Review: “Kamal Sridevi” is a gut-wrenching story

Review: “ಕಮಲ್ ಶ್ರೀದೇವಿ” ಕರುಳು ಹಿಂಡುವ ಕಥಾನಕ - CineNewsKannada.com

Review: “ಕಮಲ್ ಶ್ರೀದೇವಿ” ಕರುಳು ಹಿಂಡುವ ಕಥಾನಕ

ಚಿತ್ರ : ಕಮಲ್ ಶ್ರೀದೇವಿ
ನಿರ್ದೇಶಕ: ವಿ.ಎ. ಸುನೀಲ್ ಕುಮಾರ್
ತಾರಾಗಣ : ಸಚಿನ್ ಚಲುವರಾಯಸ್ವಾಮಿ, ಸಂಗೀತ ಭಟ್,ಕಿಶೋರ್, ರಮೇಶ್ ಇಂದಿರಾ, ಮಿತ್ರಾ, ಎಂ.ಎಸ್ ಉಮೇಶ್ , ಅಕ್ಷಿತ ಬೋಪಯ್ಯ ,ಕೋಟೆ ಪ್ರಭಾಕರ್ ಮತ್ತಿತರರು
ರೇಟಿಂಗ್ : * 3.5 / 5

ಕನ್ನಡದಲ್ಲಿ ಇತ್ತೀಚೆಗೆ ಹೊಸ ಹೊಸ ಕಂಟೆಗಳ ಕಥೆಗಳು ಪ್ರೇಕ್ಷಕರ ಮುಂದೆ ಬರುತ್ತಿವೆ. ಒಂದಕ್ಕಿಂತ ಒಂದು ಕಥನಗಳು ಗಮನ ಸೆಳೆತ್ತಿವೆ. ಅಂತಹ ಮತ್ತೊಂದು ಕರುಳು ಹಿಂಡುವ, ಮನ ಮಿಡಿಯುವ ಕಥನದ ತಿರುಳು ಹೊಂದಿರುವ ಚಿತ್ರ ” ಕಮಲ್ ಶ್ರೀದೇವಿ”

ವೇಶ್ಯಾವಾಟಿಕೆ, ಅದರ ಹಿಂದಿನ ಕರಾಳ ಮುಖಗಳು, ಈ ಪಾಪ ಕೂಪದಲ್ಲಿ ಸಿಲುಕುವ ಮಹಿಳೆಯರ ಕರುಣಾಜನಕ ಕಥೆಗಳು, ಅವರನ್ನು ತಮ್ಮ ಕಪಿಮುಷ್ಠಿಯಲ್ಲಿಟ್ಟುಕೊಂಡು ಬೇಳೆ ಬೇಯಿಸಿಕೊಳ್ಳುವ ಮಂದಿ, ಏನೆಲ್ಲಾ ಕಷ್ಟಪಟ್ಟರೂ ಯಶಸ್ಸು ಸಿಗದ ನಿರ್ದೇಶಕ ಹೀಗೆ ಹಲವು ವಿಷಯಗಳನ್ನು ಮುಂದಿಟ್ಡಿಕೊಂಡು ತೆರೆಗೆ ತಂದಿರುವ ಚಿತ್ರ ಇದು.

“ಗಜರಾಮ” ಚಿತ್ರದ ಬಳಿಕ ನಿರ್ದೇಶಕ ಸುನೀಲ್ ಕುಮಾರ್ ವಿಭಿನ್ನ ವಿಷಯದೊಂದಿಗೆ ಚಿತ್ರವನ್ನು ತೆರೆಗೆ ಕಟ್ಟಿಕೊಟ್ಟಿದ್ದಾರೆ.ನಟ ಸಚಿನ್ ಚಲುವರಾಯ ಸ್ವಾಮಿ ಮತ್ತು ನಟಿ ಸಂಗೀತ ಭಟ್ ಪಾತ್ರದೊಳಗೆ ಪರಕಾಯ ಪ್ರವೇಶ ಮಾಡಿದ್ದಾರೆ. ಇದು ಚಿತ್ರದ ಫ್ಲಸ್ ಪಾಯಿಂಟು ಕೂಡ. ಚಿತ್ರ ಆರಂಭದಿಂದ ಕೊನೆಯ ತನಕ ಕುತೂಹಲ ಕಾಪಾಡಿಕೊಂಡಿದೆ.

