ಚಿಕ್ಕಮಕ್ಕಳಿಗೂ ಹಾಡು ತಲುಪಿವೆ: ಇನ್ನೂ 10 ವರ್ಷ ಸಮಸ್ಯೆ ಇಲ್ಲ- ನಟ ಗೋಲ್ಡನ್ ಸ್ಟಾರ್ ಗಣೇಶ್

ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಬಹುನಿರೀಕ್ಷಿತ ಚಿತ್ರ `ಕೃಷ್ಣಂ ಪ್ರಣಯ ಸಖಿ’ ಚಿತ್ರ ಸ್ವಾತಂತ್ರೋತ್ಸವ ದಿನದಂದು ತೆರೆಗೆ ಬರಲು ಸಜ್ಜಾಗಿದೆ. ಇತ್ತೀಚಿನ ದಿನಗಳಲ್ಲಿ ಚಿತ್ರದ ಹಾಡುಗಳು ಸೂಪರ್ ಡೂಪರ್ ಹಿಟ್ ಆಗಿರುವುದು ಚಿತ್ರದ ಯಶಸ್ವಿನ ಮುನ್ನುಡಿ ಬರೆದಿದೆ.
ದ್ವಾಪರ, ಚಿನ್ನಮ್ಮ ಹಾಡು ಮೋಡಿ ಮಾಡಿವೆ. ಒಂದಕ್ಕಿಂತ ಒಂದು ಹಾಡು ಸಿನಿ ರಸಿಕರನ್ನು ರಂಜಿಸಿವೆ. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರ ತನಕ ನಟ ಗಣೇಶ್ ಹಾಕಿರುವ ಸ್ಟೆಪ್ಗೆ ಹೆಜ್ಜೆ ಹಾಕಿದ್ದಾರೆ. ಚಿತ್ರವೊಂದರ ಬಿಡುಗಡೆಗೂ ಮುನ್ನ ಹಾಡುಗಳು ಯಶಸ್ವಿ ಆಗಿರುವ ಹಿನ್ನೆಲೆಯಲ್ಲಿ ಆನಂದ್ ಆಡಿಯೋ ಸಂಸ್ಥೆ ಹಾಡುಗಳ ಯಶಸ್ಸಿನ ಬಗ್ಗೆ ಸಂತೋಷ ಹಂಚಿಕೊಳ್ಳುವ ಹಾಗು ಚಿತ್ರದ ನಾಲ್ಕನೇ ಹಾಡು ಬಿಡುಗಡೆಗೆ ಸಮಾರಂಭ ಆಯೋಜಿಸಿತ್ತು.

ಎಂದಿನ ಶೈಲಿನಲ್ಲಿ ನಮಸ್ಕಾರ.. ನಮಸ್ಕಾರ,, ನಮಸ್ಕಾರ ಎಂದು ಮಾತಿಗಿಳಿದ ಗಣೇಶ್ ಮುಖದಲ್ಲಿ ನಗುವಿತ್ತು. ಬಹಳ ದಿನಗಳ ನಂತರ ಚಿತ್ರ ಬಿಡುಗಡೆಗೆ ಮುನ್ನ ಹಾಡುಗಳು ಯಶಸ್ಸು ಕಂಡಿರುವ ಸಂತಸ ಅವರಲ್ಲಿತ್ತು. ಈ ಜನರೇಷನ್ ಮಕ್ಕಳಿಗೂ ಹಾಡು ತಲುಪಿದೆ. ಚಿಕ್ಕ ಮಕ್ಕಳು ಮಾಡಿರುವ ರೀಲ್ಸ್ಗೆ ಫಿದಾ ಆಗಿದ್ದೇನೆ. ಹೀಗಾಗಿ ಇನ್ನೂ 10 ವರ್ಷ ಸಮಸ್ಯೆ ಇಲ್ಲ ಎಂದರು.
ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಮೂರು ಹಾಡುಗಳು ಯಶಸ್ವಿಯಾಗಿವೆ. ನಿರ್ದೇಶಕ ಶ್ರೀನಿವಾಸ ರಾಜು ಎಲ್ಲಾ ಹಾಡುಗಳು ಹಿಟ್ ಆಗುತ್ತವೆ ಎಂದಿದ್ದರು. ಅದರಲ್ಲಿಯೂ “ದ್ವಾಪರ” ಹಾಡು ಜನರಿಗೆ ತಲುಪಿರುವ ರೀತಿಗೆ ಮಂತ್ರ ಮುಗ್ದನಾಗಿದ್ದೇನೆ. ಚಿಕ್ಕ ಮಕ್ಕಳು ರೀಲ್ಸ್ ಮಾಡುತ್ತಿದ್ದಾರೆ. ಇದನ್ನು ನೋಡಿದರೆ ಇನ್ನು ಹತ್ತು ವರ್ಷ ಸಮಸ್ಯೆ ಇಲ್ಲ ಎಂದು ನೇರವಾಗಿಯೇ ವೇದಿಕೆ ಮೇಲೆ ಮನದ ಮಾತು ಹಂಚಿಕೊಂಡರು.
ದ್ವಾಪರ ಹಾಡಿಗೆ ಆರು ಮಕ್ಕಳು ಮಾಡಿದ ರೀಲ್ಸ್ ನೋಡಿ ಕೆರೆ ಮೇಲೆ ಓಡಾಡಿ ಹಾಡಿದ ಬಾಲ್ಯ ನೆನಪಾಯಿತು ಮೈಕ್ ಸೆಟ್ ಎದುರು ಹಾಡುತ್ತಿದ್ದ ದಿನಗಳು ನೆನಪಾದವು, ಜನರಿಂದ ಸಿಕ್ಕ ಪ್ರೀತಿಗೆ ಮಂತ್ರ ಮುಗ್ದನಾಗಿದ್ದೇನೆ ಎಂದು ತಮ್ಮ ಖುಷಿ ಸಂತಸ ಹಂಚಿಕೊಂಡರು

ಕೃಷ್ಣಂ ಪ್ರಣಯ ಸಖಿ' ಹಾಡುಗಳು ಯಶಸ್ವಿನ ಬಹುಪಾಲು ಶ್ರೇಯ ನಿರ್ದೇಶಕ ಶ್ರೀನಿವಾಸ್ ರಾಜು ಅವರಿಗೆ ಸಲ್ಲಲಿದೆ. ಜೊತೆಗೆ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರಿಗೂ ಕೂಡ. ಚಿತ್ರದ
ನಿರ್ದೇಶಕರನ್ನು ಕ್ಯಾಪ್ಟನ್ ಆಫ್ ದಿ ಶಿಪ್ ಅಂತ ಕರೆಯುತ್ತಾರೆ. ಈ ಹಿಂದೆ ಕೆಲವರ ಜೊತೆಗೆ ಕೆಲಸ ಮಾಡಿದಾಗ ಇವರು ಕ್ಯಾಪ್ಟನ್ ಅಂತ ಅನಿಸಿದ್ದಿದೆ. ಆದರೆ, ಸರಿಯಾದ ಸ್ಪೀಡಿನಲ್ಲಿ, ಸರಿಯಾದ ಮಾರ್ಗ ಹಾಕಿಕೊಂಡು ಹೋದ ಮೊದಲ ಕ್ಯಾಪ್ಟನ್ ಶ್ರೀನಿವಾಸರಾಜು ಎಂದು ಮೆಚ್ಚಿಕೊಂಡರು
