ನಿರ್ದೇಶಕ ಮಂಜುಸ್ವರಾಜ್ ಹೊಸ ಪ್ರಯತ್ನ “ಸರಳ ಸುಬ್ಬರಾವ್” ಚಿತ್ರ ಬಿಡುಗಡೆ ಸಿದ್ದತೆ
ಶ್ರಾವಣಿ ಸುಬ್ರಮಣ್ಯದಂತಹ ಕಾಮಿಡಿ ಮತ್ತು ಯಶಸ್ವಿ ಚಿತ್ರ ನೀಡಿದ ಮಂಜು ಸ್ವರಾಜ್ ಒಂದಷ್ಟು ಬಿಡುವಿನ ಬಳಿಕ ಇದೀಗ “ಸರಳ ಸುಬ್ಬರಾವ್”ಚಿತ್ರದ ಮೂಲಕ ಮತ್ತೊಮ್ಮೆ ಪ್ರೇಕ್ಷಕರ ಗಮನ ಸೆಳೆಯಲು ಮುಂದಾಗಿದ್ಧಾರೆ

1971 ರ ಕಾಲಘಟ್ಟದ ಸುಂದರ ಕೌಟುಂಬಿಕ ಕಥಾಹಂದರ ಹೊಂದಿರುವ ಚಿತ್ರ ಇದು. ಅಜಯ್ ರಾವ್ ಮತ್ತು ಮಿಶಾ ನಾರಂಗ್ ನಾಯಕ, ನಾಯಕಿಯಾಗಿ ಕಾಣಿಸಿಕೊಂಡಿದ್ದು ಲೋಹಿತ್ ನಂಜುಂಡಯ್ಯ ಚಿತ್ರ ನಿರ್ಮಾಣ ಮಾಡಿದ್ದಾರೆ
“ಸರಳ ಸುಬ್ಬರಾವ್” ಚಿತ್ರದ ಹಾಡು ಬಿಡುಗಡೆಯಾಗಿದೆ. ಅಜನೀಶ್ ಲೋಕನಾಥ್ ಸಂಗೀತ ನೀಡಿರುವ ಹಾಡನ್ನು ಕವಿರಾಜ್ ಬರೆದಿದ್ದು, ಸಂಜಿತ್ ಹೆಗ್ಡೆ ಹಾಡಿದ್ದಾರೆ. ಸುಮಧುರ ಪ್ರೇಮಗೀತೆ ಬಿಡುಗಡೆ ಮಾಡಿದ್ದು ಚಿತ್ರ ತೆರೆಗೆ ಬರಲು ಸಜ್ಜಾಗಿದೆ
ಈ ವೇಳೆ ಮಾತಿಗಿಳಿದ ನಿರ್ದೇಶಕ ಮಂಜು ಸ್ವರಾಜ್, “ಸರಳ ಸುಬ್ಬರಾವ್” ಚಿತ್ರದ ನಾಯಕ, ನಾಯಕಿಯ ಹೆಸರು. 1971 ರ ಕಾಲಘಟ್ಟದಲ್ಲಿ ನಡೆಯುವ ಕಥೆ. ಕನ್ನಡದಲ್ಲಿ ತೀರ ಅಪರೂಪ ಎನ್ನಬಹುದಾದ ರೆಟ್ರೊ ಶೈಲಿಯ ಕಥೆ ಕೂಡ. ಕಥೆಯನ್ನು ನಿರ್ಮಾಪಕ ಲೋಹಿತ್ ಮುಂದೆ ಹೇಳಿದಾಗ ಕೇಳಿ ತುಂಬಾ ಮೆಚ್ಚಿಕೊಂಡರು. ಜೊತೆಗೆ ಯಾವುದೇ ಕೊರತೆ ಬಾರದ ಹಾಗೆ ನಿರ್ಮಾಣ ಮಾಡೋಣ ಎಂದರು. ಹೇಳಿದ ಹಾಗೆ ಚಿತ್ರವನ್ನು ಅದ್ದೂರಿಯಾಗಿ ಮಾಡಿ ಮುಗಿಸಿದ್ದಾರೆ ಎಂದು ಹೇಳಿದರು.
