ಭಾಷಾ ಅಭಿಮಾನಕ್ಕೆ ನಯಾಪೈಸೆ ಪಡೆಯದೆ “ಜೈ” ಚಿತ್ರದಲ್ಲಿ ಸುನೀಲ್ ಶೆಟ್ಟಿ ನಟನೆ: ರೂಪೇಶ್ ಶೆಟ್ಟಿ
“ಗಿರ್ಗಿಟ್”, ಸರ್ಕಸ್ ಚಿತ್ರದ ಬಳಿಕ ನಟ ರೂಪೇಶ್ ಶೆಟ್ಟಿ, ಇದೀಗ “ಜೈ” ಚಿತ್ರಕ್ಕೆ ನಾಯಕನಾಗಿ ನಟಿಸುವ ಜೊತೆಗೆ ಆಕ್ಷನ್ ಕಟ್ ಕೂಡ ಹೇಳಿದ್ದಾರೆ. ಈ ಚಿತ್ರದ ಮೂಲಕ ಪೈಲ್ವಾನ್ ಬಳಿಕ ಮತ್ತೊಮ್ಮೆ ಕನ್ನಡ ಚಿತ್ರರಂಗಕ್ಕೆ ಬಾಲಿವುಡ್ ನಟ ಸುನೀಲ್ ಶೆಟ್ಟಿ ಅವರನ್ನು ಕರೆತಂದಿದ್ದಾರೆ.

ಕರಾವಳಿ ಭಾಗದ ಸ್ಥಳೀಯ ರಾಜಕೀಯದ ಕಥಾವಸ್ತು ಇರುವ ಚಿತ್ರವನ್ನು ಮುಂದಿಟ್ಟುಕೊಂಡು ತುಳು ಭಾಷೆಯಲ್ಲಿ ಸಿದ್ದವಾಗಿರುವ “ಜೈ” ಚಿತ್ರವನ್ನು ಕನ್ನಡಕ್ಕೆ ಡಬ್ ಮಾಡಿದ್ದಾರೆ. ಚಿತ್ರದಲ್ಲಿ ನಟ ರೂಪೇಶ್ ಶೆಟ್ಟಿಗೆ ನಾಯಕಿಯಾಗಿ ಅದ್ವಿತಿ ಶೆಟ್ಟಿ ಕಾಣಿಸಿಕೊಂಡಿದ್ದಾರೆ.
“ಜೈ’ ಚಿತ್ರದ ಟೀಸರ್ ಅನ್ನು ನಟ ಶ್ರೀಮುರುಳಿ ಬಿಡುಗಡೆ ಮಾಡಿ ತುಳು ಭಾಷೆ ಸಂಸ್ಕೃತಿ, ಆಚಾರ ವಿಚಾರದ ಬಗ್ಗೆ ಅಪಾರ ಪ್ರೀತಿ ಇಟ್ಟುಕೊಂಡು ಸಿನಿಮಾ ಮಾಡಿದ್ದಾರೆ. ಚಿತ್ರದಲ್ಲಿ ಬಾಲಿವುಡ್ ನಟ ಸುನಿಲ್ ಶೆಟ್ಟಿ ಅವರನ್ನು ಕರೆತಂದಿದ್ದಾರೆ.ಇಡೀ ತಂಡಕ್ಕೆ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದರು
ನಟ, ನಿರ್ದೇಶಕ ರೂಪೇಶ್ ಶೆಟ್ಟಿ ಮಾತನಾಡಿ ಬಾಲಿವುಡ್ ನಟ ಸುನೀಲ್ ಶೆಟ್ಟಿ ಅವರು ತುಳು ಭಾಷೆಯ ಮೇಲಿನ ಅಭಿಮಾನದಿಂದ ನಯಾ ಪೈಸೆ ಪಡೆಯದೆ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಅವರ ಪಾತ್ರ ಚಿತ್ರದಲ್ಲಿ ಸುಮಾರು 18 ನಿಮಿಷಗಳ ಕಾಳ ಬರಲಿದೆ. ಚಿತ್ರಕ್ಕೆ ಅಗತ್ಯವಿರುವುದನ್ನು ನಿರ್ಮಾಪಕರು ನೀಡಿದ ಹಿನ್ನೆಲೆಯಲ್ಲಿ ಚಿತ್ರ ಚೆನ್ನಾಗಿ ಬರಲು ಸಹಕಾರಿಯಾಗಿದೆ. ಚಿತ್ರದಲ್ಲಿ ಅನುಭವಿ ಕಲಾವಿದರ ದಂಡೆ ಇದೆ.ನವೆಂಬರ್ 14ರಂದು ಎರಡು ಭಾಷೆಯಲ್ಲಿ ಚಿತ್ರ ಬಿಡುಗಡೆ ಮಾಡುವ ಉದ್ದೇಶವಿದೆ ಎಂದು ಮಾಹಿತಿ ನೀಡಿದರು

ನಟಿ ಅದ್ವಿತಿ ಶೆಟ್ಟಿ ಮಾತನಾಡಿ ಮೊದಲ ತುಳು ಚಿತ್ರ. ಮಾತೃಭಾಷೆ ತುಳು , ಅಪ್ಪನಿಗೆ ತುಳು ಸಿನಿಮಾದಲ್ಲಿ ನಡೆಸಬೇಕೆಂಬ ಆಸೆ ಇತ್ತು. ಎರಡು ವರ್ಷಗಳ ಹಿಂದೆ ಅಪ್ಪ ಅಗಲಿದರು ಬಣ್ಣದ ಬದುಕಿನ 13 ವರ್ಷದ ಕನಸು ಈಗ ಈಡೇರುತ್ತಿದೆ. ತುಳು ಭಾಷೆಯ ಈ ಸಿನಿಮಾ ಕನ್ನಡದಲ್ಲಿ ಡಬ್ ಆಗುತ್ತಿದೆ. ಚಿತ್ರದಲ್ಲಿ ನನ್ನದು ಜರ್ನಲಿಸ್ಟ್ ಪಾತ್ರ ನಿರ್ವಹಿಸಿದ್ದೇನೆ. ಇಡೀ ಚಿತ್ರ ತಂಡ ಬಹಳ ಹಾರ್ಡ್ ವರ್ಕ್ ಮಾಡಿದ್ದೇನೆ ಎಲ್ಲರ ಸಹಕಾರ ಮತ್ತು ಬೆಂಬಲ ಬೇಕು ಎಂದು ಕೇಳಿಕೊಂಡರು
ಅನಿಲ್ ಶೆಟ್ಟಿ, ಸುಧಾಕರ ಶೆಟ್ಟಿ ಮುಗ್ರೋಡಿ, ಮಂಜುನಾಥ ಅತ್ತಾವರ ಚಿತ್ರಕ್ಕೆ ಬಂಡವಾಳ ಹೂಡಿದ್ದು, ದೀಕ್ಷಿತ್ ಸಹ ನಿರ್ಮಾಪಕರಾಗಿದ್ದಾರೆ. ರೂಪೇಶ್ ಶೆಟ್ಟಿ ಹಾಗೂ ವೇಣು ಹಸ್ರಳ್ಳಿ ಚಿತ್ರಕಥೆ ಬರೆದಿದ್ದಾರೆ. ಮೂರು ಹಂತದಲ್ಲಿ ಚಿತ್ರೀಕರಣ ಮುಗಿಸಿದ ‘ಜೈ” ಚಿತ್ರದ ಚಿತ್ರೀಕರಣ ಪೂರ್ಣಗೊಳಿಸಲಾಗಿದೆ.

ಚಿತ್ರದಲ್ಲಿ ರೂಪೇಶ್ ಶೆಟ್ಟಿ, ಅದ್ವಿತಿ ಶೆಟ್ಟಿ ಅಭಿನಯಿಸಿದ್ದಾರೆ. ದೇವದಾಸ್ ಕಾಪಿಕಾಡ್, ರಾಜ್ ದೀಪಕ್ ಶೆಟ್ಟಿ, ನವೀನ್ ಡಿ ಪಡೀಲ್, ಅರವಿಂದ ಬೋಳಾರ್, ಭೋಜರಾಜ ವಾಮಂಜೂರು, ಪ್ರಸನ್ನ ಶೆಟ್ಟಿ ಬೈಲೂರು, ಸಂದೀಪ್ ಶೆಟ್ಟಿ ಮಾಣಿಬೆಟ್ಟು, ಉಮೇಶ್ ಮಿಜಾರ್ ಮೊದಲಾದವರು ಅಭಿನಯಿಸಿದ್ದಾರೆ.
ತುಳು ಚಿತ್ರರಂಗದ ಖ್ಯಾತ ಡೈಲಾಗ್ ರೈಟರ್ ಪ್ರಸನ್ನ ಶೆಟ್ಟಿ ಬೈಲೂರು ಚಿತ್ರಕ್ಕೆ ಕತೆ ಹಾಗೂ ಸಂಭಾಷಣೆ ಬರೆದಿದ್ದಾರೆ. ವಿನುತ್ ಛಾಯಾಗ್ರಹಣ , ಲೊಯ್ ವೆಲೆಂಟಿನ್ ಸಲ್ದಾನ ಸಂಗೀತ, ರಾಹುಲ್ ವಸಿಷ್ಠ ಸಂಕಲನವಿದೆ.


