ಹೊಸ ಕಲಾವಿದರ “ಸಿಂಹಾಸನ” ಚಿತ್ರಕ್ಕೆ ಮುಹೂರ್ತ

ನಾಲ್ಕು ದಶಕಗಳ ಹಿಂದೆ ‘ಸಿಂಹಾಸನ’ ಎನ್ನುವ ಚಿತ್ರ ತೆರೆಗೆ ಬಂದಿತ್ತು. ಈಗ ಅದೇ ಹೆಸರಿನಲ್ಲಿ ಸಿನಿಮಾ ಸೆಟ್ಟೇರಿದೆ. ಆರ್ಪಿಸಿ ಲೇಔಟ್ದಲ್ಲಿರುವ ಶ್ರೀಗಾಯಿತ್ರಿ ವಿಶ್ವಕರ್ಮ ದೇವಸ್ಥಾನದಲ್ಲಿ ಮುಹೂರ್ತ ಸಮಾರಂಭ ಅದ್ದೂರಿಯಾಗಿ ನಡೆಯಿತು. ಉದ್ಯಮಿ ವಿ.ಜಯಚಂದ್ರ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿದರೆ, ರಾಜಕೀಯ ಮುಖಂಡ ಮಾಸ್ತಿ ಗೌಡ ಕ್ಯಾಮಾರ ಆನ್ ಮಾಡಿ ತಂಡಕ್ಕೆ ಶುಭ ಹಾರೈಸಿದರು.

ಚಾಮರಾಜನಗರ ಮೂಲದ ಚಂದ್ರು ನಾಲ್ರೋಡ್ ಅವರು ಮುನೇಶ್ವರ ಪ್ರೊಡಕ್ಷನ್ಸ್ ಅಡಿಯಲ್ಲಿ ಬಂಡವಾಳ ಹೂಡುತ್ತಿರುವುದರ ಜತೆಗೆ ನಾಯಕನಾಗಿ ಅಭಿನಯಿಸುತ್ತಿದ್ದಾರೆ.
ತಿಪಟೂರಿನ ಡಿ.ಆರ್.ದಯಾನಂದಸ್ವಾಮಿ ಕಿರುತೆರೆ, ಹಿರಿತೆರೆಯಲ್ಲಿ ಸಹಾಯಕ ನಿರ್ದೇಶಕರಾಗಿ ಗುರುತಿಸಿಕೊಂಡು, ಸಣ್ಣ ಪುಟ್ಟ ರೋಲ್ಗಳಲ್ಲಿ ಕಾಣಿಸಿಕೊಳ್ಳುವುದರ ಮಧ್ಯೆ ”ಗೂಸಿ ಗ್ಯಾಂಗ್’ ಚಿತ್ರಕ್ಕೆ ಸಂಭಾಷಣೆ ಬರೆದಿದ್ದರು. ಇದೆಲ್ಲಾ ಅನುಭವದಿಂದ ಈಗ ‘ಸಿಂಹಾಸನ’ಗೆ ಬರವಣಿಗೆ,ಚಿತ್ರಕಥೆ, ಎರಡು ಗೀತೆಗೆ ಸಾಹಿತ್ಯ ರಚಿಸಿ ಆಕ್ಷನ್ ಕಟ್ ಹೇಳುತ್ತಿದ್ದಾರೆ.

ಮಾತನಾಡಿದ ನಿರ್ದೇಶಕ ತಿಪಟೂರಿನ ಡಿ.ಆರ್.ದಯಾನಂದಸ್ವಾಮಿ , ಸಿನಿಮಾ ಪೊಲಿಟಿಕಲ್ ಡ್ರಾಮಾ ಹೊಂದಿರುತ್ತದೆ. ಪ್ರಸಕ್ತ ಯುವ ಜನಾಂಗ ಸಾಮಾಜಿಕ ಜಾಲತಾಣದಲ್ಲಿ ಏನು ಮಾಡುತ್ತಿದ್ದಾರೆ. ಸಾಮಾನ್ಯ ವ್ಯಕ್ತಿಯಾದವನು ರಾಜಕೀಯ ಪ್ರವೇಶ ಮಾಡಿದರೆ ಯಾವ ರೀತಿ ಕಷ್ಟದಲ್ಲಿ ಸಿಲುಕುತ್ತಾನೆ. ಅದೆಲ್ಲಾವನ್ನು ಎದುರಿಸಿ ಹೇಗೆ ಸಾಧನೆ ಮಾಡುತ್ತಾನೆ ಎಂಬುದು ಒಂದು ಏಳೆಯ ಸಾರಾಂಶವಾಗಿದೆ.
ಹೆಸರಾಂತ ಪೋಷಕ ಕಲಾವಿದರುಗಳು ನಟಿಸಲಿದ್ದಾರೆ. ಕಾಲ್ಪನಿಕ ಅಂಶಗಳನ್ನು ಒಳಗೊಂಡಿದ್ದರೂ ನೋಡುಗರಿಗೆ ಕನೆಕ್ಟ್ ಆಗುವಂತ ದೃಶ್ಯಗಳು ಇರಲಿದೆ. ಐದು ಗೀತೆಗಳಿಗೆ ಅರ್ಜುನ್ ಸ್ವರಾಜ್ ಸಂಗೀತ, ರಣಧೀರ ಛಾಯಾಗ್ರಹಣ. ಮಿಕ್ಕಂತೆ ತಂತ್ರಜೃರ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಬೆಂಗಳೂರು, ಚನ್ನಪಟ್ಟಣ, ಮೈಸೂರು ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲು ಯೋಜನೆ ಹಾಕಲಾಗಿದೆ ಎಂಬುದಾಗಿ ಮಾಹಿತಿ ಹಂಚಿಕೊಂಡರು.

ಚಂದ್ರು ನಾಲ್ರೋಡ್ ಮಾತನಾಡಿ, ನನಗೆ ಇದು ಪ್ರಥಮ ನಿರ್ಮಾಣದ ಸಿನಿಮಾ. ಚಿಕ್ಕ ಚಿಕ್ಕ ಪಾತ್ರಗಳಲ್ಲಿ ನಟಿಸಿದ್ದರಿಂದ, ಇದರಲ್ಲಿ ಕೂಲಿ ಹುಡುಗನಾಗಿ ನಾಯಕನ ಪಾತ್ರಕ್ಕೆ ಬಣ್ಣ ಹಚ್ಚುತ್ತಿರುವುದು ನೂತನ ಪ್ರಯತ್ನವಾಗಿದೆ. ಮಾಧ್ಯಮದವರ ಸಹಕಾರಬೇಕೆಂದು ಕೋರಿಕೊಂಡರು.
ವಿದ್ಯಾರ್ಥಿಯಾಗಿ ರೇಷ್ಮಾ ನಾಯಕಿ. ಖಳನಾಗಿ ಪ್ರಕಾಶ್ಸಣ್ಣಕ್ಕಿ, ನಗಿಸಲು ಗುರು ಇವರೊಂದಿಗೆ ಸಂಜಯ್ ಮುಂತಾದವರು ಪಾತ್ರದ ಪರಿಚಯ ಮಾಡಿಕೊಂಡರು.