ಚಲನಚಿತ್ರ ಪ್ರಚಾರ ಸಂಸ್ಥೆ “ರಾಘವೇಂದ್ರ ಚಿತ್ರವಾಣಿ”ಗೆ ಸುವರ್ಣ ಸಂಭ್ರಮ: ಸಿನಿ ಗಣ್ಯರ ಹಾರೈಕೆ
ಕನ್ನಡದ ಮೊದಲ ಪ್ರಚಾರ ಸಂಸ್ಥೆ ರಾಘವೇಂದ್ರ ಚಿತ್ರವಾಣಿಗೆ ಈಗ 50ರ ಸಡಗರ. 1976 ರಲ್ಲಿ ದಿವಂಗತ ಡಿ.ವಿ.ಸುಧೀಂದ್ರ ರಾಘವೇಂದ್ರ ಚಿತ್ರವಾಣಿ ಸಂಸ್ಥೆ ಪ್ರಾರಂಭಿಸಿದರು. ಈವರೆಗೂ ಸುಮಾರು 3000ಕ್ಕೂ ಅಧಿಕ ಚಿತ್ರಗಳಿಗೆ ಪ್ರಚಾರ ಕಾರ್ಯ ನೀಡಿರುವ ಏಕ ಮಾತ್ರ ಸಂಸ್ಥೆ.

ಭಾರತ ಚಿತ್ರರಂಗದ ಇತಿಹಾಸದಲ್ಲೇ ಈವವರೆಗೆ ಯಾವ ಪ್ರಚಾರ ಸಂಸ್ಥೆ ಐವತ್ತು ವರ್ಷಗಳ ಕಾಲ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿರುವ ಉದಾಹರಣೆ ಇಲ್ಲ. ಪ್ರಸ್ತುತ ರಾಘವೇಂದ್ರ ಚಿತ್ರವಾಣಿ ಸಂಸ್ಥೆಯನ್ನು ಸುಧೀಂದ್ರ ವೆಂಕಟೇಶ್ ಮುನ್ನಡೆಸುತ್ತಿದ್ದಾರೆ. ಸುಧೀಂದ್ರ ಪುತ್ರ ಸುನೀಲ್ ಸುಧೀಂದ್ರ, ಡಿ.ಜಿ.ವಾಸುದೇವ್, ಪವನ್ ವೆಂಕಟೇಶ್ ಸಾಥ್ ನೀಡುತ್ತಿದ್ದಾರೆ.
ಐವತ್ತರ ಸಂಭ್ರಮವನ್ನು ಏಪ್ರಿಲ್ ತಿಂಗಳಲ್ಲಿ ವಿಶೇಷವಾಗಿ ಆಚರಿಸಲು ರಾಘವೇಂದ್ರ ಚಿತ್ರವಾಣಿ ಸಂಸ್ಥೆ ಮುಂದಾಗಿದೆ. ಇದರ ಪೂರ್ವಭಾವಿಯಾಗಿ ಸುವರ್ಣ ಸಂಭ್ರಮದ ಲೋಗೊ ಅನಾವರಣ ಸಮಾರಂಭ ಇತ್ತೀಚೆಗೆ ನೆರವೇರಿತು. ಹಿರಿಯ ನಟರಾದ ಜೆ.ಕೆ.ಶ್ರೀನಿವಾಸಮೂರ್ತಿ, ನಟ ಕೋಮಲ್ ಕುಮಾರ್ ಹಾಗೂ ನಟಿ ಅನು ಪ್ರಭಾಕರ್ ಮುಖರ್ಜಿ ರಾಘವೇಂದ್ರ ಚಿತ್ರವಾಣಿ ಸಂಸ್ಥೆಯ ಸುವರ್ಣ ಸಂಭ್ರಮದ ಲೋಗೊ ಅನಾವರಣ ಮಾಡಿದರು.
ಡಿ.ವಿ.ಸುಧೀಂದ್ರ ಪತ್ನಿ ಶ್ರೀಮತಿ ಪದ್ಮ ಸುಧೀಂದ್ರ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ನಂತರ ಗಣ್ಯರು ಕನ್ನಡದ ಮೊದಲ ಪಿ.ಆರ್.ಓ ಸುಧೀಂದ್ರ ಅವರ ಬಗ್ಗೆ ಹಾಗೂ ರಾಘವೇಂದ್ರ ಚಿತ್ರವಾಣಿ ಸಂಸ್ಥೆಯ ಕುರಿತು ಮಾತನಾಡಿದರು.