ಕಥೆಗೆ ಅಜೇಯ್ ರಾವ್ ಅವರೆ ಸೂಕ್ತ ನಾಯಕ ಎನಿಸಿತು. ಅವರು ಕೂಡ ಒಪ್ಪಿಕೊಂಡರು. ನಮ್ಮ ಚಿತ್ರದ ನಾಯಕಿ ಪಂಜಾಬಿನ ಮಿಶಾ ನಾರಂಗ್. ಅಂದಾಜಿನ ಪ್ರಕಾರ ಕನ್ನಡದಲ್ಲಿ ತುಂಬಾ ವರ್ಷಗಳಿಂದ ಇಂತಹ ಕಥೆ ಬಂದಿಲ್ಲ.ಅಪರೂಪದ ಕಥೆ ಇದು. ನಾಯಕ ಅಜೇಯ್ ರಾವ್ ಅಭಿನಯಕ್ಕೆ ಅವರೆ ಸಾಟಿ. ಪಂಜಾಬಿ ಹುಡುಗಿ ಮಿಶಾ ಕನ್ನಡ ಅರ್ಥ ಮಾಡಿಕೊಂಡು ಅಭಿನಯಿಸಿದ್ದು ನಿಜಕ್ಕೂ ಖುಷಿಯ ವಿಚಾರ. ರಂಗಾಯಣ ರಘು, ವೀಣಾ ಸುಂದರ್, ಶ್ರೀ, ರಘು ರಾಮನಕೊಪ್ಪ, ವಿಜಯ್ ಚಂಡೂರ್ ಹೀಗೆ ದೊಡ್ಡ ತಾರಾಬಳಗವೇ ನಮ್ಮ ಚಿತ್ರದಲ್ಲಿದೆ. ಪ್ರದೀಪ್ ಪದ್ಮಕುಮಾರ್ ಛಾಯಾಗ್ರಹಣ, ಬಸವರಾಜ್ ಅರಸ್ ಸಂಕಲನವಿರುವ ಚಿತ್ರ ತೆರೆಗೆ ಬರಲು ಸಿದ್ದವಾಗಿದೆ ಎಂದರು

ನಾಯಕ ಅಜೇಯ್ ರಾವ್ ಮಾತನಾಡಿ ಚಿತ್ರದಲ್ಲಿ ನಟಿಸಿರುವುದು ಹೆಮ್ಮೆಯ ಸಂಗತಿ. ಸುಂದರ ಸಾಂಸಾರಿಕ ಚಿತ್ರ “ಸರಳ ಸುಬ್ಬರಾವ್”. ಚಿತ್ರ ಭಾರತೀಯ ಚಿತ್ರರಂಗದ ಸುವರ್ಣ ಯುಗಕ್ಕೆ ಟ್ರಿಬ್ಯುಟ್ ಎಂದರು ತಪ್ಪಾಗಲಾರದು. ಚಿಕ್ಕವಯಸ್ಸಿನಲ್ಲಿ ಸೂಪರ್ ಮ್ಯಾನ್ ಮುಂತಾದ ಚಿತ್ರಗಳನ್ನು ಹೆಚ್ಚು ನೋಡುತ್ತಿದ್ದೆ. ಸೂಪರ್ ಹೀರೋ ಅಂದುಕೊಳ್ಳುತ್ತಿದೆ. ಈ ಚಿತ್ರದಲ್ಲೂ ನಾನು ಸೂಪರ್ ಹೀರೊ. ಏಕೆಂದರೆ ಇದು 50 ವರ್ಷಗಳ ಹಿಂದೆ ನಡೆಯುವ ಕಥೆ. ಚಿತ್ರದಲ್ಲಿ ರೆಟ್ರೊ ಶೈಲಿಯ ಉಡುಗೆಗಳನ್ನು ಹಾಕಿದಾಗ ನನ್ನ ಪಾತ್ರದಲ್ಲಿ ಡಾ.ರಾಜಕುಮಾರ್, ವಿಷ್ಣುವರ್ಧನ್, ಅಂಬರೀಶ್, ಅನಂತನಾಗ್ ಅವರನ್ನು ನೋಡಿದ್ದೇನೆ. ಎಷ್ಟು ಜನಕ್ಕೆ ಸಿಗುತ್ತದೆ ಇಂತಹ ಅವಕಾಶ. ಇಂತಹ ಅವಕಾಶ ನೀಡಿದ ನಿರ್ಮಾಪಕ ಹಾಗೂ ನಿರ್ದೇಶಕರಿಗೆ ಧನ್ಯವಾದ ಎಂದರು.

