“ಸನ್ ಆಫ್ ಮುತ್ತಣ್ಣ” ಚಿತ್ರದ ಟ್ರೈಲರ್ ಬಿಡುಗಡೆ: ಸೆಪ್ಟೆಂಬರ್ 12 ರಂದು ಸಿನಿಮಾ ತೆರೆಗೆ
ಶ್ರೀಕಾಂತ್ ಹುಣಸೂರು ನಿರ್ದೇಶನದ ಹಾಗೂ ಡೈನಾಮಿಕ್ ಸ್ಟಾರ್ ದೇವರಾಜ್ ಪುತ್ರ ಪ್ರಣಾಮ್ ದೇವರಾಜ್ ನಾಯಕನಾಗಿ ಹಾಗೂ “ದಿಯಾ” ಖ್ಯಾತಿಯ ಖುಷಿ ರವಿ ನಾಯಕಿಯಾಗಿ ನಟಿಸಿರುವ “ಸನ್ ಆಫ್ ಮುತ್ತಣ್ಣ” ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು ಗಮನ ಸೆಳೆದಿದೆ.

ಚಿತ್ರ ಕನ್ನಡ ಸೇರಿದಂತೆ ಮೂರು ಭಾಷೆಗಳಲ್ಲಿ ಏಕಕಾಲಕ್ಕೆ ಸೆಪ್ಟಂಬರ್ 12 ರಂದು ತೆರೆಗೆ ಬರಲಿದ್ದು ಚಿತ್ರದ ಬಗ್ಗೆ ಒಂದಷ್ಟು ಕುತೂಹಲ ಮತ್ತು ನಿರೀಕ್ಷೆ ಹೆಚ್ಚು ಮಾಡಿದೆ. ತಂದೆ ಮಗನ ಬಾಂಧವ್ಯದ ಕಥೆಯನ್ನು ಒಳಗೊಂಡಿದ್ದು ತಂದೆಯಾಗಿ ಹಿರಿಯ ಕಲಾವಿದ ರಂಗಾಯಣ ರಘು ಹಾಗು ಮಗನಾಗಿ ಪ್ರಣಾಮ್ ದೇವರಾಜ್ ಕಾಣಿಸಿಕೊಂಡಿದ್ದು, ಇವರ ಮಧ್ಯೆ ಖುಷಿ ರವಿ ಪಾತ್ರ ಗಮನ ಸೆಳೆಯುವಂತಿದೆ.
ಹಿರಿಯ ನಟ ರಂಗಾಯಣ ಮಾತನಾಡಿ ಚಿತ್ರದಲ್ಲಿ ಅಭಿನಯಿಸಿದ್ದು ಖುಷಿಯಾಗಿದೆ. ದೇವರಾಜ್ ಪುತ್ರ ಪ್ರಣಾಮ್ ದೇವರಾಜ್ ಚಿತ್ರದಲ್ಲಿ ಮಗನ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಪ್ರಜ್ವಲ್ ಜೊತೆಗೆ ಮೊದಲ ಚಿತ್ರ “ಸಿಕ್ಸರ್” ನಲ್ಲಿ ಅಭಿನಯಿಸಿದ್ದೆ. ಇನ್ನೂ, ಖುಷಿ ರವಿ ಅವರ ಕನ್ನಡ ಬಹಳ ಚಂದ. ನಿರ್ದೇಶಕ ಶ್ರೀಕಾಂತ್ ಹುಣಸೂರು ನಿರ್ದೇಶಕರಾಗಿ ಕನ್ನಡ ಚಿತ್ರರಂಗದಲ್ಲಿ ಉಳಿಯುವ ಲಕ್ಷಣಗಳು ಇದೆ. ನಿರ್ಮಾಣ ಸಂಸ್ಥೆ ಪುರಾತನ ಫಿಲಂಸ್ನಿಂದ ಇನ್ನಷ್ಟು ಉತ್ತಮ ಚಿತ್ರಗಳು ನಿರ್ಮಾಣವಾಗಲಿ.ಚಿತ್ರ ಯಶಸ್ವಿಯಾಗಲಿ ಎಂದು ಹಾರೈಸಿದರು.

