“ಕಾಖಂಡಕಿ ಶ್ರೀ ಮಹಿಪತಿದಾಸರು” ಚಿತ್ರದ ಹಾಡುಗಳ ಅನಾವರಣ

ಕನ್ನಡ ಸಾಹಿತ್ಯಕ್ಕೆ ದಾಸರ ಕೊಡುಗೆ ಅಪಾರ.ಅವರ ಮಹನೀಯರ ಮಹಿಮೆಯನ್ನು ಚಿತ್ರಗಳ ಮೂಲಕ ಜನರಿಗೆ ಪರಿಚಯಿಸುವ ಕೆಲಸ ಮಾಡುತ್ತಿರುವ ನಿರ್ದೇಶಕ ಮಧುಸೂದನ್ ಹವಾಲ್ದಾರ್, ಇದೀಗ ಮತ್ತೊಬ್ಬ ದಾಸರ ಮಹಿಮೆಯನ್ನು ತೆರೆ ಮೇಲೆ ತರುತ್ತಿದ್ದಾರೆ.

ಶ್ರೇಷ್ಠ ಹರಿದಾಸರಾದ ಮಹಿಪತಿ ದಾಸರ ಕುರಿತಾದ “ಕಾಖಂಡಕಿ ಶ್ರೀ ಮಹಿಪತಿದಾಸರು” ಚಿತ್ರ ನಿರ್ದೇಶಿಸುವುದರ ಜೊತೆಗೆ ಮೊದಲ ಬಾರಿಗೆ ಸಂಗೀತ ನಿರ್ದೇಶನವನ್ನೂ ಮಾಡಿದ್ದಾರೆ. ಮಹಿಪತಿದಾಸರ ವಿರಚಿತ ಹನ್ನೊಂದು ಹಾಡುಗಳು ಈ ಚಿತ್ರದಲ್ಲಿದ್ದು, ಚಿತ್ರದಲ್ಲಿ ಮಹಿಪತಿದಾಸರ ಪಾತ್ರದಲ್ಲಿ ಕಾಣಿಸಿಕೊಂಡಿರುವ ವಿಜಯಾನಂದ ಅವರು ಏಳು ಹಾಡುಗಳನ್ನು ಹಾಗೂ ಮಧುಸೂದನ್ ಹವಾಲ್ದಾರ್, ಅನಂತ ಕುಲಕರ್ಣಿ, ರಾಯಚೂರು ಶೇಷಗಿರಿದಾಸ್ ಹಾಗೂ ವಿ.ವಿ. ಪ್ರಸನ್ನ ಒಂದೊಂದು ಗೀತೆ ಹಾಡಿದ್ದಾರೆ.

ಮಾಧವತೀರ್ಥ ( ತಂಬಿಹಳ್ಳಿ) ಸಂಸ್ಥಾನದ ಪೀಠಾಧಿಪತಿಗಳಾದ ಶ್ರೀ1008 ವಿದ್ಯಾಸಾಗರ ಮಾಧವತೀರ್ಥರು ಹಾಡುಗಳನ್ನು ಲೋಕಾರ್ಪಣೆ ಮಾಡಿದರು. ಮಾಜಿ ಶಾಸಕ ಎಸ್ ಕೆ ಬೆಳ್ಳುಬ್ಬಿ, ಹುಸೇನ್ ಸಾಬ್ ದಾಸ್, ಸುಭಾಷ್ ಕಾಖಂಡಕಿ, ಮುರಳಿ, ವಿಷ್ಣುತೀರ್ಥ ಜೋಶಿ, ರಾಘವೇಂದ್ರ ರಾವ್ ಮತ್ತಿತರು ಚಿತ್ರತಂಡಕ್ಕೆ ಶುಭ ಹಾರೈಸಿದರು.
ಶ್ರೀವಿದ್ಯಾಸಾಗರ ಮಾಧವತೀರ್ಥರು ಆಶೀರ್ವಚನ ನೀಡಿ, ಕನ್ನಡ ಹರಿದಾಸ ಸಾಹಿತ್ಯಕ್ಕೆ ಮಹಿಪತಿದಾಸರ ಕೊಡುಗೆ ಅಪಾರ. ಆದರೆ ಅವರಿಗೆ ಹೆಚ್ಚು ಪ್ರಚಾರ ಸಿಕ್ಕಿಲ್ಲ. ಸಿನಿಮಾ ಎಲ್ಲರನ್ನು ಬಹುಬೇಗ ತಲುಪುವ ಮಾಧ್ಯಮ. ಇದರ ಮೂಲಕ ಮಧುಸೂದನ್ ಹವಾಲ್ದಾರ್ ಅವರು ಕನ್ನಡದ ಹರಿದಾಸರನ್ನು ಜನರಿಗೆ ಪರಿಚಯಿಸುವ ಪ್ರಯತ್ನ ಮಾಡುತ್ತಿದ್ದಾರೆ. ಅವರಿಗೆ ಎಲ್ಲಾ ಹರಿದಾಸರ ಅನುಗ್ರಹವಿರಲಿ ಎಂದು ಹಾರೈಸಿದರು.
ನಿರ್ದೇಶಕ ಮಧುಸೂದನ್ ಹವಾಲ್ದಾರ್ ಮಾತನಾಡಿ.”ಶ್ರೀ ಜಗನ್ನಾಥದಾಸರು” ಚಿತ್ರದಿಂದ ಶ್ರೇಷ್ಠ ಹರಿದಾಸರ ಚಿತ್ರಗಳನ್ನು ನಿರ್ದೇಶಿಸುತ್ತಾ ಬಂದಿದ್ದೇನೆ. ಪ್ರಸ್ತುತ “ಕಾಖಂಡಕಿ ಶ್ರೀಮಹಿಪತಿದಾಸರು” ಚಿತ್ರವನ್ನು ನಿರ್ದೇಶಿಸುವುದರೊಂದಿಗೆ ಸಂಗೀತ ಸಂಯೋಜನೆ ಕೂಡ ಮಾಡಿದ್ದೇನೆ. ರಾಮಾಂಬುಜ ಮೂವೀಸ್ ಮೂಲಕ ಈ ಚಿತ್ರ ನಿರ್ಮಾಣವಾಗಿದೆ. ಸದ್ಯದಲ್ಲೇ ಬಿಡುಗಡೆಯಾಗಲಿದೆ ಎಂದು ತಿಳಿಸಿದರು.

ನಟ ವಿಜಯಾನಂದ್ ಮಾತನಾಡಿ, ಐಟಿ ಉದ್ಯೋಗಿಯಾಗಿದ್ದ ನಾನು ದಾಸರ ಅನುಗ್ರಹದಿಂದ ಇಂದು ಮಹಿಪತಿದಾಸರ ಪಾತ್ರ ಮಾಡಿದ್ದೇನೆ. ನಟನೆ ಜೊತಗೆ ಗಾಯನವನ್ನೂ ಮಾಡಲು ಅವಕಾಶ ನೀಡಿದ ಮಧುಸೂದನ್ ಹವಾಲ್ದಾರ್ ಅವರಿಗೆ ಧನ್ಯವಾದ ಎಂದರು