“ಖೇಲಾ” ಚಿತ್ರದ “ಪುಣ್ಯಾತ್ ಗಿತ್ತೀ” ಹಾಡಿಗೆ ಪ್ರಶಂಸೆಯ ಸುರಿಮಳೆ : ಕುತೂಹಲ ಹೆಚ್ಚಳ
ವಿಭಿನ್ನ ಕಥಾಹಂದರ ಹೊಂದಿರುವ “ಖೇಲಾ” ಚಿತ್ರಕ್ಕಾಗಿ ಪ್ರಮೋದ್ ಜೋಯಿಸ್ ಬರೆದಿರುವ, ಖ್ಯಾತ ಗಾಯಕ ವೇಲ್ ಮುರುಗನ್ ಹಾಡಿರುವ “ಪುಣ್ಯಾತ್ ಗಿತ್ತೀ” ಎಂಬ ಹಾಡು ಇತ್ತೀಚೆಗೆ ಬಿಡುಗಡೆಯಾಗಿದೆ.

“ಶ್ರಾವಣಿ ಸುಬ್ರಹ್ಮಣ್ಯ” ಹಾಗೂ “ಮೈನಾ” ಧಾರಾವಾಹಿಗಳ ಖ್ಯಾತಿಯ ವಿಹಾನ್ ಪ್ರಭಂಜನ್ ನಾಯಕನಾಗಿ ನಟಿಸಿರುವ ಚಿತ್ರ ಇದಾಗಿದ್ದು. ಭರತ್ ಫಿಲಂಸ್ ಲಾಂಛನದಲ್ಲಿ ವಿ.ಜೆ.ಭರತ್ ಅವರು ನಿರ್ಮಿಸಿ, ನಿರ್ದೇಶಿಸುತ್ತಿರುವ ಚಿತ್ರಕ್ಕೆ ಎಂ.ಎಸ್ ತ್ಯಾಗರಾಜ್ ಸಂಗೀತ ನೀಡಿರುವ ಹಾಡಿಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ.
ನಿರ್ಮಾಪಕ ಹಾಗೂ ನಿರ್ದೇಶಕ ಭರತ್ ವಿ.ಜೆ ಮಾತನಾಡಿ ಹಿರಿಯ ನಿರ್ಮಾಪಕ ಹಾಗೂ ನಿರ್ದೇಶಕ ವಿಷ್ಣುಕಾಂತ್ ಅವರ ಪುತ್ರ. ಅಪ್ಪನ ಮಾರ್ಗದರ್ಶನದಲ್ಲಿ ಚೊಚ್ಚಲ ಚಿತ್ರ ನಿರ್ಮಿಸುವುದರ ಜೊತೆಗೆ ನಿರ್ದೇಶನ ಮಾಡಿದ್ದೇನೆ. ಪ್ರಮುಖವಾಗಿ ಇದೊಂದು ಪ್ರೇಮ ಕಥಾನಕವಾಗಿದ್ದರೂ, ತಾಯಿ – ಮಗನ ಬಾಂಧವ್ಯ, ಸಸ್ಪೆನ್ಸ್, ಥ್ರಿಲ್ಲರ್ ಹೀಗೆ ನೋಡುಗರಿಗೆ ಬೇಕಾದ ಎಲ್ಲಾ ಅಂಶಗಳು ನಮ್ಮ ಚಿತ್ರದಲ್ಲಿದೆ. ತಾಯಂದಿರ ದಿನದಂದು ಮೊದಲ ಹಾಡು ಬಿಡುಗಡೆಯಾಗಿತ್ತು. ಇಂದು “ಪುಣ್ಯಾತ್ ಗಿತ್ತೀ” ಹಾಡನ್ನು ಬಿಡುಗಡೆ ಮಾಡಿದ್ದೇವೆ ಎಂದರು

ವಿಹಾನ್ ಪ್ರಭಂಜನ್, ಆಶಿಕ ರಾವ್ ನಾಯಕ, ನಾಯಕಿಯಾಗಿ ನಟಿಸಿರುವ ಚಿತ್ರದ ವಿಶೇಷ ಪಾತ್ರದಲ್ಲಿ ಸಂಗೀತ ಭಟ್ ಸಹ ಅಭಿನಯಿಸಿದ್ದಾರೆ. ಚಿತ್ರದ ಬಹುತೇಕ ಚಿತ್ರೀಕರಣ ಮುಕ್ತಾಯವಾಗಿದ್ದು, ಒಂದು ಹಾಡು ಹಾಗು ಒಂದು ಫೈಟ್ ನ ಚಿತ್ರೀಕರಣ ಮಾತ್ರ ಬಾಕಿ ಇದೆ ಎಂದು ತಿಳಿಸಿದರು.
ನಾಯಕ ವಿಹಾನ್ ಪ್ರಭಂಜನ್ ಮಾತನಾಡಿ, ತಾಯಂದಿರ ದಿನದಂದು ಬಿಡುಗಡೆಯಾದ ತಾಯಿ – ಮಗನ ಬಾಂಧವ್ಯದ ಹಾಡು ಈಗಾಗಲೇ ಜನಪ್ರಿಯವಾಗಿದೆ. ಇಂದು ಬಿಡುಗಡೆಯಾಗಿರುವ “ಪುಣ್ಯಾತ್ ಗಿತ್ತೀ” ಹಾಡು ಕೂಡ ಎಲ್ಲರ ಮೆಚ್ಚುಗೆ ಪಡೆಯುತ್ತಿದೆ. ನಾನು ಈ ಚಿತ್ರದ ನಾಯಕ .ಚಿತ್ರದಲ್ಲಿ ಕಾಲೇಜು ಹುಡುಗ ಎಂದು ತಿಳಿಸಿದರು.
ಸಂಗೀತ ನಿರ್ದೇಶಕ ಎಂ.ಎಸ್.ತ್ಯಾಗರಾಜ್ ಮಾತಮಾಡಿ ಚಿತ್ರದಲ್ಲಿ ಐದು ಹಾಡುಗಳಿದ್ದು, ಹಾಡು ಸೇರಿದಂತೆ ಎರಡು ಹಾಡುಗಳನ್ನು ಪ್ರಮೋದ್ ಜೋಯಿಸ್ ಬರೆದಿದ್ದಾರೆ. ವೇಲ್ ಮುರುಗನ್ “ಪುಣ್ಯಾತ್ ಗಿತ್ತೀ” ಹಾಡನ್ನು ಹಾಡಿದ್ದಾರೆ ಎಂದು ಹಾಡುಗಳ ಹಾಗೂ ಹಾಡಿರುವವರ ಬಗ್ಗೆ ಮಾಹಿತಿ ನೀಡಿದರು.

ನಾಯಕಿ ಆಶಿಕಾ ರಾವ್, ಪ್ರಮುಖ ಪಾತ್ರಧಾರಿ ಯುವರಾಜ್ ಗೌಡ, ಹಾಡು ಬರೆದಿರುವ ಪ್ರಮೋದ್ ಜೋಯಿಸ್ ಹಾಗೂ ಛಾಯಾಗ್ರಾಹಕ ಸ್ವಾಮಿ ಮೈಸೂರು ಮುಂತಾದ ಚಿತ್ರತಂಡದ ಸದಸ್ಯರು “ಖೇಲಾ” ಚಿತ್ರದ ಕುರಿತು ಮಾತನಾಡಿದರು.