ಕುಡುಕ ಗಂಡ, ವಯಸ್ಸಾದ ತಾಯಿ, ಮುದ್ದಾದ ಮಗಳು, ಸಾವು ಬದುಕಿನ ನಡುವೆ ಮಗಳ ಹೋರಾಟ,ಜೀವನದಲ್ಲಿ ಎದುರಾದ ಸಂಕಷ್ಟ, ಸರಮಾಲೆ ಒಂದೆಡೆಯಾದರೆ ಹಣದ ಅಗತ್ಯ ಮತ್ತೊಂದೆಡೆ ದೇಹ ಹಾಳಾದರೂ ಸರಿ ಮನಸ್ಸು ಹಾಳಾಗಬಾರದು ಎನ್ನುವ ನಿರ್ಧಾರಕ್ಕೆ ಬಂದಿದ್ದ ಭೂಮಿಕಾ (ಸಂಗೀತ ಭಟ್), ಕೊಲೆ ಪ್ರಕರಣ ಕೈಗೆತ್ತಿಕೊಳ್ಳುವ ಎಸಿಪಿ ರಾಜೇಶ್ (ಕಿಶೋರ್) ಅನುಮಾನ ಬಂದವರನ್ನೆಲ್ಲಾ ವಿಚಾರಣೆಗೆ ಒಳಪಡಿಸುತ್ತಾರೆ. ಆಗ ಒಂದರ ಹಿಂದೆ ಒಂದು ರೋಚಕ ಸತ್ಯಗಳು ಅನಾವರಣವಾಗುತ್ತದೆ

ಈ ಮಧ್ಯೆ ಹಲವು ಚಿತ್ರ ನಿರ್ದೇಶನ ಮಾಡಿದ್ದರೂ ಯಶಸ್ಸು ಕಾಣದ ಕಮಲ್ (ಸಚಿನ್ ಚಲುವರಾಯಸ್ವಾಮಿ) ಜೀವನದಲ್ಲಿ ಜಿಗುಪ್ಸೆಗೆ ಒಳಗಾದವ. ಈ ಮಧ್ಯೆ ಸ್ನೇಹಿತನ ಸಲಹೆ ಮೇರೆಗೆ ಒಂದು ಜಾಗಕ್ಕೆ ಹೋಗುತ್ತಾನೆ. ಆದರೆ ಅಲ್ಲಿ ಮಾಡುವ ಕೆಲಸ ಬಿಟ್ಟು ಆತನ ದುಃಖ ದುಮ್ಮಾನ ಹೇಳಿಕೊಳ್ಳುತ್ತಾನೆ. ಆಕೆಯೂ ಈತನ ನೋವು ಕೇಳಿ ಕರಗುತ್ತಾಳೆ.

ಕಮೀಷನ್ ಸಿಕ್ಕರೆ ಸಾಕು ಎನ್ನುವ ಮಾಮು (ರಮೇಶ್ ಇಂದಿರಾ) ಅಮಾಯಕರನ್ನು ತನ್ನ ಹಿಡಿತದಲ್ಲಿರುವ ಸ್ಥಳಕ್ಕೆ ಕಳಿಹಿಸಿ ಕೆಲಸ ಮುಗಿಸುವುದರಲ್ಲಿ ನಿಸ್ಸೀಮ. ಜೀವನದ ಅಗತ್ಯಗಳಿಗೆ ಹೋರಾಡುವ ಭೂಮಿಕ ಕೊಲೆಯಾಗಿದ್ದು ಯಾಕೆ.ಇದರ ಹಿಂದೆ ಯಾರಿದ್ದಾರೆ ಎನ್ನುವ ಕುತೂಹಲ ರಣ ರೋಚಕ. ಮುಂದೇನು ಎನ್ನುವುದು ಚಿತ್ರದಲ್ಲಿ ನೋಡಿದರೆ ಚೆನ್ನ.

