ಆರು ಮತ್ತೊಂದು ಸಿನಿಮಾ ಏಕಾಕಾಲದಲ್ಲಿ ಘೋಷಣೆ : ಕನ್ನಡ ಚಿತ್ರರಂಗದಲ್ಲಿ ಹೊಸ ಭರವಸೆ
ಕನ್ನಡ ಚಿತ್ರರಂಗದಲ್ಲಿ ಆಗಾಗ ಅಚ್ಚರಿಗಳು ಘಟಿಸುತ್ತವೆ. ವರ್ಷಗಳ ಅಂತರದಲ್ಲಿ ಹಲವು ಮಂದಿ ಏಕಾಏಕಿ ಹಲವು ಚಿತ್ರಗಳನ್ನು ಘೋಷಿಸಿ ಚಿತ್ರರಂಗದಲ್ಲಿ ಒಂದಷ್ಟು ಭರವಸೆ ಮತ್ತು ನಿರೀಕ್ಷೆಗಳನ್ನು ಹುಟ್ಟುಹಾಕುತ್ತಿದ್ದಾರೆ. ಅವುಗಳು ಅಕ್ಷರಷಃ ಕಾರ್ಯರೂಪಕ್ಕೆ ಬಂದಿವೆಯಾ ಎನ್ನುವುದು ಸದ್ಯಕ್ಕೆ ಕುತೂಹಲ, ಇದೀಗ ಮತ್ತೊಂದು ಸಿನಿಮಾ ನಿರ್ಮಾಣ ಸಂಸ್ಥೆಯ ಮೂಲಕ ಏಕಕಾಲದಲ್ಲಿ ಆರು ಸಿನಿಮಾ ಘೋಷಣೆ ಜೊತೆಗೆ ಮತ್ತೊಂದು ಸಿನಿಮಾ ಪ್ರಕಟಿಸಿದ್ದಾರೆ.

ಕನ್ನಡ ಚಿತ್ರರಂಗಕ್ಕೆ “ಅಮೃತ ಸಿನಿ ಕ್ರಾಫ್ಟ್” ಸಂಸ್ಥೆ ಹೊಸದಾಗಿ ಆರಂಭವಾಗಿದ್ದು ಕನ್ನಡ ಚಿತ್ರರಂಗದ ಕನಸುಗಾರ ರವಿಚಂದ್ರನ್ ಸಂಸ್ಥೆಯನ್ನು ವಿದ್ಯುಕ್ತವಾಗಿ ಅನಾವರಣ ಮಾಡಿದರು. ಈ ವೇಳೆ ನಟರಾದ ಶ್ರೀಮುರುಳಿ, ಶರಣ್, ನಟಿ ರಾಗಿಣಿ ದ್ವಿವೇದಿ ಸೇರಿದಂತೆ ಸಿನಿಮಾದಲ್ಲಿ ನಟಿಸುವ ಕಲಾವಿದರು ಮತ್ತು ನಿರ್ದೇಶಕರು ಈ ಕ್ಷಣದಲ್ಲಿ ಹಾಜರಿದ್ದರು. ಜೊತೆಗೆ ವಾಣಿಜ್ಯ ಮಂಡಳಿ ಹಾಗು ನಿರ್ಮಾಪಕರ ಸಂಘದ ಅಧ್ಯಕ್ಷರು ಕೂಡ ಹಾಜರಿದ್ದರು.
ಅಮೃತ ವಿಜಯ್ ಮತ್ತು ವಿಜಯ್ ಟಾಟಾ ಅವರು ಹೊಸದಾಗಿ ನಿರ್ಮಾಣ ಸಂಸ್ಥೆ ಆರಂಭಿಸಿದ್ಧಾರೆ.ಈ ಮೂಲಕ ಏಕ ಕಾಲದಲ್ಲಿ ಹಲವು ಚಿತ್ರಗಳನ್ನು ಘೋಷಣೆ ಮಾಡಿದ್ದು ಚಿತ್ರದ ನಿರ್ದೇಶಕರು ಮತ್ತು ನಟರನ್ನು ಪರಿಚಯಿಸಲಾಯಿತು, ಇದು ಕನ್ನಡ ಚಿತ್ರರಂಗದಲ್ಲಿ ಹೊಸ ಭರವಸೆ ಮೂಡಿಸಿದೆ.
