“ಶ್ರೀರಸ್ತು” ಚಿತ್ರದಲ್ಲಿ ಸಹೋದರ ಪ್ರಣಾಮ್ ಜೊತೆ ನಟ ಪ್ರಜ್ವಲ್ ದೇವರಾಜ್
ಯುವನಟ ಪ್ರಣಾಮ್ ದೇವರಾಜ್ -ಸಂಜನಾ ಆನಂದ್ ಜೋಡಿಯಾಗಿರುವ “ಶ್ರೀರಸ್ತು” ಚಿತ್ರಕ್ಕೆ ಸಹೋದರ ಪ್ರಜ್ವಲ್ ದೇವರಾಜ್ ಕೂಡ ಪ್ರವೇಶ ಮಾಡಿದ್ದು ಒಂದೇ ಚಿತ್ರದಲ್ಲಿ ಅಣ್ಣ- ತಮ್ಮಂದಿರನ್ನು ನೋಡುವ ಅವಕಾಶ ಪ್ರೇಕ್ಷಕರಿಗೆ ಸಿಕ್ಕಿದೆ

ಸಹೋದರರಾದ ಪ್ರಣಮ್ ಮತ್ತು ಪ್ರಜ್ವಲ್ ದೇವರಾಜ್ ಒಂದೇ ಚಿತ್ರದಲ್ಲಿ ಜೊತೆಯಾಗಿ ಕಾಣಿಸಿಕೊಳ್ಳುತ್ತಿರುವುದು ಇದೇ ಪ್ರಥಮ. ಅದೇ ಕಾರಣದಿಂದಲೇ ಶ್ರೀರಸ್ತು ದೊಡ್ಡ ಕುತೂಹಲ ಸೃಷ್ಟಿಸಿದೆ. ನಟ ಪ್ರಜ್ವಲ್ ದೇವರಾಜ್ ಜನ್ಮದಿನದ ಪ್ರಯುಕ್ತ ಶ್ರೀರಸ್ತು ಚಿತ್ರತಂಡ ಶುಭ ಕೋರುವ ಪೆÇೀಸ್ಟರ್ ಮತ್ತು ವಿಡಿಯೋ ಬಿಡುಗಡೆಗೊಳಿಸಿದೆ
ಪ್ರೇಮ ಚಿತ್ರ ಈಗ ಕೌಟುಂಬಿಕ ಚಿತ್ರ
ಆರಂಭದಲ್ಲಿ ಶ್ರೀರಸ್ತು ಒಂದು ಲವ್ ಸ್ಟೋರಿ ಎಂದಷ್ಟೇ ಸುದ್ದಿಯಾಗಿತ್ತು. ಚಿತ್ರದಲ್ಲಿ ಪ್ರಣಮ್ಗೆ ಜೋಡಿ ಸಂಜನಾ ಆನಂದ್ ಎನ್ನುವುದಷ್ಟೇ ತಿಳಿದು ಬಂದಿತ್ತು. ಇದೀಗ ಪ್ರಜ್ವಲ್ ಕೂಡ ಸೇರಿಕೊಂಡಿದ್ದಾರೆ. ಚಿತ್ರಕ್ಕೂ ಒಂದು ಕೌಟುಂಬಿಕ ಕಳೆ ಬಂದಿದೆ. ಪ್ರೇಮದ ಜೊತೆಗೆ ಕೌಟುಂಬಿಕ ಪ್ರೀತಿ ತೋರಿಸುವ ಒಂದು ವಿಭಿನ್ನ ಚಿತ್ರವಾಗಿ ಶ್ರೀರಸ್ತು ಮೂಡಿ ಬರಲಿದೆ. ಪ್ರಜ್ವಲ್ ತಮ್ಮನಿಗೆ ಸ್ಪರ್ಧಿಯಾಗಿ ಕಾಣಿಸಿಕೊಳ್ಳುತ್ತಿಲ್ಲ. ಆದರೆ ಪ್ರಧಾನ ಪಾತ್ರವಾಗಿ ಗಮನ ಸೆಳೆಯಲಿದ್ದಾರೆ ಎಂದು ನಿರ್ದೇಶಕ ಶಂಕರ್ ರೆಡ್ಡಿ ಭರವಸೆ ನೀಡುತ್ತಾರೆ.

