ಮಕ್ಕಳನ್ನು ಹೀರೋ ಮಾಡಲು ಹೋರಾಡು ಪ್ರತಿಯೊಬ್ಬ ಅಪ್ಪನ ಕತೆ’ ‘ನಂದಗೋಕುಲ’ ಜೂನ್ 4 ರಿಂದ ಶುರು
ಕಲರ್ಸ್ ಕನ್ನಡ, ಸದಾಪ್ರೇಕ್ಷಕರ ಹೃದಯ ಮುಟ್ಟುವ ಮನಮಿಡಿಯುವ ಕತೆಗಳ ಮೂಲಕ ಜನಪ್ರಿಯವಾಗಿದೆ. ಇದೀಗ ‘ನಂದಗೋಕುಲ’ ಎಂಬ ವಿನೂತನ ಧಾರಾವಾಹಿ ಪ್ರೇಕ್ಷಕರ ಮುಂದೆ ಬರುತ್ತಿದೆ. ‘ಮಕ್ಕಳನ್ನು ಹೀರೋ ಮಾಡೋಕೆ ಹೋರಾಡುವ ಪ್ರತಿಯೊಬ್ಬ ಅಪ್ಪನ ಕತೆ ಹೇಳುವ ಬಹುನಿರೀಕ್ಷಿತ ಧಾರಾವಾಹಿ ‘ನಂದಗೋಕುಲ’ ಜೂನ್ 4ರಿಂದ ರಾತ್ರಿ 9ಕ್ಕೆ ಪ್ರಸಾರಗೊಳ್ಳಲಿದೆ.

ನಂದಕುಮಾರ್ಒಬ್ಬ ಅನಾಥ. ಕಟ್ಟುನಿಟ್ಟಾದ ನಡವಳಿಕೆಯ ಆತ್ಮವಿಶ್ವಾಸವೇ ತುಂಬಿದ ಛಲಗಾರ. 25 ವರ್ಷಗಳ ಹಿಂದೆ ಸೂರ್ಯಕಾಂತ್ – ಚಂದ್ರಕಾಂತ್ ಸಹೋದರರ ದಿನಸಿ ಅಂಗಡಿಯಲ್ಲಿ ಕೆಲಸ ಮಾಡುತ್ತಿರುತ್ತಾನೆ. ಸಹೋದರರ ಏಕೈಕ ತಂಗಿ ಗಿರಿಜಾಳನ್ನು ಪ್ರೀತಿಸಿ ಅವರ ಇಷ್ಟಕ್ಕೆ ವಿರುದ್ಧವಾಗಿ ಮದುವೆಯಾಗುತ್ತಾನೆ. ಸಹೋದರರಿಗೆ ಅಂತಸ್ತಿನವನಲ್ಲ ಅನ್ನಿಸಿ ಅವರಿಬ್ಬರನ್ನು ಹೊರ ಹಾಕುತ್ತಾರೆ. ನಂದಕುಮಾರ್ ಅಂತಸ್ತಿಗೆ ತಕ್ಕಂತೆ ಬೆಳೆಯುವ ಹಟದಿಂದ ‘ಗಿರಿಜಾ ಸ್ಟೋರ್ಸ್’ ಎಂಬ ದಿನಸಿ ಅಂಗಡಿ ತೆರೆದು ಯಶಸ್ವಿಯಾಗುತ್ತಾನೆ. ಸಹೋದರರರಿಗೆ ಸವಾಲಾಗುವಂತೆ ಅವರ ಮನೆ ಎದುರೇ ‘ನಂದ ಗೋಕುಲ’ ಕಟ್ಟುತ್ತಾನೆ. ಕೊನೆ ಮೊದಲೇ ಇಲ್ಲದ ಸಹೋದರರ ಹಗೆಗೆ ಇದು ಇನ್ನಷ್ಟು ದ್ವೇಷ, ಅಸೂಯೆ, ಆಕ್ರೋಶ ತುಂಬಿದೆ.
ಎರಡೂ ಕುಟುಂಬಗಳ ನಡುವೆ ನಿರಂತರ ಜಗಳ. ಗಿರಿಜಾಗೆ ಎದುರುಮನೆಯಲ್ಲೇ ತವರು ಮನೆಯವರಿದ್ದರೂ ಎದುರುಬದುರಾದರೂ ಪ್ರೀತಿಯ ಮಾತುಗಳಿಲ್ಲ. ಪ್ರತಿಕ್ಷಣವೂ ದುರುದುರು ನೋಟ, ದ್ವೇಷವನ್ನು ಎದುರಿಸಬೇಕಾದ ಪರಿಸ್ಥಿತಿ ಅವಳದು. ಒಂದು ಸಣ್ಣ ಗೆರೆ ದಾಟಿದರೆ ಗಂಡನ ಕಡೆಯಿಂದ, ಅಣ್ಣಂದಿರ ಕಡೆಯಿಂದ ಒಟ್ಟಿನಲ್ಲಿ ಎರಡೂ ಕಡೆಯಿಂದ ಯುದ್ಧ, ದಾಳಿ

