ದಕ್ಷಿಣ ಭಾರತದ ಅತೀ ದೊಡ್ಡ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಆರಂಭ

ಕನ್ನಡ ಚಿತ್ರರಂಗದಲ್ಲಿ ಇತ್ತೀಚಿನ ದಿನಗಳಲ್ಲಿ ಹಲವು ರೀತಿಯ ಕ್ರಿಕೆಟ್ ಪಂದ್ಯಾವಳಿಗಳು ನಡೆಯುತ್ತಿವೆ. ಈ ಸಾಲಿಗೆ ಹೊಸ ಸೇರ್ಪಡೆ ಸೌಥ್ ಭಾರತ್ ಪ್ರೀಮಿಯರ್ ಲೋಗ್ ಟೆನ್ನಿಸ್ ಬಾಲ್ ಪಂದ್ಯಾವಳಿ. ಹೆಸರೇ ಹೇಳುವಂತೆ ದಕ್ಷಿಣ ಭಾರತದ ಆರೂ ರಾಜ್ಯಗಳ ಕ್ರಿಕೆಟ್ ಆಟಗಾರರ ಟೂರ್ನಿ ಇದಾಗಿದ್ದು, ಸದ್ಯದಲ್ಲೇ ಪ್ರಾರಂಭವಾಗಲಿದೆ.

ನಟರಾದ ಶ್ರೀಮುರಳಿ, ಶರಣ್, ಮೇಘನಾ ಗಾಂವ್ಕರ್, ನಿರ್ದೇಶಕ ತರುಣ್ ಸುಧೀರ್, ಮಾಜಿ ಶಾಸಕ ರಾಜು ಗೌಡ ಮುಂತಾದವರು ಸಮಾರಂಭದಲ್ಲಿ ಹಾಜರಿದ್ದು, ಪಂದ್ಯಾವಳಿಯ ಲೋಗೋ ಅನಾವರಣ ಮಾಡಿದರು.
ನಟ ಶ್ರೀಮುರುಳಿ ಮಾತನಾಡಿ ನನಗೆ ಕ್ರಿಕೆಟ್ ಬಂದಿದ್ದರೆ, ಸಿಸಿಎಲ್ನಲ್ಲಿ ಆಡುತ್ತಿದ್ದೆ. ಪ್ರಾಕ್ಟೀಸ್ಗೆ ಕರೆಸಿಕೊಂಡು ಆಟ ನೋಡಿ, ತಂಡಕ್ಕೆ ಆಯ್ಕೆ ಮಾಡಲಿಲ್ಲ. ಹಾಗಿತ್ತು ನನ್ನ ಆಟ. ಟೆನ್ನಿಸ್ ಬಾಲ್ನಲ್ಲಿ ಕ್ರಿಕೆಟ್ ಆಡಲು ಇಷ್ಟ. ಒಂದು ಅವಕಾಶ ಕೊಡಿ. ಒಮ್ಮೆ ಬ್ಯಾಟಿಂಗ್, ಬೌಲಿಂಗ್ ಮಾಡುತ್ತೇನೆ’ ಎಂದರು.

