ಶಿವ ಭಕ್ತನ ಕಥಾಹಂದರ ಹೊಂದಿರುವ “ದೈವ” ಚಿತ್ರದ ವಿಶೇಷ ಪೋಸ್ಟರ್ ಬಿಡುಗಡೆ
ಕಲ್ಪವೃಕ್ಷ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಜಯಮ್ಮ ಪದ್ಮರಾಜ್ ನಿರ್ಮಿಸಿರುವ, ರಾಮಪ್ಪ ಸೋಮಪ್ಪ ಮೇಗಲಮನಿ, ಸೋಮಶೇಖರ್ ಜಿ ಪಟ್ಟಣಶೆಟ್ಟಿ ಅವರ ಸಹ ನಿರ್ಮಾಣವಿರುವ ಹಾಗೂ ಮಂಜುನಾಥ್ ಜಯರಾಜ್ ನಿರ್ದೇಶನದ ಜೊತೆಗೆ ನಾಯಕನಾಗೂ ನಟಿಸಿರುವ “ದೈವ” ಚಿತ್ರದ ವಿಶೇಷ ಪೋಸ್ಟರ್ ಮಹಾ ಶಿವರಾತ್ರಿ ಶುಭದಿನದಂದು ಬಿಡುಗಡೆಯಾಗಿದೆ.

ನಾಯಕ, ನಿರ್ದೇಶಕ ಮಂಜುನಾಥ್ ಜಯರಾಜ್ ಮಾತನಾಡಿ “ದೈವ” ಚಿತ್ರದಲ್ಲಿ ಕಾಲಭೈರವನ ಆರಾಧಕನಾಗಿ ಜೋಗಯ್ಯನ ಪಾತ್ರದಲ್ಲಿ ಎರಡು ಗೆಟಪ್ ಗಳಲ್ಲಿ ಅಭಿನಯಿಸಿದ್ದೇನೆ. ಶಿವ ಭಕ್ತನ ಕುರಿತಾದ ಕಥಾಹಂದರ ಹೊಂದಿರುವ ಈ ಚಿತ್ರದ ವಿಶೇಷ ಪೋಸ್ಟರ್ ಮಹಾ ಶಿವರಾತ್ರಿಯ ದಿನದಂದೆ ಅನಾವರಣ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ನಿರ್ದೇಶಕ ರವಿಶ್ರೀವತ್ಸ ರವರ ಬಳಿ ಸಹ ನಿರ್ದೇಶಕನಾಗಿ ಕೆಲಸ ಮಾಡಿರುವ ಮಂಜುನಾಥ್ ಜಯರಾಜ್ ಚಿತ್ರವನ್ನು ನಿರ್ದೇಶಿಸುವುದರ ಜೊತೆಗೆ ನಾಯಕನಾಗೂ ನಟಿಸಿದ್ದಾರೆ. ನಿರ್ದೇಶಕ ಹಾಗೂ ನಾಯಕನಾಗಿ ಮಂಜುನಾಥ್ ಅವರಿಗೆ ಇದು ಮೊದಲ ಚಿತ್ರ. ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ನಿರ್ದೇಶಕರೆ ಕಥೆ, ಚಿತ್ರಕಥೆ ಬರೆದಿದ್ದಾರೆ.

ಈಗಾಗಲೇ ಚಿತ್ರದ ಚಿತ್ರೀಕರಣ ಮುಗಿದಿದ್ದು ಶಿರಸಿ, ಮುಂಡಗೋಡು, ಯಲ್ಲಾಪುರ, ಗೋಕರ್ಣ, ಶಿವಮೊಗ್ಗ, ಚಿಕ್ಕಮಗಳೂರು ಮುಂತಾದ ಕಡೆ ಚಿತ್ರೀಕರಣ ನಡೆದಿದೆ. ಸದ್ಯದಲ್ಲೇ ಚಿತ್ರ ತೆರೆಗೆ ಬರಲಿದೆ.

ವಿಜೇತ್ ಮಂಜಯ್ಯ ಸಂಗೀತವಿರುವ “ದೈವ” ಚಿತ್ರಕ್ಕೆ ಹೆಚ್.ಆರ್. ಸಿದ್ದಾರ್ಥ್ ರವರ ಛಾಯಾಗ್ರಹಣ ಹಾಗೂ ಕೆ.ಎಂ.ಪ್ರಕಾಶ್ ಸಂಕಲನವಿದೆ.ಮಂಜುನಾಥ್ ಜಯರಾಜ್, ಬಾಲರಾಜ್ವಾಡಿ, ಸುರಭಿ, ನೀತು ರಾಯ್, ಅರುಣ್ ಬಚ್ಚನ್, ನಿಶ್ಚಿತಾ ಶೆಟ್ಟಿ, ಮಂಜುರಾಜ್ ಸೂರ್ಯ ಮುಂತಾದವರ ತಾರಾಬಳಗ ಈ ಚಿತ್ರಕ್ಕಿದೆ.