ಚಿತ್ರ ಕನ್ನಡ ಮಾತ್ರವಲ್ಲದೆ ತೆಲುಗು ಭಾಷೆಯಲ್ಲಿ ಕೂಡ ತೆರೆ ಕಾಣಲಿದೆ. ಹೀಗಾಗಿ ದೊಡ್ಡ ಕ್ಯಾನ್ವಾಸ್ ನಲ್ಲಿಯೇ ಸಿದ್ಧವಾಗುತ್ತಿದೆ. ಚಿತ್ರದಲ್ಲಿ ಖ್ಯಾತ ಕಲಾವಿದರಾದ ಸುಮನ್, ಆಮನಿ, ಚೈತ್ರಾರೈ, ರವಿ ಶಿವತೇಜ, ಜೋಶ್ ರವಿ, ರವಿ ಪ್ರಕಾಶ್ ಹೀಗೆ ತೆಲುಗು ಚಿತ್ರರಂಗದಲ್ಲಿಯೂ ಹೆಸರು ಮಾಡಿರುವ ಕಲಾವಿದರು ಇತರ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಿದ್ದಾರೆ
ಪುಷ್ಪ ಸೇರಿದಂತೆ ಹಲವಾರು ಜನಪ್ರಿಯ ಚಿತ್ರಗಳ ಸಹಾಯಕ ಛಾಯಾಗ್ರಾಹಕ ಬಾಲಸರಸ್ವತಿ ಚಿತ್ರದ ಕ್ಯಾಮರಾಮ್ಯಾನ್. ಕೃಷ್ಣ ಮಾಯ ಕಲಾನಿರ್ದೇಶನವಿದ್ದು ಶ್ರೀ ವರ್ಕಲ ಸಂಕಲನ ನಿರ್ವಹಣೆ ಮಾಡುತ್ತಿದ್ದಾರೆ. ಕನ್ನಡದ ಪಾಲಿಗೆ ಇದು ಇಂಡಸ್ಟ್ರಿ ತಿರುಗಿ ನೋಡುವಂತಹ ಚಿತ್ರವಾಗುವ ಬಗ್ಗೆ ಯಾವುದೇ ಸಂದೇಹವಿಲ್ಲ.
ಶ್ರೀರಸ್ತು ಚಿತ್ರತಂಡದ ಕಡೆಯಿಂದ ಅಧಿಕೃತವಾಗಿ ಹೊರಗೆ ಬಂದಿರುವುದು ಒಂದು ವಿಡಿಯೋ ತುಣುಕು ಮಾತ್ರ. ಆದರೆ ಅದರ ಹಿನ್ನೆಲೆ ಸಂಗೀತ ಗಮನಿಸಿರುವ ಅಭಿಮಾನಿಗಳು ಹಾಡುಗಳ ಬಗ್ಗೆ ತೀವ್ರ ಕುತೂಹಲ ವ್ಯಕ್ತಪಡಿಸಿದ್ದಾರೆ.

ಯುವ ತಾರಾ ಸಂಗಮ
ಸಂಜನಾ ಆನಂದ್ ನಟನೆಯ ಈ ಹಿಂದಿನ ಚಿತ್ರದಲ್ಲಿ ಬ್ಯಾಂಗಲ್ ಬಂಗಾರಿ ಎನ್ನುವ ಹಾಡು ಜನಪ್ರಿಯತೆ ಪಟ್ಟ ಗಿಟ್ಟಿಸಿತ್ತು. ಮನೆಯ ಹಿರಿಯರಿಂದ ಹಿಡಿದು ಕಿರಿಯ ಮಕ್ಕಳ ತನಕ ಎಲ್ಲರೂ ಈ ಹಾಡಿಗೆ ಡಾನ್ಸ್ ಮಾಡಿದ್ದರು. ಇದೀಗ ಅದೇ ಸಂಜನಾ ಆನಂದ್ ಮರಳಿ ಬರುತ್ತಿದ್ದಾರೆ. ಈ ಬಾರಿ ಹಿಂದಿನ ದಾಖಲೆ ಮುರಿಯುವ ಹಾಡುಗಳಿರುತ್ತವೆ. ಈ ಮೂವರು ಸೇರಿ ಹೊಸ ಮೋಡಿ ಮಾಡುವ ನಿರೀಕ್ಷೆ ಎಲ್ಲರದ್ದೂ ಆಗಿದೆ.