ಚಿತ್ರದ ಪ್ರತಿ ಹಾಡು ಹಿಟ್ ಆಗುತ್ತವೆ. ಎಂದು ಚಿತ್ರೀಕರಣಕ್ಕೆ ಮುನ್ನ ಹೇಳಿದ್ದರು ಅದನ್ನು ನಿರ್ದೇಶಕರು ನಿಜ ಮಾಡಿದ್ದಾರೆ `ದ್ವಾಪರ’ ಹಾಡು ಯಶಸ್ಸು ಗಳಿಸುತ್ತದೆ ಅಂದುಕೊಂಡಿದ್ದೆ. ಆದರೆ ಈ ಮಟ್ಟಕ್ಕೆ ಹೋಗುತ್ತದೆ ಎನ್ನುವ ನಿರೀಕ್ಷೆ ಇರಲಿಲ್ಲ. ಜೊತೆಗೆ ಚಿತ್ರದ ಹಾಡಿಗೆ ಧ್ವನಿಯಾಗಿರುವ ಜಸ್ಕರಣ್ ಧ್ವನಿ ಇಷ್ಟವಾಯಿತು, ನಮ್ಮ ಹುಡುನೇ ಅನ್ನಿಸಿತು ಎಂದು ಹೊಸ ಪ್ರತಿಭೆಯನ್ನು ಮೆಚ್ಚಿಕೊಳ್ಳುವ ದೊಡ್ಡಗುಣ ಪ್ರದರ್ಶಿಸಿದರು ಗಣೇಶ್

ಅಂದಹಾಗೆ `ಕೃಷ್ಣಂ ಪ್ರಣಯ ಸಖಿ’ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 41ನೇ ಚಿತ್ರವಾಗಿದೆ. ಚಿತ್ರವನ್ನು ಪ್ರಶಾಂತ್ ಜಿ ರುದ್ರಪ್ಪ ನಿರ್ಮಿಸಿದ್ದಾರೆ. ಶ್ರೀನಿವಾಸರಾಜು ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಗಣೇಶ್ಗೆ ನಾಯಕಿಯಾಗಿ ಮಾಳವಿಕ ನಾಯರ್ ನಟಿಸಿದ್ದಾರೆ.
ಉಳಿದಂತೆ ನಟಿ ಶರಣ್ಯ ಶೆಟ್ಟಿ, ಹಿರಿಯ ಕಲಾವಿದರಾದ ಶ್ರೀನಿವಾಸಮೂರ್ತಿ, ಸಾಧು ಕೋಕಿಲ, ರಂಗಾಯಣ ರಘು, ಶಶಿಕುಮಾರ್, ಶ್ರುತಿ, ಭಾವನ ರಾಮಣ್ಣ, ಅಶೋಕ್, ರಾಮಕೃಷ್ಣ, ಶಿವಧ್ವಜ್, ರಘುರಾಮ್, ಮಾನಸಿ ಸುಧೀರ್, ಅಂಬುಜ, ಗಿರಿ ಶಿವಣ್ಣ ಮುಂತಾದವರು ನಟಿಸಿದ್ದಾರೆ.
ಕೃಷ್ಣಂ ಪ್ರಣಯ ಸಖಿ ಚಿತ್ರ ಆಗಸ್ಟ್ 15 ರಂದು ಚಿತ್ರ ಎಲ್ಲೆಡೆ ಬಿಡುಗಡೆಯಾಗುತ್ತಿದ್ದು ಗೋಲ್ಡನ್ ಸ್ಟಾರ್ ಗಣೇಶ್ ಚಿತ್ರ ಜೀವನದಲ್ಲಿ ಮತ್ತೊಮ್ಮೆ ಸುವರ್ಣ ಯುಗದ ಆರಂಭಕ್ಕೆ ಮುನ್ನುಡಿ ಬರೆದಿದೆ.
ಚಿತ್ರದ ಹಾಡುಗಳು ಹಿಟ್ ಆಗಿರುವ ಹಿನ್ನೆಲೆಯಲ್ಲಿ ಆನಂದ್ ಆಡಿಯೋದ ಶ್ಯಾಮ್ ಮತ್ತು ಆನಂದ್ ಅವರು ಗೋಲ್ಡನ್ ಸ್ಟಾರ್ ಗಣೇಶ್ ಅವರನ್ನು ಸನ್ಮಾನಿಸಿದರು, ಈ ವೇಳೆ ಮಾತನಾಡಿದ ಶ್ಯಾಮ್, ಸ್ನೇಹಿತರ ದಿನದಂದು ಗಣೇಶ್ ಅವರನ್ನು ಸನ್ಮಾನಿಸುತ್ತಿರುವುದು ಖುಷಿಯ ಸಂಗತಿ ಎಂದು ಅವರು ಹೇಳಿಕೊಂಡರು