ ಸಂಘದಿಂದ ಕಲಾವಿದರಿಗಾಗಿ ಈ ಆರೋಗ್ಯ ತಪಾಸಣೆ ಶಿಬಿರ ಏರ್ಪಡಿಸಲಾಗಿದೆ. ತುಂಬಾ ಉತ್ತಮ ಕೆಲಸ ಇದು ಎಂದು ತಿಳಿಸಿದರು.

ಕಲಾವಿದರ ಸಂಘಕ್ಕೆ ಶೀಘ್ರ ಚುನಾವಣೆ:
ಕಲಾವಿದರ ಸಂಘ ಪ್ರಧಾನ ಕಾರ್ಯದರ್ಶಿ ರಾಕ್ ಲೈನ್ ವೆಂಕಟೇಶ್ ಮಾತನಾಡಿ ಸದ್ಯದಲ್ಲೇ ಕಲಾವಿದರ ಸಂಘದ ಚುನಾವಣೆ ನಡೆಯಲಿದೆ ಎಂದು ಹೇಳಿದರು.
ಕಲಾವಿದರ ಸಂಘ ಅಂಬರೀಶ್ ಕನಸು. ಸಂಘಕ್ಕೆ ನೀಡುತ್ತಿದ್ದ ಪ್ರೋತ್ಸಾಹವನ್ನು ಈಗ ಸುಮಲತಾ ಅಂಬರೀಶ್ ಮುಂದುವರೆಸಿಕೊಂಡು ಬರುತ್ತಿದ್ದಾರೆ. ಕಲಾವಿದರ ಸಂಘದಲ್ಲಿ ರೀತಿಯ ಉಚಿತ ಆರೋಗ್ಯ ತಪಾಸಣೆ ಶಿಬಿರ ಆಗಬೇಕೆಂದು ಹೇಳಿದಾಗ ಅದಕ್ಕೆ ಸಂಬಂಧಿಪಟ್ಟ ಸರ್ಕಾರದ ಸಚಿವರು, ಅಧಿಕಾರಿಗಳು ಹಾಗೂ ವೈದ್ಯರ ಜೊತೆಗೆ ಮಾತನಾಡಿ ಶಿಬಿರವನ್ನು ನಡೆಸಲು ಅನುಕೂಲ ಮಾಡಿಕೊಟ್ಟಿದ್ದಾರೆ .ಖಜಾಂಚಿ ದೊಡ್ಡಣ್ಣ ಅವರಂತೂ ಕೆಲವು ತಿಂಗಳಿಂದ ಈ ಆರೋಗ್ಯ ಶಿಬಿರ ನಡೆಸಲು ಸಾಕಷ್ಟು ಶ್ರಮ ಪಟ್ಟಿದ್ದಾರೆ ಎಂದರು
ಕಲಾವಿದರ ಸಂಘದ ಖಜಾಂಚಿ ದೊಡ್ಡಣ್ಣ ಮಾತನಾಡಿ
ಕ್ಯಾನ್ಸರ್ ತಪಾಸಣೆ ಸೇರಿದಂತೆ ಹಲವು ಉಚಿತ ತಪಾಸಣೆಗಳನ್ನು ಶಿಬಿರದಲ್ಲಿ ನಡೆಸಲಾಯಿತು. ಸಾಕಷ್ಟು ಕಲಾವಿದರು ಶಿಬಿರದಲ್ಲಿ ಭಾಗಿಯಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಂಡರು. ಮುಂದಿನ ದಿನಗಳಲ್ಲೂ ಇಂತಹ ಶಿಬಿರಗಳನ್ನು ಆಯೋಜಿಸುವ ಉದ್ದೇಶವಿದ್ದು, ಇನ್ನೂ ಹೆಚ್ಚಿನ ಜನರು ಇದರ ಉಪಯೋಗ ಪಡೆದುಕೊಳ್ಳಬೇಕು. ಆರೋಗ್ಯ ಪ್ರತಿಯೊಬ್ಬರಿಗೂ ಮುಖ್ಯ ಎಂದರು.
ಕಲಾವಿದರ ಸಂಘದಲ್ಲಿ ಹೆಚ್ ಸಿ ಜಿ ಕ್ಯಾನ್ಸರ್ ಆಸ್ಪತ್ರೆ, ಕರ್ನಾಟಕ ಕ್ಯಾನ್ಸರ್ ಆಸ್ಪತ್ರೆ, ಸಪ್ತಗಿರಿ ಕಾಲೇಜು ಮತ್ತು ಆಸ್ಪತ್ರೆ, ನಿಮಾನ್ಸ್ ಆಸ್ಪತ್ರೆ, ಕಿದ್ವಾಯಿ ಆಸ್ಪತ್ರೆ, ಪೋರ್ಟಿಸ್ ಆಸ್ಪತ್ರೆ, ಶಂಕರ ಕಣ್ಣಿನ ಆಸ್ಪತ್ರೆ ಹಾಗೂ ಮಣಿಪಾಲ್ ಆಸ್ಪತ್ರೆ ಯಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಲಾಗಿತ್ತು.

