ಕೊನೆ ಉಸಿರಿನ ತನಕ ಅಭಿಮಾನಿಗಳ ಋಣ ತೀರಿಸುವೆ: ರಿಷಬ್ ಶೆಟ್ಟಿ

ಕಾಂತಾರ ಚಿತ್ರದ ಮೂಲಕ ಜಗತ್ತಿನಾದ್ಯಂತ ಖ್ಯಾತಿ ಪಡೆದಿರುವ ಸರಳ ಸಜ್ಜನಿಕೆಯ ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರ ಹುಟ್ಟುಹಬ್ಬವನ್ನು ಸಹಸ್ರಾರು ಅಭಿಮಾನಿಗಳ ಸಮ್ಮುಖದಲ್ಲಿ ಆಚರಿಸಲಾಯಿತು.
ಸುರಿವ ಮಳೆಯನ್ನೂ ಲೆಕ್ಕಿಸದೆ ತಮ್ಮ ಅಭಿಮಾನ ಪ್ರದರ್ಶಿಸಿದ ಅಭಿಮಾನಿಗಳ ನಡೆಗೆ ನಟ ರಿಷಬ್ ಶೆಟ್ಟಿ ಭಾವುಕರಾಗಿ ಪ್ರತಿಕ್ರಿಯಿಸಿ, ಪ್ರಿತಿಯ ಋಣವನ್ನು ನಾನು ಸಾಯುವವರೆಗೂ ನನ್ನ ಸಿನಿಮಾ ಮತ್ತು ಕೆಲಸದ ಮೂಲಕ ತೀರುಸುತ್ತಲೆ ಇರುತ್ತೇನೆ ಎಂದಿದ್ದಾರೆ

“ಕಾಂತಾರ” ಸಿನಿಮಾಕ್ಕೆ ಕನ್ನಡಿಗರು ತೋರಿಸಿದ ಪ್ರೀತಿಯಿಂದ ಇವತ್ತು ಅದು ಜಗತ್ತಿನ ಸಿನಿಮಾವಾಗಿದೆ, ಅದ್ದರಿಂದ ನಿಮ್ಮನ್ನು ಭೇಟಿಯಾಗಿ ಕೃತಜ್ಞತೆ ಸಲ್ಲಿಸಬೇಕೆಂದು ಬಹಳ ದಿನಗಳಿಂದ ಕಾಯುತ್ತಿದ್ದೆ, ಆ ದಿನ ಇವತ್ತು ನನ್ನ ಹುಟ್ಟುಹಬ್ಬದ ಮೂಲಕ ಒದಗಿ ಬಂದಿದೆ ಎಂದು ತಿಳಿಸಿದ್ದಾರೆ.

ಸಣ್ಣ ಹಳ್ಳಿಯಿಂದ ಬಂದ ಮಧ್ಯಮ ಕುಟುಂಬದ ಹುಡುಗ ಸಿನಿಮಾ ಕನಸು ಕಂಡು ನಿಮ್ಮ ಮನದಲ್ಲಿ ಜಾಗ ಮಾಡಿಕೊಳ್ಳಬಹುದೆಂದು ನೀವು ಸಾಬೀತುಪಡಿಸಿದ್ದೀರಾ ಎಂದು ಕೃತಜ್ಞತೆ ವ್ಯಕ್ತಪಡಿಸಿದರು.ಕಾರ್ಯಕ್ರಮವನ್ನು ಅಯೋಜಿಸಿದ ಅಭಿಮಾನಿಗಳಿಗೆ, ಸ್ನೇಹಿತರಿಗೆ, ತಮ್ಮ ಮಡದಿ ಪ್ರಗತಿ ರಿಷಬ್ ಶೆಟ್ಟಿ ಮತ್ತು ಪ್ರಮೋದ್ ಶೆಟ್ಟಿಗೆ ಅವರಿಗೆ ರಿಷಬ್ ಶೆಟ್ಟಿ ಧನ್ಯವಾದ ತಿಳಿಸಿದರು.

ನಟ ಪ್ರಮೋದ್ ಶೆಟ್ಟಿ ಮಾತನಾಡಿ ಹಲವಾರು ವರ್ಷಗಳಿಂದ ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಅದರ ಜವಾಬ್ದಾರಿಯನ್ನು ರಿಷಬ್ ವಹಿಸುತ್ತಿದ್ದಾರೆ, ಆದರೆ ಯಾರಿಗೂ ಬಹಿರಂಗ ಪಡಿಸಿರಲಿಲ್ಲ’ ಎಂದು ರಿಷಬ್ ಶೆಟ್ಟಿ ಅವರ ಸಮಾಜಮುಖಿ ಕಾರ್ಯಗಳ ಬಗ್ಗೆ ವಿವರಣೆ ನೀಡಿದರು.
ಯಾವುದೇ ಉಡಗೊರೆಯನ್ನ ಇಷ್ಟ ಪಡದ ತಮ್ಮ ಗಂಡನಿಗೆ, ಹುಟ್ಟುಹಬ್ಬದ ಉಡುಗೊರೆಯಾಗಿ ‘ರಿಷಬ್ ಶೆಟ್ಟಿ ಫೌಂಡೇಶನ್’ ಎಂಬ ಶಿಕ್ಷಣ ಕ್ಷೇತ್ರಕ್ಕೆ ಸಹಾಯ ನೀಡುವ ಸಂಸ್ಥೆಯನ್ನು ರಿಷಬ್ ಅವರ ಹುಟ್ಟುಹಬ್ಬದ ದಿನದಿಂದಲೇ ಆರಂಭಿಸುವುದಾಗಿ ಪ್ರಗತಿ ರಿಷಬ್ ಶೆಟ್ಟಿ ತಿಳಿಸಿದರು.

ಕರ್ನಾಟಕವಲ್ಲದೆ ಬೇರೆ ರಾಜ್ಯಗಳಿಂದಲೂ ರಿಷಬ್ ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನು ನೋಡಲು ಮಳೆಯನ್ನ ಲೆಕ್ಕಿಸದೆ ಆಗಮಿಸಿದ್ದರು.ಎಲ್ಲಾ ನಟರ ಅಭಿಮಾನಿಗಳು ರಿಷಬ್ ಅವರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದರು.ಹುಲಿ ವೇಷ ಮತ್ತು ಚಂಡೆ ಕಾರ್ಯಕ್ರಮ ಸಮಾರಂಭದ ಮೆರಗನ್ನು ಮತ್ತಷ್ಟು ಹೆಚ್ಚಿಸಿತು.