ಸುಷ್ಮಾ ವೀರ್ ಸಾರಥ್ಯದಲ್ಲಿ “ವೀರ ರಂಗ ಸಂಭ್ರಮ
ನಟಿ, ನಿರ್ಮಾಪಕಿ, ನಿರ್ದೇಶಕಿ ಸುಷ್ಮಾ ವೀರ್ ಈಗ ರಂಗಗೀತೆ ಪರಂಪರೆಗೆ ಹೊಸಲೇಪನ ಕೊಡಲು ಮುಂದಾಗಿದ್ದಾರೆ. ಇತ್ತೀಚೆಗೆ ತಮ್ಮ ವೀರ ಕಥಾಕರ ಎಂಬ ಸಂಸ್ಥೆ ಮೂಲಕ “ವೀರ ರಂಗ ಸಂಭ್ರಮ ಕೆಎ ಏ5” ವಿನೂತನ ಕಾರ್ಯಕ್ರಮ ಆಯೋಜಿಸಿದ್ದರು

ಸಮಾರಂಭದಲ್ಲಿ ಡಾಚಂದ್ರಶೇಖರ್ ಕಂಬಾರರ “ಮಾಯಾದ ಮನದ ಭಾರ” ಹಾಡು ಬಿಡುಗಡೆ ಮಾಡಲಾಯಿತು. ವರನಟ ಡಾ.ರಾಜಕುಮಾರ್ ಪುತ್ರಿ ಲಕ್ಷ್ಮೀ ಗೋವಿಂದರಾಜು ಹಾಗೂ ಅಳಿಯ ಎಸ್ ಎ ಗೋವಿಂದರಾಜು ಈ ಹಾಡನ್ನು ಅನಾವರಣ ಮಾಡಿದರು.
ನಿರ್ದೇಶಕ ಪಿ.ಶೇಷಾದ್ರಿ, ನಟ ಸುಚೇಂದ್ರ ಪ್ರಸಾದ್, ಡಾ.ಸಿ.ಸೋಮಶೇಖರ್, ನಟ ಸುಂದರರಾಜ್, ಕೊಂಡಜ್ಜಿ ಮೋಹನ್, ಪ್ರಕಾಶ್ ರಾಘವಾಚಾರ್ ಹಾಗೂ ಡಾ.ಚಂದ್ರಶೇಖರ್ ಕಂಬಾರ ಅವರ ಪುತ್ರಿ ಜಯಶ್ರೀ ಸೇರಿದಂತೆ ಅನೇಕ ಗಣ್ಯರು ಹಾಗೂ ಗುಬ್ಬಿ ವೀರಣ್ಣ ಅವರ ಕುಟುಂಬದ ಅನೇಕ ಸದಸ್ಯರು ಈ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ದಕ್ಷಿಣ ಭಾರತದಲ್ಲೇ ಮೊದಲ ಬಾರಿಗೆ ತಂತ್ರಜ್ಞಾನ ಬಳಸಿಕೊಂಡಿರುವ ರಂಗಗೀತೆ ಇದ್ದಾಗಿದೆ. ಹಾಡಿನ ಲೋಕಾರ್ಪಣೆಯ ನಂತರ ಅತಿಥಿಗಳು ಹಾಗೂ ಸುಷ್ಮಾ ವೀರ್ ಮಾತನಾಡಿದರು.

ಸುಷ್ಮಾ, ನಾವು ಎತ್ತಿ ಆಡಿಸಿದ ಮಗು. ನಮ್ಮ ಕುಟುಂಬಕ್ಕೂ ಅವರ ಕುಟುಂಬಕ್ಕೂ ನಾಲ್ಕು ತಲೆಮಾರುಗಳ ನಂಟಿದೆ. ಸುಷ್ಮಾ ಈಗ ಹೊಸಹೆಜ್ಜೆ ಇಟ್ಟಿದ್ದಾರೆ. ಅವರಿಗೆ ಶುಭವಾಗಲಿ ಎಂದು ಡಾ.ರಾಜಕುಮಾರ್ ಪುತ್ರಿ ಲಕ್ಷ್ಮೀ ಗೋವಿಂದರಾಜು ಹಾರೈಸಿದರು.
ನಿರ್ದೇಶಕ ಪಿ.ಶೇಷಾದ್ರಿ ಮಾತನಾಡಿ ಸುಷ್ಮಾ ಅವರಿಗೆ ಹೇಗೆ ಬಂತು ಈ ಅಭಿನಯ. ತಾತಾ ಅವರಿಂದ ತಾಯಿ ಅವರಿಂದ ಅಲ್ಲ. ಅವರ ಪರಿಶ್ರಮದಿಂದ ಈ ಅಭಿನಯ ಬಂದಿದೆ. ಧ್ವನಿ ಮಾತ್ರ ಅವರ ಕುಟುಂಬದಿಂದ ಬಂದಿರಬಹುದು. ಸುಷ್ಮಾ ಸಕಲಕಲಾವಲ್ಲಭೆ. ಈಗ ವೀರ ರಂಗ ಸಂಭ್ರಮದ ಮೂಲಕ ಮತ್ತೊಂದು ಹೊಸ ಹೆಜ್ಜೆ ಇಟ್ಟಿದ್ದಾರೆ ಅವರಿಗೆ ಒಳ್ಳೆಯದಾಗಲಿ ಎಂದರು
ನಟ ಸುಚೇಂದ್ರ ಪ್ರಸಾದ್ ಮಾತನಾಡಿ ಸುಷ್ಮಾ ಅವರನ್ನು ನಾನು ಅಮ್ಮು ಅಂತಲೇ ಕರೆಯುವುದು. ನಾವೆಲ್ಲಾ ಮಾಡಬೇಕಾದ ಕೆಲಸವನ್ನು ಸುಷ್ಮಾ ಮಾಡಿ ನಮ್ಮಗೆಲ್ಲಾ ಮಾದರಿಯಾಗಿದ್ದಾರೆ. ಕಾಲಗರ್ಭದಲ್ಲಿ ಕಳೆದು ಹೋಗುತ್ತಿದ್ದ ಈ ಹಾಡುಗಳನ್ನು ಸ್ಮೃತಿಗರ್ಭದಲ್ಲಿರುವಂತೆ ಮಾಡಿದ್ದಾರೆ ಎಂದು ತಿಳಿಸಿದರು.
ಡಾ.ಸಿ.ಸೋಮಶೇಖರ್ ಮಾತನಾಡಿ ಸುಷ್ಮಾ ಅವರ ಧ್ವನಿ ಕೇಳುತ್ತಿದ್ದರೆ, ಉಷಾ ಉತ್ತಪ್ಪ ಅವರ ಧ್ವನಿ ಕೇಳಿದ ಹಾಗೆ ಆಗುತ್ತದೆ. ಅವರ ಕಂಠದಿಂದ ಮತ್ತಷ್ಟು ಗೀತೆಗಳು ಬರಲಿ ಎಂದು ಅವರು ಹೇಳಿದರು.

ನಟ ಸುಂದರರಾಜ್ ಮಾತನಾಡಿ ಸುಷ್ಮಾ ನನ್ನ ಮಗಳು ಇದ್ದ ಹಾಗೆ. ಬಾಲ್ಯದಿಂದಲೂ ನೋಡಿದ ಮಗು. ಅವರ ಈ ಬೆಳವಣಿಗೆ ನನಗೆ ಸಂತೋಷ ತಂದಿದೆ ಎಂದರು