ನಾಯಕಿ ಮಿಶಾ ನಾರಂಗ್ ಮಾತನಾಡಿ, ಮೊದಲ ಬಾರಿಗೆ ಇಂತಹ ಉತ್ತಮ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ನಟಿಸಿದ್ದು ಬಹಳ ಖುಷಿಯಾಗಿದೆ. ನನ್ನ ಪಾತ್ರ ಕೂಡ ಚೆನ್ನಾಗಿದೆ ಎಂದು ಮಾಹಿತಿ ನೀಡಿದರು
ನಿರ್ಮಾಪಕ ಲೋಹಿತ್ ನಂಜುಂಡಯ್ಯ ಮಾತನಾಡಿ, ಮಂಜು ಸ್ವರಾಜ್ ಹೇಳಿದ ಕಥೆ ಇಷ್ಟವಾಗಿ ನಿರ್ಮಾಣಕ್ಕೆ ಮುಂದಾದೆ. ಅಜೇಯ್ ರಾವ್ ಸಹಕಾರ ಅಪಾರ. ಇಡೀ ಚಿತ್ರತಂಡ ನನಗೆ ಪ್ರೋತ್ಸಾಹ ನೀಡಿದ್ದಾರೆ. ಅದರಿಂದ ಒಂದೊಳ್ಳೆ ಕೌಟುಂಬಿಕ ಚಿತ್ರ ನಿಮ್ಮ ಮುಂದೆ ಬರುತ್ತಿದೆ ಎಂದು ತಿಳಿಸಿದರು.
ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಮಾತನಾಡಿ, ಚಿತ್ರದಲ್ಲಿ ಬಿಡುಗಡೆಯಾಗಿರುವ ಗೀತೆ ಸೇರಿದಂತೆ ಐದು ಹಾಡುಗಳಿದೆ. ಒಂದಕ್ಕಿಂತ ಒಂದು ಚೆನ್ನಾಗಿದೆ ಎಂದರು
ಹಿರಿಯ ನಟ ರಂಗಾಯಣ ರಘು, ನಟ ಶ್ರೀ, ಚಿತ್ಕಲಾ ಬಿರಾದಾರ್ ವಿಜಯ್ ಚಂಡೂರ್, ರಘು ರಾಮನಕೊಪ್ಪ, ಛಾಯಾಗ್ರಾಹಕ ಪ್ರದೀಪ್ ಪದ್ಮಕುಮಾರ್, ಸಂಕಲನಕಾರ ಬಸವರಾಜ ಅರಸ್, ಕಲಾ ನಿರ್ದೇಶಕ ಅಮರ್, ನೃತ್ಯ ನಿರ್ದೇಶಕರಾದ ಮದನ್ ಹರಿಣಿ, ವಸ್ತ್ರವಿನ್ಯಾಸ ಮಾಡಿರುವ ರಂಜಿತ್ ಮುಂತಾದವರು “ಸರಳ ಸುಬ್ಬರಾವ್” ಚಿತ್ರದ ಕುರಿತು ಮಾಹಿತಿ ಹಂಚಿಕೊಂಡರು

