ಸದ್ದಿಲ್ಲದೆ ಚಿತ್ರೀಕರಣ ಪೂರ್ಣಗೊಳಿಸಿದ “ ನೆನಪುಗಳ ಮಾತುಮಧುರ”
“ಹೊಸತರ” ಚಿತ್ರದ ಮೂಲಕ ನಿರ್ದೇಶನಕನಾಗಿ ಚಿತ್ರರಂಗ ಪ್ರವೇಶ ಮಾಡಿದ ಅಫ್ಜಲ್ ಚಿತ್ರ ಬಿಡುಗಡೆಯ ಹೊಸ್ತಲಿನಲ್ಲಿರುವ ಮತ್ತೊಂದು ಚಿತ್ರ ನಿರ್ದೇಶನಕ್ಕೆ ಮುಂದಾಗಿದ್ದಾರೆ. ಈ ಬಾರಿ ರೆಡ್ ಅಂಡ್ ವೈಟ್ ಸೆವೆನ್ ರಾಜ್ ಕೈಜೋಡಿಸಿದ್ದಾರೆ.
ಹೊಸ ಚಿತ್ರಕ್ಕೆ “ನೆನಪುಗಳ ಮಾತುಮಧುರ” ಎಂಬ ಶೀರ್ಷಿಕೆ ಇಟ್ಟಿದ್ದಾರೆ. ನಿರ್ಮಾಪಕ ಸೆವೆನ್ ರಾಜ್ ಹುಟ್ಟುಹಬ್ಬದ ಸಂದರ್ಭದಲ್ಲೇ ನೂತನ ಚಿತ್ರದ ಶೀರ್ಷಿಕೆ ಅನಾವಾರಣ ಮಾಡಲಾಗಿದೆ. ಈಗಾಗಲೇ ಚಿತ್ರೀಕರಣ ಮುಗಿಸಿರುವ ಈ ಚಿತ್ರ ಪೋಸ್ಟ್ ಪ್ರೋಡಕ್ಷನ್ಸ್ ನಲ್ಲಿ ಬ್ಯುಸಿಯಾಗಿದೆ. ಬೆಂಗಳೂರು, ಆನೇಕಲ್ , ಕೆಂಗೇರಿ ಸುತ್ತಾಮುತ್ತಾ ಚಿತ್ರೀಕರಣ ನಡೆದಿದೆ.
“ನೆನಪುಗಳ ಮಾತು ಮಧುರ” ಚಿತ್ರದಲ್ಲಿ ನಾಲ್ಕು ಸ್ನೇಹಿತರ ನಡುವೆ ನಡೆಯುವ ನಾಲ್ಕು ಕಥೆಗಳ ಗುಚ್ಛವಿದೆ. ವಿಭಿನ್ನ ಕಥಾ ಹಂದರದ ಹೊಂದಿರುವ ಈ ಚಿತ್ರದಲ್ಲಿ ಮರ್ಡರ್ ಮಿಸ್ಟ್ರಿ, ಹಾರರ್ , ಹಾಸ್ಯ ಈಗಿನ ಕಾಲದ ಯುವಕರ ಜೀವನದಲ್ಲಿ ನಡೆಯುತ್ತಿರುವ ಕೆಲವು ವಿಭಿನ್ನ ಅಂಶಗಳು ಇರಲಿದೆ ಎನ್ನುತ್ತಾರೆ ನಿರ್ದೇಶಕ ಅಫ್ಜಲ್.
ಅಫ್ಜಲ್ ಅವರೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ಚಿತ್ರಕ್ಕೆ ಸ್ವಾಮಿ ಮೈಸೂರು ಛಾಯಾಗ್ರಹಣ,
ರಾಜು ಎಮ್ಮಿಗನೂರು ಸಂಗೀತ ನಿರ್ದೇಶನ, ಕಾರ್ತಿಕ್ ಈಶ್ವರಾಚಾರಿ ಸಂಕಲನ ಹಾಗೂ ತ್ಯಾಗರಾಜ್ ಹಿನ್ನೆಲೆ ಸಂಗೀತವಿದೆ
ನಿರ್ದೇಶಕ ಅಫ್ಜಲ್ ಪ್ರಮುಖಪಾತ್ರದಲ್ಲಿ ಅಭಿನಯಿಸಿರುವ ಚಿತ್ರದ ಮತ್ತೊಂದು ಮುಖ್ಯಪಾತ್ರದಲ್ಲಿ ನಿರ್ಮಾಪಕ ಸೆವೆನ್ ರಾಜ್ ಸಹ ನಟಿಸಿದ್ದಾರೆ. ವಸಿಷ್ಠ ಬಂಟನೂರು, ರಣವೀರ್, ರಾಜಪ್ರಭು, ವಿನಯ್, ಅಂಜಲಿ, ಸೌಮ್ಯ, ರೇಖಾ ರಮೇಶ್, ಶುಭ ತೀರ್ಥ, ವಾದ್ಯಾ, ಗುಬ್ಬಚ್ಚಿ , ಅರವಿಂದ್, ನಾಗೇಂದ್ರ ಅರಸ್ ಮುಂತಾದವರು ತಾರಾಬಳಗದಲ್ಲಿದ್ದಾರೆ.