ಕಂದೀಲು ತಂಡದಿಂದ “ಕೌಮುದಿ” ಚಿತ್ರ ಆರಂಭ

‘ಕಂದೀಲು’ ಚಿತ್ರಕ್ಕೆ ಹಲವು ಅಂತರರಾಷ್ಟ್ರೀಯ ಪ್ರಶಸ್ತಿ ಲಭಿಸಿದ್ದು ಸಿನಿಮಾ ಸದ್ಯದಲ್ಲೆ ಬಿಡುಗಡೆಯಾಗಲಿದೆ. ಈಗ ಇದೇ ತಂಡದಿಂದ ನಾಗೇಶ್.ಎನ್ ಕಥೆ ಆಧರಿಸಿರುವ ‘ಕೌಮುದಿ’ ಚಿತ್ರ ಸೆಟ್ಟೇರಿದೆ.

ಹಾರೋಹಳ್ಳಿ ತಾಲ್ಲೋಕಿನ ದಿಂಬದಹಳ್ಳಿಯಲ್ಲಿರುವ ಬಿಸಲಮ್ಮ ದೇವಸ್ಥಾನದಲ್ಲಿ ಸರಳವಾಗಿ ಮುಹೂರ್ತ ಆಚರಿಸಿಕೊಂಡಿತು. ದೊಡ್ಡ ಮುದುವಾಡಿ ಗ್ರಾಮ ಪಂಚಾಯತಿ ಅಧ್ಯಕ್ಷೆ ದಿವ್ಯ.ಎಸ್ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿ ತಂಡಕ್ಕೆ ಶುಭ ಹಾರೈಸಿದರು.

ಬ್ಲೈಂಡ್ ಬಿಲೀಫ್ ಎಂಬ ಅಡಿಬರಹ ಇಂಗ್ಲೀಷ್ನಲ್ಲಿ ಇರಲಿದೆ. ಸ್ವಸ್ಕಿಕ್ ಎಂಟರ್ಟೈನ್ಮೆಂಟ್ ಅಡಿಯಲ್ಲಿ ಯಶೋದ ಪ್ರಕಾಶ್ ಕೊಟ್ಟುಕತ್ತೀರ ಬಂಡವಾಳ ಹೂಡುವುದರ ಜತೆಗೆ ನಿರ್ದೇಶನ ಮಾಡುತ್ತಿರುವ ಮೂರನೇ ಸಿನಿಮಾ ಇದಾಗಿದೆ. ನಿರ್ಮಾಣ ನಿರ್ವಹಣೆ ಮತ್ತು ಛಾಯಾಗ್ರಹಣ ಜವಬ್ದಾರಿಯನ್ನು ಪಿ.ವಿ.ಆರ್.ಸ್ವಾಮಿ ಗೂಗಾರೆದೊಡ್ಡಿ ವಹಿಸಿಕೊಂಡಿದ್ದಾರೆ.

ಶಿಕ್ಷಣ ಹಾಗೂ ವೈಜ್ಘಾನಿಕ ಕೊರತೆಯಿಂದಾಗಿ ಮೂಲನಂಬಿಕೆ, ಮೂಡನಂಬಿಕೆಯ ವ್ಯತ್ಯಾಸ ತಿಳಿಯದೆ ಬದುಕಿಗೆ ಅಪಾಯ ತಂದೊಡ್ಡುವ ಸಂಪ್ರದಾಯ, ಆಚರಣೆಗಳ ಸತ್ಯ-ವಾಸ್ತವಗಳ ಸುತ್ತ ಸಿನಿಮಾವು ಬೆಳಕು ಚೆಲ್ಲಲಿದೆ. ಗತಕಾಲದಿಂದ ಇಂದಿನವರೆಗೂ ಗ್ರಾಮೀಣ ಭಾಗದಲ್ಲಿ ಇಂತಹ ಪದ್ದತಿಗಳನ್ನು ಅನುಸರಿಸುತ್ತಿದ್ದಾರೆ. ಕಥಾನಾಯಕಿ ಇದರ ವಿರುದ್ದ ಧ್ವನಿ ಎತ್ತಿ, ಯಾವ ರೀತಿ ಹೋರಾಟ ಮಾಡುತ್ತಾಳೆ ಎಂಬುದನ್ನು ಅರ್ಥಪೂರ್ಣ ಸನ್ನಿವೇಶಗಳ ಮೂಲಕ ತೋರಿಸುವ ಪ್ರಯತ್ನ ಮಾಡಲಾಗುತ್ತಿದೆ.
‘ಪಿಂಕಿ ಎಲ್ಲಿ’ ಮತ್ತು ‘ಕೋಳಿಎಸ್ರು’ ಚಿತ್ರಗಳ ಖ್ಯಾತಿಯ ಅಕ್ಷತಾ ಪಾಂಡವಪುರ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇವರೊಂದಿಗೆ ಕುಮಾರಿ ದೀಪಿಕಾ, ಪ್ರತೀಕ, ಅಂಕಿತಾಮೂರ್ತಿ ಉಳಿದಂತೆ ನೀನಾಸಂ ನಟರಾಜ್, ಕಾವೇರಿಶ್ರೀಧರ್, ಪಿ.ಬಿ.ರಾಜುನಾಯಕ, ರೋಹಿಣಿ, ತಾರರಘು, ಬಂಗಾರಶೆಟ್ಟಿ ಮುಂತಾದವರು ಅಭಿನಯಿಸುತ್ತಿದ್ದಾರೆ.

ಸಂಗೀತ ಶ್ರೀಸುರೇಶ್, ಸಂಭಾಷಣೆ,ಸಂಕಲನ ನಾಗೇಶ್.ಎನ್, ಚಿತ್ರಕಥೆ ನಾಗೇಶ್.ಎನ್,ಹರೀಶ್.ಎಸ್ ಅವರದಾಗಿದೆ. ದಿಂಬಹಳ್ಳಿ, ಬಾಚಹಳ್ಳಿ ದೊಡ್ಡಿ ಹಾಗೂ ಕನಕಪುರ ಸುತ್ತಮುತ್ತ ಒಂದೇ ಹಂತದಲ್ಲಿ ಚಿತ್ರೀಕರಣವನ್ನು ಸಿಂಕ್ ಸೌಂಡ್ದಲ್ಲಿ ಮುಗಿಸಲು ತಂಡವು ಯೋಜನೆ ರೂಪಿಸಿಕೊಂಡಿದೆ.