ವಿಜಯ್ ರಾಘವೇಂದ್ರ- ರಂಜನಿ ರಾಘವನ್ ನಟನೆಯ ಜುಲೈ 25ಕ್ಕೆ `ಸ್ವಪ್ನಮಂಟಪ’ ಬಿಡುಗಡೆ
ಮೈಸೂರಿನ ಬಾಬುನಾಯಕ್ ಅವರು ಮಲೈ ಮಹಾದೇಶ್ವರ ಎಂಟರ್ ಪ್ರೈಸಸ್ ಸಂಸ್ಥೆಯಿಂದ ನಿರ್ಮಿಸಿರುವ, ಪ್ರೊ. ಬರಗೂರು ರಾಮಚಂದ್ರಪ್ಪ ನಿರ್ದೇಶಿಸಿರುವ `ಸ್ವಪ್ನಮಂಟಪ’ ಕನ್ನಡ ಚಿತ್ರ ಇದೇ ಜುಲೈ ತಿಂಗಳ 25 ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

`ಸ್ವಪ್ನಮಂಟಪ’ ಚಿತ್ರ ಬರಗೂರರ ಅದೇ ಹೆಸರಿನ ಕಾದಂಬರಿ ಆಧರಿಸಿದೆ. ಇದು ಪಾರಂಪರಿಕ ಸ್ಥಳಗಳ ಸಂರಕ್ಷಣೆ ಪ್ರತಿಪಾದಿಸುವ ಚಿತ್ರವಾಗಿದೆ.
ಒಂದು ಹಳ್ಳಿಯಲ್ಲಿ ರಾಜನೊಬ್ಬ ನಿರ್ಮಿಸಿದ `ಸ್ವಪ್ನಮಂಟಪ’ವನ್ನು ಕೆಲವರು ಕೆಡವಿ ಅನ್ಯ ಕಾರ್ಯಗಳಿಗೆ ಬಳಸಲು ಯತ್ನಿಸಿದಾಗ ಕಥಾ ನಾಯಕ ಮತ್ತು ನಾಯಕಿ, ಜನರಲ್ಲಿ ಜಾಗೃತಿ ಮೂಡಿಸಿ ಆ ಪಾರಂಪರಿಕ ಸ್ಥಳವನ್ನು ಉಳಿಸುವ ಮತ್ತು ಅನೇಕ ತಿರುವುಗಳನ್ನು ಒಳಗೊಂಡಿರುವ ಕಥಾವಸ್ತು ಈ ಚಿತ್ರದಲ್ಲಿದೆ.ಸಪ್ನ ಮಂಟಪ ಚಿತ್ರ ಅನೇಕ ಅಂತರರಾಷ್ಟ್ರೀಯ ಚಿತ್ರೋತ್ಸವಗಳಿಗೆ ಆಯ್ಕೆಯಾಗಿ ಪ್ರದರ್ಶನ ಕಂಡಿದೆ.

ಬರಗೂರು ರಾಮಚಂದ್ರಪ್ಪ ಅವರು ತಮ್ಮ ಕಥಾವಸ್ತುವಿಗೆ ಚಿತ್ರಕತೆ, ಸಂಭಾಷಣೆ, ಗೀತರಚನೆ ಮಾಡಿ ನಿರ್ದೇಶಿಸಿದ್ದಾರೆ. ನಾಯಕ-ನಾಯಕಿಯಾಗಿ ವಿಜಯರಾಘವೇಂದ್ರ ಮತ್ತು ರಂಜಿನಿ ರಾಘವನ್ ಅಭಿನಯಿಸಿದ್ದಾರೆ. ಇವರಿಬ್ಬರೂ ದ್ವಿಪಾತ್ರದಲ್ಲಿ ಇರುವುದು ಒಂದು ವಿಶೇಷ ಎಂದು ನಿರ್ದೇಶಕ ಬರಗೂರು ರಾಮಚಂದ್ರಪ್ಪ ಮಾಹಿತಿ ಹಂಚಿಕೊಂಡಿದ್ದಾರೆ
ಜೊತೆಗೆ ಸುಂದರರಾಜ್, ಶೋಭಾ ರಾಘವೇಂದ್ರ, ರಜನಿ, ಸುಂದರರಾಜ ಅರಸು, ಅಂಬರೀಶ್ ಸಾರಂಗಿ, ರಾಜಪ್ಪ ದಳವಾಯಿ, ವೆಂಕಟರಾಜು, ಉಮ್ಮತ್ತೂರು ಬಸವರಾಜು, ಶಿವಲಿಂಗ ಪ್ರಸಾದ್, ಮೈಸೂರು ಮಂಜುಳ ಮುಂತಾದವರು ತಾರಾಗಣದಲ್ಲಿದ್ದಾರೆ.

ಸುರೇಶ್ ಅರಸು ಸಂಕಲನ, ನಾಗರಾಜ ಆದವಾನಿ ಛಾಯಾಗ್ರಹಣ, ಶಮಿತಾ ಮಲ್ನಾಡ್ ಸಂಗೀತ ನಿರ್ದೇಶನ, ತ್ರಿಭುವನ್ ನೃತ್ಯ ಸಂಯೋಜನೆ, ಹೊಸ್ಮನೆ ಮೂರ್ತಿ ಕಲಾವಿನ್ಯಾಸ, ನಟರಾಜ್ಶಿವು ಮತ್ತು ಪ್ರವೀಣ್, ಸಹ ನಿರ್ದೇಶನ ಈ ಚಿತ್ರಕ್ಕಿದೆ. ಸಹ ನಿರ್ಮಾಪಕರು ಎಚ್.ಪಿ. ಕವಿತಾ.

