“ಕೊರಗಜ್ಜ” ಚಿತ್ರದ “ಗುಳಿಗ. ಗುಳಿಗ .”ಹಾಡಿಗೆ ಜನ ಮನ್ನಣೆ
ಬಹು ನಿರೀಕ್ಷೆಯ “ಕೊರಗಜ್ಜ” ಚಿತ್ರದಲ್ಲಿ ಮೂಡಿ ಬರುವ ಕರಾವಳಿಯ ಉಗ್ರ ಭಯಂಕರ, ರಕ್ತ ದಾಹದ ದೈವ “ಗುಳಿಗ” ನ ಕುರಿತಾಗಿ ನಿರ್ದೇಶಕ,ಸುಧೀರ್ ಅತ್ತಾವರ್ ಬರೆದಿರುವ “ಗುಳಿಗ.,.ಗುಳಿಗ…ಗುಳಿಗ…ಗುಳಿಗ…ಗುಳಿಗ…ಗುಳಿಗ…ಘೋರ ಗುಳಿಗಾ…!” ಎನ್ನುವ ರಾಪ್ ಮಿಶ್ರಿತ ಹಾಡು ಜನ ಮನ್ನಣೆ ಪಡೆದಿದೆ.

ದಕ್ಷಿಣ ಭಾರತದ ಖ್ಯಾತ ಸಂಗೀತಗಾರ ಗೋಪಿಸುಂದರ್ ರ ಸಂಗೀತಕ್ಕೆ ಖ್ಯಾತ ಬಾಲಿವುಡ್ ಗಾಯಕ ಜಾವೆದ್ ಆಲಿ ಜೊತೆ ಸುಧೀರ್ ಅತ್ತಾವರ್ ಹಾಡಿದ್ದಾರೆ. ಕೆಲವು ಭಾಗಗಳಲ್ಲಿ ಗೋಪಿ ಸುಂದರ್ ಕೂಡಾ ಧ್ವನಿ ನೀಡಿದ್ದಾರೆ.
ನೆಲವುಲ್ಲ ಸಂಕೆಯ 24 ನೆಯ ಮಗನಾಗಿ ಹುಟ್ಟಿದ “ಗುಳಿಗ” ಹುಟ್ಟುವಾಗಲೇ ಭಯಂಕರ ಹಸಿವಿನಿಂದಾಗಿ ಸಾವಿರ ಕೋಳಿ, ಸಾವಿರ ಕುದುರೆಯ ರಕ್ತ ಹೀರಿದರೂ ಹಸಿವು ನಿಲ್ಲದಿದ್ದಾಗ, ಶ್ರೀಮನ್ನಾರಾಯಣ ದೇವರ ಕಿರುಬೆರಳಿನಿಂದ ಅವರ ರಕ್ತವನ್ನೆಲ್ಲ ಹೀರಿದ…ಎನ್ನುವ ಜನಪದ ಕಥೆ ಗುಳಿಗನ ಹುಟ್ಟಿನ ಕುರಿತಾಗಿ ಇದೆ.

ಇಂತಹ ಘೋರ ಗುಳಿಗನ ಕೋಲ ಸೇವೆಯೂ ಘನ ಘೋರ ರೂಪದಲ್ಲಿ ತುಳುನಾಡಿನಾದ್ಯಂದ ಆಚರಿಸಲ್ಪಡುತ್ತಿದೆ. ಈ ಘೋರ ಗುಳಿಗನ ರಕ್ತ ಹೀರುವ ರುದ್ರ ನರ್ತನವನ್ನು ನೋಡಲಾಗದೆ ಭಯಭೀತಿಯಿಂದ ಅನೇಕರು ಕಣ್ಣು ಮುಚ್ಚಿಕೊಳ್ಳುವುದೂ ಇದೆ. ರಕ್ತ ದಾಹದಿಂದ ಎಲ್ಲೆಂದೆಲ್ಲಿ ಓಡುವ ಗುಳಿಗನನ್ನು ಹಿಡಿಯಲು ಹರಸಾಹಸ ಮಾಡುವ ದ್ರಶ್ಯವಂತೂ ಮೈ ಝುಂ ಎನಿಸುತ್ತದೆ.
ರುದ್ರಭಯಂಕರ ಗುಳಿಗದೈವ ಪಂಜುರ್ಲಿ ಜೊತೆ ಸೇರಿ “ಕೊರಗಜ್ಜ” ನನ್ನು ಭೇಟಿಯಾಗುವ ಸನ್ನಿವೇಶ ಚಿತ್ರದಲ್ಲಿ ಮೂಡಿಬರಲಿದೆ.
ಗುಳಿಗ ದೈವದ ರಣ ಭಯಂಕರ ನರ್ತನವನ್ನು ಹಾಲಿವುಡ್-ಬಾಲಿವುಡ್ ನ ಡಾನ್ಸರ್-ಕೊರಿಯೋಗ್ರಾಫರ್ ಸಂದೀಪ್ ಸೋಪರ್ಕರ್ ನಿರ್ವಹಿಸಿದ್ದು, ಗುಳಿಗ ದೈವದ ರುದ್ರನರ್ತನದ ನೃತ್ಯ ನಿರ್ದೇಶವನ್ನು ಸ್ವತಃ ಸೋಪರ್ಕರ್ ಮಾಡಿರುತ್ತಾರೆ.ಪಂಜುರ್ಲಿಯಾಗಿ ಸರ್ದಾರ್ ಸತ್ಯ ಅಭಿನಯಿಸಿದ್ದಾರೆ.

ಈ ಸನ್ನಿವೇಶವನ್ನು ಮಂಗಳೂರಿನ ಸೋಮೇಶ್ವರ ಕಡಲಕಿನಾರೆಯಲ್ಲಿ ನೂರು ಫೀಟ್ ನ ಎರಡು ಕ್ರೇನ್ ಗಳ ಸಹಾಯದಿಂದ 5 ಕ್ಯಾಮರಗಳ ಮುಖಾಂತರ ಚಿತ್ರೀಕರಿಸುವ ವೇಳೆ ರೌಡಿಗಳ ಗ್ಯಾಂಗ್ ಎರಡು ದಿನ ಧಾಳಿಮಾಡಿ, ಚಿತ್ರತಂಡಕ್ಕೆ ಅಪಾರವಾದ ನಷ್ಟ ಉಂಟುಮಾಡಿತ್ತು.
ಎರಡನೆಯ ದಿನ ನಿರ್ಮಾಪಕ ತ್ರಿವಿಕ್ರಮ್ ಸುಮಾರು 25 ಜನ ಬೌನ್ಸರ್ ಗಳನ್ನು ನೇಮಿಸಿದ್ದರು. ಆದರೆ ಚಿತ್ರೀಕರಣ ಆರಂಭವಾದ ಕೆಲವೇ ನಿಮಿಷಗಳಲ್ಲಿ ಬೆದರಿಕೆಯ “ಕರೆಯಿಂದ ಬೌನ್ಸರ್ ಗಳೇ ಓಡಿಹೋಗಿದ ಘಟನೆ ನಡೆದಿದೆ.ಪೋಲೀಸರ ಸರ್ಪಗಾವಲಿನಲ್ಲಿ ಮೂರನೇ ಭಾರಿ ಮತ್ತೆ ಅದೇ ಸೋಮೇಶ್ವರ ಕಡಲ ಕಿನಾರೆಯಲ್ಲಿ ಗುಳಿಗ ಹಾಡಿನ ಚಿತ್ರೀಕರಣ ಮುಗಿಸುವಲ್ಲಿ ಯಶಸ್ವಿಯಾಗಿದ್ದಾರೆ.

