“ಕಾವೇರಿ ತೀರದಲ್ಲಿ ಮುಂಗಾರಿದೆ “ಏಪ್ರಿಲ್ 25 ರಿಂದ ಚಿತ್ರೀಕರಣ
ಮನುಷ್ಯನ ಜೀವನ ಅನ್ನೋದು ಒಂದು ಸಮುದ್ರದ ತೀರದಂತೆ. ಅದು ಕೆಲವೊಮ್ಮೆ ಪ್ರಶಾಂತವಾಗಿ ಸಾಗುತ್ತಿದ್ದರೆ, ಮತ್ತೆ ಕೆಲವೊಮ್ಮೆ ಬೋರ್ಗೆರೆಯುವ ಅಲೆಗಳಿಂದ ಬದುಕನ್ನು ಎದುರಿಸಬೇಕಾಗುತ್ತದೆ. ಯಾವಾಗ ಪ್ರಶಾಂತವಾಗಿ ಸಾಗುತ್ತದೆ, ಯಾವಾಗ ತನ್ನ ದಿಕ್ಕನ್ನು ವಿರುದ್ಧವಾಗಿ ಬದಲಿಸಿಕೊಂಡುಬಿಡುತ್ತೆ ಅನ್ನೋದನ್ನು ಯಾರಿಂದಲೂ ಸಹ ಊಹಿಸಲು ಸಾಧ್ಯವಾಗುವುದಿಲ್ಲ ಎಂಬ ಎಳೆ ಇಟ್ಟುಕೊಂಡು ಕಾವೇರಿ ತೀರದಲ್ಲಿ ಮುಂಗಾರಿದೆ ಎಂಬ ಚಿತ್ರವನ್ನು ಆರ್. ಕೆ. ಗಾಂಧಿ ನಿರ್ದೇಶಿಸುತ್ತಿದ್ದಾರೆ.

ಈಗಾಗಲೇ ತೆಲುಗಿನ ರುದ್ರಾಕ್ಷ ಪುರಂ, ಪ್ರೇಮ ಭಿಕ್ಷ ಹಾಗು ಕನ್ನಡದಲ್ಲಿ ಬಿಡುಗಡೆಗೆ ಸಿದ್ದವಾಗಿರುವ “ಮುಗಿಲ ಮಲ್ಲಿಗೆ” ಚಿತ್ರಗಳನ್ನು ನಿರ್ದೇಶಿಸಿರುವ ಆರ್. ಕೆ. ಗಾಂಧಿ “ಕಾವೇರಿ ತೀರದಲ್ಲಿ” ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಆಕ್ಷನ್ ಕಟ್ ಹೇಳುತ್ತಿದ್ದಾರೆ.
ಬಾಗಲಕೋಟೆ ಜಿಲ್ಲೆಯ ತೇರದಾಳ ಮೂಲದ ಉದಯ್ ಹಾಗೂ ಕನ್ನಡದಲ್ಲಿ ಮಗಳೇ ,ಅಸುರರು, ಚಿತ್ರಗಳಲ್ಲಿ ನಟಿಸಿದ್ದ ಸುಪ್ರಿತಾ ರಾಜ್ ಈ ಚಿತ್ರದಲ್ಲಿ ನಾಯಕ, ನಾಯಕಿಯಾಗಿ ನಟಿಸುತ್ತಿದ್ದಾರೆ.ಸ್ನೇಹಾಲಯಂ ಕ್ರಿಯೇಷನ್ಸ್ ಲಾಂಛನದಲ್ಲಿ ಜಯರಾಮ್ ಸಿ.ಟಿ. ನವೀನ್ ಕುಮಾರ್ ಗೌಡ ಹಾಗೂ ಗೋಪಾಲ್ ಸ್ವಾಮಿ ಆವರುಗಳು ಈ ಚಿತ್ರಕ್ಕೆ ಬಂಡವಾಳವನ್ನು ಹೂಡುತ್ತಿದ್ದಾರೆ.

ಚಿತ್ರದ ಪ್ರಮುಖ ತಾರಾಗಣದಲ್ಲಿ ಉದಯ್, ಸುಪ್ರಿತಾ ರಾಜ್, ಮಮತ, ಆಂಜಿನಪ್ಪ, ಅನ್ನಪೂರ್ಣ, ಸಿದ್ದಯ್ಯ ಎಸ್. ಹೀರೇಮಠ್, ಶೋಭರಾಜ್, ಪುಷ್ಪಾಗೌಡ ಮುಂತಾದವರಿದ್ದಾರೆ.
ಗಂಧರ್ವ ರಾಯ್ ರಾವುತ್ ಸಂಗೀತ, ಮುರಳಿ ಅವರ ಛಾಯಾಗ್ರಹಣ, ವಿನಯ್ ಜಿ. ಆಲೂರು ಸಂಕಲನ, ಮೋಹನ್ ಕುಮಾರ್ ಪ್ರಸಾಧನ, ಮಲ್ಲಿಕಾರ್ಜುನ್ನಕಲಾ ನಿರ್ದೇಶನ ಈ ಚಿತ್ರಕ್ಕಿದ್ದು, ಏಪ್ರಿಲ್ 25 ರಿಂದ ಆರಂಭಿಸಿ ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ ಬಾಗಲಕೋಟೆ ಹಾಗೂ ಬಿಜಾಪುರ ಜಿಲ್ಲೆಯ ಸುತ್ತ ಮುತ್ತ ಚಿತ್ರದ ಚಿತ್ರೀಕರಣ ನಡೆಸಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.