ನಟ ಶರಣ್ ಮಾತನಾಡಿ, `ಭಾರತದಲ್ಲಿ ಕ್ರಿಕೆಟ್ ಗೊತ್ತಿಲ್ಲದಿರುವವರು ಸಿಗುವುದೇ ಇಲ್ಲ. ಅದರಲ್ಲೂ ದಕ್ಷಿಣ ಭಾರತದಲ್ಲಿ ದೊಡ್ಡ ಸಂಖ್ಯೆಯ ಆಟಗಾರರಿದ್ದಾರೆ. ನನಗೂ ಕ್ರಿಕೆಟ್ ಗೊತ್ತಿಲ್ಲ. ನಾನು ಬೆಳೆದ ವಾತಾವರಣ ಬೇರೆ. ಬ್ಯಾಟ್ ಹಿಡಿಯುವ ಪ್ರಸಂಗ ಬರಲಿಲ್ಲ. ಕ್ರಿಕೆಟ್ ಗೊತ್ತಿದ್ದರೆ, ಅನೇಕ ತಂಡಗಳಲ್ಲಿ ಭಾಗಿಯಾಗಬಹುದಿತ್ತು. ನನಗೆ ಕ್ರಿಕೆಟ್ ಗೊತ್ತಿಲ್ಲದಿದ್ದರೂ, ಕ್ರಿಕೆಟ್ ಪ್ರೇಮಿ. ಹಾಗಾಗಿ, ನನಗೆ ಈ ತರಹದ ವೇದಿಕೆಗಳು ಸಿಗುತ್ತಲೇ ಇರುತ್ತವೆ. ಆರೂ ರಾಜ್ಯಗಳ ಆಟಗಾರರಿದ್ದಾರೆ. ಅವರನ್ನು SಃPಐ ಒಗ್ಗೂಡಿಸುತ್ತಿದೆ. ಇಂಥದ್ದೊಂದು ವೇದಿಕೆಯನ್ನು ಆಯೋಜಿಸಿರುವ
ಯಾಸೀನ್ ಹಾಗೂ ತಂಡಕ್ಕೆ ಹಾಗೇ ಪ್ರಾಯೋಜಕರಿಗೆ ಅಭಿನಂದನೆಗಳು’ ಎಂದರು.

ನಿರ್ದೇಶಕ ತರುಣ್ ಸುಧೀರ್, ಹಲವು ಪ್ರತಿಭಾವಂತ ಆಟಗಾರರು ಇದ್ದಾರೆ. ಅವರನ್ನು ಗುರುತಿಸುವಂತಹ ಕೆಲಸವನ್ನು ಮಾಡುತ್ತಿದೆ. ಪ್ರತಿಭಾವಂತ ಆಟಗಾರರಿಗೆ ಒಂದು ಅದ್ಭುತವಾದ ವೇದಿಕೆಯಾಗಿದೆ. ಭಾರತದಲ್ಲಿ ಟೆನ್ನಿಸ್ ಬಾಲ್ನಲ್ಲಿ ಟೆನ್ನಿಸ್ ಎಷ್ಟು ಜನ ಆಡುತ್ತಾರೋ ಗೊತ್ತಿಲ್ಲ, ಕ್ರಿಕೆಟ್ ಆಡುವವರೇ ಹೆಚ್ಚು. ಲೆದರ್ ಬಾಲ್ ಆಡುವವರಾದರೂ ಕಡಿಮೆಯೇ. ಆದರೆ, ಟೆನ್ನಿಸ್ ಬಾಲ್ ಆಡದಿರುವವರೇ ಇಲ್ಲ. ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಆಡಿರುತ್ತಾರೆ. ರಸ್ತೆಯಿಂದ ಶುರುವಾಗಿ, ಇದೀಗ ಕ್ರೀಡಾಂಗಣದವರೆಗೂ ಬಂದಿದೆ. ಇವತ್ತು ಲೆದರ್ ಬಾಲ್ ಟೂರ್ನಿಗೆ ಎಷ್ಟು ಗೌರವವಿದೆಯೋ, ಟೆನ್ನಿಸ್ ಬಾಲ್ ಪಂದ್ಯಾವಳಿಗೂ ಅಷ್ಟೇ ಗೌರವವಿದೆ. ಅಂಥ ಪ್ರಾಮುಖ್ಯತೆ ಇರುವ ಟೆನ್ನಿಸ್ ಬಾಲ್ ಪಂದ್ಯಾವಳಿಯನ್ನು ಇದೀಗ ದಕ್ಷಿಣ ಭಾರತದಲ್ಲಿ ಶುರು ಮಾಡಲಾಗುತ್ತಿದೆ. ಎಲ್ಲರಿಗೂ ಒಳ್ಳೆಯದಾಗಲೀ’ ಎಂದರು.