ಶಿವರಾಜಕುಮಾರ್ ನಟನೆಯ ಹೊಸ ಚಿತ್ರ ಪ್ರಕಟ: ಪಿ ವಾಸು ಸಹೋದರಿ ಮಗ ನಿರ್ದೇಶಕ
ಏಪ್ರಿಲ್ 24 ವರನಟ ಡಾ.ರಾಜಕುಮಾರ್ ಅವರ ಹುಟ್ಟುಹಬ್ಬ. ಈ ವೇಳೆ ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ನಾಯಕರಾಗಿ ನಟಿಸಲಿರುವ ನೂತನ ಚಿತ್ರದ ಘೋಷಣೆಯಾಗಿದೆ.
ಶ್ರಿತಿಕ್ ಮೋಷನ್ ಪಿಕ್ಚರ್ಸ್ ಸಂಸ್ಥೆ ಲಾಂಛನದಲ್ಲಿ ಸಾಗರ್, ಕೃಷ್ಣಕುಮಾರ್ ಹಾಗೂ ಸೂರಜ್ ಶರ್ಮ ನೂತನ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಬಾಲಾಜಿ ಮಾಧವನ್ ನಿರ್ದೇಶನ ಮಾಡಲಿದ್ದಾರೆ. ಕನ್ನಡದಲ್ಲಿ ಮೊದಲ ಚಿತ್ರವನ್ನು ನಿರ್ದೇಶಿಸುತ್ತಿರುವ ಬಾಲಾಜಿ ಮಾಧವನ್, ಖ್ಯಾತ ನಿರ್ದೇಶಕ ಪಿ.ವಾಸು ಸಹೋದರಿಯ ಪುತ್ರ.
ಇತ್ತೀಚೆಗೆ ಶಿವರಾಜಕುಮಾರ್ ಅವರನ್ನು ಭೇಟಿ ಮಾಡಿದ ನಿರ್ದೇಶಕ ಬಾಲಾಜಿ ಮಾಧವನ್ ಹಾಗೂ ನಿರ್ಮಾಪಕರಾದ ಸಾಗರ್ , ಕೃಷ್ಣಕುಮಾರ್ ಮತ್ತು ಸೂರಜ್ ಶರ್ಮ ನೂತನ ಚಿತ್ರದ ಕುರಿತು ಮಾತನಾಡಿದ್ದಾರೆ. ಚಿತ್ರದ ಕಥೆ ಕೇಳಿ ಶಿವಣ್ಣ ಸಂತಸಗೊಂಡಿದ್ದಾರೆ. ಸದ್ಯದಲ್ಲೇ ಶೀರ್ಷಿಕೆ ಅದ್ದೂರಿಯಾಗಿ ಅನಾವರಣಗೊಳಿಸುವ ಸಿದ್ದತೆ ನಡೆಸಿರುವ ನಿರ್ಮಾಪಕರು ಆ ಸಮಯದಲ್ಲೇ ಚಿತ್ರದ ಕುರಿತು ಹೆಚ್ಚಿನ ಮಾಹಿತಿ ನೀಡುವುದಾಗಿ ತಿಳಿಸಿದ್ದಾರೆ.
ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರದ ಶೀರ್ಷಿಕೆ ಏನೆಂದು ಜನರೆ ಊಹಿಸಲಿ ಎಂದು ಶಿವರಾಜಕುಮಾರ್ ಚಿತ್ರತಂಡಕ್ಕೆ ಸಲಹೆ ನೀಡಿದ್ದಾರೆ. ಶೀಘ್ರದಲ್ಲೇ ಚಿತ್ರೀಕರಣಕ್ಕೆ ಚಾಲನೆ ಸಿಗಲಿದೆ.

