ಧಾರವಾಡ ಹಬ್ಬದಲ್ಲಿ “ವರಾಹಚಕ್ರಂ” ದೇಶ ಭಕ್ತಿಗೀತೆ ಬಿಡುಗಡೆ

ಹಿರಿಯನಟಿ ಪ್ರೇಮ ಅವರು ಅದ್ಭುತ ಕಲಾವಿದೆ ಎನ್ನುವುದು ಎಲ್ಲರಿಗೂ ಗೊತ್ತು. ಆದರೆ ಅವರಲ್ಲೊಬ್ಬ ಗಾಯಕಿಯೂ ಇರುವುದು ಯಾರಿಗೂ ಗೊತ್ತಿರಲಿಲ್ಲ. ಅದನ್ನು ನಿರ್ದೇಶಕ ಮಂಜು ಮಸ್ಕಲ್ ಮಟ್ಟಿ ಪತ್ತೆಹಚ್ಚಿ, ಅವರ ಕೈಲಿ ದೇಶಭಕ್ತಿಗೀತೆಯೊಂದನ್ನು ಹಾಡಿಸಿದ್ದಾರೆ. “ವರಾಹ ಚಕ್ರಂ” ಸಿನಿಮಾದಲ್ಲಿ ಪ್ರೇಮ ಅವರು ಹಾಡಿರುವ “ಕಂದಾ ನಿಂದೇ ಹಿಂದುಸ್ತಾನಾ” ಎಂಬ ದೇಶ ಭಕ್ತಿಗೀತೆಯ ಬಿಡುಗಡೆ ಧಾರವಾಡ ಹಬ್ಬ ಕಾರ್ಯಕ್ರಮದಲ್ಲಿ ನೆರವೇರಿತು.
ವೇದಿಕೆಯಲ್ಲಿ ಶ್ರೀ ಶ್ರೀ ಪರಮಪೂಜ್ಯ ಬಸವ ಸಮರ್ಥ ಸಿದ್ದೇಶ್ವರ ಮಹಾಸ್ವಾಮಿಗಳು, ಜ್ಞಾನಯೋಗಾಶ್ರಮ ಶಿರುಂಜೆ ಅವರು ಈ ಹಾಡನ್ನು ಬಿಡುಗಡೆ ಮಾಡಿದರು. ಮಂಜು ಮಸ್ಕಲ್ ಮಟ್ಟಿ ಅವರ ನಿರ್ದೇಶನದ ವರಾಹಚಕ್ರಂ ಚಿತ್ರದ ಪ್ರಮುಖ ಪಾತ್ರದಲ್ಲಿ ಪ್ರೇಮ ಅವರು ಕಾಣಿಸಿಕೊಂಡಿದ್ದಾರೆ. ವಾರಣಾಸಿಯಲ್ಲಿ ಚಿತ್ರೀಕರಿಸಲಾಗಿರುವ ಈ ಹಾಡು ಇಡೀ ಚಿತ್ರದ ಹೈಲೈಟ್ ಆಗಿದೆ. ವರಾಹಚಕ್ರಂ ಚಿತ್ರದಲ್ಲಿ ಸಾಯಿಕುಮಾರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಯುವನಟ ಅರ್ಜುನ್ ದೇವ ಚಿತ್ರದ ನಾಯಕನಾಗಿ ನಟಿಸಿದ್ದು, ರಾಣಾ, ಇಮ್ರಾನ್ ಷರೀಫ್, ಆರ್ಯನ್, ಪ್ರತೀಕ್ ಗೌಡ ಉಳಿದ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಮನ್ವಂತರಿ ಮೂವಿ ಮೇಕರ್ಸ್ ಅಡಿಯಲ್ಲಿ ಸ್ನೇಹಿತರೆಲ್ಲ ಸೇರಿ ಈ ಚಿತ್ರವನ್ನುನಿರ್ಮಿಸುತ್ತಿದ್ದಾರೆ. ಲಾವಣ್ಯ ಗ್ರೂಪ್, ನಾಗಭೂಷಣ್ ಎಂ.ರಾವ್, ಮಂಜುನಾಥ್ ಸಿ.ಗೌಡ್ರು, ಕೆ.ಎಸ್.ಜೈ ಸುರೇಶ್ ನಿರ್ಮಾಣದಲ್ಲಿ ಕೈಜೋಡಿಸಿದ್ದಾರೆ.

ಮಂಜುನಾಥ್ ಮಸ್ಕಲ್ ಮಟ್ಟಿ ಅವರೇ ಚಿತ್ರದ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಡಾ.ವಿ. ನಾಗೇಂದ್ರಪ್ರಸಾದ್ ಅವರು ಸಾಹಿತ್ಯ ರಚಿಸಿ, ಸಂಗೀತ ಸಂಯೋಜನೆಯ ಜೊತೆ ಪ್ರಮುಖ ಪಾತ್ರವನ್ನೂ ಸಹ ಮಾಡುತ್ತಿದ್ದಾರೆ.
ಚಿತ್ರಕ್ಕೆ ಶರತ್ಕುಮಾರ್ ಜಿ. ಅವರ ಛಾಯಾಗ್ರಹಣ, ಭಾರ್ಗವ ಅವರ ಸಂಕಲನವಿದ್ದು, ಬೆಂಗಳೂರು, ನೆಲ್ಲೂರು, ಪೊಲ್ಲಾಚ್ಚಿ, ಭಟ್ಕಳ, ಹಿರಿಯೂರು ಸೇರಿ ಹಲವಾರು ಲೊಕೇಶನ್ ಗಳಲ್ಲಿ ವರಾಹಚಕ್ರಂ ಚಿತ್ರೀಕರಣ ನಡೆದಿದೆ.