ವಿಭಿನ್ನ ಕಥೆಯ ಚಿತ್ರ “`ಬಿಳಿಚುಕ್ಕಿ ಹಳ್ಳಿಹಕ್ಕಿ’ ಅಕ್ಟೋಬರ್ 24ಕ್ಕೆ ಬಿಡುಗಡೆ
“ಮಹಿರಾ” ಚಿತ್ರ ನಿರ್ದೇಶನ ಮಾಡಿ ಗಮನ ಸೆಳೆದಿದ್ದ ನಟ, ನಿರ್ದೇಶಕ ಮಹೇಶ್ ಗೌಡ ಈಗ ಒಂದಷ್ಟು ಸಮಯ ಮತ್ತು ಸಿದ್ದತೆಯ ನಂತರ ವಿಭಿನ್ನ ಕಥೆಯ `ಬಿಳಿಚುಕ್ಕಿ ಹಳ್ಳಿಹಕ್ಕಿ’ ಚಿತ್ರವನ್ನು ಸದ್ದುಗದ್ದಲವಿಲ್ಲದೆ ಪೂರ್ಣಗೊಳಿಸಿದ್ದಾರೆ. ಚಿತ್ರ ಅಕ್ಟೋಬರ್ 24ರಂದು ರಾಜ್ಯಾದ್ಯಂತ ತೆರೆಗೆ ಬರಲು ಸಜ್ಜಾಗಿದೆ,

ರಂಗಭೂಮಿ ಪ್ರತಿಭೆ ಕಾಜಲ್ ಕುಂದರ್ ಚಿತ್ರದಲ್ಲಿ ಕವಿತಾ ಎಂಬ ಪಾತ್ರಕ್ಕೆ ಜೀವ ತುಂಬಿದ್ದಾರೆ. ಸ್ವತಃ ವಿಟಿಲಿಗೋ ಸಮಸ್ಯೆ ಹೊಂದಿರುವ ಮಹೇಶ್ ಗೌಡ ಅವರೇ ಸಿನಿಮಾದ ನಾಯಕನಾಗಿ ನಟಿಸಿರೋದು ವಿಶೇಷ.
ಮಹೇಶ್ ಗೌಡ ನಿರ್ಮಾಣ, ನಿರ್ದೇಶನ ಮಾಡಿ, ಮುಖ್ಯ ಭೂಮಿಕೆಯಲ್ಲಿ ನಟಿಸಿರುವ `ಬಿಳಿಚುಕ್ಕಿ ಹಳ್ಳಿಹಕ್ಕಿ’ ಚಿತ್ರ ವಿಭಿನ್ ಕಥಾಹಂದರ ಹೊಂದಿದೆ. ಈಗಾಗಲೇ ಪೋಸ್ಟರ್ ಸೇರಿದಂತೆ ಕಥಾ ವಸ್ತುವಿನ ಮೂಲಕ ಗಮನ ಸೆಳೆದಿದೆ.

ನಿರ್ದೇಶಕ ಮಹೇಶ್ ಗೌಡ ಮಾಹಿತಿ ನೀಡಿ ಬಿಳಿತೊನ್ನು ಸಮಸ್ಯೆ ಮುಂದಿಟ್ಟುಕೊಂಡು ಚಿತ್ರ ಮಾಡಲಾಗಿದೆ.ವಿಭಿನ್ನ ಬಗೆಯ ಸಿನಿಮಾ. ನಮ್ಮ ಸುತ್ತಮುತ್ತಲೇ ವಿಟಿಲಿಗೋ ಅಂದರೆ ತೊನ್ನು ಎಂಬ ಚರ್ಮ ಬಾಧೆ ಅನೇಕರನ್ನು ಆವರಿಸಿಕೊಂಡಿರುತ್ತೆ. ಅಂಥ ಕಾಯಿಲೆಯಲ್ಲದ ಕಾಯಿಲೆಯ ಭೂಮಿಕೆಯ ಮೇಲೆ ತಯಾರಾಗಿರುವ ಮೊಟ್ಟ ಮೊದಲ ಸಿನಿಮಾ ಎಂಬ ಹೆಗ್ಗಳಿಕೆ ಬಿಳಿಚುಕ್ಕಿ ಹಳ್ಳಿಹಕ್ಕಿಯದ್ದು ಎಂದು ತಿಳಿಸಿದ್ದಾರೆ.
ಹೊರ ಜಗತ್ತಿನ ಪಾಲಿಗೆ ತೊನ್ನು ಅನ್ನೋದೊಂದು ಚರ್ಮ ವ್ಯಾಧಿ. ಆದರೆ, ಅದರ ಸುತ್ತ ಹಬ್ಬಿಕೊಂಡಿರುವ ಚಿತ್ರವಿಚಿತ್ರ ನಂಬಿಕೆಗಳದ್ದೇ ದೊಡ್ಡ ಕಥೆಯಿದೆ. ಅಂಥ ಬಾಧೆಗೀಡಾದ ಜೀವವೊಂದರ ಮನೋವ್ಯಾಕುಲವನ್ನು ಸುಲಭಕ್ಕೆ ಅಂದಾಜಿಸಲಾಗದ ಕಥಾ ಹಂದರದೊಂದಿಗೆ ಸಿನಿಮಾ ಮೂಲಕ ಕಟ್ಟಿಕೊಡಲಾಗಿದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

ಇಂಥಹದೊಂದು ವಿಶಿಷ್ಠ ಕಥೆಯನ್ನು ಪಕ್ಕಾ ಕಮರ್ಶಿಯಲ್ ಧಾಟಿಯಲ್ಲಿ, ಭರಪೂರ ಮನೋರಂಜನಾತ್ಮಕ ಅಂಶಗಳೊಂದಿಗೆ ಕಟ್ಟಿಕೊಡಲಾಗಿದೆಯಂತೆ. ಪ್ರಶಸ್ತಿ ವಿಜೇತ ಕಲಾವಿದರಾದ ವೀಣಾ ಸುಂದರ್, ಜಹಾಂಗೀರ್, ರವಿ ಭಟ್ ಮುಂತಾದವರು ಮಹತ್ವದ ಪಾತ್ರಗಳಿಗೆ ಜೀವ ತುಂಬಿದ್ದಾರೆ.