ನಂದಕುಮಾರ್ ಮತ್ತು ಗಿರಿಜಾರ ಮಕ್ಕಳಾದ ಧನ್ಯಾ, ಮಾಧವ, ಕೇಶವ, ವಲ್ಲಭ ಮತ್ತು ರಕ್ಷಾ ತಂದೆಯ ಕಟ್ಟುನಿಟ್ಟಾದ ನಿರೀಕ್ಷೆಗಳ ನಡುವೆ ಬೆಳೆದವರು. ಪ್ರೀತಿಸಿ ಮದುವೆ ಆಗಿದ್ದರಿಂದ ತನಗೂ ತನ್ನ ಹೆಂಡತಿಗೂ ಕುಟುಂಬವೇ ಇಲ್ಲದಂತಾಯ್ತು. ತಮ್ಮಂತೆ ಮಕ್ಕಳಿಗೆ ಕಷ್ಟದ ಸ್ಥಿತಿ ಬರಕೂಡದು. ಅವರು ಕೂಡು ಕುಟುಂಬದಲ್ಲಿ ಸುಖವಾಗಿ ಇರಬೇಕು ಎಂಬ ಆಸೆಯಿಂದ ‘ನೀವ್ಯಾರೂ ಪ್ರೀತಿಸಿ ಮದ್ವೆ ಆಗೊಲ್ಲ ಅಂತ ನನಗೆ ಮಾತು ಕೊಡಿ! ಎಂದು ಮಕ್ಕಳಿಂದ ಭಾಷೆ ತೆಗೆದುಕೊಂಡಿರುತ್ತಾನೆ ನಂದಕುಮಾರ್.
ಅಪ್ಪನಿಗೆ ಕೊಟ್ಟ ಭಾಷೆಯಂತೆ ನಡೆದುಕೊಳ್ಳುವುದು ಅಷ್ಟು ಸುಲಭವೇ ತನ್ನ ಕಟ್ಟುಪಾಡುಗಳಿಂದ ತನ್ನ ಮನೆಮಕ್ಕಳನ್ನು ಕಟ್ಟಿ ಹಾಕುತ್ತಿರುವ ತಂದೆಯ ಮಾತನ್ನು ಮುಂದಿನ ತಲೆಮಾರು ಹೇಗೆ ಸ್ವೀಕರಿಸುತ್ತದೆ ‘ನಂದ ಗೋಕುಲ’ದಂಥ ಕುಟುಂಬ ತಮ್ಮದಿರಬೇಕು, ಎಲ್ಲರೂ ಜೊತೆಯಾಗಿ ಸಂತೋಷದಿಂದ ಬಾಳಿ ಬದುಕಬೇಕು ಎಂಬ ಕನಸು ಕಾಣುತ್ತಿರುವ ನಂದಕುಮಾರ್ ಕೂಡು ಕುಟುಂಬದ ಮೇಲೆ ಯಾರ ದೃಷ್ಟಿ ತಾಗುತ್ತದೆ? ತಲೆಮಾರುಗಳ ನಡುವಿನ ತಲ್ಲಣಗಳನ್ನು ಹೇಳುವ ಕುಟುಂಬದ ಪ್ರತಿಯೊಬ್ಬರೂ ಮೆಚ್ಚುವ ಕತೆಯುಳ್ಳ ಧಾರಾವಾಹಿ ‘ನಂದ ಗೋಕಲ’

‘ಬಣ್ಣ ಟಾಕೀಸ್’ ನಿರ್ಮಿಸುತ್ತಿರುವ ‘ನಂದ ಗೋಕುಲ’ ಧಾರಾವಾಹಿಯ ತಾರಾಗಣದಲ್ಲಿ ಅರವಿಂದ್ ರಾವ್, ಅಮೃತಾ ನಾಯ್ಡು, ರವಿ ಚೇತನ್, ರಘು ಮಂಡ್ಯ, ಅಭಿಷೇಕ್ ದಾಸ್, ಯಶವಂತ್, ವಿಜಯ್ ಚಂದ್ರ, ಊರ್ಜಿತ ವಲ್ತಾಜೆ, ಅರ್ಚನಾ ಗಾಯಕ್ವಾಡ್, ನವ್ಯಾ, ಮೇಘಾ, ಕೃಷ್ಣಪ್ರಿಯ, ಶೈಲಜಾ ಮುಂತಾದವರು ಇದ್ದಾರೆ.

