‘ಅಮೃತ -ಅಂಜನ’ ತಂದೆ ಮಗನ ಭಾಂಧವ್ಯದ ಕಥೆ
ನಾಲ್ಕು ವರ್ಷಗಳ ಹಿಂದೆ ಬಿಡುಗಡೆಯಾಗಿ ಅತಿ ಹೆಚ್ಚು ವೀಕ್ಷಣೆಯಾಗಿ ಹೆಸರು ಮಾಡಿದ್ದ ಕಿರುಚಿತ್ರ ಅಮೃತಾಂಜನ್. ಜಯರಾಮ್ ಮೋಹಿತ್ ನಿರ್ದೇಶನದ ಈ ಶಾರ್ಟ್ ಫಿಲಂ ಸೋಷಿಯಲ್ ಮೀಡಿಯಾದಲ್ಲಿ ಸಂಚಲನವನ್ನೇ ಸೃಷ್ಟಿಸಿತ್ತು.ಇದೀಗ ಅದೇ ಕಾನ್ಸೆಪ್ಟ್ ಇಟ್ಟುಕೊಂಡು ನಿರ್ದೇಶಕ ಜಯರಾಮ್ ‘ಅಮೃತ- ಅಂಜನ’ ಎಂಬ ಚಿತ್ರ ನಿರ್ದೇಶನ ಮಾಡಿದ್ದು ಚಿತ್ರ ಬಿಡುಗಡೆಗೆ ಸಿದ್ದವಾಗಿದೆ.

ಸುಧಾಕರ ಗೌಡ, ಗೌರವ್ ಶೆಟ್ಡಿ, ಕಾರ್ತೀಕ್ ರುವರಿ, ಪಾಯಲ್ ಚಂಗಪ್ಪ, ಪಲ್ಲವಿ ಪರ್ವ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ನಿರ್ಮಾಪಕರ ಸಹೋದರ ಕಿರಣ್ ಮಾತನಾಡಿ ಅಮೃತಾಂಜನ್ ಕಿರುಚಿತ್ರಕ್ಕೆ ಸಿಕ್ಕ ಅದ್ಭುತ ರೆಸ್ಪಾನ್ಸ್ ನೋಡಿ ಸಿನಿಮಾ ಮಾಡಿದೆವು. ಚಿತ್ರವೀಗ ಬಿಡುಗಡೆಯ ಹಂತಕ್ಕೆ ಬಂದಿದೆ. ಮುಂದಿನ ತಿಂಗಳು ರಿಲೀಸ್ ಮಾಡುತ್ತಿದ್ದೇವೆ ಎಂದರು.
ನಿರ್ದೇಶಕ ಜಯರಾಮ್ ಮಾತನಾಡಿ ಕಿರುಚಿತ್ರ ಪ್ರೇಕ್ಷಕರ ಮೆಚ್ಚುಗೆ ಪಡೆದುಕೊಂಡಿತ್ತು. ಹಾಗಾಗಿ ಅದೇ ಎಳೆ ಇಟ್ಟುಕೊಂಡು ಪಕ್ಕಾಕಮರ್ಷಿಯಲ್ ಚಿತ್ರ ಮಾಡಿದ್ದೇವೆ. ಹಿಂದೆ ನಿರ್ದೇಶಿಸಿದ್ದ ಸೋಡಾಬುಡ್ಡಿ ಚಿತ್ರ ಸಾಧಾರಣ ಪ್ರತಿಕ್ರಿಯೆ ಪಡೆದಿತ್ತು. ಇದು ಎರಡನೇ ಚಿತ್ರ. ಕಥೆಯ ಮೇಲೆ ಏನು ಎಫರ್ಟ್ ಹಾಕಬೇಕೋ ಅದನ್ನು ಹಾಕಿದ್ದೇವೆ ಎಂದು ಹೇಳಿದರು

ಚಿತ್ರ ನೋಡುವಾಗ 40 ರಿಂದ 50 ಬಾರಿ ನಗ್ತೀರ. ಖಂಡಿತ ಇಷ್ಟಪಡ್ತೀರ ಎಂಬ ನಂಬಿಕೆಯಿದೆ. ಅದ್ಭುತವಾದ ತಂದೆ ಮಗನ ಎಮೋಷನ್ಸ್ ಚಿತ್ರದಲ್ಲಿದ್ದು, ಸುಧಾಕರ್ ಹಾಗೂ ನವೀನ್ ಪಡೀಲ್ ತಂದೆ ಮಗನಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ನ್ಯಾಚುರಲ್ ಕಾಮಿಡಿ ಟ್ರೈ ಮಾಡಿದ್ದೇವೆ. ನಮ್ಮ ಚಿತ್ರಕ್ಕೆ ಸುಧಾಮೂರ್ತಿ ಮೇಡಂ ಹಾಗೂ ಜಾಕಿ ಚಾನ್ ಸ್ಪೂರ್ತಿ. ಚಿತ್ರಕ್ಕೆ ಮಂಗಳೂರು, ಬೆಂಗಳೂರು, ತೀರ್ಥಳ್ಳಿ ಸುತ್ತಮುತ್ತ 68 ದಿನಗಳ ಕಾಲ ಶೂಟಿಂಗ್ ಮಾಡಿದ್ದೇವೆ. ಅಮೃತಾಂಜನ್ ಟೈಟಲ್ ಸಿಗಲಿಲ್ಲ. ಹಾಗಾಗಿ ಅಮೃತ- ಅಂಜನ ಎಂದಿಟ್ಟಿದ್ದೇವೆ ಎಂದರು.

ನಟ ಗೌರವ್ ಮಾತನಾಡಿ ಆ ಕಿರುಚಿತ್ರದಿಂದಲೇ ನಮ್ಮ ಜೀವನ ಪ್ರಾರಂಭವಾಯ್ತು. ಈಗ ಬೆಳ್ಳಿತೆರೆಗೆ ಬರುತ್ತಿದ್ದೇವೆ ಎಂದರು.
ಸುಧಾಕರ್ ಮಾತನಾಡಿ ಕಾಮಿಡಿ ಜತೆ ಲವ್, ಎಮೋಷನ್ಸ್, ಸ್ನೇಹದ ಬಗ್ಗೆ ಕಥೆಯಿದೆ. ನಮ್ಮ ಸಿನಿಮಾ ಗೆದ್ದೇ ಗೆಲ್ಲುತ್ತೆ ಎಂಬ ಭರವಸೆಯಿದೆ ಎಂದರು.

ನಾಯಕಿಯರಾದ ಪಾಯಲ್ ಚಂಗಪ್ಪ, ಪಲ್ಲವಿ ಪರ್ವ, ಕಾರ್ತೀಕ್, ಚೇತನ ದುರ್ಗ ಅಲ್ಲದೆ ಛಾಯಾಗ್ರಾಹಕ ಸುಮಂತ್ ಆಚಾರ್ಯ, ಸಂಗೀತ ನಿರ್ದೇಶಕ ರಾಘವೇಂದ್ರ ಅಮೃತ ಅಂಜನ ಚಿತ್ರದ ಕುರಿತಂತೆ ಮಾಹಿತಿ ಹಂಚಿಕೊಂಡರು.