ಹಿರಿಯ ನಟ ಜೆ.ಕೆ ಶ್ರೀನಿವಾಸಮೂರ್ತಿ ಮಾತನಾಡಿ ರಾಘವೇಂದ್ರ ಚಿತ್ರವಾಣಿ ಸಂಸ್ಥೆಗೂ 50 ವರ್ಷ. ಸಿನಿಮಾರಂಗಕ್ಕೆ ಬಂದು 50 ವರ್ಷ. ಸುಧೀಂದ್ರ ಅವರ ಜೊತೆ ಒಡನಾಟ. ಪ್ರಚಾರ ಸಂಸ್ಥೆಯೊಂದು ರೀತಿ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿರುವುದು ನಿಜಕ್ಕೂ ಖುಷಿಯಾಗಿದೆ. ರಾಘವೇಂದ್ರ ಚಿತ್ರವಾಣಿ ನೂರು ವರ್ಷಗಳ ಸಂಭ್ರಮವನ್ನು ಕಾಣುವಂತಾಗಲಿ ಎಂದು ಹಾರೈಸಿದರು.
ನಟ ಕೋಮಲ್ ಕುಮಾರ್ ಮಾತನಾಡಿ ಕನ್ನಡ ಚಿತ್ರರಂಗದಲ್ಲಿ ದೊಡ್ಡ ನಟರಾಗಿ ಬೆಳೆಯುತ್ತೀರಾ” ಎಂದು ನನಗೆ ಹಾರೈಸಿದವರು ಸುಧೀಂದ್ರ.ಅವರ ತುಂಬು ಕುಟುಂಬ ನೋಡಿದರೆ ನನಗೆ ಸಂತೋಷ ಆಗುತ್ತದೆ. ಸುಧೀಂದ್ರ ನಿಧನದ ನಂತರ ವೆಂಕಟೇಶ್ ಸಂಸ್ಥೆಯ ಜವಾಬ್ದಾರಿ ಹೊತ್ತು ಸಮರ್ಪಕವಾಗಿ ನಿಭಾಯಿಸುತ್ತಿದ್ದಾರೆ. ಕುಟುಂಬದ ಎಲ್ಲರೂ ಅವರಿಗೆ ಜೊತೆಯಾಗಿ ನಿಂತಿದ್ದಾರೆ. ರಾಘವೇಂದ್ರ ಚಿತ್ರವಾಣಿ ಸಂಸ್ಥೆ ರಾಯರ ದಯೆಯಿಂದ ಇನ್ನಷ್ಟು ಹೆಸರು ಮಾಡಲಿ ಎಂದು ಹಾರೈಸಿದರು.
ನಟಿ ಅನು ಪ್ರಭಾಕರ್ ಮುಖರ್ಜಿ ಮಾತನಾಡಿ ಬಾಲ ನಟಿಯಾದಗಿನಿಂದಲೂ ಸುಧೀಂದ್ರ ಸರ್ ಅವರನ್ನು ನೋಡಿಕೊಂಡು ಬೆಳೆದವಳು. ಕುಟುಂಬಕ್ಕೂ ಹಾಗೂ ಅವರ ಕುಟುಂಬಕ್ಕೂ ಬಹಳ ಆತ್ಮೀಯತೆ. ಎಲ್ಲರೂ ಹೇಳಿದ ಹಾಗೆ ಪ್ರಚಾರ ಸಂಸ್ಥೆಯೊಂದು 50 ವರ್ಷಗಳ ಕಾಲ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿರುವುದು ನಿಜಕ್ಕೂ ಹೆಮ್ಮೆ ಎಂದು ಹೇಳಿದರು.

ರಾಘವೇಂದ್ರ ಚಿತ್ರವಾಣಿ ಸಾಗಿ ಬಂದ ಬಗ್ಗೆ ಮಾತನಾಡಿದ ಸಂಸ್ಥೆಯ ರುವಾರಿ ಸುಧೀಂದ್ರ ವೆಂಕಟೇಶ್, ಲೋಗೊ ಅನಾವರಣ ಮಾಡಿಕೊಟ್ಟ ಗಣ್ಯರಿಗೆ ಧನ್ಯವಾದ ತಿಳಿಸಿ ಏಪ್ರಿಲ್ ನಲ್ಲಿ ರಾಘವೇಂದ್ರ ಚಿತ್ರವಾಣಿ ಸಂಸ್ಥೆಯ 50 ನೇ ವರ್ಷದ ಸಮಾರಂಭವನ್ನು ಅದ್ದೂರಿಯಾಗಿ ಆಚರಿಸಲು ಸಿದ್ದತೆ ನಡೆಯುತ್ತಿದೆ. ಆಗಿನಿಂದಲೂ ನಮಗೆ ಪ್ರೋತ್ಸಾಹ ನೀಡುತಾ ಬಂದಿರುವ ಚಿತ್ರರಂಗ ಹಾಗೂ ಮಾಧ್ಯಮರಂಗಕ್ಕೆ ಆಬಾರಿ ಎಂದರು.
ಡಿ.ವಿ.ಸುಧೀಂದ್ರ ಪುತ್ರ ಸುನೀಲ್ ಸುಧೀಂದ್ರ, ಡಿ.ಜಿ.ವೆಂಕಟೇಶ್, ಡಿಜಿ ವಾಸುದೇವ್, ಪವನ್ ವೆಂಕಟೇಶ್, ಹಾಗೂ ಸುಧೀಂದ್ರ ಕುಟುಂಬದ ಸದಸ್ಯರು ಸಮಾರಂದಲ್ಲಿ ಉಪಸ್ಥಿತರಿದ್ದರು.