ಕಲಾವಿದ ಪ್ರಶಾಂತ್ ಸಿದ್ದಿ, ನಟ ಅಜಯ್ ರಾವ್ ಹಾಗು ರಿಷಬ್ ಆರ್ಯ ನಿರ್ದೇಶಕರಾಗಿ ಪರಿಚಯವಾಗಲು ಸಜ್ಜಾಗಿದೆ.
• ಹಿರಿಯ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರು ಮಂಜು ಸ್ವರಾಜ್ ನಿರ್ದೇಶನ ಮಾಡಲಿರುವ ಪ್ರೊಡಕ್ಷನ್ ನಂಬರ್ 6 ತಂಡ ಪರಿಚಯ ಮಾಡಿದರು.
• ನಟ ನಿರ್ದೇಶಕ ರವಿಂಚಂದ್ರನ್, ಹಿರಿಯ ಕಲಾವಿದ ಸುಚೇಂದ್ರ ಪ್ರಸಾದ್ ಅವೆರು ಪ್ರೊಡಕ್ಷನ್ ನಂಬರ್ 5 ಸಿನಿಮಾ ಘೋಷಿಸಿದರು, ಈ ಚಿತ್ರವನ್ನು ಪ್ರಶಾಂತ್ ಸಿದ್ದಿ ನಿರ್ದೇಶನ ಮಾಡುತ್ತಿದ್ದು ವಿಕ್ಕಿ ವರುಣ್ ನಾಯಕನಾಗಿ ನಟಿಸುತ್ತಿದ್ದಾರೆ.
• ನಟರಾದ ಶ್ರೀಮುರುಳಿ ಹಾಗು ಶರಣ್ ಅವರು ಪ್ರೊಡಕ್ಷನ್ ನಂಬರ್ 1 ಚಿತ್ರದ ಅನಾವರಣ ಮಾಡಿದರು, ಈ ಚಿತ್ರದ ಮೂಲಕ ನಟ ಅಜಯ್ ರಾವ್ ನಿರ್ದೇಶಕರಾಗಿ ಪರಿಚಯವಾಗುತ್ತಿದ್ದಾರೆ.
• ಹಿರಿಯ ಕಲಾವಿದ ಸಾಧುಕೋಕಿಲ, ನಟ ನಿರೂಪ್ ಭಂಡಾರಿ ಅವರು ಪ್ರೊಡಕ್ಷನ್ ನಂಬರ್ -4 ಚಿತ್ರದ ಘೋಷಿಸಿದರು, ಈ ಚಿತ್ರವನ್ನು ರಿಷಬ್ ಆರ್ಯ ನಿರ್ದೇಶನ ಮಾಡುತ್ತಿದ್ದು ವಿಕ್ರಮ್ ರವಿಚಂದ್ರನ್ ನಾಯಕನಾಗಿ ನಟಿಸುತ್ತಿದ್ದಾರೆ
• ನಿರ್ದೇಶಕರಾದ ಶಶಾಂಕ್, ನಟಿ ರಾಗಿಣಿ, ನಟ ಧೀರೇನ್ ರಾಮ್ ಕುಮಾರ್ ಅವರು ಪ್ರೊಡಕ್ಷನ್ ನಂಬರ್ -2 ಅನಾವರಣ ಮಾಡಿದರು, ಈ ಚಿತ್ರವನ್ನು ಡಿಎಸ್ಪಿ ವರ್ಮ ಆಕ್ಷನ್ ಕಟ್ ಹೇಳುತ್ತಿದ್ದು ವಿನಯ್ ರಾಜ್ ಕುಮಾರ್ ನಾಯಕನಾಗಿ ನಟಿಸಲಿದ್ದಾರೆ
• ವಾಣಿಜ್ಯ ಮಂಡಳಿ ಅಧ್ಯಕ್ಷ ನರಸಿಂಹಲು, ನಟ ಚೇತನ್ ಅಹಿಂಸಾ, ಎಡಿಜಿಪಿ ಡಿ ರೂಪಾ ಅವರು ಪ್ರೊಡಕ್ಷನ್ ನಂಬರ್ -3 ಸಿನಿಮಾ ಪ್ರಕಟಿಸಿದರು, ಈ ಸಿನಿಮಾವನ್ನು ಸಿಂಪಲ್ ಸುನಿ ನಿರ್ದೇಶನ ಮಾಡುತ್ತಿದ್ದಾರೆ
