ಅಪ್ಪುಅಭಿಮಾನಿಯ ಕಥೆ ‘ಪುನೀತ್ ನಿವಾಸ’ಕ್ಕೆ ಮುಹೂರ್ತ

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಚಿತ್ರರಂಗದ ದಂತ ಕಥೆಯಾಗಿದ್ದಾರೆ.ಅವರ ಆದರ್ಶಗಳನ್ನು ನೆನಪಿಸುವ ಅನೇಕ ಚಲನಚಿತ್ರಗಳು ಈಗಾಗಲೇ ನಿರ್ಮಾಣವಾಗಿವೆ. ಇದೀಗ ಮತ್ತೊಂದು ತಂಡ ಅಂಥ ಪ್ರಯತ್ನಕ್ಕೆ ಕೈಹಾಕಿದೆ. ‘ಪುನೀತ್ ನಿವಾಸ’

ಚಿತ್ರಕ್ಕೆ ಅಶ್ವಿನಿ ಪುನೀತ್ ರಾಜಕುಮಾರ್, ರಾಘವೇಂದ್ರ ರಾಜಕುಮಾರ್ ಅವರ ಶುಭ ಹಾರೈಸಿದ್ದು ಚಿತ್ರತಂಡದ ಮುಖದಲ್ಲಿ ಮಂದಹಾಸ ಮೂಡಿಸಿದೆ.
ಪುಟ್ಟಣ್ಣ ಕಣಗಾಲ್ ರಂತಹ ಹಿರಿಯ ನಿರ್ದೇಶಕರ ಜತೆ ಸಹಾಯಕರಾಗಿ ಕೆಲಸ ಮಾಡಿದ ನಾಗೇಂದ್ರ ಪ್ರಸಾದ್ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳುತ್ತಿದ್ದಾರೆ. ಗಂಗಮ್ಮ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತ ಸಮಾರಂಭ ನೆರವೇರಿತು. ಗಂಗಮ್ಮ ತಾಯಿಯ ಮೇಲೆ ಪ್ರಥಮ ದೃಶ್ಯ ಚಿತ್ರೀಕರಿಸಲಾಯಿತು.

ಪುನೀತ್ ರಾಜ್ ಕುಮಾರ್ ಅವರ ಅಪ್ಪಟ ಅಭಿಮಾನಿಯಾದ ಮಲ್ಲು ಎಂಬ ಹುಡುಗನ ಕಥೆಯಿದು. ತಾನೊಂದು ಸಿನಿಮಾ ಮಾಡಬೇಕೆಂದು ಕೂಡಿಟ್ಟುಕೊಂಡಿದ್ದ ಹಣದಿಂದ ಬಡ ಹುಡುಗಿಗೆ ಮನೆ ಕಟ್ಟಿಸಿಕೊಟ್ಟು ಅದಕ್ಕೆ ಪುನೀತ್ ನಿವಾಸ ಎಂದು ಹೆಸರಿಡುವ ಮೂಲಕ ಪುನೀತ್ ಅವರ ಆದರ್ಶಗಳನ್ನು ಪಾಲಿಸುತ್ತಾನೆ ಎನ್ನುವುದೇ ಚಿತ್ರದ ಮುಖ್ಯಕಥೆ. ಪಂಚಮಿ ಸಿನಿ ಕ್ರಿಯೇಶನ್ಸ್ ಮೂಲಕ ಮೋಹನ್ ಎಸ್. ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಈ ಹಿಂದೆ ಶ್ರೀನಗರ ಕಿಟ್ಟಿ ಜತೆ ಚಿತ್ರ ಮಾಡಿದ್ದ ಇವರಿಗೆ ಎರಡನೇ ಚಿತ್ರವೇ ಪುನೀತ್ ನಿವಾಸ.
ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಹಿರಿಯ ನಟ ಅಭಿಜಿತ್ ಮಾತನಾಡಿ ಪುನೀತ್ ಅವರ ಜತೆ ಆಕ್ಟ್ ಮಾಡಬೇಕಿತ್ತು. ಅವಕಾಶವೂ ಸಿಕ್ಕಿತ್ತು. ಆದರೆ ಆಗಲಿಲ್ಲ. ಮೋಹನ್ ಈ ಟೈಟಲ್ ಹೇಳಿದಾಗ ಮೈ ರೋಮಾಂಚನವಾಯಿತು. ಮರುಮಾತಾಡದೆ ಒಪ್ಪಿಕೊಂಡೆ ಎಂದು ಹೇಳಿದರು.

ನಿರ್ದೇಶಕ ನಾಗೇಂದ್ರ ಪ್ರಸಾದ್ ಮಾತನಾಡಿ ಪುನೀತ್ ಅವರ ಅಭಿಮಾನಿಯೊಬ್ಬನ ಕಥೆಯಿದು. ಬೆಂಗಳೂರು ಸುತ್ತಮುತ್ತ ಒಂದೇ ಹಂತದಲ್ಲಿ ಚಿತ್ರೀಕರಣ ನಡೆಸುವ ಪ್ಲಾನಿದೆ. ಕೃಪಾಕರ್ ಅವರ ಸಂಗೀತ ಸಂಯೋಜನೆಯಲ್ಲಿ ಸಾಂಗ್ ಕಂಪೆÇೀಜಿಂಗ್ ನಡೆಯುತ್ತಿದೆ ಎಂದು ಹೇಳಿದರು.
ಬಾಲು ಛಾಯಾಗ್ರಹಣ, ಜೆಮ್ ಶಿವು ಸಂಭಾಷಣೆ, ಮುತ್ತುರಾಜ್ ಸಂಕಲನ ಈ ಚಿತ್ರಕ್ಕಿದೆ. ಮಲ್ಲು ಪಾತ್ರದಲ್ಲಿ ಮಾಸ್ಟರ್ ವಿಠ್ಠಲ್ ಜತೆಗೆ ಹಿರಿಯ ನಟ ಅಭಿಜಿತ್, ಎಂ.ಎಸ್.ಉಮೇಶ್, ಡಿಂಗ್ರಿ ನಾಗರಾಜ್, ಟೆನ್ನಿಸ್ ಕೃಷ್ಣ, ಲಕ್ಷ್ಮಿ ಭಟ್, ರೇಖಾದಾಸ್, ಗಣೇಶ್ ರಾವ್ ಕೇಸರಕರ್, ಶಂಕರಭಟ್, ನಾಗೇಂದ್ರ ಪ್ರಸಾದ್, ಶ್ರೀದರ್ಶನ್ ಪುನೀತ್ ನಿವಾಸದ ಮುಖ್ಯ ಪಾತ್ರಗಳಲ್ಲಿ ಆಭಿನಯಿಸುತ್ತಿದ್ದಾರೆ.