“ನೋಡಿದ್ದು ಸುಳ್ಳಾಗಬಹುದು” ಚಿತ್ರದ ಹಾಡು ಬಿಡುಗಡೆ
ಅನಿಲ್ ಕುಮಾರ್ ಕೆ.ಆರ್ ನಿರ್ಮಾಣ ಮಾಡುವುದರೊಂದಿಗೆ ನಾಯಕನಾಗೂ ನಟಿಸಿರುವ, ವಿಜಯ್ ಚಲಪತಿ ನಿರ್ದೇಶನದ ಹಾಗೂ ಶೀರ್ಷಿಕೆಯಲ್ಲೇ ಕುತೂಹಲ ಮೂಡಿಸಿರುವ “ನೋಡಿದ್ದು ಸುಳ್ಳಾಗಬಹುದು” ಚಿತ್ರದ “ಕನಸುಗಳ ಮೆರವಣಿಗೆ” ಎಂಬ ಹಾಡಿನ ಲಿರಿಕಲ್ ವಿಡಿಯೋ ಇತ್ತೀಚೆಗೆ ಬಿಡುಗಡೆಯಾಗಿದ್ದು ಗಮನ ಸೆಳೆದಿದೆ

ಅನಿರುದ್ಧ್ ಶಾಸ್ತ್ರಿ ಬರೆದಿರುವ, ಗುಮ್ಮಿನೆನಿ ವಿಜಯ್ ಸಂಗೀತ ಸಂಯೋಜಿಸಿರುವ ಹಾಗೂ ಅನಿರುದ್ಧ್ ಶಾಸ್ತ್ರಿ ಮತ್ತು ಪೃಥ್ವಿ ಭಟ್ ಹಾಡಿರುವ ಹಾಡನ್ನು ವಾಣಿಜ್ಯ ಮಂಡಳಿ ಅಧ್ಯಕ್ಷ ನರಸಿಂಹಲು, ಉಪಾಧ್ಯಕ್ಷ ಶಿಲ್ಪ ಶ್ರೀನಿವಾಸ್ ಹಾಗೂ ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಹಾರೈಸಿದರು
ನಿರ್ದೇಶಕ ವಿಜಯ್ ಚಲಪತಿ ಮಾತನಾಡಿ ” ಪೊಗರು ” ಸೇರಿದಂತೆ ಹಲವು ಚಿತ್ರಗಳಿಗೆ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿದ್ದೇನೆ. ಸ್ವತಂತ್ರ ನಿರ್ದೇಶಕನಾಗಿ ಮೊದಲ ಚಿತ್ರ.ಇದೊಂದು ನೈಜ ಘಟನೆ ಆಧಾರಿತ ಚಿತ್ರ. ಈಗಾಗಲೇ ಚಿತ್ರೀಕರಣ ಪೂರ್ಣವಾಗಿ, ಪೋಸ್ಟ್ ಪ್ರೊಡಕ್ಷನ್ ನಲ್ಲಿ ಚಿತ್ರ ಬ್ಯುಸಿಯಾಗಿದೆ. ಸದ್ಯದಲ್ಲೇ ಪ್ರಥಮಪ್ರತಿ ಸಿದ್ದವಾಗಲಿದೆ. ಕನ್ನಡ ಹಾಗೂ ತೆಲುಗಿನಲ್ಲಿ ಚಿತ್ರ ಮೂಡಿಬಂದಿದೆ. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ಗುಮ್ಮಿನೆನಿ ವಿಜಯ್ ಎರಡು ಹಾಡುಗಳಿಗೆ ಹಾಗೂ ಮಿಹಿರಾಮ್ಸ್ ಎರಡು ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಹಿನ್ನೆಲೆ ಸಂಗೀತವನ್ನು ಮಿಹಿರಾಮ್ಸ್ ಅವರೆ ನೀಡಿದ್ದಾರೆ. ಕೆ.ವಿ.ಕಿರಣ್ ಛಾಯಾಗ್ರಹಣ, ಶ್ರೀನಿವಾಸ್ ಕಲಾಲ್ ಸಂಕಲನ, ಪ್ರಭು ನೃತ್ಯ ನಿರ್ದೇಶನ ಹಾಗೂ ನರಸಿಂಹ ಮಾಗಡಿ ಅವರ ಸಾಹಸ ನಿರ್ದೇಶನ ನಮ್ಮ ಚಿತ್ರಕ್ಕಿದೆ ಎಂದು ತಿಳಿಸಿದರು.

ನಾಯಕ ಹಾಗೂ ನಿರ್ಮಾಪಕ ಅನಿಲ್ ಕುಮಾರ್ ಮಾತನಾಡಿ ಮೂಲತಃ ಚಿಕ್ಕಬಳ್ಳಾಪುರದವನು ಮೊದಲಿನಿಂದಲೂ ನಟನೆಯಲ್ಲಿ ಆಸಕ್ತಿ. ಉಷಾ ಭಂಡಾರಿ ನಟನಾ ಶಾಲೆಯಲ್ಲಿ ಕಲಿತು ಬಂದಿದ್ದೇನೆ ನಟನಾಗುವ ಕಾಲ ಕೂಡಿ ಬಂದಿದೆ. ಗೆಳೆಯ ಅಕ್ಷಯ್ ಮೂಲಕ ನಿರ್ದೇಶಕ ವಿಜಯ್ ಚಲಪತಿ ಪರಿಚಯವಾದರು. ಚಿತ್ರದ ಕಥೆ ಹೇಳಿದರು. ಕಥೆ ಹಾಗೂ ಶೀರ್ಷಿಕೆ ಎರಡು ಇಷ್ಟವಾಯಿತು. ನಾನೇ ನಾಯಕನಾಗಿ ನಟಿಸುವುದರ ಜೊತೆಗೆ ನಿರ್ಮಾಣ ಕೂಡ ಮಾಡಿದ್ದೇನೆ. ಪೆÇಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಇಂದು ನಮ್ಮ ಚಿತ್ರದ ಮೊದಲ ಹಾಡು ಅನಾವರಣವಾಗಿದೆ. ಹಾಡು ಬಿಡುಗಡೆ ಮಾಡಿ ಹಾರೈಸಿದ ಗಣ್ಯರಿಗೆ ಧನ್ಯವಾದ ಎಂದು ತಿಳಿಸಿದರು.
ಚಿತ್ರದಲ್ಲಿ ನಟಿಸಿರುವ ಶ್ರೀಕಾಂತ್, ಪ್ರಿಯ ತರುಣ್, ಗಣೇಶ್ ರಾವ್ ಕೇಸರ್ಕರ್, ಛಾಯಾಗ್ರಾಹಕ ಕೆ.ವಿ.ಕಿರಣ್ ಮುಂತಾದವರು ಚಿತ್ರದ ಕುರಿತು ಮಾತನಾಡಿದರು.


