ಅರೆ ಭಾಷೆಯ “ನಡುಬೆಟ್ಟು ಅಪ್ಪಣ್ಣ” ಚಿತ್ರಕ್ಕೆ ಮೆಚ್ಚುಗೆ
ಅರೆ ಭಾಷೆಯ “ನಡುಬೆಟ್ಟು ಅಪ್ಪಣ್ಣ” ಚಿತ್ರ ತೆರೆಗೆ ಬರಲು ಸಿದ್ದವಾಗಿದೆ. ಬಿಡುಗಡೆಗೂ ಪೂರ್ವದಲ್ಲೇ ಕೊಲ್ಕತ್ತಾ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಹಾಗೂ ಮೈಸೂರು ದಸರಾ ಚಲನಚಿತ್ರೋತ್ಸವದಲ್ಲಿ ಚಿತ್ರ ಪ್ರದರ್ಶನಗೊಂಡು ಮೆಚ್ಚುಗೆಯ ಮಹಾಪೂರ ಗಳಿಸಿದೆ,

ಗಾಯಕಿ ಅನುಪಮ ಶರಧಿ ಚಿತ್ರ ನಿರ್ದೇಶಿಸಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಕೇವಲ ಬೆರಳೆಣಿಕೆಯಷ್ಟಿರುವ ನಿರ್ದೇಶಕಿಯರ ಸಾಲಿಗೆ ಅನುಪಮ ಸೇರ್ಪಡೆಯಾಗಿದ್ದಾರೆ. ಕೆಲವು ಸರ್ಕಾರಿ ಡಾಕ್ಯುಮೆಂಟರಿಗಳನ್ನು ನಿರ್ದೇಶಿಸಿರುವ ಅನುಭವ ಅನುಪಮ ಅವರಿಗಿದೆ. ಚಿತ್ರಕ್ಕೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶಿಸಿರುವ ಅನುಪಮ ಶರಧಿ, ನಿರ್ಮಾಪಕರೂ ಹೌದು.
“ನಡುಬೆಟ್ಟು ಅಪ್ಪಣ್ಣ” ಕಥೆಯು “ದಬ್ಬಡ್ಕ” ಎಂಬ ದೂರದ ಹಳ್ಳಿಯಲ್ಲಿ ವಾಸಿಸುವ ಅಪ್ಪಣ್ಣ ಎಂಬ ಜಿಪುಣ ಮತ್ತು ಸ್ವಾರ್ಥಿ ವ್ಯಕ್ತಿ ಮತ್ತು ಅವನ ಕುಟುಂಬದ ಸುತ್ತ ಸುತ್ತುತ್ತದೆ. ಹಳ್ಳಿಯ ಕಷ್ಟಗಳ ಬಗ್ಗೆಯಾಗಲಿ ಅಥವಾ ಅವನ ಕುಟುಂಬದ ಅಗತ್ಯಗಳ ಬಗ್ಗೆಯಾಗಲಿ ಕಾಳಜಿ ವಹಿಸುವುದಿಲ್ಲ. ಅವನು ಸೇರಿದಂತೆ ಗ್ರಾಮಸ್ಥರು ಆಗಾಗ್ಗೆ ತಮ್ಮ ಮೇಲೆ ಮತ್ತು ತಮ್ಮ ತೋಟಗಳ ಮೇಲೆ ಆನೆ ದಾಳಿಯಿಂದ ಬಳಲುತ್ತಾರೆ. ಹತ್ತಿರದ ಪಟ್ಟಣಗಳು, ರಸ್ತೆಗಳು, ಆಸ್ಪತ್ರೆ, ಶಾಲೆಗಳು ಮುಂತಾದ ಮೂಲಭೂತ ಅವಶ್ಯಕತೆಗಳಿಲ್ಲದೆ ಗ್ರಾಮವದು.
ಹತ್ತಿರದ ಪಟ್ಟಣಗಳಿಗೆ ಹೋಗಲು ಅವರು ತೆಪ್ಪವನ್ನು ಬಳಸಬೇಕಾಗುತ್ತದೆ, ಇದರಿಂದಾಗಿ ಹಲವಾರು ಸಾವುಗಳನ್ನು ಅನುಭವಿಸಬೇಕಾಗುತ್ತದೆ. ಆನೆಯೊಂದು ತೋಟಗಳ ಮೇಲೆ ದಾಳಿ ಮಾಡಿದಾಗ ಅಪ್ಪಣ್ಣ ಥಟ್ಟನೆ ಚೇತರಿಸಿಕೊಳ್ಳುತ್ತಾನೆ. ಅದರಲ್ಲಿ ಹೆಂಡತಿ ಮತ್ತು ಮಗನನ್ನು ಕಳೆದುಕೊಳ್ಳುತ್ತಾನೆ. ಈಘಟನೆಯ ನಂತರ, ಅಪ್ಪಣ್ಣ ಸಂಪೂರ್ಣವಾಗಿ ರೂಪಾಂತರಗೊಳ್ಳುತ್ತಾನೆ. ಮನೆ ಮತ್ತು ತನ್ನ ತೋಟಗಳಿಗೆ ಸರಿಯಾದ ಸುರಕ್ಷತೆ ಒದಗಿಸದೆ ಹಣ ಉಳಿಸುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ಅರಿತುಕೊಂಡ ಅಪ್ಪಣ್ಣ, ಸ್ವಾರ್ಥಿಯಾಗಿರುವುದಕ್ಕೆ ವಿಷಾದಿಸುತ್ತಾನೆ. ನಂತರ ಒಂದು ಟ್ರಸ್ಟ್ ರಚಿಸುತ್ತಾನೆ ಮತ್ತು ತನ್ನ ಇಡೀ ಆಸ್ತಿಯನ್ನು ಹಳ್ಳಿಯ ಕಲ್ಯಾಣಕ್ಕಾಗಿ ಸರ್ಕಾರಕ್ಕೆ ದಾನ ಮಾಡುತ್ತಾನೆ ಇದೇ ಈಚಿತ್ರದ ಕಥಾಸಾರಾಂಶ.

ನಟರಾಜ್ ಹೊನ್ನವಳ್ಳಿ “ನಡುಬೆಟ್ಟು ಅಪ್ಪಣ್ಣ”ನಾಗಿ ಅಭಿನಯಿಸಿದ್ದಾರೆ. ಸುಮತಿ, ನಿಶಾಂತ್, ಜಗನ್ನಾಥ್, ಭವಾನಿ ಶಂಕರ್ ಅಡ್ತಲೆ, ಆಡೂರ್ ಬಾಲಕೃಷ್ಣ ಕಾಸರಗೋಡು, ಜೀವನ್ ಸುಳ್ಯ ಕೆರೆಮೂಲೆ, ಲಾಲಿತ್ಯ ಮುಂತಾದವರು ಅಭಿನಯಿಸಿರುವ ಚಿತ್ರಕ್ಕೆ ಅಭಿಷೇಕ್ ಅಣಗಲ್ಲಿ – ಧನುಷ್ ಮೈಸೂರು ಛಾಯಾಗ್ರಹಣ ಹಾಗೂ ಕುಮಾರ್ ಈಶ್ಚರ್ ಸಂಗೀತ ನಿರ್ದೇಶನವಿದೆ.