ನಾಯಕ ಪ್ರಣಾಮ್ ದೇವರಾಜ್ ಮಾತನಾಡಿ “ಸನ್ ಆಫ್ ಮುತ್ತಣ್ಣ” ಸುಂದರ ಅನುಭವ. ಚಿತ್ರದಲ್ಲಿ ಹಿರಿಯನಟ ರಂಗಾಯಣ ರಘು ಅವರಿಂದ ಸಾಕಷ್ಟು ಕಲಿತಿದ್ದೇನೆ ಖುಷಿ ರವಿ ಸೇರಿದಂತೆ ಎಲ್ಲರ ಅಭಿನಯ ಚೆನ್ನಾಗಿದೆ. ಸ್ಕೇಟಿಂಗ್ ಕೃಷ್ಣ ಚಿತ್ರದಲ್ಲಿ ಕಾಶಿಯನ್ನೂ ತೋರಿಸಿರುವ ಪರಿ ಚೆನ್ನಾಗಿದೆ. ಚಿತ್ರ ಸೆಪ್ಟೆಂಬರ್ 12 ರಂದು ಬಿಡುಗಡೆಯಾಗುತ್ತಿದೆ. ನೋಡಿ ಹಾರೈಸಿ ಎಂದು ತಿಳಿಸಿದರು.
ನಟಿ ಖುಷಿ ರವಿ ಮಾತನಾಡಿ ಕೌಟುಂಬಿಕ ಕಥಾಹಂದರ ಹೊಂದಿರುವ ಚಿತ್ರಗಳು ಕನ್ನಡದಲ್ಲಿ ಇತ್ತೀಚೆಗೆ ಕಡಿಮೆಯಾಗಿತ್ತು. ಈಗ ಮತ್ತೆ ಕೌಟುಂಬಿಕ ಕಥೆಯುಳ್ಳ ಚಿತ್ರಗಳು ಬಿಡುಗಡೆಯಾಗಲು ಶುರುವಾಗಿದೆ. ಪ್ರೇಕ್ಷಕರು ಸಹ ಆ ಚಿತ್ರಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ನಮ್ಮ ಚಿತ್ರ ಕೂಡ ಎಲ್ಲರ ಮನ ಗೆಲ್ಲಲ್ಲಿದೆ ಎನ್ನುತ್ತಾರೆ
ನಿರ್ದೇಶಕ ಶ್ರೀಕಾಂತ್ ಹುಣಸೂರು ಮಾತನಾಡಿ, ಚಿತ್ರ ಆಗಸ್ಟ್ 22 ರಂದು ಬಿಡುಗಡೆಯಾಗಬೇಕಿತ್ತು. ಆದರೆ, ನಮ್ಮ ಚಿತ್ರ ನೋಡಿದ ಮಲಯಾಳಂ ವಿತರಕ ಶಾನ್, “ಸನ್ ಆಫ್ ಮುತ್ತಣ್ಣ” ಚಿತ್ರವನ್ನು ಮಲಯಾಳಂ ನಲ್ಲೂ ತೆರೆಗೆ ತರಲು ಮುಂದಾಗಿದ್ದಾರೆ. ಹಾಗಾಗಿ ಚಿತ್ರವನ್ನು ಚಿತ್ರವನ್ನು ಸೆಪ್ಟೆಂಬರ್ 12ರಂದು ಕನ್ನಡ, ತೆಲುಗು, ಮಲಯಾಳಂ ಭಾಷೆಗಳಲ್ಲಿ ಬಿಡುಗಡೆ ಮಾಡುತ್ತಿದ್ದೇವೆ. ಹಾಡುಗಳು ಹಾಗೂ ಟೀಸರ್ ಈಗಾಗಲೇ ಜನರ ಮನಸ್ಸಿಗೆ ಹತ್ತಿರವಾಗಿದೆ. ಟ್ರೇಲರ್ ಕೂಡ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಚಿತ್ರ ಉತ್ತಮವಾಗಿ ಮೂಡಿ ಬರಲು ಸಹಕಾರ ನೀಡಿದ ನಿರ್ಮಾಪಕರಿಗೆ ಹಾಗೂ ಇಡೀ ತಂಡಕ್ಕೆ ಧನ್ಯವಾದ ಎಂದರು

ಪುರಾತನ ಫಿಲಂಸ್ ನಿರ್ಮಾಣದ ಸಿನಿಮಾಗೆ ಎಸ್ ಆರ್ ಕೆ ಫಿಲ್ಮ್ಸ್ ಸಾಥ್ ನೀಡಿದೆ, ಕನ್ನಡದ ವಿತರಕ ಬೆಂಗಳೂರು ಕುಮಾರ್, ಮಲಯಾಳಂ ವಿತರಕ ಶಾನ್, ಛಾಯಾಗ್ರಾಹಕ ಸ್ಕೇಟಿಂಗ್ ಹಾಗೂ ಸಂಕಲನಕಾರ ಹರೀಶ್ ಕೊಮ್ಮೆ ಮುಂತಾದವರು ಚಿತ್ರದ ಕುರಿತು ಮಾತನಾಡಿದರು. ಸಚಿನ್ ಬಸ್ರೂ“ಸನ್ ಆಫ್ ಮುತ್ತಣ್ಣ” ಚಿತ್ರಕ್ಕೆ ಸಂಗೀತ ನೀಡಿದ್ದಾರೆ.