ಈ ಆರು ಸಿನಿಮಾಗಳ ಜೊತೆಗೆ ಹಿರಿಯ ನಟ ರವಿಚಂದ್ರನ್ ಅವರ ಮತ್ತೊಂದು ಸಿನಿಮಾ ಮಾಡುವುದಾಗಿ ವಿಜಯ್ ಟಾಟಾ ಘೋಷಿಸಿ, ರವಿಚಂದ್ರನ್ ಒಪ್ಪಿಕೊಳ್ಳಬೇಕು ಎಂದು ಮನವಿ ಮಾಡಿದರು’

ಈ ವೇಳೆ ಮಾತಿಗಿಳಿದ ವಿಜಯ್ ಟಾಟಾ, ಗಂಡ- ಹೆಂಡತಿ ಜಗಳದಲ್ಲಿ ನಿರ್ಮಾಣ ಸಂಸ್ಥೆ ಹುಟ್ಟಿಕೊಂಡಿತ್ತು. ಕನ್ನಡದ ಚಿತ್ರರಂಗದ ಸದ್ಯದ ಮಟ್ಟಿಗೆ ಸುಸ್ಥಿತಿಯಲ್ಲಿ ಇಲ್ಲ, ಕನ್ನಡ ಚಿತ್ರರಂಗವನ್ನು ಪರಭಾಷೆಯ ಚಿತ್ರಗಳಿಗೆ ಪೈಪೋಟಿ ನೀಡುವುದು ನಮ್ಮ ಉದ್ದೇಶ. ಈ ನಿಟ್ಟಿನಲ್ಲಿ ಸಿನಿಮಾ ನಿರ್ಮಾಣ ಸಂಸ್ಥೆ ಆರಂಭಿಸಿದ್ದೇವೆ. ನಾವೊಬ್ಬರರೇ ಚಿತ್ರರಂಗದಲ್ಲಿ ಬದಲಾವಣೆ ಮಾಡಲು ಸಾಧ್ಯವಿಲ್ಲ, ಈ ಹಿನ್ನೆಲೆಯಲ್ಲಿ ಎಲ್ಲರೂ ಸೇರಿದಂತೆ ಮಾತ್ರ ಬದಲಾವಣೆ ಮಾಡಲು ಸಹಕಾರಿಯಾಗಲಿದೆ, ಸಿನಿಮಾ ನಿರ್ಮಾಣ ಮಾಡುವ ಜೊತೆಗೆ ಸಿನಿಮಾಗಳಿಗೆ ಮಾರುಕಟ್ಟೆ ಒದಗಿಸುವುದು ನಮ್ಮ ಸಂಸ್ಥೆಯ ಉದ್ದೇಶ, ಈಗಾಗಲೇ ಹಲವು ಚಿತ್ರಗಳ ನಿರ್ಮಾಪಕರ ಜೊತೆ ಮಾತುಕತೆ ನಡೆಸಲಾಗಿದೆ, ಈ ಬಗ್ಗೆ ಸದ್ಯದಲ್ಲಿಯೇ ಮುಂದಿನ ಯೋಜನೆ ಅಧಿಕೃತಗೊಳಿಸಲಾಗುವುದು ಎಂದರು.
ಕನ್ನಡದಲ್ಲಿ ಏಕಕಾಲದಲ್ಲಿ ಹಲವು ಚಿತ್ರಗಳನ್ನು ಘೋಷಣೆ ಮಾಡಿದ ಮಂದಿ ಮತ್ತೆ ಎಂದಿಗೂ ಆರೀತಿಯ ಪ್ರಯತ್ನ ಮಾಡಲಿಲ್ಲ. ಆದರೆ ಹೊಸ ಸಂಸ್ಥೆ ಹಿಂದಿನವರು ಮಾಡಿದ ಹಾಗೆ ಮಾಡದಿರಲಿ, ಚಿತ್ರರಂಗಕ್ಕೆ ಮಾದರಿಯಾಗಿ ನೂರಾರು ಮಂದಿಗೆ ಉದ್ಯೋಗ ಕೊಡುವಂತಾಗಲಿ.

ಅಮೃತ ಸಂಭ್ರಮ
ಇತ್ತೀಚೆಗೆ ಪುಣೆಯಲ್ಲಿ ನಡೆದ ಮಿಸ್ಸಸ್ ಇಂಡಿಯಾ ಸ್ಪರ್ಧೆಯಲ್ಲಿ ಗೆಲುವು ಸಾಧಿಸಿದ ಅಮೃತ ವಿಜಯ್ ಅವರಿಗೆ ನಟ ರವಿಚಂದ್ರನ್ ಕಿರೀಟ ಧರಿಸಿ,ಅವರೊಂದಿಗೆ ರಾಂಪ್ ವಾಕ್ ಮಾಡಿದರ.

