ಪುನರ್ಜನ್ಮದ ಕಥೆಯ “ಬಂಡೆಕವಿ” ಚಿತ್ರಕ್ಕೆ ಫೆಬ್ರವರಿಯಿಂದ ಚಿತ್ರೀಕರಣ

ವರಮಹಾಲಕ್ಷ್ಮಿ ಮೂವೀಸ್ ಬ್ಯಾನರ್ ನ ಅಡಿಯಲ್ಲಿ ಸಿ.ಜಿ.ಗಂಗರಾಜು ದಿಬ್ಬೂರು ಹಾಗೂ ಮೇಕೆ ಶಿವು ನಿರ್ಮಿಸುತ್ತಿರುವ, ಶ್ರೀರಜನಿ ಪರಿಸರ ಪ್ರೇಮಿ ನಿರ್ದೇಶನದ ಹಾಗೂ ಮೋಹನ್ ಕುಮಾರ್ ನಾಯಕರಾಗಿ ನಟಿಸುತ್ತಿರುವ “ಬಂಡೆಕವಿ” ಚಿತ್ರದ ಮುಹೂರ್ತ ಸಮಾರಂಭ ಮಹಾಲಕ್ಷ್ಮಿ ಲೇಔಟ್ ನ ಪಂಚಮುಖಿ ಗಣಪತಿ ದೇವಸ್ಥಾನದಲ್ಲಿ ನೆರವೇರಿತು.

ಚಿತ್ರದ ಮೊದಲ ಸನ್ನಿವೇಶಕ್ಕೆ ವರಮಹಾಲಕ್ಷ್ಮೀ ಆರಂಭ ಫಲಕ ತೋರಿದರು. ರವಿಶಂಕರ್ ರೆಡ್ಡಿ ಆರ್ ಕ್ಯಾಮರಾ ಚಾಲನೆ ಮಾಡಿ ಶುಭ ಹಾರೈಸಿದರು. ನಾಗೇಂದ್ರ ಅರಸ್ ಸೇರಿದಂತೆ ಅನೇಕ ಗಣ್ಯರು ಹಾಗೂ ಚಿತ್ರತಂಡದ ಸದಸ್ಯರು ಮುಹೂರ್ತ ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಈ ಹಿಂದೆ “ನವ ಇತಿಹಾಸ”, “ಗುಳ್ಳೆ ನರಿ” ಚಿತ್ರಗಳನ್ನು ನಿರ್ದೇಶಿಸಿರುವ ಶ್ರೀರಜನಿ ಪರಿಸರಪ್ರೇಮಿ ಅವರಿಗೆ ಇದು ಮೂರನೇ ನಿರ್ದೇಶನದ ಚಿತ್ರ. ಇದೊಂದು ಪುನರ್ಜನ್ಮದ ಕಥೆಯಾಗಿದ್ದು, ಸಸ್ಪೆನ್ಸ್, ಥ್ರಿಲ್ಲಿಂಗ್ ಲವ್ ಸ್ಟೋರಿ ಕೂಡ ಇದೆ. ಈ ಹಿಂದೆ “ಅಡವಿ” ಚಿತ್ರದಲ್ಲಿ ನಟಿಸಿದ್ದ ಮೋಹನ್ ಕುಮಾರ್ ಅವರಿಗೆ ನಾಯಕನಾಗಿ ಇದು ಎರಡನೇ ಚಿತ್ರ. ನಾಯಕಿ ಸೇರಿದಂತೆ ಉಳಿದ ತಾರಾಬಳಗದ ಆಯ್ಕೆ ಪ್ರಗತಿಯಲ್ಲಿದೆ. ಅನೇಕ ಹಿರಿಯ ಕಲಾವಿದರು ಈ ಚಿತ್ರದಲ್ಲಿ ನಟಿಸಲಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ಮಾಹಿತಿ ನೀಡಲಾಗುವುದೆಂದು ನಿರ್ದೇಶಕರು ತಿಳಿಸಿದ್ದಾರೆ.

ಫೆಬ್ರವರಿಯಿಂದ ಚಿತ್ರೀಕರಣ ಆರಂಭವಾಗಲಿದ್ದು, ಬೆಂಗಳೂರು, ತುಮಕೂರು, ರಾಮನಗರ ಹಾಗೂ ಚಾಮರಾಜನಗರದಲ್ಲಿ ಚಿತ್ರೀಕರಣ ನಡೆಯಲಿದೆ. ಹರ್ಷ ಕಾಗೋಡು ಸಂಗೀತ ನಿರ್ದೇಶನ, ಸಂದೀಪ್ ಹೊನ್ನಳ್ಳಿ ಛಾಯಾಗ್ರಹಣ ಹಾಗೂ ಸುನಯ್ ಜೈನ್ ಅವರ ಸಂಕಲನವಿರುವ ಚಿತ್ರಕ್ಕೆ ಸಮರ್ಥ್ ಎಂ ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.