ನಿರ್ದೇಶಕ ಸುನೀಲ್ ಕುಮಾರ್ ವಿಭಿನ್ನ ಕಥೆಯನ್ನು ಪ್ರೇಕ್ಷಕರ ಮುಂದೆ ಇಟ್ಟಿದ್ದಾರೆ.ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ. ಮನಮಿಡಿಯುವ, ಕರುಳು ಕಿವುಚುವ ಕಥೆಯನ್ನು ಜನರ ಮುಂದೆ ಇಟ್ಟಿದ್ದಾರೆ.

ನಾಯಕ ಸಚಿನ್ ಚಲುವರಾಯಸ್ವಾಮಿ ತಮ್ಮ ಹಿಂದಿನ ಚಿತ್ರಗಳಿಗೆ ಹೋಲಿಸಿದರೆ ಇಲ್ಲಿ ಪಳಗಿದ್ದಾರೆ. ಅಭಿನಯದಲ್ಲಿ ಪಕ್ವತೆ ಕಾಣುತ್ತದೆ. ಉತ್ತಮ ನಟನಾಗುವ ಎಲ್ಲಾ ಲಕ್ಷಣಗಳಿವೆ

ನಟಿ ಸಂಗೀತ ಭಟ್ ನಿಭಾಯಿಸಿರುವ ಪಾತ್ರ ಮಾಡಲು ಗಟ್ಟಿತನ ಮತ್ತು ಧೈರ್ಯ ಬೇಕು. ಅವರು ಸವಾಲಾಗಿ ಸ್ವೀಕರಿಸಿ ಪಾತ್ರದೊಳಗೆ ಪರಕಾಯ ಪ್ರವೇಶ ಮಾಡಿದ್ಸಾರೆ.ಅವರ ಅಭಿನಯಕ್ಕೆ ಪ್ರಶಸ್ತಿ ಸಿಗುವ ಮಟ್ಟಿಗೆ ನಟಿಸಿದ್ದಾರೆ. ಇದುವರೆಗಿನ ಚಿತ್ರ ಜೀವನದಲ್ಲಿ ಅತ್ಯುತ್ತಮ ಅಭಿನಯವಾಗಿದೆ.

ಹಿರಿಯ ಕಲಾವಿದರಾದ ರಮೇಶ್ ಇಂದಿರಾ, ಕಿಶೋರ್, ಅಕ್ಷಿತಾ ಬೋಪಯ್ಯ, ಮಿತ್ರಾ, ಎಂ.ಎಸ್ ಉಮೇಶ್, ಕೋಟೆ ಪ್ರಭಾಕರ್ ಅವರು ತಮಗೆ ಸಿಕ್ಕ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಒಬ್ಬೊಬ್ಬರ ಪಾತ್ರವೂ ಚಿತ್ರಕಥೆಗೆ ಪೂರಕವಾಗಿದೆ.

ನಾಯಕನಾಗಿ ಕ್ರಿಯೇಟಿವ್ ಹೆಡ್ ಆಗಿ ಕೆಲಸ ಮಾಡುವುದು ಸುಲಭದ ಮಾತಲ್ಲ. ಆ ಕೆಲಸವನ್ನು ನಟ ರಾಜವರ್ಧನ್ ಯಶಸ್ಸಿಯಾಗಿ ನಿಭಾಯಿಸಿದ್ದಾರೆ.ಅವರ ಕಾರ್ಯ ಶ್ಲಾಘನೀಯ.ಕಮಲ್ ಶ್ರೀದೇವಿ ಚಿತ್ರ ಮನಕಲುಕುತ್ತದೆ. ಅಲ್ಲಿಲ್ಲಿ ಸಮಾಜದ ವ್ಯವಸ್ಥೆಗೆ ಕನ್ನಡಿ ಹಿಡಿದಿದೆ. ಪ್ರೇಕ್ಷ ಕೊಟ್ಟ ಕಾಸಿಗೆ ಮೋಸ ಮಾಡುವುದಿಲ್ಲ. ಇತ್ತೀಚೆಗೆ ಬಂದ ಅಪರೂಪದ ಚಿತ್ರ ಎನ್ನುವಲ್ಲಿ ಅಡ್ಡಿಯಲ್ಲ.ಕ್ಯಾಮರಾ ಮತ್ತು ಸಂಗೀತ ಚಿತ್ರಕ್ಕೆ ಪೂರಕವಾಗಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin