ಜೂನ್ 20 ರಂದು ಮಂತ್ರಾಲಯದ ರಾಯರ ಸನ್ನಿಧಿಯಲ್ಲೇ “ರಾಯರ ದರ್ಶನ” ಆಲ್ಬಂ ಸಾಂಗ್ ಬಿಡುಗಡೆ
ಕಲಿಯುಗದ ಕಾಮಧೇನು ಕಲ್ಪವೃಕ್ಷರೆಂದೆ ಖ್ಯಾತರಾದ ಮಂತ್ರಾಲಯದ ಗುರು ಶ್ರೀರಾಘವೇಂದ್ರಸ್ವಾಮಿಗಳ ಕುರಿತು ಈವರೆಗೂ ಸಾಕಷ್ಟು ಭಕ್ತಿಗೀತೆಗಳು ಹಾಗೂ ಆಲ್ಬಂ ಸಹ ಬಂದಿದೆ. ಆದರೆ ಈವರೆಗೂ ಯಾರು ಹೇಳದ ಹಾಗೂ ತೋರಿಸದ ರಾಯರ ಬಗ್ಗೆಗಿನ ಕೆಲವು ವಿಶೇಷ ವಿಷಯಗಳು ಹಾಗೂ ಮಂತ್ರಾಲಯದಲ್ಲಿ ರಾಯರಿಗೆ ವರ್ಷಾವಧಿ ನಡೆಯುವ ವಿಶೇಷ. ಅದುವೇ “ರಾಯರ ದರ್ಶನ” ಆಲ್ಭಂ ಬಿಡುಗಡೆಗೆ ಸಿದ್ದವಾಗಿದೆ.

ಸುಗುಣ ರಘು ನಿರ್ಮಾಣ ಮಾಡಿರುವ ಆಲ್ಬಂನ ಲೋಕಾರ್ಪಣೆ ಜೂನ್ 20 ರಂದು ಮಂತ್ರಾಲಯದಲ್ಲಿ ಅದ್ದೂರಿಯಾಗಿ ನೆರವೇರಲಿದೆ. ಮಂತ್ರಾಲಯದ ಪ್ರಸ್ತುತ ಪೀಠಾಧಿಪತಿಗಳಾದ ಶ್ರೀಸುಬುಧೇಂದ್ರ ತೀರ್ಥರ ದಿವ್ಯ ಸಾನಿಧ್ಯದಲ್ಲಿ ಹಾಗೂ ದೇಶದ ವಿವಿಧ ವಿಭಾಗದ ಗಣ್ಯರ ಉಪಸ್ಥಿತಿಯಲ್ಲಿ ಈ ಸಮಾರಂಭ ನಡೆಯಲಿದೆ
“ರಾಯರ ದರ್ಶನ” ಆಲ್ಬಂ ನ ಟೀಸರ್ ಅನ್ನು ಹಿರಿಯ ನಟಿ ತಾರಾ ಅನುರಾಧ ಅನಾವರಣ ಮಾಡಿದರು. ಹಿರಿಯ ಪತ್ರಕರ್ತ ಗಣೇಶ್ ಕಾಸರಗೋಡು, ಮಹೇಶ್ ಗೌಡ, ಮಂತ್ರಾಲಯ ಮಠದ ಶ್ರೀನಿಧಿ ಕರಣಂ, ಶ್ರೀಶ ಜೋಯಿಸ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಆಲ್ಬಂ ಸಾಂಗ್ ಗೆ ಸಂಗೀತ ಸಂಯೋಜಿಸಿರುವ ಅಜನೀಶ್ ಲೋಕನಾಥ್, ಸಿ.ಆರ್.ಬಾಬಿ, ಹಾಡು ಬರೆದಿರುವ ನಾಗಾರ್ಜುನ ಶರ್ಮ ಹಾಗೂ ಗಾಯಕ ಅಬ್ಬಿ ವಿ ಈ ವೇಳೆ ಉಪಸ್ಥಿತರಿದ್ದರು
ರಘು ಭಟ್ ಮಾತನಾಡಿ “ರಾಯರ ದರ್ಶನ” ಆಲ್ಬಂ ಸಾಂಗ್ ಅಂದುಕೊಂಡ ಹಾಗೆ ಮೂಡಿಬರಲು ಶ್ರೀರಾಘವೇಂದ್ರಸ್ವಾಮಿಗಳ ಹಾಗೂ ಶ್ರೀಸುಬಧೇಂದ್ರ ತೀರ್ಥರ ಪರಮಾನುಗ್ರಹವೆ ಕಾರಣ. ಈ ಆಲ್ಬಂ ಸಾಂಗ್ ನಿರ್ಮಾಣವಾಗಲು ಒಂದು ವರ್ಷ ಸಮಯ ಬೇಕಾಯಿತು. ಕಾರಣ, ಇದರಲ್ಲಿ ಮಂತ್ರಾಲಯದಲ್ಲಿ ನಡೆಯುವ ಪೂಜೆ ಹಾಗೂ ವೈಭವೋತ್ಸವ, ಆರಾಧನೆ ಮುಂತಾದ ಉತ್ಸವಗಳ ವಿವರಣೆ ಇದೆ. ಅಜನೀಶ್ ಲೋಕನಾಥ್ ಹಾಗೂ ಸಿ ಆರ್ ಬಾಬಿ ಅವರ ಅದ್ಭುತ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿರುವ ಈ ಆಲ್ಬಂ ಸಾಂಗ್ ಅನ್ನು “ಕಾಂತಾರ” ಸಿನಿಮಾದ ಬ್ರಹ್ಮಕಳಶ ಹಾಡಿನ ಖ್ಯಾತಿಯ ಅಬ್ಬಿ ವಿ ಹಾಡಿದ್ದಾರೆ. ನಾಗಾರ್ಜುನ ಶರ್ಮ ಬರೆದಿದ್ದಾರೆ. ಜೂನ್ 20 ರಂದು ಮಂತ್ರಾಲಯದ ರಾಯರ ಸನ್ನಿಧಿಯಲ್ಲೇ “ರಾಯರ ದರ್ಶನ” ಆಲ್ಬಂ ಸಾಂಗ್ ಅದ್ದೂರಿಯಾಗಿ ಅನಾವರಣವಾಗಲಿದೆ ಎಂದರು
ಅಜನೀಶ್ ಲೋಕನಾಥ್ ಅವರ ಸಂಗೀತ ಸಂಜೆ ಕೂಡ ಅಂದು ಇರುತ್ತದೆ. ಮೂರು ರಾಜ್ಯಗಳ ಉಪ ಮುಖ್ಯಮಂತ್ರಿಗಳನ್ನು ಸಮಾರಂಭಕ್ಕೆ ಆಹ್ವಾನಿಸುವ ಪ್ರಯತ್ನ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು

ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಮಾತನಾಡಿ ತಮ್ಮ ಜೀವನದಲ್ಲಿ ಆದ ರಾಯರ ಅನುಗ್ರಹವನ್ನು ಮಾತುಗಳ ಮೂಲಕ ಹಂಚಿಕೊಂಡರು. ನಾನು ಹಾಗೂ ಬಾಬಿ ಅವರು ರಾಯರ ಮೇಲಿನ ಅಪಾರ ಭಕ್ತಿಯಿಂದ ಈ ಆಲ್ಬಂ ಗೆ ಸಂಗೀತ ಸಂಯೋಜನೆ ಮಾಡಿದ್ದೇವೆ. ಇದು ನಮ್ಮ ಪುಣ್ಯ. “ಕಾಂತಾರ” ದ “ಬ್ರಹ್ಮಕಳಶ”ದ ಹಾಡನ್ನು ಹಾಡಿರುವ ಕೆನಡಾ ಮೂಲದ ಅಬ್ಬಿ ವಿ ಅವರು ರಾಯರ ಮೇಲಿನ ಈ ಹಾಡನ್ನು ಬಹಳ ಸುಶ್ರಾವ್ಯವಾಗಿ ಹಾಡಿದ್ದಾರೆ. ಅಷ್ಟೇ ಚೆನ್ನಾಗಿ ನಾಗಾರ್ಜುನ ಶರ್ಮ ಬರೆದಿದ್ದಾರೆ ಎಂದರು.’
ನಟಿ ತಾರಾ ಅನುರಾಧ, ಹಿರಿಯ ಪತ್ರಕರ್ತರಾದ ಗಣೇಶ್ ಕಾಸರಗೋಡು, ” ಕ್ಯೂ.ಪಿ.ಎಲ್” ನ ಮುಖ್ಯಸ್ಥರಾದ ಮಹೇಶ್ ಗೌಡ ಮಾತನಾಡಿ, ರಘು ಭಟ್ ದಂಪತಿಗಳ ಎರಡು ಪ್ರಯತ್ನಕ್ಕೆ ಯಶಸ್ಸನ್ನು ಕೋರಿದರು. ಗಾಯಕ ಅಬ್ಬಿ ವಿ “ರಾಯರ ದರ್ಶನ” ಆಲ್ಬಂನ ಕೆಲವು ಸಾಲುಗಳನ್ನು ಹಾಡಿದರು.
ಗೀತರಚನೆಕಾರ ನಾಗಾರ್ಜುನ ಶರ್ಮ ಹಾಡು ಹುಟ್ಟಿದ ಸಮಯದ ಕುರಿತು ವಿವರಣೆ ನೀಡಿದರು. ಮಂತ್ರಾಲಯದಿಂದ ಬಂದಿದ್ದ ಶ್ರೀನಿಧಿ ಕರಣಂ ಹಾಗೂ ಶ್ರೀಶ ಜೋಯಿಸ್ ಅವರು ಜೂನ್ 20 ರ “ರಾಯರ ದರ್ಶನ” ಆಲ್ಬಂ ಬಿಡುಗಡೆ ಸಮಾರಂಭಕ್ಕೆ ಮಂತ್ರಾಲಯಕ್ಕೆ ಎಲ್ಲರನ್ನು ಆಹ್ವಾನಿಸಿದರು.


