ಸಾಮಾಜಿಕ ಕಳಕಳಿಯ ಚಿತ್ರ ‘ಸೆಪ್ಟೆಂಬರ್ 10’ ಸೆ. 12ರಂದು ಬಿಡುಗಡೆ
ಆತ್ಮಹತ್ಯೆ ಎಲ್ಲಾ ಸಮಸ್ಯೆಗಳಿಗೆ ಪರಿಹಾರವಲ್ಲ, ಸಾಯೋಕೆ ಮಾಡೋ ಧೈರ್ಯವನ್ನು ಬದುಕುವುದಕ್ಕೆ ಮಾಡಿ ಎಂಬ ಸಾಮಾಜಿಕ ಸಂದೇಶ ಇಟ್ಟುಕೊಂಡು ನಿರ್ದೇಶಕ ಓಂ ಸಾಯಿಪ್ರಕಾಶ್ ಆಕ್ಷನ್ ಕಟ್ ಹೇಳಿರುವ ಚಿತ್ರ ‘ಸೆಪ್ಟೆಂಬರ್ 10’ ವಿಶ್ವ ಆತ್ಮಹತ್ಯೆ ತಡೆ ದಿನದ ಸಂದರ್ಭದಲ್ಲೇ ಬಿಡುಗಡೆಯಾಗಲಿದೆ. ಸೆ.12 ರಂದು ಈ ಚಿತ್ರ ರಾಜ್ಯಾದ್ಯಂತ ತೆರೆ ಕಾಣುತ್ತಿದೆ.

ಸೆಪ್ಟೆಂಬರ್ 10 ಚಿತ್ರಕ್ಕೆ ಹಿಂದಿನಿಂದಲೂ ಬೆಂಬಲವಾಗಿ ನಿಂತಿರುವ ವೈದ್ಯ ಡಾ.ರಾಜು ಚಿತ್ರದ ರಿಲೀಸ್ ಡೇಟ್ ಅನೌನ್ಸ್ ಮಾಡಿದರು. ನಟ, ನಿರ್ಮಾಪಕ ಕಮಲ್ ಸೆಪ್ಟೆಂಬರ್ 10 ಚಿತ್ರವನ್ನು ರಾಜ್ಯಾದ್ಯಂತ ಬಿಡುಗಡೆ ಮಾಡುವ ಜವಾಬ್ದಾರಿ ಹೊತ್ತಿದ್ದಾರೆ.
ಕರ್ನಾಟಕ ಸೇನೆಯ ಬಸವರಾಜ ಪಡುಕೋಣೆ, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣಗೌಡ್ರು ಸೇರಿ ಹಲವಾರು ಸಂಘಟನೆಗಳು ಬೆಂಬಲ ಸೂಚಿಸಿದ್ದು, 31 ಜಿಲ್ಲೆಯಲ್ಲಿರೋ ತಮ್ಮ ಕಾರ್ಯಕರ್ತರಿಗೆ ಈ ಸಿನಿಮಾ ನೋಡಲು ಹೇಳಿದ್ದಾರೆ.
ಎಲ್ಲಾ ಸಮಸ್ಯೆಗಳಿಗೂ ಆತ್ಮಹತ್ಯೆ ಒಂದೇ ಪರಿಹಾರವಲ್ಲ,ಯೋಚನೆ ಮಾಡಿದಾಗ ಅದಕ್ಕೆ ಒಂದಲ್ಲ ಒಂದು ಪರಿಹಾರ ಸಿಕ್ಕೇ ಸಿಗುತ್ತೆ ಎಂಬುದು ಚಿತ್ರದ ಸಂದೇಶ. ಸಾಯಿ ಪ್ರಕಾಶ್ ನಿರ್ದೇಶನದ 105ನೇ ಚಿತ್ರವಿದು.
ನಿರ್ಮಾಪಕ, ನಿರ್ದೇಶಕ ಸಾಯಿಪ್ರಕಾಶ್, ಡಾ.ರಾಜು, ಹಿರಿಯನಟ ರಮೇಶ ಬಟ್, ಗಣೇಶ ರಾವ್ ಕೇಸರಕರ್, ಬಸವರಾಜ ಪಡುಕೋಣೆ ಮುಂತಾದವರು ಉಪಸ್ಥಿತರಿದ್ದರು.

ನಿರ್ಮಾಪಕ, ನಿರ್ದೇಶಕ ಸಾಯಿಪ್ರಕಾಶ್ ಮಾತನಾಡಿಚಿತ್ರದಿಂದ ನನಗೆ ದುಡ್ಡು ಬರುತ್ತೆ ಅನ್ನೋ ನಿರೀಕ್ಷೆ ಇಟ್ಟುಕೊಮಡಿಲ್ಲ. ಆದರೆ ಸಂದೇಶ ಎಲ್ಕರಿಗೂ ತಲುಪಿ, ಒಂದಷ್ಟು ಜನರಾದರೂ ತಮ್ಮ ಮನಸು ಬದಲಾಯಿಸಿಕೊಂಡರೆ ನಮ್ಮ ಶ್ರಮ ಸಾರ್ಥಕ. ಸಾಯೋದೇನೂ ಸುಲಭವಲ್ಲ, ಅದೇ ಧೈರ್ಯವನ್ನು ಓದೋಕೆ ಮಾಡಿ ಎಂಬ ಸಂದೇಶ ನಮ್ಮ ಚಿತ್ರದಲ್ಲಿದೆ ಎಂದರು.
ರಾಜಮ್ಮ ಸಾಯಿಪ್ರಕಾಶ್ ಚಿತ್ರವನ್ನು ನಿರ್ಮಿಸಿದ್ದಾರೆ, ಹಿರಿಯನಟ ಶಶಿಕುಮಾರ್, ರಮೇಶ್ ಭಟ್, ಶ್ರೀರಕ್ಷಾ, ಶಿವಕುಮಾರ್ ಸೇರಿದಂತೆ ಹಲವಾರು ಕಲಾವಿದರು ಚಿತ್ರದಲ್ಲಿ ಅಭಿನಯಿಸಿದ್ದಾರೆ. ಜೆಜಿ.ಕೃಷ್ಣ ಚಿತ್ರದ ಛಾಯಾಗ್ರಾಹಕರು. ಮ್ಯೂಸಿಕ್ ಬಜಾರ್ ಈ ಚಿತ್ರದ ಹಾಡುಗಳನ್ನ ಹೊರತಂದಿದೆ.

